Advertisement

Cambodia ಸೈಬರ್‌ ಕ್ರೈಮ್‌ ಹಬ್‌: ಭಾರತೀಯರಿಂದಲೇ ಭಾರತೀಯರ ಟಾರ್ಗೆಟ್‌!

01:29 AM May 25, 2024 | Team Udayavani |

ಭಾರತದಲ್ಲಿ ನಡೆಯುತ್ತಿರುವ ಬಹುತೇಕ ಸೈಬರ್‌ ಕ್ರೈಮ್‌ಗಳು, ಅದರಲ್ಲೂ ಹಣಕಾಸು ವಂಚನೆ ಪ್ರಕರಣಗಳ ಮೂಲಗಳು ಕಾಂಬೋಡಿಯಾ, ಲಾವೋಸ್‌ ಮತ್ತು ಮ್ಯಾನ್ಮಾರ್‌ಗಳಲ್ಲಿವೆ. ಇದಕ್ಕಾಗಿ ಭಾರತೀಯರನ್ನೇ ಬಳಸಿಕೊಂಡು ಭಾರತೀಯರನ್ನೇ ದೋಚಲಾಗುತ್ತಿದೆ. ಆ ಕುರಿತು ಇಲ್ಲಿದೆ ಮಾಹಿತಿ.

Advertisement

ಭಾರತದಲ್ಲಿ ನಡೆಯುವ ಸೈಬರ್‌ ಕ್ರೈಮ್‌ಗಳ ಮೂಲ ಝಾರ್ಖಂಡ್‌ನ‌ ಜಾಮತಾಡಾ ಆಗಿತ್ತು. ರಾಜಸ್ಥಾನ, ಹರಿಯಾಣ ಹಾಗೂ ಪಶ್ಚಿಮ ಬಂಗಾಲದಿಂದಲೂ ನಡೆಯುತ್ತಿತ್ತು. ಈಗ ಎಲ್ಲವೂ ಬದಲಾಗಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಕಾಂಬೋಡಿಯಾ, ಲಾವೋಸ್‌ ಮತ್ತು ಮ್ಯಾನ್ಮಾರ್‌ ಸೇರಿದಂತೆ ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳು “ಸೈಬರ್‌ ಕ್ರೈಮ್‌ನ ಹಬ್‌’ಗಳಾಗಿವೆ. ಅದರಲ್ಲೂ ಭಾರತದಲ್ಲಿ ಸಂಭವಿಸುವ ಸೈಬರ್‌ ಕ್ರೈಮ್‌ಗಳ ಪೈಕಿ ಅರ್ಧದಷ್ಟು ಇಲ್ಲಿಂದಲೇ ನಡೆಯುತ್ತವೆ. ವಿಶೇಷ ಎಂದರೆ ಭಾರತೀಯರನ್ನೇ ನೇಮಕ ಮಾಡಿಕೊಂಡು, ಅವರ ಮೂಲಕವೇ ಭಾರತೀಯರನ್ನು ಟಾರ್ಗೆಟ್‌ ಮಾಡಲಾಗುತ್ತದೆ!

ಸೈಬರ್‌ ಕ್ರೈಮ್‌ಗಳ ಪೈಕಿ ಹಣಕಾಸು ವಂಚನೆಗಳು ಕಾಂಬೋಡಿ ಯಾದಿಂದಲೇ ಹೆಚ್ಚು ನಡೆಯುತ್ತವೆ. 5000 ಭಾರತೀಯರು ಸೈಬರ್‌ ಕ್ರೈಮ್‌ ಜಾಲದಲ್ಲಿ ಸಿಲುಕಿದ್ದಾರೆ. ಅವರನ್ನು ಅಲ್ಲಿಂದ ಹೊರತರುವ ಕೆಲಸನ್ನು ಭಾರತೀಯ ರಾಯಭಾರ ಕಚೇರಿಯು ಮಾಡುತ್ತಿದೆ. ಗುರುವಾರವಷ್ಟೇ 60 ಜನರನ್ನು ಭಾರತಕ್ಕೆ ವಾಪಸ್‌ ಕಳುಹಿಸಿ ಕೊಡಲಾಗಿದೆ. ಈ ಪ್ರಯತ್ನಇನ್ನೂ ಜಾರಿಯಲ್ಲಿದೆ.

ವಂಚನೆ ಹೇಗೆ ನಡೆಯುತ್ತದೆ?
ಕಾಂಬೋಡಿಯಾ ವಂಚಕರು ನಕಲಿ ಉದ್ಯೋಗಗಳಿಗಾಗಿ ಸೋಶಿಯಲ್‌ ಮೀಡಿಯಾಗಳ ಮೂಲಕ ಭಾರತೀಯರನ್ನು ನೇಮಕ ಮಾಡಿಕೊಳ್ಳುತ್ತಾರೆ ಮತ್ತು ಅವರಿಂದಲೇ ಸೈಬರ್‌ ಕ್ರೈಮ್‌ಗಳನ್ನು ಮಾಡಿಸುತ್ತಾರೆ. ಹೂಡಿಕೆ ಹಗರಣ, ಪಿಗ್‌ ಬುಚರಿಂಗ್‌ ಸ್ಕ್ಯಾಮ್‌(ಇದು ಕೂಡ ಹೂಡಿಕೆ ಮಾದರಿಯ ಹಗರಣ), ಟ್ರೇಡಿಂಗ್‌ ಆ್ಯಪ್ಸ್‌ ಸ್ಕ್ಯಾಮ್‌, ಡೇಟಿಂಗ್‌ ಸ್ಕ್ಯಾಮ್‌ಗಳ ಮೂಲಕ ಜನರನ್ನು ವಂಚನೆಯ ಬಲೆಗೆ ಕೆಡವಿಕೊಳ್ಳಲಾಗುತ್ತದೆ. ಭಾರತೀಯರನ್ನು ಟಾರ್ಗೆಟ್‌ ಮಾಡಲು ಭಾರತದ ಸಿಮ್‌ ಕಾರ್ಡ್‌ಗಳನ್ನು ಬಳಸಲಾಗುತ್ತದೆ.

ಸೈಬರ್‌ ಕ್ರೈಂ ಮಾಡುತ್ತಿದ್ದ 1,000 ಮಂದಿ ಸೆರೆ
ಸೈಬರ್‌ ಕ್ರೈಮ್‌ ಸಂಬಂಧ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಶೇ.85ರಷ್ಟು ದೂರುಗಳು ಹಣಕಾಸು ಅಪರಾಧಗಳಿಗೆ ಸಂಬಂಧಿಸಿ ದ್ದಾಗಿ ರುತ್ತವೆ. ಈ ಪೈಕಿ ಶೇ.48ರಷ್ಟು ಅಪರಾಧಗಳ ಮೂಲ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿರುತ್ತವೆ. ಇನ್ನು ಭಾರತದಲ್ಲೇ ಸೈಬರ್‌ ಕ್ರೈಮ್‌ ಕೇಂದ್ರಸ್ಥಾನಗಳಾಗಿರುವ ಜಾಮ ತಾಡಾ(ಜಾರ್ಖಂಡ್‌), ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಲದಲ್ಲಿ ಈಗಲೂ ಜಾಲಗಳು ಸಕ್ರಿಯವಾಗಿದ್ದು, ವಿಸ್ತರಣೆ ಕೂಡ ಆಗುತ್ತಿವೆ. 2023ರ ಡಿಸೆಂಬರ್‌ನಿಂದ ಈವರೆಗೆ ಸುಮಾರು 1,000 ಜನರನ್ನು ಬಂಧಿಸಲಾಗಿದೆ.

Advertisement

ಚೀನದ ಕೈವಾಡ ಪಕ್ಕಾ
ಭಾರತದಲ್ಲಿ ನಡೆಯುವ ಸೈಬರ್‌ ಕ್ರೈಮ್‌ಗಳ ಹಿಂದೆ ಚೀನದ ಕೈವಾಡ ಇದೆ ಎನ್ನುತ್ತದೆ ಎಂಬುದು ಇಂಡಿಯನ್‌ ಸೈಬರ್‌ ಕ್ರೈಮ್‌ ಕೋರ್ಡಿನೇಶನ್‌ ಸೆಂಟರ್‌(ಐ4ಸಿ). ಬಹುತೇಕ ವಂಚನೆಗಳ ಹಿಂದೆ ಚೀನಿಯರು ಇದ್ದಾರೆ. ವಂಚನೆಯ ವೆಬ್‌ ಆ್ಯಪ್ಲಿಕೇಶನ್‌ಗಳನ್ನು ಚೀನಿ ಭಾಷೆಯಲ್ಲೇ ಬರೆಯಲಾಗಿದೆ. ಹಾಗಾಗಿ ಚೀನಿಯರ ಕೈವಾಡವನ್ನು ನಿರಾಕರಿಸಲಾಗದು ಎನ್ನುತ್ತಾರೆ ಐ4ಸಿ ಸಿಇಒ ರಾಜೇಶ್‌ ಕುಮಾರ್‌ ಅವರು. 2024ರಲ್ಲಿ  ನ್ಯಾಶನಲ್‌ ಸೈಬರ್‌ ಕ್ರೈಮ್‌ ರಿಪೋರ್ಟಿಂಗ್‌ ಪೋರ್ಟಲ್‌ನಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ವಂಚನೆಯ ಮೊತ್ತ 7,061 ಕೋಟಿ ರೂ. ಆಗಿದೆ! ಈ ಪೈಕಿ ಐ4ಸಿ ಕೇವಲ 812 ಕೋಟಿ ರೂ. ಮಾತ್ರವೇ ವಾಪಸ್‌ ಪಡೆಯಲು ಸಾಧ್ಯವಾಗಿದೆ.

ಅತಿಯಾಸೆಗೆ ಸಿಕ್ಕಿ ಬಿದ್ದ ಭಾರತೀಯರು
ಆಗ್ನೇಯ ಏಷ್ಯಾದ ರಾಷ್ಟ್ರಗಳ ವಂಚಕರು ಭಾರತೀಯರನ್ನು ಟಾರ್ಗೆಟ್‌ ಮಾಡಲು ಭಾರತೀಯರನ್ನೇ ಬಳಸಿಕೊಳ್ಳುತ್ತಾರೆ. ಮಾಡಲಾಗುತ್ತದೆ. ನಕಲಿ ನೇಮಕಾತಿದಾರರು ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ದಿಲ್ಲಿಯಂತಹ ರಾಜ್ಯಗಳಲ್ಲಿ ನಕಲಿ ಉದ್ಯೋಗದ ಜಾಹೀರಾತು ನೀಡುತ್ತಾರೆ. ಸಂಬಳ ಸೇರಿ ಆಕರ್ಷಕ ಆಮಿಷಗಳನ್ನು ಒಡ್ಡುವ ಮೂಲಕ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಾರೆ. ಇದೆಲ್ಲವೂ ಸೋಶಿಯಲ್‌ ಮೀಡಿಯಾಗಳ ಮೂಲಕವೇ ನಡೆಯುತ್ತದೆ. ಇತ್ತೀಚೆಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸೈಬರ್‌ ಕ್ರೈಂ ಪೊಲೀಸರು ಮೂವರು ಅಕ್ರಮ ನೇಮಕಾತಿದಾರರನ್ನು ಬಂಧಿಸಿದ್ದರು. ಇವರು ಫೇಕ್‌ ಉದ್ಯೋಗದ ಮೂಲಕ ಯುವಕರನ್ನು ಕಾಂಬೋಡಿಯಾಗೆ ಕಳುಹಿಸುತ್ತಿದ್ದರು

ಸರಕಾರದ ಗದಾ ಪ್ರಹಾರ
ಹಣಕಾಸು ವಂಚನೆಯ  ಸೈಬರ್‌ ಕ್ರೈಮ್‌ಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರವು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ಕಳೆದ ನಾಲ್ಕು ತಿಂಗಳಲ್ಲಿ 595 ಆ್ಯಪ್ಸ್‌, 5.3 ಲಕ್ಷ ಸಿಮ್‌ ಕಾರ್ಡ್‌, 3000 ಯುಆರ್‌ಎಲ್‌ಗ‌ಳು, 80000 ಐಎಂಇಐ ನಂಬರ್‌ಗಳು ಮತ್ತು 3.2  ಲಕ್ಷ ಅನುಮಾನಾಸ್ಪದ ಖಾತೆಗಳನ್ನು ರದ್ದು ಮಾಡಲಾಗಿದೆ.

ಕಳೆದ ವರ್ಷ ಕನ್ನಡಿಗರು ರಕ್ಷಣೆ
ಕಾಂಬೋಡಿಯಾದ ಸೈಬರ್‌ ಕ್ರೈಮ್‌ ಜಾಲದಲ್ಲಿ ಕನ್ನಡಿಗರು ಸೇರಿದಂತೆ ಎಲ್ಲ ರಾಜ್ಯದವರು ಇದ್ದಾರೆ. 2023ರ ನವೆಂಬರ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಹಾಗೂ ಕೋಲಾರದ ಇಬ್ಬರನ್ನು  ನಾನ್‌ ರೆಸಿಡೆಂಟ್‌ ಇಂಡಿಯನ್‌ ಫೋರಂ, ಕರ್ನಾಟಕ(ಎನ್‌ಆರ್‌ಐಎಫ್ಕೆ) ರಕ್ಷಣೆ ಮಾಡಿದ್ದು ಸುದ್ದಿಯಾಗಿತ್ತು. ಇವರಿಬ್ಬರು ಡೇಟಾ ಆಪರೇಟರ್‌ ಉದ್ಯೋಗಕ್ಕಾಗಿ ಕಾಂಬೋಡಿಯಾಗೆ ತೆರಳಿದ್ದರು. ಆದರೆ ಅಲ್ಲಿಗೆ ಹೋದ ಮೇಲೆ ಅವರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು, ವಂಚನೆಗೆ ಬಳಸಿಕೊಳ್ಳಲಾಗುತ್ತಿತ್ತು.

ವಂಚನೆ
ಹೂಡಿಕೆ ಹಗರಣ 62,687 222 ಕೋಟಿ
ಟ್ರೇಡಿಂಗ್‌ ಹಗರಣ 20,043 1420 ಕೋಟಿ
ಡಿಜಿಟಲ್‌ ಅರೆಸ್ಟ್‌ 4,599 120 ಕೋಟಿ
ರೊಮ್ಯಾನ್ಸ್‌, ಡೇಟಿಂಗ್‌ ವಂಚನೆ 1,725 1323 ಕೋಟಿ

7000 ಪ್ರತೀ ದಿನ ದಾಖಲಾಗುವ ಸೈಬರ್‌ ಕ್ರೈಮ್‌ ಸಂಬಂಧಿ ದೂರುಗಳು.
5000 ಕಾಂಬೋಡಿಯಾದಲ್ಲಿ ಸೈಬರ್‌ ಕ್ರೈಮ್‌ ಜಾಲದಲ್ಲಿ ಸಿಲುಕಿರುವ ಭಾರತೀಯರು.

ಸೈಬರ್‌ ವಂಚನೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?
ಆನ್‌ಲೈನ್‌ ಕೆಲಸಕ್ಕಾಗಿ ಸುಲಭವಾಗಿ ಇಲ್ಲವೇ ಹೆಚ್ಚು ಹಣ ನೀಡುವ ಆಫ‌ರ್‌ಗಳ ಸಂದೇಶಗಳನ್ನು ನಿರ್ಲಕ್ಷಿಸಿ.
ಅತೀ ಹೆಚ್ಚು ಸಂಬಳ ನೀಡುವ ಆನ್‌ಲೈನ್‌ ಉದ್ಯೋಗದ ಆಫ‌ರ್‌ಗಳನ್ನು ತಿರಸ್ಕರಿಸಿ.
ಅತೀ ಹೆಚ್ಚು ಬಡ್ಡಿ ದೊರೆಯುತ್ತದೆ ಎಂದು ಭರವಸೆ ನೀಡುವವರಿಗೆ ಏನನ್ನೂ ವಿಚಾರಿಸದೆಯೇ ಹಣವನ್ನು ಕಳುಹಿಸಬೇಡಿ.
ಉದ್ಯೋಗ ಆಫ‌ರ್‌ ಅಸಲಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
ವೆಬ್‌ಸೈಟ್‌ ಮತ್ತು ಆ್ಯಪ್‌ಗಳ ಮೂಲಕ ಆಕರ್ಷಕ ಹೂಡಿಕೆ ಆಫ‌ರ್‌ಗಳ ಅಸಲಿಯತ್ತು ತಿಳಿದುಕೊಳ್ಳಿ.
ಅಪರಿಚಿತರು ವಿಶೇಷವಾಗಿ ಮೆಸೇಜಿಂಗ್‌ ಆ್ಯಪ್‌ಗ್ಳಲ್ಲಿ ನಿಮ್ಮ ಯಾವುದೇ ಖಾತೆಗಳ ಲಾಗಿನ್‌ ಮಾಹಿತಿ, ಖಾಸಗಿ, ಸೂಕ್ಷ್ಮ ಅಥವಾ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ.
ಅಪರಿಚಿತರಿಂದ ಬರುವ ಯಾವುದೇ ಫೈಲ್ಸ್‌ ಅಥವಾ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಲು ಹೋಗಬೇಡಿ.
ಯಾವುದೇ ಅನುಮಾನಾಸ್ಪದ ಸಂದೇಶಗಳು, ಆಫ‌ರ್‌ಗಳ ಬಂದರೆ ಕೂಡಲೇ ಸಮೀಪದ ಪೊಲೀಸ್‌ ಠಾಣೆ ಅಥವಾ ಸೈಬರ್‌ ಠಾಣೆಗೆ ಮಾಹಿತಿ ನೀಡಿ. ಇಲ್ಲವೇ  https://www.cybercrime.gov.in ನಲ್ಲಿ ದೂರು ದಾಖಲಿಸಬಹುದು ಅಥವಾ ಸಹಾಯಕ್ಕಾಗಿ 1930 ನಂಬರ್‌ಗೆ ಕರೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next