Advertisement

ಮತ್ತೆ ಕರೆಯಿತು ಕಣಿವೆ

10:56 PM Aug 09, 2019 | mahesh |

ಇವರೆಲ್ಲ ಹುಟ್ಟಿದ ಮನೆ, ಆಸ್ತಿಪಾಸ್ತಿ, ಕಟ್ಟಿದ ಕನಸುಗಳನ್ನು ಕಾಶ್ಮೀರದ ಕಣಿವೆಗಳಲ್ಲೇ ಬಿಟ್ಟು, ರಾತ್ರೋ ರಾತ್ರಿ ಓಡಿಬಂದವರು. ಇಂದಲ್ಲ ನಾಳೆ ಆ ಸ್ವರ್ಗದ ಬಾಗಿಲು ತೆರೆಯುತ್ತೆ, ಇಲ್ಲೇ ಇರೋಣ ಎಂದು ಶ್ರೀನಗರದ ಸನಿಹದಲ್ಲೇ ನಿರಾಶ್ರಿತ ಶಿಬಿರದಲ್ಲಿ ಬಿಡುಬಿಟ್ಟವರ ಕತೆಗಳು ಇವು. ಹಿರಿಯ ಜೀವಗಳು, ಹೊಸ ಪೀಳಿಗೆಯ ಕಣ್ಣಲ್ಲಿ ಕಾಶ್ಮೀರ ಎನ್ನುವ ಸುಂದರ ನೆಲದ ಚಿತ್ರ ಈ ಹೊತ್ತಿನಲ್ಲಿ ಹೇಗೆ ಕಾಣುತ್ತಿದೆ? ಜಮ್ಮು- ಕಾಶ್ಮೀರದ “ಜಗಿr’ ಎಂಬ ಊರಿನ, ಪಂಡಿತರ ನಿರಾಶ್ರಿತ ಶಿಬಿರದಲ್ಲಿ ಓಡಾಡಿದಾಗ ಕಂಡ ಅನುಭವಗಳ ಸಾಕ್ಷಾತ್‌ ಚಿತ್ರಣ ನಿಮ್ಮೆದುರು…

Advertisement

“ಕಪ್ಪು ಹಲಗೆಯ ಮೇಲೆ ಗೀಚಿದ ಅಕ್ಷರ ಇನ್ನೂ ನನ್ನೊಳಗೆ ಅಳಿಸಿ ಹೋಗಿಲ್ಲ’ ಅಂದರು, ಶಿವಲಾಲ್‌. ಅವರು 90ರ ದಶಕದಲ್ಲಿ ಗಂದೇರ್‌ಬಾಲ್‌ನ ಸರ್ಕಾರಿ ಶಾಲೆಯಲ್ಲಿ ವಿಜ್ಞಾನದ ಮೇಷ್ಟ್ರು. ಅವತ್ತು ಖಗೋಳ ಗ್ರಹಗಳ ಕುರಿತ ಪಾಠದ ಬೋಧನೆಯಿತ್ತು. ಕಪ್ಪು ಫ‌ಲಕದ ಮೇಲೆ ಮಕ್ಕಳು ಉರ್ದುವಿನಲ್ಲಿ ಏನೇನೋ ಗೀಚಿಬಿಟ್ಟಿದ್ದವು. ಒರೆಸು ಬಟ್ಟೆಯಿಂದ ಅವುಗಳನ್ನೆಲ್ಲ ಅಳಿಸುತ್ತಾ ಮೇಲಕ್ಕೆ ಬಂದಾಗ, ದಪ್ಪಾಕ್ಷರಗಳಲ್ಲಿ ನಡುವೆ ಕಣ್ಣಿಗೆ ಬಿದ್ದಿದ್ದು, “ಪಾಕಿಸ್ತಾನ್‌ ಜಿಂದಾಬಾದ್‌’ ಎನ್ನುವ ಸಾಲು. ಶಿವಲಾಲ್‌ ಅದನ್ನು ಅಳಿಸುವ ಧೈರ್ಯ ತೋರಲೇ ಇಲ್ಲ. ನಲ್ವತ್ತು ನಿಮಿಷ ಅಂತರಿಕ್ಷದ ಪಾಠ; ಮೇಷ್ಟ್ರ ಮನಸ್ಸು ಕಕ್ಷೆಯಲ್ಲೇ ಇದ್ದಿರಲಿಲ್ಲ. ಅತೀವ ಚಳಿಯಲ್ಲೂ ಉಕ್ಕಿದ ಬೆವರನ್ನು ಉತ್ತರೀಯದಿಂದ ಒರೆಸಿಕೊಳ್ಳುತ್ತಾ, ಮಬ್ಬು ಮಬ್ಟಾಗಿ ಕಾಣುತ್ತಿದ್ದ ದಾರಿಯಲ್ಲಿ ಮನೆಗೆ ಬಂದರಂತೆ. ಅದು ಮೇಷ್ಟ್ರಿಗೆ ಪ್ರತ್ಯೇಕವಾದಿಗಳು ನೀಡಿದ್ದ, ಮೂರನೇ ಮತ್ತು ಕೊನೆಯ ವಾರ್ನಿಂಗ್‌!

ಆ ಹೊತ್ತಿಗಾಗಲೇ ಅಕ್ಕಪಕ್ಕದ ಪಂಡಿತರೆಲ್ಲ ಕಣಿವೆಯಿಂದ ನಿಗೂಢ ಕಣ್ಮರೆ ಆಗುತ್ತಿದ್ದರು. ಕಣಿವೆಯ ಮನೆಗಳ ಮುಂದೆ ರಂಗೋಲಿ ಬಿದ್ದಿಲ್ಲವೆಂದರೆ, ಒಂದೋ ಮನೆಯೊಳಗೆ ಪಂಡಿತರಿಲ್ಲ ಅಥವಾ ಇದ್ದರೂ ಅವರೊಳಗೆ ಉಸಿರಿಲ್ಲ ಎನ್ನುವ ಅರ್ಥವಿತ್ತು. ನಿತ್ಯ ನಾಲ್ಕೆçದು ಕುಟುಂಬಗಳು, ಮಧ್ಯರಾತ್ರಿ ಕಣಿವೆ ತೊರೆಯುವ ದೃಶ್ಯ. ಬೆಳಗಿನ ಉರ್ದು ಪತ್ರಿಕೆಗಳ ಮುಖಪುಟದಲ್ಲಿ ಕಾಲುಭಾಗದಷ್ಟು, “ವಾರ್ನಿಂಗ್‌’ ಎನ್ನುವ ಚೌಕಟ್ಟಿನೊಳಗೆ “ಪಂಡಿತರೆಲ್ಲ ಕಣಿವೆಯಿಂದ ತೊಲಗಿ’ ಎನ್ನುವ ಪ್ರಕಟಣೆಗಳು. ಹಿಂದಿನ ದಿನವಷ್ಟೇ ಇದ್ದ, ಬಚ್ಚನ್‌ನ “ಅಗ್ನಿಪಥ್‌’ ಚಿತ್ರದ ಪೋಸ್ಟರ್‌ ಹರಿದು ಚೂರಾಗಿ, ಆ ಜಾಗದಲ್ಲಿ ಭಾರತಕ್ಕೆ ಧಿಕ್ಕಾರ ಕೂಗಿದ ಬರಹಗಳು. ಪರೀಕ್ಷೆ ಬರುತ್ತಿದೆ, ಮಕ್ಕಳಿಗೆ ತೊಂದರೆ ಆಗಬಾರದೆಂದು ದಿನ ದೂಡುತ್ತಿದ್ದ ಮೇಷ್ಟ್ರು, ಅವತ್ತು ರಾತ್ರಿಯೇ, ಹೆಪ್ಪುಗಟ್ಟಿದ್ದ ಕತ್ತಲಲ್ಲಿ, ಸಂಸಾರ ಸಮೇತರಾಗಿ ಟ್ಯಾಕ್ಸಿಯನ್ನೇರಿ, ಜಮ್ಮುವಿನ ಹಾದಿ ಹಿಡಿದಿದ್ದರು.

ಉಧಂಪುರದ ದಿಕ್ಕಿಗೆ ಹೊರಟ ಹೈವೇ, NH- 44. ನಾಗ್ರೋಟದ ಆರ್ಮಿ ಬೇಸ್‌ ಕ್ಯಾಂಪ್‌ಗೆ ಅಂಟಿಕೊಂಡಂತೆ ಇರುವ ಪುಟ್ಟ ಊರು ಜಗಿr. ಕಣಿವೆಯಿಂದ ಹೊರಬಿದ್ದ ಲಕ್ಷಾಂತರ ಪಂಡಿತರಲ್ಲಿ ಹಲವರು ಜಮ್ಮು, ದೆಹಲಿ, ಮುಂಬೈ ಅರಸಿದರು. ಇಂದಲ್ಲಾ, ನಾಳೆ ಮತ್ತೆ ಸ್ವರ್ಗದ ಬಾಗಿಲು ತೆರೆಯುತ್ತೆ, ಇಲ್ಲೇ ಇರೋಣ ಎಂದು ನಿರ್ಧರಿಸಿದ ಇಪ್ಪತ್ತು ಸಾವಿರ ಮಂದಿ ಈ ಜಗಿrಯಲ್ಲಿ ಬೀಡುಬಿಟ್ಟರು. ಜಮ್ಮು- ಕಾಶ್ಮೀರ ಸರ್ಕಾರವು ಇಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿತು. ಸುತ್ತ ಗುಡ್ಡದ ಮೇಲೆ ಮಿಲಿಟರಿ ಕಾವಲು. ಇಪ್ಪತ್ನಾಲ್ಕು ಗಂಟೆ ರಾಡಾರ್‌ಗಳ ಹದ್ದಿನಗಣ್ಣು. “ಸರ್‌, ಈಗ ನೀವು ಇಲ್ಲಿಗೆ ಬಂದ ದೃಶ್ಯವೂ ಬಹಳ ಕ್ಲಿಯರ್ರಾಗಿ ಕ್ಯಾಪcರ್‌ ಆಗಿರುತ್ತೆ. ಸೇನೆಯವರು ನಮಗೆ ರಕ್ಷಣೆ ಕೊಡ್ತಾರೆ ನಿಜ. ಆದರೆ, ನಮ್ಮದೇ ನೆಲದಲ್ಲಿ ನಮಗೇ ರಕ್ಷಣೆಯೆಂದರೆ..?’ ಎನ್ನುವಾಗ ಜತಿನ್‌ ರೈನಾ ಅವರ ಹುಬ್ಬುಗಳು ಪ್ರಶ್ನಾರ್ಥಕವಾಗಿ ಕಂಡವು. ಬದ್ಗಮ್‌ ಕಣಿವೆಯಿಂದ, ಆಸ್ತಿಯನ್ನೆಲ್ಲ ಬಿಟ್ಟು ಇಲ್ಲಿಗೆ ಓಡಿ ಬಂದ ಒಂದು ತಿಂಗಳವರೆಗೆ ಅವರ ತಂದೆಗೆ, ಮಾತು ಬಿದ್ದುಹೋಗಿತ್ತಂತೆ. ಅದೇ ಆಘಾತದಲ್ಲೇ ತಾಯಿಯೂ ಕಣ್ಮುಚ್ಚಿದ್ದರು.

“ಸಬ್‌ ಕೋ ಖೀರ್‌ ಭವಾನಿ ದೇಖ್‌ ರಹೀ ಹೈ…’ (ಖೀರ್‌ ಭವಾನಿ ಎಲ್ಲವನ್ನೂ ನೋಡ್ತಿದ್ದಾಳೆ) ಎನ್ನುತ್ತಾ, ನೀರಿನ ಮಧ್ಯೆ ನಿಂತ ದೇವಿಗೆ ಕೈಮುಗಿದರು, ಒಬ್ಬರು ತಾತಾ. ಪಂಡಿತರ ಅಧಿದೇವತೆಯಾದ ಖೀರ್‌ ಭವಾನಿಯ ಮೂಲ ನೆಲೆ ಇರುವುದು, ಕಾಶ್ಮೀರದಿಂದ 25 ಕಿ.ಮೀ. ದೂರದ “ಟುಲ್ಲಾಮುಲ್ಲಾ’ದಲ್ಲಿ. ಎಂದಿಗೂ ಬತ್ತದ, ಸ್ಫಟಿಕದಂಥ ಪವಿತ್ರ ನೀರಿನ ನಡುವೆ, ದೇವಿ ತೋರುವ ಅಭಯಹಸ್ತವೇ ಪಂಡಿತ ಸಮುದಾಯಕ್ಕೆ ಒಂದು ಧೈರ್ಯ. ಅಲ್ಲಿಂದ ತಂದಂಥ ಪವಿತ್ರ ನೀರನ್ನು, ಜಗಿrಯಲ್ಲಿ ಪ್ರತಿಷ್ಠಾಪಿಸಲಾದ ಖೀರ್‌ ಭವಾನಿಯ ಸುತ್ತ ಹರಿಸಲಾಗಿದೆ. ಕಣಿವೆ ಸೇರುವ ಪ್ರಾರ್ಥನೆಗಳನ್ನು ಈ ದೇವಿ ಕೇಳುತ್ತಲೇ ಇದ್ದಾಳೆ. ವರ್ಷದಲ್ಲಿ ಒಂದು ದಿನ ನಿರಾಶ್ರಿತ ಶಿಬಿರದ ಪಂಡಿತರಿಗೆ, ಪೊಲೀಸರ ಸರ್ಪಗಾವಲಿನಲ್ಲಿ, ಟುಲ್ಲಾಮುಲ್ಲಾದ ಖೀರ್‌ ಭವಾನಿಯ ದರುಶನಕ್ಕೆ ಕರೆದೊಯ್ಯುವ ವ್ಯವಸ್ಥೆ ಕಲ್ಪಿಸಿದೆ, ಅಲ್ಲಿನ ಸರ್ಕಾರ. ಹಾಗೆ ಶ್ರೀನಗರಕ್ಕೆ ಹೋದವರಿಗೆ, ಇಲ್ಲೇ ನಾವು ಬಿಟ್ಟುಬಂದ ಆಸ್ತಿಪಾಸ್ತಿ ಉಂಟು, ಹೋಗಿ ನೋಡಿ ಬರೋಣವೆಂಬ ಆಸೆ ಆಗುತ್ತದಾದರೂ, ಅದಕ್ಕೆ ಸರ್ಕಾರದಿಂದ ಅನುಮತಿ ಸಿಗೋದಿಲ್ಲ. ಅದೇ ಸರ್ಪಗಾವಲಿನಲ್ಲೇಲ್ಲೇ, ಭಾರದ ಮನಸ್ಸಿನಿಂದ ಹಿಂತಿರುಗುತ್ತಾರೆ. ನಾವು ಈ ಕ್ಯಾಂಪ್‌ಗೆ ಹೋದ ಮರುವಾರ ಈ ಯಾತ್ರೆ ಜರುಗುವುದಿತ್ತು. “ಅಗರ್‌ ಆಖೀÅà ಸಾ®Õ… ಜಾಯೇಗಾ ತೋ ವಹೀ ಚಲಾ ಜಾಯೇ… ‘ (ಕೊನೆಯ ಉಸಿರು ಹೋಗೋದಾದರೆ, ಅಲ್ಲಿಯೇ ಹೋಗಲಿ) ಎನ್ನುವ ಪ್ರಾರ್ಥನೆ ಈ ತಾತನಿಂದ ಕೇಳುತ್ತಿತ್ತು.

Advertisement

ಪಂಡಿತರು ನಿರಾಶ್ರಿತ ಶಿಬಿರದಲ್ಲಿ ಬೀಡುಬಿಟ್ಟು, ಎರಡು-ಮೂರು ದಶಕಗಳೇ ಉರುಳಿವೆ. ಸಿಹಿನೀರಿನ ಮೀನು, ಸಮುದ್ರ ಸೇರಿ ಹೇಗೆ ಚಡಪಡಿಸುತ್ತವೋ ಹಾಗೆ ಬದುಕು ನಿಧಾನಕ್ಕೆ ಮಾರ್ಪಾಡಾಗುತ್ತಿದೆ. ಸದಾ ಜತೆಗಿದ್ದು, ಕಣಿವೆಯ ಘೋರ ಚಳಿಯನ್ನು ಸೋಲಿಸುತ್ತಿದ್ದ ಕಾಂಗ್ರಿ ಬುಟ್ಟಿ (ಕೆಂಡ ತುಂಬಿದ ಕಟ್ಟಿಗೆಯ ಬುಟ್ಟಿ) ಇಲ್ಲೆಲ್ಲೂ ಕಾಣಿಸಲಿಲ್ಲ. ನಲ್ವತ್ತು ವಯಸ್ಸು ಮೀರಿದ, ಉದ್ದುದ್ದ ಶರೀರಗಳಲ್ಲಿ ಮಾತ್ರವೇ ಫಿರಾನ್‌ (ನಿಲುವಂಗಿ) ತೂಗಿಬಿದ್ದಿತ್ತು. ಈಗಿನ ಪಂಡಿತ ಮಕ್ಕಳು ಜೀನ್ಸ್‌ ಟಿ ಶರ್ಟ್‌ ಧರಿಸುವುದರಲ್ಲಿಯೇ ಖುಷಿ ಕಾಣುತ್ತಿದ್ದರು. ಸಮೋವರ್‌ನಲ್ಲಿ ಚಹಾ ಕಾಯಿಸುವುದು, ಕಣಿವೆಯ ಹಳ್ಳಿಗಳ ಒಂದು ವಿಶಿಷ್ಟ ಸುಖಗಳಲ್ಲಿ ಒಂದು. ನವಿಲಿನ ಮೂತಿಯ, ಎತ್ತರದ ಪಾತ್ರೆ. ನಡುವೆ ಹಬೆಯ ಕೊಳವೆ. ಅದರಲ್ಲಿ ಗ್ರೀನ್‌ ಟೀ ಎಲೆ, ಏಲಕ್ಕಿ, ದಾಲಿcನ್ನಿ, ಜೇನು, ಕೇಸರಿ ಬೆರೆತ ಕಾವಾ ಚಹಾವು ಗಂಟೆಗಟ್ಟಲೆ ಕುದ್ದೂ ಕುದ್ದು, ಮನೆಯೆಲ್ಲ ಪರಿಮಳಗೊಳ್ಳುವುದು ಇದೇ ಪಾತ್ರೆಯಲ್ಲಿಯೇ. ಆ ಸಮೋವರ್‌ಗಳೆಲ್ಲ ಎಲ್ಲೋ ಮೂಲೆಯಲ್ಲಿ ಕುಳಿತು, ಕಣಿವೆಯ ಕೊರೆಯುವ ಚಳಿಯನ್ನು ನೆನಪಿಸುತ್ತಿದ್ದವು.

ಕಲ್ಹಣನ “ರಾಜತರಂಗಿಣಿ’ಯಲ್ಲಿ ಧೂಮಕೇತುವಿನ ಉಲ್ಲೇಖ ಸೊಗಸಾಗಿದೆ. ಅದು ಆಕಾಶದಲ್ಲಿ ಕಂಡರೆ, ರಾಜನಿಗೆ ಕೇಡುಗಾಲ ಎನ್ನುವ ತಾತ್ಪರ್ಯ. ಪೂರ್ವದಲ್ಲಿ ಸುದೀರ್ಘ‌ ಬಾಲದ ಕೇತು ಕಾಣಿಸಿಕೊಂಡಿದ್ದನ್ನು, ರಾಜ್ಯದ ಜನರಿಗೂ ಮೊದಲೇ ಸುಲ್ತಾನ ಬರ್ಹಾಂ ಖಾನ್‌ ನೋಡುತ್ತಾನೆ. ಒಂದೆರಡು ತಿಂಗಳಲ್ಲಿ ಅವನ ಅಂತ್ಯವಾಗುತ್ತೆ. ಈಗ ಅಂಥದ್ದೇ ಧೂಮಕೇತು ಕಾಣಿಸಿಕೊಳ್ಳಲೆಂದೇ ಪ್ರಾರ್ಥಿಸುತ್ತಿದ್ದ ಪಂಡಿತ ಸಮುದಾಯಕ್ಕೆ, ಈಗ ಅಲ್ಲಿನ ಆಡಳಿತ ಅಂತ್ಯದ ಸುದ್ದಿ ಯಾವುದೋ ಆಶಾಭಾವ ಹುಟ್ಟಿಸಿದೆ. ಸ್ವರ್ಗದ ಬಾಗಿಲಿನ ಬುಡದಲ್ಲೇ ಕಾದು ಕುಳಿತ ಜೀವಗಳಿಗೆ, ಮತ್ತೆ ಹುಟ್ಟೂರಿನ ಕನಸುಗಳು ಬೀಳುತ್ತಿವೆ.

ಪಂಡಿತರು ಪುನಃ ಕಾಶ್ಮೀರಕ್ಕೆ ಹೋಗ್ತಾರ?
ಇದು ದೇಶದ ಪ್ರತಿ ನಾಗರಿಕನೊಳಗಿನ ಪ್ರಶ್ನೆ. 90ರ ದಶಕದಲ್ಲಿ ಕಣಿವೆ ತೊರೆದು ನಿರಾಶ್ರಿತ ಶಿಬಿರದಲ್ಲಿ ನೆಲೆನಿಂತ, ಈಗಿನ ಹಿರಿಯ ಜೀವಗಳಲ್ಲಿ ಮತ್ತೆ ಕಾಶ್ಮೀರದ ಕಣಿವೆ ಸೇರುವ ತವಕವೇನೋ ಎದ್ದು ಕಾಣುತ್ತಿದೆ. ಆದರೆ, ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿ, ಬೆಳೆಯುತ್ತಿರುವ ಪೀಳಿಗೆಗೆ ಕಾಶ್ಮೀರದ ಮೇಲೆ ಹಿರಿಯರಂತೆ ಒಲವಿಲ್ಲ. ಅವರು ಆ ಸ್ವರ್ಗ ಸುಖವನ್ನು ಅನುಭವಿಸಿದವರೂ ಅಲ್ಲ. ಕಾಶ್ಮೀರವೆಂದರೆ, ಭಯ, ರಕ್ತಪಾತ, ಮತಾಂತರ- ಈ ದೃಶ್ಯಗಳೇ ಅವರ ಕಣ್ಣಲ್ಲಿ ಜೀಕುತ್ತಿವೆ. ಪೂರ್ವಜರು ಪಟ್ಟ ಸಂಕಷ್ಟಗಳ ಕತೆ ಕೇಳುತ್ತಲೇ ಬೆಳೆದ ಮಕ್ಕಳು, ದೇಶದ ಬೇರೆ ಬೇರೆ ನಗರದ ಸುಂದರ ಬದುಕಿನತ್ತ ಮುಖ ಮಾಡುತ್ತಿದ್ದಾರೆ. ಭವಿಷ್ಯದ ಕಾಶ್ಮೀರದಲ್ಲಿನ ಜೀವಭದ್ರತೆ, ಉದ್ಯೋಗ, ಉನ್ನತ ಶಿಕ್ಷಣ, ಕೃಷಿಯ ಸವಾಲುಗಳು ಎಲ್ಲವೂ ಈ ಹೊಸಪೀಳಿಗೆಯ ಮುಂದೆ ಪ್ರಶ್ನೆಗಳಾಗಿ ಜಿಗಿಯುತ್ತಿವೆ. ಕಣಿವೆಯಲ್ಲಿ ಕಾಲೊನಿ ನಿರ್ಮಿಸುವ ಮುನ್ನ, ಪಂಡಿತ ಕುಟುಂಬಗಳ ಒಳಗಿನ ಈ ದ್ವಂದ್ವವನ್ನು ನಿವಾರಿಸಿ, ಧೈರ್ಯ ತುಂಬುವ, ಅಗತ್ಯ ಸೌಕರ್ಯ ಕಲ್ಪಿಸುವ ಸವಾಲು ಕೇಂದ್ರ ಸರ್ಕಾರದ ಮುಂದಿದೆ.

90.4! ಇದು “ರೇಡಿಯೊ ಶಾರದಾ’!
ಜಮ್ಮುವಿನಲ್ಲಿರುವ ಈ ಎಫ್ಎಂ ಸ್ಟೇಷನ್‌, ಕಾಶ್ಮೀರಿ ಪಂಡಿತ ಸಮುದಾಯದ ಮುಖ್ಯ ಧ್ವನಿ. ಹುಟ್ಟಿದ ನೆಲ ಕಳಕೊಂಡು, ದೇಶಾದ್ಯಂತ ಚದುರಿ, ಜೀವನ ರೂಪಿಸಿಕೊಳ್ಳುತ್ತಿರುವ ಪಂಡಿತರು, ಸಂಸ್ಕೃತಿಯ ಬೇರುಗಳನ್ನು ಮರೆಯಬಾರದೆಂಬ ಉದ್ದೇಶದಿಂದಲೇ ಹುಟ್ಟಿಕೊಂಡ ರೇಡಿಯೊ ಕೇಂದ್ರ. ಪಂಡಿತರ ಕುರಿತ ನಿತ್ಯದ ಸುದ್ದಿಗಳು, ಕಾಶ್ಮೀರದ ಇಂದಿನ ವಿದ್ಯಮಾನ, ಪಂಡಿತರ ಜೀವನಗಾಥೆ, ಭಜನೆ, ಕಾಶ್ಮೀರದ ಹಳೆಯ ಕತೆಗಳನ್ನೆಲ್ಲ ಕೇಳುವ ಸುಖ ಇಲ್ಲಿ ಸಿಗುತ್ತದೆ.

– ಕೀರ್ತಿ ಕೋಲ್ಗಾರ್‌
– ಚಿತ್ರಗಳು: ರೋಹಿತ್‌ ಪಂಡಿತ

Advertisement

Udayavani is now on Telegram. Click here to join our channel and stay updated with the latest news.

Next