Advertisement

Everest; ಎವರೆಸ್ಟ್‌ನ್ನೇ ಕಾಣದ ಜಾರ್ಜ್‌ ಎವರೆಸ್ಟ್‌!

11:49 PM Nov 24, 2023 | Team Udayavani |

ಎವರೆಸ್ಟ್‌ ಈ ಇಂಗ್ಲಿಷ್‌ ಶಬ್ದದ ಅರ್ಥ ಅತೀ ಎತ್ತರದ್ದು. ನಾವು ಎವರೆಸ್ಟ್‌ ಶಿಖರ ಎನ್ನುವಾಗ ಎತ್ತರದ್ದು ಎಂದು ಕರೆಯುತ್ತೇವೋ? ಎವರೆಸ್ಟ್‌ ಎಂಬ ವ್ಯಕ್ತಿಯ ಹೆಸರಿನ ಮೂಲಕ ಕರೆಯುತ್ತಿದ್ದೇವೋ? ಬ್ರಿಟಿಷರು ಎಲ್ಲೆಲ್ಲ ತಳವೂರಿದರೋ ಅಲ್ಲಿ ಭೂ(ಸಂಪತ್ತು) ಸರ್ವೇ ಮಾಡುತ್ತಿದ್ದರು. ಸಂಪತ್ತನ್ನು ದೋಚುವ ಮುನ್ನ ಸಂಪತ್ತು ಎಷ್ಟಿದೆ ಎಂದು ತಿಳಿಯಬೇಕಲ್ಲ? ಸ್ಥಳೀಯ ಹೆಸರು ಚಾಲ್ತಿ ಇಲ್ಲದಿದ್ದರೆ ಅದಕ್ಕೆ ಅವರೇ ನಾಮಕರಣ ಮಾಡುತ್ತಿದ್ದರು. ಹೀಗೆ ಎವರೆಸ್ಟ್‌ ಶಿಖರಕ್ಕೆ ಪೀಕ್‌ “ಬಿ’ ಎಂದೂ, ಬಳಿಕ ಪೀಕ್‌ ಗ್ಖಿ ಎಂದು ಕರೆದರು. ಏತನ್ಮಧ್ಯೆ ಯೂರೋಪ್‌ ಮ್ಯಾಪ್‌ ತಜ್ಞರು ಇದೇ ಪರ್ವತಕ್ಕೆ ಗೌರಿಶಂಕರ ಎಂದೂ ಕರೆದಿದ್ದರು. ಆದರೆ ಬಳಿಕ ಗೌರಿಶಂಕರ ಶಿಖರ ಇನ್ನೊಂದು ಇರುವುದು ಪತ್ತೆಯಾಯಿತು. ಎವರೆಸ್ಟ್‌, ಗೌರಿಶಂಕರ ಪರ್ವತ ಇರುವುದು ನೇಪಾಲದಲ್ಲಿ. ಎರಡನೆಯ ಅತೀ ಎತ್ತರದ ಪರ್ವತ ಕೆ2 ಆಗ ಭಾರತದಲ್ಲಿದ್ದರೂ ಬಳಿಕ ಪಾಕಿಸ್ಥಾನದ ಪಾಲಾಯಿತು.

Advertisement

ಜಾರ್ಜ್‌ ಎವರೆಸ್ಟ್‌- ರಾಧಾನಾಥ ಸಿಕ್ದರ್‌
ಬ್ರಿಟಿಷ್‌ ಸರ್ವೆಯರ್‌ ಜಾರ್ಜ್‌ ಎವರೆಸ್ಟ್‌ (1790-1866) ಭಾರತದ ಸರ್ವೇಯರ್‌ ಜನರಲ್‌ (1830-1843) ಆಗಿದ್ದ. ಪೀಕ್‌ ಬಿ ಶಿಖರವನ್ನು ಅಳೆಯುವಾಗ ಜಾರ್ಜ್‌ ಎವರೆಸ್ಟ್‌ ಗೂಢ ರೇಖಾಗಣಿತ ಸರ್ವೇಗೆ ಅಗತ್ಯವಾದ ಗೂಢ ತ್ರಿಕೋನಮಿತಿ (ಸ್ಪೆರಿಕಲ್‌ ಟ್ರಿಗ್ನಾಮೆಟ್ರಿ) ತಜ್ಞನನ್ನು ಅರಸುತ್ತಿದ್ದ. ಕಲ್ಕತ್ತಾದಲ್ಲಿ ಮಧ್ಯಪ್ರದೇಶ ಮೂಲದ ರಾಧಾನಾಥ್‌ ಸಿಕªರ್‌ (1813-1870) ಎಂಬ ತಜ್ಞ ಸಿಕ್ಕಿದ. ಸಿಕ್ದರ್‌ಗೆ ಕೇವಲ 19 ವರ್ಷ. ಸಿಕ್ದರ್‌ 1824ರಿಂದ 32ರ ವರೆಗೆ ಐಸಾಕ್‌ ನ್ಯೂಟನ್‌ ಸಿದ್ಧಾಂತವನ್ನು ಅಧ್ಯಯನ ಮಾಡಿದ ಮೊದಲ ಇಬ್ಬರು ಭಾರತೀಯರಲ್ಲಿ ಒಬ್ಬ. ಪ್ರಾಚೀನ ಗ್ರೀಕ್‌ ರೇಖಾಗಣಿತಜ್ಞ ಇಕ್ಲಿಡ್ಸ್‌ನ ಸಿದ್ಧಾಂತ, ಥಾಮಸ್‌ ಜೆಫ‌Õನ್‌ನ ಪ್ರವಹಿಸುವಿಕೆ, ವಿಭಜನ ರೇಖಾಗಣಿತ, ಖಗೋಳಶಾಸ್ತ್ರವನ್ನೂ ಕಲಿತಿದ್ದ. ಸಿಕªರ್‌ನ ಗಣಿತ ಪ್ರತಿಭೆಗೆ ಎವರೆಸ್ಟ್‌ ಮೆಚ್ಚಿದ. ಸಿಕ್ದರ್‌ಗೆ ಡೆಹ್ರಾ ಡೂನ್‌ನಲ್ಲಿದ್ದ ಗ್ರೇಟ್‌ ಟ್ರಿಗ್ನೊಮೆಟ್ರಿಕಲ್‌ ಸರ್ವೇ ಇಲಾಖೆಯಲ್ಲಿ ತಿಂಗಳಿಗೆ 30 ರೂ.ಗೆ 1831ರಲ್ಲಿ “ಕಂಪ್ಯೂಟರ್‌’ (ಕಂಪ್ಯೂಟ್‌ ಮಾಡುವವರು ಕಂಪ್ಯೂಟರ್‌= ಗಣಿತಜ್ಞರು) ಆಗಿ ಉದ್ಯೋಗ ದೊರಕಿತು. ಎವರೆಸ್ಟ್‌ ಬಳಿಕ ವಾಫ್ ಕಾಲದಲ್ಲಿ ಸಿಕªರ್‌ಗೆ “ಮುಖ್ಯ ಕಂಪ್ಯೂಟರ್‌’ ಹುದ್ದೆ ದೊರಕಿತು. ಮೀಟೊ ರೊಲೊಜಿಕಲ್‌ ಇಲಾಖೆಯ ಅಧೀಕ್ಷಕ ಹುದ್ದೆಯೂ ದೊರಕಿತು.

ಪರ್ವತದ ಎತ್ತರ ಪತ್ತೆ ಹಚ್ಚಿದ ಸಿಕ್ದರ್‌ ಎವರೆಸ್ಟ್‌ ನಿವೃತ್ತಿ ಬಳಿಕ ಆಂಡ್ರಿವ್‌ ಸ್ಕಾಟ್‌ ವಾಫ್ ಆ ಸ್ಥಾನಕ್ಕೇರಿದ. ವಾಫ್ ನಿರ್ದೇಶನದಂತೆ ಸಿಕ್ದರ್‌ ಪರ್ವತಗಳ ಎತ್ತರ ಅಳೆಯಲು ಶುರು ಮಾಡಿದ. ಈ ಬುದ್ಧಿವಂತ ಗಣಿತಜ್ಞ ಪರ್ವತವನ್ನು ಇನ್ನೂ ನೋಡಿರಲಿಲ್ಲ. ಕಂಚೆಂಜುಂಗ (ಮೂಲ ಹೆಸರು ಕಾಂಚನಗಂಗ, ಬ್ರಿಟಿಷರ ಬಾಯಲ್ಲಿ ಹೀಗಾಯಿತು) ಪರ್ವತವನ್ನು 1852ರಲ್ಲಿ ಜಗತ್ತಿನ ಅತೀ ಎತ್ತರದ್ದು ಎಂದು ತಿಳಿದಿದ್ದ. ಬಳಿಕ ಇದು ಜಗತ್ತಿನ ಮೂರನೆಯ ಅತೀ ಎತ್ತರದ ಪರ್ವತ (ಇದು ಸಿಕ್ಕಿಂ ಬಳಿ ಇದೆ) ಎಂದು ತಿಳಿಯಿತು. ಅನಂತರ ಸಿಕ್ದರ್‌ ಪೀಕ್‌ ಗ್ಖಿ ಪರ್ವತದ ಎತ್ತರ 29,000 ಅಡಿ (8,839 ಮೀ.) ಎಂದು ಘೋಷಿಸಿದ. ಆದರೆ ಅಂಕಿ ಅಂಶ ರೌಂಡ್‌ ಫಿಗರ್‌ ಮಾಡಿರಬಹುದು ಎಂದು ವಾಫ್ ಹೆದರಿ ಅದಕ್ಕೆ ಎರಡು ಅಡಿ ಹೆಚ್ಚಿಗೆ ಸೇರಿಸಿದ. 1856ರ ಮಾರ್ಚ್‌ ನಲ್ಲಿ ಅಧಿಕೃತವಾಗಿ ಇದನ್ನು ಘೋಷಿಸಲಾಯಿತು. 1955ರಲ್ಲಿ ಭಾರತೀಯ ಸರ್ವೇ ಇಲಾಖೆ ಮತ್ತೆ ಗಣಿಸಿ 29,029 ಅಡಿ (8,848 ಮೀ.) ಎಂದು ಘೋಷಿಸುವವರೆಗೂ ಹಿಂದಿನದೇ ಅಧಿಕೃತವಾಗಿತ್ತು. ತಾಂತ್ರಿಕ ಸುಧಾರಣೆಗಳ ಬಳಿಕ ಪರ್ವತವು ಪ್ರತೀ ವರ್ಷ 4 ಮಿ.ಮೀ. ಬೆಳೆಯುತ್ತಿದೆ, ಈಶಾನ್ಯದತ್ತ ನಿಧಾನವಾಗಿ ಚಲಿಸುತ್ತಿದೆ ಎಂದು ತಿಳಿದುಬಂದಿದೆ.

ಅಧಿಕಾರದ ಬಲ- ಇಣುಕುವ ಸತ್ಯ
ವಾಫ್ ತನ್ನ ಪೂರ್ವಾಧಿಕಾರಿ ಜಾರ್ಜ್‌ ಎವರೆಸ್ಟ್‌ಗೆ ಗೌರವ ಸಲ್ಲಿಸುವ ಉದ್ದೇಶದಿಂದ “ಮೌಂಟ್‌ ಎವರೆಸ್ಟ್‌’ ಎಂದು ಶಿಫಾರಸು ಮಾಡಿದ. ಸ್ವಯಂ ಎವರೆಸ್ಟ್‌ ಇದನ್ನು ಆಕ್ಷೇಪಿಸಿದ್ದ. ಎವರೆಸ್ಟ್‌ ಈ ಪರ್ವತವನ್ನು ನೋಡಿಯೂ ಇರಲಿಲ್ಲ. ಆತನಿಗೆ ಸ್ಥಳೀಯ ಹೆಸರು ಕೊಡುವುದರಲ್ಲಿ ಆಸಕ್ತಿ ಇತ್ತು. ಭಾರತ ಮತ್ತು ನೇಪಾಲದಲ್ಲಿ ಜನಾಂಗೀಯ ತಜ್ಞನಾಗಿದ್ದ ಬ್ರಿಯಾನ್‌ ಹಫ್ಟನ್‌ ಹೊಗ್ಸನ್‌ ಸ್ಥಳೀಯವಾಗಿ ಕರೆಯುತ್ತಿದ್ದ ಡಿಯೋಡಂಗ ಹೆಸರು ಇರಿಸಲು ಸೂಚಿಸಿದ್ದ. ಗೌರಿಶಂಕರ, ಸಾಗರಮಾತಾ, ದೇವಗಿರಿ ಹೆಸರಿನ ಪ್ರಸ್ತಾವವಿತ್ತು. ಆದರೆ ವಾಫ್ ಮಾತಿನಂತೆ ರೋಯಲ್‌ ಜಿಯೋಗ್ರಫಿಕಲ್‌ ಸೊಸೈಟಿ ಅಂತಿಮವಾಗಿ ಮೌಂಟ್‌ ಎವರೆಸ್ಟ್‌ ಎಂದು ಘೋಷಿಸಿತು. ಈ ಮೂಲಕ ಇಡೀ ಜೀವನವನ್ನು ಸವೆಸಿದ ರಾಧಾನಾಥ ಸಿಕ್ದರ್‌ ಹೆಸರು ಯಾರಿಗೂ ತಿಳಿಯದೆ ಮೂಲೆಪಾಲಾಯಿತು. ಅಧಿಕಾರ ಬಲ ಏನನ್ನೂ ಮಾಡಿ ಅರಗಿಸಿಕೊಳ್ಳಬಹುದು ಎನ್ನುವುದಕ್ಕೆ ಇದು ಸಾಕ್ಷಿ. ಆದರೆ ಸತ್ಯ ಅಲ್ಲೆಲ್ಲೋ ಇದ್ದು ಆಗಾಗ್ಗೆ ಇಣುಕಿನೋಡುತ್ತದೆ!

ಪೂರ್ವಪೀಠಿಕೆ ಕಣ್ಮರೆ- ಸಾವಿನ ದರೋಡೆ
ಸಿಕ್ದರ್‌ಗೂ ಬ್ರಿಟಿಷ್‌ ವಸಾಹತುಶಾಹಿ ಆಡಳಿತಕ್ಕೂ ಸಂಬಂಧ ಚೆನ್ನಾಗಿರಲಿಲ್ಲ. 1851ರಲ್ಲಿ ಪ್ರಕಟವಾದ ಸರ್ವೇ ಮ್ಯಾನುವಲ್‌ನ ಪೀಠಿಕೆಯಲ್ಲಿ ರಾಧಾನಾಥ ಸಿಕªರ್‌ ಅವರು ಬರೆದ ತಾಂತ್ರಿಕ ಮತ್ತು ಗಣಿತದ ವಿಭಾಗಗಳಿದ್ದವು. ಆದರೆ 1875ರಲ್ಲಿ ಪ್ರಕಟವಾದ ಆವೃತ್ತಿಯಲ್ಲಿ ಪೀಠಿಕೆಯೇ ಕಣ್ಮರೆಯಾಯಿತು. ಆಗ ಸಿಕ್ದರ್‌ ನಿಧನ ಹೊಂದಿದ್ದ. ಸಿಕ್ದರ್‌ ಕೊಡುಗೆಯೂ ಇದರೊಂದಿಗೆ ಕಣ್ಮರೆಯಾಯಿತು. ಈ ನಡೆಯನ್ನು ಕೆಲವು ಬ್ರಿಟಿಷ್‌ ಸರ್ವೇಯರ್‌ಗಳೂ ಖಂಡಿಸಿದ್ದರು. 1876ರಲ್ಲಿ “ಫ್ರೆಂಡ್‌ ಆಫ್ ಇಂಡಿಯ’ ಪತ್ರಿಕೆ ಇದನ್ನು “ಸಾವಿನ ದರೋಡೆ‌’ (robbery of the dead)) ಎಂದು ಟೀಕಿಸಿತ್ತು. ಈ ನಡುವೆ ಸಿಕªರ್‌ 1854ರಲ್ಲಿ ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದ ಜಾಗೃತಿಗಾಗಿ ಬೆಂಗಾಲಿ ನಿಯತಕಾಲಿಕೆ “ಮಾಸಿಕ್‌ ಪತ್ರಿಕಾ’ವನ್ನು ಸ್ನೇಹಿತ ಪೆರಿಚಂದ್‌ ಮಿತ್ರಾ ಜತೆಗೂಡಿ ನಡೆಸಿ ಸರಳ ಭಾಷೆಯಲ್ಲಿ ಲೇಖನಿ ವ್ಯವಸಾಯ ಮಾಡಿದ. 1862ರಲ್ಲಿ ನಿವೃತ್ತಿಯಾದ ಬಳಿಕ ಸಿಕªರ್‌ ಜನರಲ್‌ ಅಸೆಂಬ್ಲಿ ಸಂಸ್ಥೆಯ (ಈಗ ಕೋಲ್ಕತಾದ ಸ್ಕಾಟಿಷ್‌ ಚರ್ಚ್‌ ಕಾಲೇಜು) ಗಣಿತ ಪ್ರಾಧ್ಯಾಪಕನಾದ. 1870ರಲ್ಲಿ ನಿಧನ ಹೊಂದಿದ.

Advertisement

ಇರುವಾಗ ಹಿಂಸೆ, ಸತ್ತಾಗ ವೈಭವ!
ಯಾವುದೇ ಮಕ್ಕಳನ್ನು ಕೇಳಿದರೂ ಮೌಂಟ್‌ ಎವರೆಸ್ಟ್‌ ಶಿಖರ/ ಎವರೆಸ್ಟ್‌ ಪರ್ವತ ಎಂದು ಹೇಳುತ್ತಾರೆ. ಪ್ರಥಮವಾಗಿ ಈ ಪರ್ವತವನ್ನು ಕಂಡು ಹಿಡಿದವನು ಎವರೆಸ್ಟ್‌ ಎಂದು ಪ್ರಚಾರ ಕೊಟ್ಟು ಸತ್ತ ಬಳಿಕವೂ ಪೂರ್ವಪೀಠಿಕೆಯಲ್ಲಿ ಸಿಕªರ್‌ ಹೆಸರನ್ನೂ ಕೈಬಿಟ್ಟು ಅನ್ಯಾಯ ಮಾಡಿದರು, ಈಗಲೂ ಅಧಿಕೃತ ಮುದ್ರೆಯುಳ್ಳ ಸುಳ್ಳನ್ನೇ ಮಕ್ಕಳಿಗೆ ಕಲಿಸುತ್ತಿದ್ದೇವೆ. ಬ್ರಿಟಿಷರ ಪಳೆಯುಳಿಕೆ ವಿವಿಧ ದೇಶಗಳ ಕಾನೂನುಗಳಲ್ಲಿ, ಇತಿಹಾಸಗಳಲ್ಲಿ ಇದೆ ಎನ್ನುವುದಕ್ಕೆ ಸಾಕ್ಷಿ ಇದು. ಜೀವದಲ್ಲಿರುವಾಗ ಮಾನಸಿಕ ಹಿಂಸೆ ಕೊಟ್ಟು ಸತ್ತ ಬಳಿಕ ವೈಭವೀಕರಿಸುವುದು ಹಿಂದೆಯೂ ಇತ್ತು, ಈಗಲೂ  ಇದೆ, ಮುಂದೆಯೂ ಇರುತ್ತದೆ. ಸಿಕªರ್‌ ಕತೆಯೂ ಇಷ್ಟೇ ಆಯಿತು. 2004ರಲ್ಲಿ ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿಯನ್ನು ಹೊರತಂದು ಗೌರವ ಸಲ್ಲಿಸಿ(ಕೈತೊಳೆದುಕೊಂಡಿ)ತು.

 ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next