Advertisement

ಕ್ಯಾಬಿನೆಟ್ ಅಂದ್ರೆ, ಪೆಹಲೆ ಫ್ಲಡ್‌ ದೇಕೋ ಜಾವ್‌ ಅಂದ್ರಂತೆ ಅಮಿತ್‌ ಸಾ…

02:03 AM Aug 11, 2019 | mahesh |

ಅಮಾಸೆ: ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಎಲ್ಗೋಗುಮಾ ಸಾ… ಎಲ್ ನೋಡಿದ್ರು ಪ್ರವಾಹ ಬಂದೈತೆ. ಮನ್ಯಾಗೆ ನೈಂಟಿ ಹಾಕ್ಕೊಂಡು ಬೋಟಿ-ಖಲೀಜಾ ಚಾಕ್ನಾ ಮಾಡ್ಕಂಡ್‌ ಇಧ್ದೋಗಿದ್ದೆ

ಚೇರ್ಮನ್ರು: ಪ್ರವಾಹ ಜೋರಾಗೆ ಐತೆ ಬುಡ್ಲಾ. ಆದ್ರೂ ಜನ್ಕೆ ತೊಂದ್ರೆ ಆಗ್‌ಬಾರ್ಧು

ಅಮಾಸೆ:ಹೌದೇಳಿ, ಅದ್ಕೆ ರಾಜಾಹುಲಿ ಯಡ್ಯೂರಪ್ನೋರು ಡೆಲ್ಲಿನಿಂದ ಡೈರೆಕ್ಟ್ ಜನ್‌ತಾಕೆ ಹೋಗಿದ್ರು. ಟಿವಿನ್ಯಾಗೆ ನೋಡ್‌ತಿದ್ದೆ

Advertisement

ಚೇರ್ಮನ್ರು: ಒಂದ್‌ ವರ್ಸ ಬರ, ಮತ್ತೂಂದ್‌ ವರ್ಸ ಪ್ರವಾಹ ಬಂದ್ರೆ ಏನ್ಲಾ ಮಾಡೋದು

ಅಮಾಸೆ: ನಮ್‌ ಸ್ಟೇಟ್ ನಸೀಬೇ ಚಂದಾಕಿಲ್ಲಾ ಬುಡಿ ಸಾ…

ಚೇರ್ಮನ್ರು: ಎಂಗೈತ್ಲಾ ಯಡ್ಯೂರಪ್ನೋರ್‌ ಕಮ್ಲ ಸರ್ಕಾರ

ಅಮಾಸೆ: ಯಡ್ಯೂರಪ್ನೋರು ಸಿಎಂ ಆಗಿ ಪ್ರಮಾಣ ತಕ್ಕಂಡ್ರು. ಡೆಲ್ಲಿಗೋಗಿ ಮಿನಿಸ್ಟ್ರೆ ಯಾರ್ನ್ ಮಾಡೂಮಾ ಅಂತ ಅಮಿತ್‌ ಸಾ, ನಡ್ಡಾ ಸಾಹೇಬ್ರುನಾ ಕೇಳಿದ್ರು. ಆದ್ರೆ ಇತ್ಲಾಗೆ ಮಳೆ ಬಡ್ದ್ದೇಟ್ಗೆ ಪೆಹಲೆ ಉದರ್‌ ಜಾಕೆ ದೇಕೋ ಇದರ್‌ ಮತ್‌ ರಹೋ ಅಂತ ಹುಕುಂ ಕೊಟ್ರಂತೆ ಅದ್ಕೆ ಯಡ್ಯೂರಪ್ನೋರು ಆಯ್ತು ಅಂತಾ ಬಂದ್‌ಬಿಟ್ರಂತೆ

ಚೇರ್ಮನ್ರು: ಆದ್ರೂ ಇಂತ ಟೇಮ್‌ನ್ಯಾಗೆ ಒಂದಷ್ಟ್ ಮಿನಿಸ್ಟ್ರೆಗ್ಳು ಇದ್ರೇನೆ ಅಲ್ವೇ ಕೆಲ್ಸ ಕಾರ್ಯಗ್ಳು ಆಗೋದು. ಪಾಪ ಯಡ್ಯೂರಪ್ನೋರು ಒಬ್ರೇ ಏನ್‌ ತಾನೇ ಮಾಡ್ತಾರೆ, ಬಿಜೆಪಿ ಹೈಕಮಾಂಡ್‌ ಡಿಸಿಸನ್‌ ತಕ್ಕೋಬೇಕಿತ್ತು

ಅಮಾಸೆ: ಹೌದೇಳಿ, ಇರೋದ್‌ ಪಕ್ಸ್‌ದೋರು ಅಂಗೇ ಹೇಳ್ತಾವ್ರೆ, ಹದಿನೈದ್‌ ಮಿನಿಸ್ಟ್ರೆ ಮಾಡಿ ಎಲ್ಡ್ ಎಲ್ಡ್ ಡಿಸ್ಟಿಕ್ಕು ಇಂಚಾರ್ಜ್‌ ಅಂತ ಕೊಟ್ಬಿಟ್ಟು ನೋಡ್ಕಳಿ ಅಂತ ಹೇಳಿದ್ರೆ ಸರ್‌ ಹೋಯ್ತಿತ್ತು. ಈಗ್‌ ರಾಜಾಹುಲಿನೇ ಎಲ್ಲಾ ಕಡೀ ಹೋಗಂಗಾಗದೆ

ಚೇರ್ಮನ್ರು: ಮಿನಿಸ್ಟ್ರೆ ಆಕಾಂಕ್ಷಿಗ್ಳು ಪಾಪ ಪ್ರವಾಹ ನೋಡಿ ಕಣ್ಣೀರ್‌ ಹಾಕ್ತಾವ್ರಂತೆ

ಅಮಾಸೆ: ಹೌದೇಳಿ, ಮಿನಿಸ್ಟ್ರೆ ಆಗುಮಾ ಅಂತಾ ವಸ ಜುಬ್ಟಾ ಹೊಲ್ಸ್ಕಂಡ್‌ ರೆಡಿಯಾದ್ರೆ ಅತ್ಲಾಗೆ ಮಳೆ ಗುಮ್‌ಕಂಡ್‌ ಬಂದ್‌ ಬುಟ್ಟೈತೆ. ಯಡ್ಯೂರಪ್ನೋರು, ಎಲ್ಲ ಎಂಎಲ್ಎಗ್ಳು ಮಿನಿಸ್ಟ್ರೆಗೆ, ಕ್ಷೇತ್ರಕ್‌ ಹೋಗ್‌ ಕೆಲ್ಸ ಮಾಡಿ, ಪ್ರವಾಹದಾಗೆ ಸಿಕ್ಕಾಕ್‌ಕೊಂಡಿರೋರ್‍ನಾ ಕಾಪಾಡಿ ಅಂತ ಹೇಳವ್ರಂತೆ. ಅದ್ಕೆ, ಆಯ್ತು ಬುಡಿ ಸಿವಾ ಅಂತಾ ಕಣ್‌ ಕಣ್‌ ಬಿಡ್ತಾವ್ರೆ

ಚೇರ್ಮನ್ರು: ಸಿದ್ರಾಮಣ್ಣೋರು, ಕುಮಾರಣ್ಣೋರು ಏನ್‌ ಮಡ್ತಾವ್ರ್ಲಾ

ಅಮಾಸೆ: ಸಿದ್ರಾಮಣ್ಣೋರ್ಗೆ ಕಣ್‌ ಪ್ರಾಬ್ಲಿಂ, ಬಾದಾಮಿಗೋಗು ಕಂದಾ ಅಂತಾ ಮಗಿ ಯತೀಂದ್ರನ್ನಾ ಕಳ್ಸವ್ರೆ. ಕುಮಾರಣ್ಣೋರ್ಗೆ ವೈರಲ್ ಫೀವರ್‌ ಆದ್ರೂ ಉತ್ರ ಕರ್‍ನಾಟ್ಕ ಕಡೆ ಹೋಗವ್ರೆ.

ಚೇರ್ಮನ್ರು: ಕುಮಾರಣ್ಣೋರು ಅದೇನೋ ಎಲ್ಲಿದ್ದಿಯಪ್ಪಾ ಯಡ್ಯೂರಪ್ಪಾ ಅಂತ ಕೇಳಿದ್ರಂತೆ

ಅಮಾಸೆ: ಹೌದು ಸಾ… ಪ್ಯಾಲಸ್‌ ಗ್ರೌಂಡ್‌ನ್ಯಾಗೆ ತೆನೆ ಪಕ್ಸ ಸಮಾವೇಸ್‌ದಾಗೆ, ಯಡ್ಯೂರಪ್ನೋರು ಡೆಲ್ಲಿನಾಗ್‌ ಇದ್ರಲ್ಲಾ, ಇಲ್ ಪ್ರವಾಹ ಆಗಿ ಜನ್ಕೆ ತೊಂದ್ರೆ ಆಗೈತೆ. ಯಾರೂ ಎಲ್ಲಿದ್ದೀಯಪ್ಪಾ ಯಡ್ಯೂರಪ್ಪಾ ಅಂತಾ ಕೇಳ್ತಿಲ್ಲ. ನನ್‌ ಮಗ ಮಂಡ್ಯದಾಗೆ ಎಲೆಕ್ಸನ್‌ ನಿಂತೇಟ್ಗೆ ನಿಖೀಲ್ ಎಲ್ಲಿದ್ದೀಯಪ್ಪಾ ಅಂತ ಕಿಂಡಲ್ ಮಾಡಿದ್ರು. ಸರಿನಾ ಅಂತ ದಬಾಯ್ಸಿದ್ರು. ಟಿವಿನ್ಯಾಗೂ ಆದೇ ತೋರ್ಸಿದ್ರು. ಅದ್ಕೆ ಡೆಲ್ಲಿನ್ಯಾಗ್‌ ಇದ್‌ ಯಡ್ಯೂರಪ್ನೋರು ವಾಪಸ್‌ ಬಂದ್‌ಬುಟ್ರಾ

ಚೇರ್ಮನ್ರು: ಅಂಗಾರೆ ಕ್ಯಾಬಿನೆಟ್ ಇನ್ನೂ ಇಲ್ವಾ

ಅಮಾಸೆ: ಆಯ್ತದೆ ಸಾ… ಮುಂದ್ಲ್ ವಾರಾ ಅಮಿತ್‌ ಸಾ ಅಣ್ಣೋರ್ನ ನೋಡಿ ಪೈನಲ್ ಮಾಡ್ತಾರಂತೆ. ಮೊದ್ಲು ಓನ್ಲಿ ಫಿಪ್ಟೀನ್‌ ಮಾಡಿ ಆಮ್ಯಾಕೆ ನೋಡುಮಾ ಅಂತ ಹೇಳವ್ರಂತೆ. ಆದ್ರೆ, ಯಡ್ಯೂರಪ್ನೋರು ಟೆನ್‌ ಬಿಟ್ಟು ಟ್ವೆಂಟಿ ತ್ರೀ ಮಾಡೋಮಾ ಅಂತ ಹೇಳವ್ರಂತೆ

ಚೇರ್ಮನ್ರು: ಯಾರ್ಯಾರ್‌ ಅವ್ರೆ ಲಿಸ್ಟ್‌ನ್ಯಾಗೆ

ಅಮಾಸೆ: ರಾಯಣ್ಣ ಬ್ರಿಗೇಡ್‌ ಈಸ್ವರಪ್ನೋರು, ಸಾಮ್ರಾಟ್ ಅಸೋಕ್‌ ಸಾಹೇಬ್ರು, ಸೀಟಿ ರವಿಯಣ್ಣೋರು, ಕಾರ್‌ಜೋಳ್‌ ಅಣ್ಣೋರು, ಉಮೇಸ್‌ ಕತ್ತಿ ಸಾವ್‌ಕಾರ್ರು, ಮಾಧುಸ್ವಾಮಿಗ್ಳು ಎಲ್ಲ ಐವ್ರಂತೆ

ಚೇರ್ಮನ್ರು: ರೇಣುಕಾಚಾರ್ಯ, ಬಾಂಬೆ ಆಪರೇಸನ್‌ ಮಾಸ್ಟರ್‌ ಮೈಂಡ್‌ ಅಸ್ವತ್‌ನಾರಾಯಣ್‌ ಇಲ್ವಾ

ಅಮಾಸೆ: ಅವ್ರೂ ಐವ್ರೆ, ಸೆಕೆಂಡ್‌ ರೌಂಡ್‌ ಅಂತ ಹೇಳವ್ರಂತೆ. ಆದ್ರೆ, ಯಡ್ಯೂರಪ್ನೋರು ಈಗ್ಲೇ ಅವ್ರೂ ಬೇಕು ಅಂತ ಹಠ ಹಿಡಿದವ್ರಂತೆ

ಚೇರ್ಮನ್ರು: ಹಳ್ಳಿಹಕ್ಕಿ, ರಮೇಸ್‌ ಜಾರ್ಕಿಹೊಳಿ, ಕೌರವ ಬಿಸಿ ಪಾಟೀಲ್ ಕತೆ ಏನಾಯ್ತ್ಲಾ

ಅಮಾಸೆ: ಕೋರ್ಟ್‌ನ್ಯಾಗೆ ಕೇಸ್‌ ಐತೆ. ಅದು ಫೈಸ್ಲಾ ಆದ್‌ಮ್ಯಾಕೆ ಅವ್ರುಕೂ ಮಿನಿಸ್ಟ್ರೆ ಕೊಡ್ತಾರಂತೆ

ಚೇರ್ಮನ್ರು: ಅಲ್ಲಿಗಂಟಾ ಸುಮ್ಕಿರ್‌ತಾರಾ

ಅಮಾಸೆ: ಇನ್ನೇನ್‌ ಮಾಡ್ತಾರೆ. ಅಲ್ಲೇ ಡಿಸೈಡ್‌ ಆಗ್‌ಬೇಕಲ್ವೇ

ಚೇರ್ಮನ್ರು: ಯಡ್ಯೂರಪ್ನೋರು ಎಂಗ್ಲಾ ಸುಮ್ಕವ್ರೆ

ಅಮಾಸೆ: ಏನೂ ಮಾಡಾಕಾಗಾಕಿಲ್ಲಾ ಸಾ… ಶಂಖ್‌ದಿಂದ್ಲೇ ತೀರ್ಥ ಬರ್ಬೇಕು. ಮೊದ್ಲಂಗೆ ಹಠ ಮಾಡಾಂಗಿಲ್ಲ. ಮೊದ್ಲೇ ಕಂಡೀಸನ್‌ ಹಾಕವ್ರೆ, ಹಮ್‌ ಜೋ ಬೋಲ್ತೇ ಹೈ ಉತ್‌ನಾ ಹೀ ಕರ್‍ನಾ ಅಂತ ಹುಕುಂ ಮಾಡವ್ರಂತೆ. ಅದೆಲ್ಲಾ ಹೋಗ್ಲಿ ಮದ್ಲು ಮಳೆ ನಿಂತು ಪ್ರವಾಹ ಕಡ್ಮೆ ಆಗಿ ಜನ ಉಸ್‌ರಾಡ್ಲಿ ಬುಡಿ ಸಾ

ಚೇರ್ಮನ್ರು: ಅದೂ ದಿಟ್ವೇ ಬಿಡು, ರೇವಣ್ಣೋರು ಕಾಣ್ತಿಲ್ವಲ್ಲಾ ಎಲ್ಗೋಗವ್ರೆ ಕಣ್ಲಾ

ಅಮಾಸೆ: ಸಮ್ಮಿಸ್ರ ಸರ್ಕಾರ ಬಿದ್ದಿದ್ದೂ ಅವ್ರಿಂದ್ಲೇ ಅಂತ ಎಲ್ರೂ ದೂರ್‌ ಹೇಳ್ದೇಟ್‌ಗೆ ಶ್ಯಾನೆ ಬೇಸ್ರ ಮಾಡ್‌ಕಂಡು ದೇವ್ರೇ ನೀನೇ ನೋಡ್ಕಳಪ್ಪಾ ಅಂತ ಸುಮ್ಕವ್ರೆ. ನನ್‌ ಹೆಂಡ್ರು ಮೀನ್‌ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ….

• ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next