ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿರುವ ಹಿನ್ನೆಲೆಯಲ್ಲಿ ಒಂದೆಡೆ ಸಿಎಂ ಅಭ್ಯರ್ಥಿ ಆಯ್ಕೆಗೆ ಸಾಕಷ್ಟು ಕಸರತ್ತುಗಳು ನಡೆದಿರುವುದರ ನಡುವೆಯೇ ಇನ್ನೊಂದೆಡೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಂದಲೂ ಪ್ರಬಲ ಲಾಬಿ ಆರಂಭವಾಗಿದೆ. ಈ ಸಲ ಗೆದ್ದಿರುವ ಬಹುತೇಕರಲ್ಲಿ ಹಳೆ ಮುಖಗಳೇ ಹೆಚ್ಚಿರುವುದರಿಂದ ಹಿರಿಯ ತಲೆಗಳು, ಅನುಭವಿಗಳ ಸಂಪುಟ ರಚನೆ ಸಾಧ್ಯತೆ ಇದೆ.
ಕಾಂಗ್ರೆಸ್ನ 135 ಶಾಸಕರಲ್ಲಿ ಲಿಂಗಾಯತರ ಸಂಖ್ಯೆ ಅತ್ಯಧಿಕ (39)ವಾಗಿದೆ. ಅನಂತರದ್ದು ಒಕ್ಕಲಿಗ (21)ರದ್ದು. ಎಸ್ಸಿ ಸಮುದಾಯದಿಂದ 22, ಎಸ್ಟಿ ಸಮುದಾಯದಿಂದ 15, ಕುರುಬ ಸಮಾಜದಿಂದ 8, ಮುಸ್ಲಿಂ ಸಮಾಜದಿಂದ 9ಹಾಗೂ ಬ್ರಾಹ್ಮಣ, ಈಡಿಗ ಸಮುದಾಯದಿಂದ ತಲಾ ಮೂವರು ಆಯ್ಕೆಯಾಗಿದ್ದಾರೆ.
ಸಂಪುಟ ರಚನೆಯಲ್ಲಿ ಜಿಲ್ಲೆ, ಜಾತಿಗಳಿಗೆ ಪ್ರಾತಿನಿಧ್ಯ ಕೊಡುವುದಕ್ಕೆ ಆದ್ಯತೆ ನೀಡುವುದರಿಂದ ಸಾಮಾಜಿಕ ನ್ಯಾಯ ಪಾಲಿಸುವುದು ಅನಿವಾರ್ಯವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುತೇಕ ಎಲ್ಲ ಜಾತಿ, ಜನಾಂಗದ ಮತಗಳು ಲಭಿಸಿರುವುದರಿಂದ ಎಲ್ಲರಿಗೂ ಪ್ರಾತಿನಿಧ್ಯ ಕಲ್ಪಿಸಿಕೊಡಬೇಕಾದ ಸವಾಲು ಎದುರಾಗಿದೆ.
ಆದರೆ ಮುಖ್ಯಮಂತ್ರಿ ಹೊರತುಪಡಿಸಿ ಉಳಿದ 33 ಸ್ಥಾನಗಳಿಗೆ ಅಂದಾಜು 53 ಮಂದಿ ಅರ್ಹ ಅನುಭವಿಗಳು ಕಣ್ಣಿಟ್ಟಿದ್ದಾರೆ. ಹೀಗಾಗಿ ಎಲ್ಲರನ್ನು ಸಮಾಧಾನಪಡಿಸಿ ಸಂಪುಟ ರಚಿಸುವ ಕರ್ತವ್ಯ ಮುಖ್ಯಮಂತ್ರಿ ಯಾಗುವವರ ಮೇಲಿದೆ. 53 ಮಂದಿಯನ್ನು 33 ಮಂದಿಗೆ ಸಚಿವ ಸ್ಥಾನ ದೊರೆತರೂ ಇನ್ನೂ 20 ಮಂದಿ ಅರ್ಹರು ಹೊರಗುಳಿಯುತ್ತಾರೆ. ಅವರಿಗೆ ಸಂಪುಟ ದರ್ಜೆ ನಿಗಮ, ಮಂಡಳಿಗಳಲ್ಲಿ ಅವಕಾಶ ಕೊಡುವ ಬಗ್ಗೆ ಯೋಚಿಸಲಾಗುತ್ತಿದೆ.
Related Articles
ಸಚಿವ ಸ್ಥಾನ ಆಕಾಂಕ್ಷಿಗಳು
ಯು.ಟಿ.ಖಾದರ್ (ಮಂಗಳೂರು), ಲಕ್ಷ್ಮಣ ಸವದಿ (ಅಥಣಿ), ಸತೀಶ್ ಜಾರಕಿಹೊಳಿ (ಯಮಕನಮರಡಿ), ಲಕ್ಷ್ಮೀ ಹೆಬ್ಟಾಳ್ಕರ್ (ಬೆಳಗಾವಿ ಗ್ರಾಮೀಣ), ಅಶೋಕ್ ಪಟ್ಟಣ (ರಾಮದುರ್ಗಾ), ಆರ್.ಬಿ.ತಿಮ್ಮಾಪುರ (ಮುಧೋಳ), ವಿಜಯಾನಂದ ಕಾಶಪ್ಪನವರ್ (ಹುನಗುಂದ), ಜಿ.ಟಿ.ಪಾಟೀಲ್ (ಬೀಳಗಿ), ಸಿ.ಎಸ್.ನಾಡಗೌಡ (ಮುದ್ದೇಬಿಹಾಳ), ಶಿವಾನಂದ ಪಾಟೀಲ್ (ಬಸವನಬಾಗೇವಾಡಿ), ಎಂ.ಬಿ.ಪಾಟೀಲ್ (ಬಬಲೇಶ್ವರ), ಯಶವಂತರಾಯ ಗೌಡ ಪಾಟೀಲ್ (ಇಂಡಿ), ಡಾ| ಅಜಯ್ ಸಿಂಗ್ (ಜೇವರ್ಗಿ), ಪ್ರಿಯಾಂಕ್ ಖರ್ಗೆ (ಚಿತ್ತಾಪುರ), ಡಾ| ಶರಣ ಪ್ರಕಾಶ್ ಪಾಟೀಲ್ (ಸೇಡಂ), ಬಿ.ಆರ್. ಪಾಟೀಲ್ (ಆಳಂದ), ರಾಜ ವೆಂಕಟಪ್ಪ ನಾಯಕ (ಸುರಪುರ), ಶರಣ ಬಸಪ್ಪ ಗೌಡ ದರ್ಶನಾಪುರ (ಶಹಾಪುರ), ರಹೀಂ ಖಾನ್ (ಬೀದರ್ ಉತ್ತರ), ಈಶ್ವರ ಖಂಡ್ರೆ (ಭಾಲ್ಕಿ), ಹಂಪನಗೌಡ ಬಾದರ್ಲಿ (ಸಿಂಧನೂರು), ಶಿವರಾಜ ತಂಗಡಗಿ (ಕನಕಗಿರಿ), ಬಸವರಾಜ ರಾಯರೆಡ್ಡಿ (ಯಲಬುರ್ಗಾ), ಎಚ್.ಕೆ. ಪಾಟೀಲ್ (ಗದಗ), ಜಿ.ಎಸ್.ಪಾಟೀಲ್ (ರೋಣ), ವಿನಯ ಕುಲಕರ್ಣಿ (ಧಾರವಾಡ), ಸಂತೋಷ್ ಲಾಡ್ (ಕಲಘಟಗಿ), ಆರ್.ವಿ.ದೇಶಪಾಂಡೆ (ಹಳಿಯಾಳ), ಬಸವರಾಜ ಶಿವಣ್ಣವರ (ಬ್ಯಾಡಗಿ), ಎನ್.ವೈ. ಗೋಪಾಲಕೃಷ್ಣ (ಮೊಳಕಾಲ್ಮೂರು), ನಾಗೇಂದ್ರ (ಬಳ್ಳಾರಿ), ಡಿ.ಸುಧಾಕರ (ಹಿರಿಯೂರು), ಎಸ್.ಎಸ್.ಮಲ್ಲಿಕಾರ್ಜುನ (ದಾವಣಗೆರೆ ಉತ್ತರ), ಬಿ.ಕೆ.ಸಂಗಮೇಶ (ಭದ್ರಾವತಿ), ಮಧು ಬಂಗಾರಪ್ಪ (ಸೊರಬ), ಟಿ.ಡಿ.ರಾಜೇಗೌಡ (ಶೃಂಗೇರಿ), ಡಾ| ಜಿ. ಪರಮೇಶ್ವರ್ (ಕೊರಟಗೆರೆ), ಟಿ.ಬಿ.ಜಯಚಂದ್ರ (ಶಿರಾ), ಕೆ.ಎನ್.ರಾಜಣ್ಣ (ಮಧುಗಿರಿ), ಡಾ| ಎಂ.ಸಿ.ಸುಧಾಕರ್ (ಚಿಂತಾಮಣಿ), ಕೆ.ಎಚ್.ಮುನಿಯಪ್ಪ (ದೇವನಹಳ್ಳಿ), ಪಿ.ಎಂ.ನರೇಂದ್ರಸ್ವಾಮಿ (ಮಳವಳ್ಳಿ), ಚಲುವರಾಯಸ್ವಾಮಿ (ನಾಗಮಂಗಲ), ಕೆ.ಎಂ.ಶಿವಲಿಂಗೇಗೌಡ (ಅರಸೀಕೆರೆ), ಡಾ| ಎಚ್. ಸಿ. ಮಹದೇವಪ್ಪ (ಟಿ.ನರಸೀಪುರ), ತನ್ವೀರ್ ಸೇಠ (ನರಸಿಂಹರಾಜ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ), ಕೆ.ಜೆ.ಜಾರ್ಜ್ (ಸರ್ವಜ್ಞ ನಗರ), ಎನ್.ಎ.ಹ್ಯಾರೀಸ್ (ಶಾಂತಿನಗರ), ದಿನೇಶ್ ಗುಂಡೂರಾವ್ (ಗಾಂಧಿನಗರ), ಎಂ.ಕೃಷ್ಣಪ್ಪ (ವಿಜಯನಗರ), ಜಮೀರ್ ಅಹ್ಮದ್(ಚಾಮರಾಜಪೇಟೆ), ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ.ಲೇಔಟ್)