Advertisement

ಉಪಚುನಾವಣೆ: ಶಾಂತಿಯುತ ಮತದಾನ

12:16 PM Apr 10, 2017 | |

ಮೈಸೂರು: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ.77.56ರಷ್ಟು ಮತದಾನವಾಗಿದೆ. ಒಟ್ಟು 156531 ಮತದಾನವಾಗಿದೆ, ಅದರಲ್ಲಿ 80181 ಪುರುಷರು, 76350 ಮಹಿಳೆಯರು ಮತಚಲಾಯಿಸಿದ್ದಾರೆ.

Advertisement

ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಕೆಲವಡೆ ಮಾತಿನ ಚಕಮಕಿ, ಲಘು ಲಾಠಿಪ್ರಹಾರ, ಮಧ್ಯಾಹ್ನದವರೆಗೆ ಮತದಾನ ಬಹಿಷ್ಕಾರ ಸೇರಿದಂತೆ ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೆ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿ, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಪಡಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಸ್ವಗ್ರಾಮ ಕಳಲೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆಯೇ ಮತ ಚಲಾಯಿಸಿ, ನಂತರ ವಿವಿಧ ಗ್ರಾಮಗಳಿಗೆ ತೆರಳಿ ಅಂತಿಮ ಕ್ಷಣದಲ್ಲೂ ಮತದಾರರ ಮನವೊಲಿಸುವ ಯತ್ನ ನಡೆಸಿದರು. ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿಲ್ಲದ್ದರಿಂದ ನಂಜನಗೂಡು ಪಟ್ಟಣದ ತಮ್ಮ ಆಪ್ತ ಪದ್ಮನಾಭ ರಾವ್‌ ಮನೆಯಲ್ಲಿ ಕುಳಿತು ಕ್ಷೇತ್ರದಲ್ಲಿ ನಡೆಯು ತ್ತಿರುವ ಮತದಾನದ ಬಗ್ಗೆ ಮಾಹಿತಿ ಕಲೆಹಾಕಿಕೊಂಡು ಸಮಾಲೋಚನೆ ನಡೆಸಿದರು.

ಗೋಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಯಲ್ಲಿ ಬೆಳಗ್ಗೆ ಮತದಾನಕ್ಕೆ ಜನರು ಅಷ್ಟೇನು ಉತ್ಸಾಹ ತೋರಲಿಲ್ಲ. ಹೀಗಾಗಿ ಒಟ್ಟು 962 ಮತದಾರರು ಇದ್ದ ಒಂದು ಮತಗಟ್ಟೆಯಲ್ಲಿ 9 ಗಂಟೆ ವೇಳೆಗೆ ಕೇವಲ 42 ಮಂದಿ ಮತಚಲಾಯಿಸಿದ್ದರೆ, 723 ಮತದಾರರನ್ನು ಹೊಂದಿರುವ ಮತ್ತೂಂದು ಮತಗಟ್ಟೆಯಲ್ಲಿ ಬೆಳಗ್ಗೆ 10ಗಂಟೆ ವೇಳೆಗೆ 108 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. 763 ಮಂದಿ ಮತದಾರರಿದ್ದ ಮತ್ತೂಂದು ಮತಗಟ್ಟೆಯಲ್ಲೂ ಬೆಳಗ್ಗೆ 9.50ರ ವೇಳೆಗೆ 157 ಮಂದಿ ಮತದಾನ ಮಾಡಿದ್ದರು.

ಚಿನ್ನದ ಗುಡಿ ಹುಂಡಿಯ ಮತಗಟ್ಟೆ ಸಂಖ್ಯೆ 76ರಲ್ಲಿ ಮತಯಂತ್ರದ ಕಂಟ್ರೋಲ್‌ ಯೂನಿಟ್‌ನಲ್ಲಿ ಡಿಸ್‌ಪ್ಲೇ ಬಾರದೆ ತಾಂತ್ರಿಕ ಕಾರಣದಿಂದಾಗಿ ಪೂರ್ತಿ ಯೂನಿಟ್‌ ಬದಲಾಯಿಸಿ ಮತದಾನ ಆರಂಭಿಸುವುದು ಒಂದು ಗಂಟೆಗಳ ಕಾಲ ವಿಳಂಬವಾಯಿತು. ಬೆಳಗ್ಗೆ 10 ಗಂಟೆಗೆ ಈ ಮತಗಟ್ಟೆಯ ಒಟ್ಟು 965 ಮತದಾರರ ಪೈಕಿ 180 ಮಂದಿ ಮತಚಲಾಯಿಸಿದ್ದರು. ಮತಗಟ್ಟೆ ಸಂಖ್ಯೆ 75ರಲ್ಲಿ ಒಟ್ಟು 901 ಮತದಾರರ ಪೈಕಿ 217 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

Advertisement

ಅತ್ಯಂತ ಸೂಕ್ಷ್ಮ ಮತಗಟ್ಟೆಯಾದ ಬದನವಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸ ಲಾಗಿದ್ದ ಮತಗಟ್ಟೆಗಳಲ್ಲಿ ಮತದಾರರು ಅತ್ಯುತ್ಸಾ ಹದಿಂದ ಮತ ಚಲಾಯಿಸು ತ್ತಿದ್ದದ್ದು ಕಂಡು ಬಂತು. ಬೆಳಗ್ಗೆ 11 ಗಂಟೆ ವೇಳೆಗೆ 644 ಮತದಾರರಿದ್ದ ಮತಗಟ್ಟೆ ಸಂಖ್ಯೆ 129ರಲ್ಲಿ 190 ಮಂದಿ ಮತದಾನ ಮಾಡಿದ್ದರೆ, ಮತಗಟ್ಟೆ 128ರಲ್ಲಿ 678 ಮತದಾರರ ಪೈಕಿ 238 ಮಂದಿ ಮತಚಲಾಯಿಸಿದ್ದರು. ಮತದಾನ ಕೇಂದ್ರಗಳ ಮುಂದೆ ಮಹಿಳೆ ಮತ್ತು ಪುರುಷ ಮತದಾರರು ಸರತಿಯಲ್ಲಿ ನಿಂತು ಮತದಾನ ಮಾಡಿದರು. ಅತೀ ಸೂಕ್ಷ್ಮ ಮತಗಟ್ಟೆಯಾಗಿದ್ದರಿಂದ ಇಲ್ಲಿ ವೆಬ್‌ಕ್ಯಾಮರಾ, ಸಿಸಿಟಿವಿ ಅಳವಡಿಸಲಾಗಿತ್ತು.

ದೇವನೂರು ಗ್ರಾಮದ ಮೂರು ಮತ  ಗಟ್ಟೆಗಳಲ್ಲೂ ಮತದಾರರು ಉತ್ಸಾಹದಿಂದ ಮತಲಾಯಿಸುತ್ತಿದ್ದುದು ಕಂಡು ಬಂತು. ಬೆಳಗ್ಗೆ 11.30ರಲ್ಲಿ  ಮತಗಟ್ಟೆ ಸಂಖ್ಯೆ 131ರಲ್ಲಿ 891 ಮತದಾರರ ಪೈಕಿ 278 ಮಂದಿ ಹಕ್ಕು ಚಲಾಯಿಸಿದ್ದರೆ, 132ರಲ್ಲಿ 936 ಮತದಾರರ ಪೈಕಿ 286 ಮಂದಿ ಮತದಾನ ಮಾಡಿದ್ದರು. 133ರಲ್ಲಿ 1039 ಮತದಾರರ ಪೈಕಿ 231 ಮಂದಿ ಮತ ಚಲಾಯಿಸಿದ್ದರು.

ದೊಡ್ಡ ಕೌಲಂದೆ ಗ್ರಾಮದ ಗ್ರಾಪಂ ಕಚೇರಿ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 174ರಲ್ಲಿ 1009 ಮತದಾರರ ಪೈಕಿ 11.45ರ ವೇಳೆಗೆ 340 ಮಂದಿ ಮತದಾನ ಮಾಡಿದ್ದರು. ಈ ಮತಗಟ್ಟೆಗೂ ಸಿಸಿಟಿವಿ, ವೆಬ್‌ ಕ್ಯಾಮರಾ ಅಳವಡಿಸಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಕೇಶವಮೂರ್ತಿ ಸ್ವಗ್ರಾಮ ಕಳಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಲ್ಲೂ ಮತದಾರರ ಸರತಿ ಕಂಡುಬಂತು.

ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ನಂಜನಗೂಡು ಪಟ್ಟಣದ ಮತಗಟ್ಟೆ ಗಳಲ್ಲೂ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಮತ ಗಟ್ಟೆಗಳಿಗೆ ಸ್ಥಳೀಯ ಪೊಲೀಸರ ಜತೆಗೆ ಅರೆಸೇನಾ ಪಡೆಯ ಯೋಧರನ್ನೂ ಭದ್ರತೆಗಾಗಿ ನೇಮಿಸಲಾಗಿತ್ತು.

ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತನಾದ ಬಗ್ಗೆ ಕ್ಷೇತ್ರದ ಜನರಲ್ಲಿ ನನ್ನ ಬಗ್ಗೆ ಅನುಕಂಪವಿದೆ. ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಹಾಗೂ ಸಂಸದ ಆರ್‌. ಧ್ರುವನಾರಾಯಣ ಪರಿಶ್ರಮದಿಂದ ಕಾಂಗ್ರೆಸ್‌ ಸೇರ್ಪಡೆಯಾಗಿ ಅಭ್ಯರ್ಥಿಯಾಗಿದ್ದೇನೆ. 500 ಕೋಟಿ ರೂ.ಗೂ ಹೆಚ್ಚು ಅನುದಾನದ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಹೀಗಾಗಿ ಕಾಂಗ್ರೆಸ್‌ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.
-ಕಳಲೆ ಎನ್‌.ಕೇಶವಮೂರ್ತಿ, ಕಾಂಗ್ರೆಸ್‌ ಅಭ್ಯರ್ಥಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಂಕಾರ ಮತ್ತು ನನ್ನ ಸ್ವಾಭಿಮಾನದ ನಡುವಿನ ಹೋರಾಟ ಈ ಉಪ ಚುನಾವಣೆ. ಈ ಚುನಾವಣೆಗೆ ಮುಖ್ಯಮಂತ್ರಿ ಈ ಮಟ್ಟಕ್ಕೆ ಇಳಿಯುತ್ತಾರೆ ಅಂದು ಕೊಂಡಿರಲಿಲ್ಲ. ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇ¨ ‌ರಿಂದ ನನ್ನ ಗೆಲುವಿನ ಅಂತರ ಕಡಿಮೆ ಆಗಬಹುದು. ಆದರೆ, ಅಂತಿಮವಾಗಿ ಗೆಲುವು ನನ್ನದೆ.
-ವಿ.ಶ್ರೀನಿವಾಸಪ್ರಸಾದ್‌, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next