Advertisement

ಆಚಾರವಿರಲಿ ನಾಲಗೆಗೆ; ಎಲ್ಲೆ ಮೀರಿದ ಮಾತು, ಟ್ವೀಟ್‌ 

01:33 AM Oct 21, 2021 | Team Udayavani |

ಬೆಂಗಳೂರು: ಹೆಬ್ಬೆಟ್‌ ಗಿರಾಕಿ, ಡ್ರಗ್‌ ಪೆಡ್ಲರ್‌, ಬೈಗಮಿ, ವಿಕೃತ ಮನಸ್ಸು, ತಲೆಹಿಡುಕ, ಬುದ್ಧಿಮಾಂದ್ಯ…!ಇವು ಯಾವುದೇ ಸಿನೆಮಾದ ಡೈಲಾಗ್‌ಗಳಲ್ಲ. ಬೀದಿ ಜಗಳದಲ್ಲಿ ಕೇಳಿಸಿದ್ದೂ ಅಲ್ಲ… ರಾಜ್ಯದಲ್ಲೀಗ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಕಣ ಮತ್ತು ರಾಜಕೀಯ ಪಕ್ಷಗಳ ಟ್ವಿಟರ್‌ ಖಾತೆಗಳಲ್ಲಿ ಕಂಡು ಬರುತ್ತಿರುವ ಪರಸ್ಪರ ಕೆಸರೆರಚಾಟಗಳು. ವಿಚಿತ್ರವೆಂದರೆ ಪ್ರಚಾರ ಕಣದ ಈ ಮಾತುಗಳು ಜನರಲ್ಲಿ ಅಸಹ್ಯ ಹುಟ್ಟಿಸುತ್ತಿವೆ ಎಂಬುದು ಮಾತ್ರ ಸುಳ್ಳಲ್ಲ.

Advertisement

ಸಭ್ಯ ಸಮಾಜ ಕೇಳಿಸಿಕೊಳ್ಳಲಾಗದ ಇಂಥ ಮಾತುಗಳು ಬರುತ್ತಿರುವುದು ನಮ್ಮ ರಾಜ ಕೀಯ ಧುರೀಣರಿಂದ, ವಿವಿಧ ಪಕ್ಷಗಳ ಟ್ವಿಟರ್‌ಗಳಿಂದ.  ಇಲ್ಲಿ ಒಂದು ಪಕ್ಷಕ್ಕೆ ಬೈದು, ಮತ್ತೂಂದು ಪಕ್ಷಕ್ಕೆ ಬಿಡುವ ಹಾಗೆಯೇ ಇಲ್ಲ. ರಾಜ್ಯದಲ್ಲಿರುವ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಾಯಕರು ಮತ್ತು ಟ್ವಿಟರ್‌ ಖಾತೆಗಳು ಇದೇ ಅಥವಾ ಇಂಥದ್ದೇ ಮಾತು ಹಾಗೂ ಪ್ರತಿಕ್ರಿಯೆಗಳು ಕಂಡು ಬರುತ್ತಿವೆ.

ಲಜ್ಜೆ ಬಿಟ್ಟ ಟ್ವಿಟರ್‌ ಹ್ಯಾಂಡಲ್‌
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಲಜ್ಜೆ ಬಿಟ್ಟು ಪರಸ್ಪರ ಪ್ರತ್ಯಾರೋಪದಲ್ಲಿ ತೊಡಗಿರುವುದು ಆಯಾ ಪಕ್ಷಗಳ ಟ್ವಿಟರ್‌ ಖಾತೆಗಳು. ಪ್ರಧಾನಿ ನರೇಂದ್ರ ಮೋದಿ  ಕುರಿತು “ಹೆಬ್ಬೆಟ್‌ ಗಿರಾಕಿ’ ಎಂದಿದ್ದು ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಖಾತೆ. ಅದಕ್ಕೆ  ಡಿ.ಕೆ. ಶಿವಕುಮಾರ್‌  ವಿಷಾದ ವ್ಯಕ್ತಪಡಿಸಿದ ಮೇಲೆ ಅದನ್ನು ಡಿಲೀಟ್‌ ಮಾಡಲಾಯಿತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಟ್ವಿಟರ್‌ ಹ್ಯಾಂಡಲ್‌, ರಾಹುಲ್‌ ಗಾಂಧಿ  ಕುರಿತಂತೆ ಅಷ್ಟೇ ಆಕ್ಷೇಪಾರ್ಹವಾಗಿಯೇ ಟ್ವೀಟ್‌ ಮಾಡಿತು. ಅಂದರೆ, “ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದಾರೆಂಬ ಕಾರಣಕ್ಕೆ ತಾನು ಪ್ರಧಾನಿಯಾಗಬೇಕೆಂದು ಓರ್ವ ಹೆಬ್ಬೆಟ್ಟು ಗಿರಾಕಿ ಕನಸು ಕಾಣುತ್ತಿದ್ದಾನೆ’ ಎಂದು ಟ್ವೀಟಿಸಿತು. ಅಷ್ಟೇ ಅಲ್ಲ, ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌  ಅವರು ರಾಹುಲ್‌ ಅವರನ್ನು “ಡ್ರಗ್‌ ಪೆಡ್ಲರ್‌’ ಎಂದು ಕರೆದರು. ಇದಕ್ಕೆ ಬದಲಾಗಿ ಐವೈಸಿ ಕರ್ನಾಟಕ(ಯುವ ಕಾಂಗ್ರೆಸ್‌) ಟ್ವಿಟರ್‌ನಲ್ಲಿ ನಳಿನ್‌ ಬಗ್ಗೆ “ಅವರೊಬ್ಬ ಸುಳ್ಳುಗಳ ಪೆಡ್ಲರ್‌, ಕೋಮು ದ್ವೇಷದ ಪೆಡ್ಲರ್‌, ಅನೈತಿಕ ಪೊಲೀಸ್‌ ಗಿರಿಯ ಪೆಡ್ಲರ್‌, ಅಶಾಂತಿ ಪೆಡ್ಲರ್‌’ ಎಂದು ಆರೋಪಿಸಿತು.

ವೈಯಕ್ತಿಕ ಸಂಘರ್ಷ
ಬುಧವಾರ  ಎಚ್‌.ಡಿ. ಕುಮಾರ ಸ್ವಾಮಿ ಹಾಗೂ ಬಿಜೆಪಿ ನಡುವಿನ ಟ್ವೀಟ್‌ವಾರ್‌ ತಾರಕಕ್ಕೇರಿದೆ.ಸಿಗ್ನಲ್‌ ಜಂಪ್‌, ವಿಶ್ವಾಸದ್ರೋಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಎಲ್ಲದಕ್ಕಿಂತ ಮುಖ್ಯವಾಗಿ ಬೈಗಮಿ. ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ  ಕುಮಾರ ಸ್ವಾಮಿ ಯವರೇ ಇವುಗಳ ಬಗ್ಗೆ ತುಂಬಾ ಜಾಗರೂಕರಾಗಿ ಇರಬೇಕಲ್ಲವೇ?   ದೇಶದಲ್ಲಿ  ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ  ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ. ಅವುಗಳ ಪಟ್ಟಿ ಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ, ಅವೆಲ್ಲವೂ ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವೂ ಹೌದು ಎಂದು ಬಿಜೆಪಿಯು ಟ್ವೀಟ್‌ ಮಾಡಿತು.

Advertisement

ಇದಕ್ಕೆ ಜೆಡಿಎಸ್‌ ತಿರುಗೇಟು ನೀಡಿ, ಆರೆಸ್ಸೆಸ್‌ ಬಗ್ಗೆ ಕುಮಾರಸ್ವಾಮಿ  ಕೆಲವು  ಪ್ರಶ್ನೆಗಳನ್ನು ಎತ್ತಿದ್ದು, ಅವು ಸತ್ಯವೂ ಹೌದು. ಇವುಗಳಲ್ಲಿ ಐಎಎಸ್‌ ಅಧಿಕಾರಿಗಳಿಗೆ ಸಂಘ ದಿಂದ ತರಬೇತಿ ನೀಡ ಲಾಗಿದೆ ಎನ್ನು ವುದೂ ಒಂದು ಅಂಶ ಎಂದಿತು.

ಇದನ್ನೂ ಓದಿ:ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ನಳಿನ್‌ ಮಾತು
ರಾಹುಲ್‌ ಗಾಂಧಿ ಮಾದಕ ವಸ್ತು ವ್ಯಸನಿ. ಡ್ರಗ್‌ ಪೆಡ್ಲರ್‌ ಕೂಡ ಆಗಿದ್ದಾರೆ. ಇದು ನಾನು ಸೃಷ್ಟಿ ಮಾಡಿದ್ದಲ್ಲ. ಹಲವು ವರದಿಗಳು ಇದನ್ನು ಪುಷ್ಟೀಕರಿಸಿವೆ.

ಸುರ್ಜೆವಾಲಾ ಕುಟುಕು
ಮನೆಯಲ್ಲಿ  ಸರಿಯಾಗಿ ಮನ್ನಣೆ ಸಿಗದ ವ್ಯಕ್ತಿ, ತನ್ನತ್ತ ಗಮನ ಸೆಳೆಯಲು ಬೀದಿಗೆ ಬಂದು ಬಟ್ಟೆ ಹರಿದುಕೊಂಡು ಬಾಯಿ ಬಡಿದುಕೊಂಡನಂತೆ ಎಂಬ ಮಾತು ಹರಿಯಾಣ ಕಡೆ ಚಾಲ್ತಿಯ ಲ್ಲಿದೆ. ಅದೇ ರೀತಿ ನಳಿನ್‌ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ.

ಸಿದ್ದರಾಮಯ್ಯ ತಿರುಗೇಟು
ನಳಿನ್‌ ಕುಮಾರ್‌ಗೆ ಹುಚ್ಚು ಹಿಡಿದಿದೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವ ರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು.

ಬಿಜೆಪಿ
“ಘಾತಕತನವನು ಬಿಡದೆ ನಿರಂತರ ಗೀತೆಯನೋದಿದೊಡೇನು ಫ‌ಲ’ ಎಂಬ ಪುರಂದರ ದಾಸರ  ಪದದ ಸಾಲು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ನಿಮ್ಮ ತಪ್ಪು ವೈರುಧ್ಯ, ಸಮಯಸಾಧಕತನವನ್ನು ಅನ್ಯರ ನಿಂದನೆಯ ಮೂಲಕ ಮುಚ್ಚಿಕೊಳ್ಳಲು ಸಾಧ್ಯವೇ. ಕಾಗೆ, ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ ಕುಮಾರಸ್ವಾಮಿ. ಕುಮಾರಸ್ವಾಮಿಯವರೇ ವೃದ್ಧನಾರಿ ಪತಿವ್ರತಾ ಎಂಬ ಮಾತು ಗೊತ್ತೇ, ನಿಮ್ಮ ಸ್ಥಿತಿಯೂ ಹಾಗಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಗುಟ್ಟಿನಲ್ಲಿ ತಪ್ಪು ಮಾಡುವುದು ಬಳಿಕ ಗರತಿಯ ಸೋಗು ಹಾಕುವುದು ನಿಮ್ಮ ಹಳೇ ಚಾಳಿ.

ಜೆಡಿಎಸ್‌
“ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು…’ ಎನ್ನುವುದು ಬಿಜೆಪಿಯ ಸಂಸ್ಕಾರ ಸಾರುತ್ತಿದೆ. ಹೇಳುವುದು ಆಚಾರ, ಮಾಡುವುದು ಅನಾಚಾರ ಎಂಬುದು ಜನರಿಗೆ ಗೊತ್ತಿದೆ. ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು.

ಸಂಘ-ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು, ಸಿಡಿ ಸುಳಿಯಲ್ಲಿ ಸಿಲುಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷ ದವರು, ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ, ಅನಾಚಾರವೆಂಬುದು ಬಿಜೆಪಿ ಕಾಯಕ…

ಕಾಂಗ್ರೆಸ್‌
ಟೆಲಿಪ್ರಾಂಪ್ಟರ್‌ ಇಲ್ಲದೆ ಮಾತೇ ಹೊರಡುವುದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ. ಇಂಧನ ತೈಲ ಗಳಲ್ಲಿ ಸರಕಾರದ ಆದಾಯ ಹೆಚ್ಚಿದಂತೆ ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. ಹೆಬ್ಬೆಟ್‌ ಗಿರಾಕಿ ಮೋದಿ, ಸರಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ. ವಾಟ್ಸ್‌ ಆ್ಯಪ್‌ ಯೂನಿವರ್ಸಿಟಿಯ ಸುಳ್ಳಿನ ಪಠ್ಯವನ್ನು ಒಪ್ಪಿಸುವ ಬಿಜೆಪಿ ಕರ್ನಾಟಕ. ಕೈ ಹಿಡಿದಾಕೆ ಯನ್ನು ಬಿಟ್ಟು ಪರ ಸ್ತ್ರೀಯ ಬೆನ್ನುಬಿದ್ದು ಸ್ನೂಪ್‌ಗೆàಟ್‌ ಹಗರಣ ನಡೆಸಿದವರು ನಿಮ್ಮವರು. ನಾನು ಅವಿವಾಹಿತ, ಬ್ಯಾಚುಲರ್‌ ಅಲ್ಲ ಎಂದು ಪರಸ್ತ್ರೀ ಮೋಹದಲ್ಲಿ ಬಿದ್ದವರೂ ನಿಮ್ಮವರೇ. ಮಹಿಳೆಯರ ಕೈಯನ್ನು ಗಟ್ಟಿಯಾಗಿ ಹಿಡಿಯುವವರೂ ನಿಮ್ಮವರೇ.

ಬಿಜೆಪಿ ತಿರುಗೇಟು
ಹೌದು, ನಮ್ಮ ಪ್ರಧಾನಿ ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ. ಬಾರ್‌ನಲ್ಲಿ ಡ್ಯಾನ್ಸ್‌ ಮಾಡಲಿಲ್ಲ. ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ.

ಉದಯವಾಣಿಯ ಆಶಯ
ಆಯೋಗ ದೂರು ದಾಖಲಿಸಿಕೊಳ್ಳಲಿ;
ನಿಂದನೆ ಕುರಿತು ಯಾರೂ ದೂರು ನೀಡದೇಇದ್ದಲ್ಲಿ ಚುನಾವಣ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಅವಕಾಶ ಬಳಸಿಕೊಳ್ಳಲಿ. ರಾಜಕೀಯ ನಾಯಕರಿಗೆ ಸಂಯಮ, ಸಭ್ಯತೆಯ ನೀತಿ ಪಾಠ ಹೇಳಲಿ.

ಈ ನಿಂದನೆ, ಟೀಕೆಗಳನ್ನು ಪ್ರಜಾ ಪ್ರತಿನಿಧಿ ಕಾಯ್ದೆ ಅಥವಾ ಚುನಾವಣ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ವ್ಯಾಪ್ತಿಯಲ್ಲಿ ಪರಿಗಣಿಸಲು ಅವಕಾಶವಿಲ್ಲ. ಮಾನ ಹಾನಿ ವ್ಯಾಪ್ತಿಗೆ ಬರುವುದರಿಂದ ಬಾಧಿತ ವ್ಯಕ್ತಿ ಐಪಿಸಿ ಸೆಕ್ಷನ್‌ಗಳಡಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದು. ಆಯೋಗಕ್ಕೆ ದೂರು ಸಲ್ಲಿಸಬಹುದು. ದೂರು ಬಂದಾಗ ಆಯೋಗ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು. ಸಂಯಮ, ಸಭ್ಯತೆ ಪ್ರದರ್ಶಿಸುವಂತೆ ಮಾರ್ಗಸೂಚಿ ಹೊರಡಿಸಬಹುದು. ಕಳೆದ ಚುನಾವಣೆ ವೇಳೆ ಆಯೋಗ ಈ ರೀತಿ ಕ್ರಮ ಕೈಗೊಂಡಿರುವ ಉದಾಹರಣೆಗಳಿವೆ. “ಆಚಾರವಿರಲಿ ನಾಲಗೆಗೆ; ನೀಚ ಬುದ್ಧಿಯ ಬಿಡು ನಾಲಗೆ’ ಎಂಬುದು ಉದಯವಾಣಿಯ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next