Advertisement

ದಲಿತರೊಂದಿಗೆ ಬಿಎಸ್‌ವೈ ಸಹಭೋಜನ

09:35 AM Aug 29, 2017 | Team Udayavani |

ಬೆಂಗಳೂರು: ಕಳೆದ ಮೇ ಮತ್ತು ಜೂನ್‌ ತಿಂಗಳಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜನಸಂಪರ್ಕ ಅಭಿಯಾನದ ವೇಳೆ ತಮಗೆ ಉಪಹಾರ ವ್ಯವಸ್ಥೆ ಮಾಡಿದ್ದ 33 ದಲಿತ ಕುಟುಂಬಗಳ ಸದಸ್ಯರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ತಮ್ಮ ನಿವಾಸದಲ್ಲಿ ಸಹಭೋಜನ ಮಾಡಿದರು. 

Advertisement

ಮೇ 18ರಿಂದ ಜೂ.19ರವರೆಗೆ ನಡೆಸಿದ ಜನಸಂಪರ್ಕ ಅಭಿಯಾನ ವೇಳೆ ತಾವು ಉಪಹಾರ ಸೇವಿಸಿದ 33 ದಲಿತ ಕುಟುಂಬದ ಸದಸ್ಯರನ್ನು ಯಡಿಯೂರಪ್ಪ ಅವರು ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸಕ್ಕೆ ಭೋಜನ ಕೂಟಕ್ಕೆ ಆಹ್ವಾನಿಸಿದ್ದು, ಅದರಂತೆ ಈ ಕುಟುಂಬಗಳ ಸುಮಾರು 100 ಸದಸ್ಯರು ಸೋಮವಾರ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಿವಾಸದಲ್ಲಿ ವಿಶೇಷ ಪೂಜೆ ಮತ್ತು ಸಭಾ ಕಾರ್ಯಕ್ರಮ  ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮುಖಂಡರಾದ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ಡಿ.ಎಸ್‌.ವೀರಯ್ಯ, ಕುಮಾರ್‌ ಬಂಗಾರಪ್ಪ, ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ, ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ್‌, ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಂ ಮತ್ತಿತರರು ಹಾಜರಿದ್ದರು.

ಊಟ ಹಾಕಿದ ಕುಟುಂಬಗಳ ಅಭಿವೃದ್ಧಿ: ತಮ್ಮ ಮನೆಗೆ ಬಂದ ದಲಿತ ಕುಟುಂಬದ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಯಡಿಯೂರಪ್ಪ, “ಇದು ನನ್ನ ಜೀವನದಲ್ಲಿ ಮರೆಯಲಾಗದ ಶುಭ ದಿನ. ನಿಮ್ಮ ಮನೆಗೆ ಬಂದಾಗ ನೀವು ತೋರಿಸಿದ ಪ್ರೀತಿ ಇನ್ನೂ ಕಣ್ಣ ಮುಂದೆ ಇದೆ. ನನ್ನನ್ನು ಮನೆಗೆ ಬರಮಾಡಿಕೊಳ್ಳದಂತೆ ಕೆಲವು ಪುಡಾರಿಗಳು ಹೆದರಿಸಿದರೂ, ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದೆ ಪ್ರೀತಿಯಿಂದ ಕರೆದು ಉಪಾಹಾರ ಕೊಟ್ಟಿದ್ದೀರಿ. ಜೀವನದ ಕೊನೆಯುಸಿರು ಇರುವವರೆಗೂ ಇದನ್ನು ಮರೆಯುವುದಿಲ್ಲ. ನನಗೆ ಊಟ ಹಾಕಿದ ಎಲ್ಲರ ಮಾಹಿತಿಯನ್ನೂ  ಪಡೆದುಕೊಂಡಿದ್ದೇನೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಭರ್ಜರಿ ಊಟ: ಸಭಾ ಕಾರ್ಯಕ್ರಮದ ನಂತರ ತಮ್ಮ ಮನೆಯ ಡೈನಿಂಗ್‌ ಹಾಲ್‌ನಲ್ಲಿ ಯಡಿಯೂರಪ್ಪ ಅವರು ದಲಿತ ಕುಟುಂಬದ ಸದಸ್ಯರೊಂದಿಗೆ ಭೋಜನ ಸೇವಿಸಿದರು. ಅಲ್ಲದೆ, ಖುದ್ದಾಗಿ ತಾವೇ ನಿಂತು ಅವರಿಗೆ ಊಟ ಬಡಿಸಿದರು. ಹೋಳಿಗೆ-ಕಾಯಿಹಾಲು ಊಟದೊಂದಿಗೆ 18 ವಿಧದ ಸಾಂಪ್ರದಾಯಿಕ ಖಾದ್ಯಗಳನ್ನು (ಪೂರಿ, ಸಾಗು, ಅನ್ನ, ಸಾರು, ಸಾಂಬಾರ್‌, 2 ಬಗೆಯ ಪಲ್ಯ, ಪಲಾವ್‌, ಎಣ್ಣೆಗಾಯಿ, ಎರಡು ಬಗೆಯ ಕೋಸಂಬರಿ, ಹಪ್ಪಳ, ಮೊಸರು, ಉಪ್ಪಿನಕಾಯಿ, ಚಿತ್ರಾನ್ನ, ಜಿಲೇಬಿ, ಪಾಯಸ, ಫ‌ೂಟ್‌ ಸಲಾಡ್‌) ಬಡಿಸಲಾಯಿತು. ಇವೆಲ್ಲವನ್ನೂ ಯಡಿಯೂರಪ್ಪ ಅವರ ಮನೆಯ ಅಡುಗೆ ಕೋಣೆಯಲ್ಲೇ ಸಿದ್ಧಪಡಿಸಲಾಗಿತ್ತು.

ಊಟದ ನಂತರ ಪುರುಷರಿಗೆ ಒಂದು ಜತೆ ಪಂಚೆ, ಶಲ್ಯ, ಶರ್ಟು, ಮಹಿಳೆಯರಿಗೆ ಸೀರೆ, ಕುಪ್ಪಸದ ಬಟ್ಟೆ, ಹೂವು, ಹಣ್ಣುಗಳೊಂದಿಗೆ ಪಾರಂಪರಿಕ ಉಡುಗೊರೆಗಳನ್ನು ನೀಡಿ ಸತ್ಕರಿಸಲಾಯಿತು.

Advertisement

ಬಸವಣ್ಣಗೆ ಹೋಲಿಸಿದ ಮಾದಾರಶ್ರೀ
ಬೆಂಗಳೂರು: “ಯಡಿಯೂರಪ್ಪ ಅವರು ದಲಿತರ ಮನೆಗಳಲ್ಲಿ ಉಪಾಹಾರ ಸೇವಿಸಿದ್ದ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ದಲಿತರ ಮನೆಗಳಿಗೆ ಭೇಟಿ ನೀಡಿ ಉಪಾಹಾರ ಸೇವಿಸುವುದಲ್ಲ, ದಲಿತರ ಸಂಬಂಧ ಬೆಳೆಸಲಿ ಎಂದು ಹೇಳಿದ್ದರು. ಅಂಥವರು ದಲಿತ ಕುಟುಂಬದ ಹೆಣ್ಣುಮಗಳನ್ನು ತಮ್ಮ ಮನೆಗೆ ತಂದುಕೊಳ್ಳಲಿ. ನಾನೇ ಮುಂದೆ ನಿಂತು ಹೆಣ್ಣು ಮಕ್ಕಳನ್ನು ಹೊಂದಿಸಿಕೊಡುತ್ತೇನೆ’. ಇದು ಯಡಿಯೂರಪ್ಪನವರ ದಲಿತರ ಮನೆ ಭೇಟಿ ಟೀಕಿಸಿದ್ದ ಕಾಂಗ್ರೆಸ್‌ ಮುಖಂಡರಿಗೆ ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಕಿದ ಸವಾಲು. ದಲಿತರಿಗೆ ಏರ್ಪಡಿಸಿದ್ದ ಭೋಜನ ಕೂಟದ ವೇಳೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬಸವಣ್ಣನಿಗೆ ಹೋಲಿಸಿದರು.

12ನೇ ಶತಮಾನದಲ್ಲಿ ಬಸವಣ್ಣ ಮತ್ತು ಮಾದಾರ ಚನ್ನಯ್ಯ ಅವರ ಮಧ್ಯೆ ಅವಿನಾಭಾವ ಸಂಬಂಧವಿತ್ತು. ಅರಸರ ಭೋಜನ ಬಿಟ್ಟು ಬಸವಣ್ಣ ಅವರು ಮಾದಾರ ಚನ್ನಯ್ಯನ ಮನೆಯಲ್ಲಿ ಊಟ ತಿಂದರು. ಅದೇ ರೀತಿ 21ನೇ ಶತಮಾನದಲ್ಲಿ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ್ದಲ್ಲದೆ, ಅವರನ್ನು ತಮ್ಮ ಮನೆಗೆ ಕರೆಸಿ  ಸಹಭೋಜನ ಮಾಡುವ ಮೂಲಕ ಯಡಿಯೂರಪ್ಪ ಮತ್ತೂಂದು ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ ಎಂದರು.

“ತುಂಬಾ ಖುಷಿಯಾಗಿದೆ’
ಈ ಬಗ್ಗೆ ಪ್ರತಿಕ್ರಿಯಿಸಿದ ದಲಿತ ಕುಟುಂಬದ ಸದಸ್ಯರು, ನಮಗೆ ಅತ್ಯಂತ ಖುಷಿಯಾಗಿದೆ. ನಮ್ಮ ಮನೆಗೆ ಬಂದು ಊಟ ಮಾಡಿ ಹೋದವರು ನಂತರ ನಮ್ಮನ್ನು ಮರೆತಿಲ್ಲ. ನಮ್ಮ ಸಣ್ಣ ಮನೆಗೆ ಬಂದು ತಿಂಡಿ ತಿಂದವರು ಅವರ ದೊಡ್ಡ ಮನೆಗೆ ಕರೆಸಿ ಊಟ ಹಾಕಿದರು. ಜತೆಗೆ ಉಡುಗೊರೆಯನ್ನೂ ನೀಡಿ ಸತ್ಕರಿಸಿದರು. ಈ ರೀತಿ ಮಾಡಲು ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ ಎಂದರು.

ಬೆಂಗಳೂರು ರೌಂಡ್ಸ್‌
ಬೆಂಗಳೂರಿಗೆ ಬಂದಿದ್ದ 33 ದಲಿತ ಕುಟುಂಬಗಳನ್ನು ಎರಡು ಬಸ್‌ಗಳಲ್ಲಿ ಬೆಂಗಳೂರು ರೌಂಡ್ಸ್‌ಗೆ ಕರೆದೊಯ್ಯಲಾಯಿತು. ವಿಧಾನಸೌಧ, ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಸುತ್ತಿಸಲಾಯಿತು. ಬಳಿಕ ರಾತ್ರಿ ವೇಳೆ ಅವರನ್ನು ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು ಬಿಡಲಾಯಿತು.
ಬಿಜೆಪಿಯ ಆಯಾ ಜಿಲ್ಲಾ ಮುಖಂಡರು ಬಸ್‌/ರೈಲಿನಲ್ಲಿ ತಮ್ಮ ಜಿಲ್ಲೆಗಳಿಂದ ಬೆಳಗ್ಗೆ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಯಡಿಯೂರಪ್ಪ ನಿವಾಸಕ್ಕೆ ಕರೆತರಲು ಕಾರುಗಳ ವ್ಯವಸ್ಥೆ ಮಾಡಲಾಗಿತ್ತು. 

ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಕಾಂಗ್ರೆಸ್‌ನವರು ಸೋನಿಯಾ, ರಾಹುಲ್‌ರನ್ನು ದಲಿತರ ಕೇರಿಗಳಿಗೆ ಕರೆದೊಯ್ದು ಅವರ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, 70 ವರ್ಷಗಳಿಂದ ದಲಿತರನ್ನು ಕೇವಲ ವೋಟ್‌ಬ್ಯಾಂಕ್‌ ಮಾಡಿಕೊಂಡು ಜನಾಂಗದ ಹೆಸರಿನಲ್ಲಿ ತಿಂದು ತೇಗಿದವರು ಯಡಿಯೂರಪ್ಪರ ದಲಿತರೊಂದಿಗಿನ ಸಹಭೋಜನವನ್ನು ಟೀಕಿಸುತ್ತಿದ್ದಾರೆ. 
ಗೋವಿಂದ ಕಾರಜೋಳ, ಶಾಸಕ

ದಲಿತರೊಂದಿಗಿನ ಭೋಜನದ ಬಗ್ಗೆ ಯಡಿಯೂರಪ್ಪ ಅವರನ್ನು ಟೀಕಿಸುವವರು ತಮ್ಮ ಊರಿನ ನಾಲ್ಕು ದಲಿತ ಕುಟುಂಬಗಳನ್ನು ಕರೆಸಿ ಊಟ ಹಾಕಿಸಿದ್ದಾರಾ? ಕಾಂಗ್ರೆಸ್‌ನ ದಲಿತ ನಾಯಕರು ಇತರ ದಲಿತರಿಗೆ ಇರಲಿ, ತಮ್ಮ ಅಕ್ಕ, ಭಾವನನ್ನು ಮನೆಗೆ ಕರೆಸಿ ಊಟ ಹಾಕಿದ್ದಾರಾ ಎಂಬುದು ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ವೋಟ್‌ಬ್ಯಾಂಕ್‌ಗಾಗಿ ದಲಿತರನ್ನು ಬಳಸಿಕೊಳ್ಳುವುದು ಮಾತ್ರ.
ಡಿ.ಎಸ್‌.ವೀರಯ್ಯ, ಬಿಜೆಪಿ ದಲಿತ ಮೋರ್ಚಾ ಅಧ್ಯಕ್ಷ
 

Advertisement

Udayavani is now on Telegram. Click here to join our channel and stay updated with the latest news.

Next