Advertisement

ಬೆಂಕಿ ಬಿಸಿಲಲ್ಲಿ ಬಸ್‌ಗೆ ಕಾಯ್ತಾರೆ ಬಾಲೆಯರು

12:46 PM Mar 15, 2022 | Team Udayavani |

ವಾಡಿ: ಉಸ್ಸೆಂದು ಉಸಿರು ಬಿಡುವ ರಣಬಿಸಿಲಿನಲ್ಲಿ ನಿಂತು ಬಸ್ಸಿಗಾಗಿ ಕಾಯುವ ಸಂಕಟದ ಪರಿಸ್ಥಿತಿ ಚಿತ್ತಾಪುರ ತಾಲೂಕಿನ ವಾಡಿ ನಗರದಲ್ಲಿದ್ದು, ಕಳೆದ 75 ವರ್ಷಗಳಿಂದ ಬಸ್‌ ನಿಲ್ದಾಣ ಸೌಲಭ್ಯದಿಂದ ವಂಚಿತರಾಗಿರುವ ಇಲ್ಲಿನ ಜನತೆ ಯಾರಿಗೆ ಬಂತು ಸ್ವಾತಂತ್ರ್ಯ ಎಂದು ಕೇಳುತ್ತಿದ್ದಾರೆ.

Advertisement

ರಸ್ತೆ ಅತಿಕೃಮಿತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದ ನಂತರ ಸ್ಥಳೀಯರು ಗುಣಮಟ್ಟದ ಸಿಸಿ ರಸ್ತೆ ಕಾಣುವಂತಾಗಿದೆ. ಸಾರಿಗೆ ಸೌಲಭ್ಯವಿಲ್ಲದ ಕಾರಣ ದಶಕದ ಹಿಂದೆ ಲಾರಿ, ಜೀಪು, ಕ್ರೂಸರ್‌, ಟ್ರ್ಯಾಕ್ಟರ್‌ ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದ ಜನರಿಗೆ ಈಗ ಬಸ್‌ ಸೌಕರ್ಯ ಒದಗಿದ್ದರೂ ನೆರಳಿಗಾಗಿ ಬಸ್‌ ನಿಲ್ದಾಣ ನಿರ್ಮಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರಿದ್ದಾರೆ.

ರಸ್ತೆ, ಬೀದಿಯಲ್ಲಿ ನಿಂತು ಖಡಕ್‌ ಬಿಸಿಲು ಲೆಕ್ಕಿಸದೇ ಬಸ್ಸಿಗಾಗಿ ಕಾಯುವ ದುಸ್ಥಿತಿ ಪ್ರಯಾಣಿಕರಿಗೆ ಎದುರಾಗಿದೆ. ಪ್ರೌಢ ಶಿಕ್ಷಣಕ್ಕೆಂದು ನಿತ್ಯ ನಗರಕ್ಕೆ ಆಗಮಿಸುವ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು, ತಾಸುಗಟ್ಟಲೇ ರಸ್ತೆಯಲ್ಲಿ ನಿಂತು ತೊಂದರೆ ಅನುಭವಿಸುತ್ತಿದ್ದಾರೆ.

ಕೂಡಲು ಜಾಗವಿಲ್ಲ, ಕುಡಿಯಲು ನೀರಿಲ್ಲ, ನೆರಳಿನ ಆಸರೆಯಂತೂ ಇಲ್ಲವೇ ಇಲ್ಲ. ಬಸ್‌ ಸೌಕರ್ಯ ಒದಗಿಸಿದ ಆಡಳಿತಕ್ಕೆ ಬಸ್‌ ನಿಲ್ದಾಣ ಒದಗಿಸುವ ಕರ್ತವ್ಯ ಪ್ರಜ್ಞೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಚಿತ್ತಾಪುರ ಮತಕ್ಷೇತ್ರದಲ್ಲಿ ಪ್ರಾಣ ತಿನ್ನುವ ಹದಗೆಟ್ಟ ರಸ್ತೆಗಳಿಂದ ಮುಕ್ತಿ ದೊರಕಿಸಿಕೊಟ್ಟಿರುವ ಶಾಸಕ ಪ್ರಿಯಾಂಕ್‌ ಖರ್ಗೆ, ಸಂಸದರಾಗಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಕಪೆಯಿಂದ ರಾಷ್ಟ್ರೀಯ ಹೆದ್ದಾರಿ-150ನ್ನು ಚಿತ್ತಾಪುರ ಮಾರ್ಗವಾಗಿ ಸಾಗಿಸುವಲ್ಲಿ ಯಶಸ್ಸು ಕಂಡಿದ್ದಾರೆ.

Advertisement

ವಾಡಿ ನಗರ ಮೂಲಕ ಕಲಬುರಗಿ-ಯಾದಗಿರಿ ಜಿಲ್ಲೆಗಳ ಸಂಪರ್ಕಕ್ಕೆ 40ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುವಂತೆ ಮಾಡಿ ಜನತೆಗೆ ಅನುಕೂಲತೆ ಒದಗಿಸಿದ್ದಾರೆ. ಆದರೆ ಸ್ವಾತಂತ್ರ್ಯ ಲಭಿಸಿದ ನಂತರದಿಂದಲೂ ವಾಡಿ ಜನತೆ ಬಸ್‌ ನಿಲ್ದಾಣ ಭಾಗ್ಯ ಕಂಡಿಲ್ಲ.

ನರಕದಂತಿದ್ದ ವಾಡಿ ನಗರಕ್ಕೆ ಕುಡಿಯುವ ನೀರು ಒದಗಿಸಿದ್ದಾರೆ. ಗುಣಮಟ್ಟದ ಸಿಸಿ ರಸ್ತೆಗಳನ್ನು ನಿರ್ಮಿಸಿದ್ದಾರೆ. ದಿನನಿತ್ಯ ತಾಸಿಗೊಂದು ಬಸ್‌ ಸಂಚರಿಸುವ ಅನಿರೀಕ್ಷಿತ ಸೌಕರ್ಯ ಒದಗಿಸಲಾಗಿದೆ. ಆದರೆ ಬಸ್‌ ನಿಲ್ದಾಣ ಸೌಲಭ್ಯ ಮಾತ್ರ ಒದಗಿಸಿಲ್ಲ. ಮಳೆ, ಗಾಳಿ, ಚಳಿ, ಬಿಸಿಲು ಲೆಕ್ಕಿಸದೇ ನಾವು ಪ್ರತಿದಿನ ಬೀದಿಯಲ್ಲೇ ನಿಂತು ಬಸ್ಸಿಗಾಗಿ ಕಾಯುತ್ತೇವೆ. ಹೋಟೆಲ್‌ ಮತ್ತು ಅಂಗಡಿಗಳ ಎದುರು ನಿಲ್ಲಲು ವ್ಯಾಪಾರಿಗಳು ಅವಕಾಶ ನೀಡುವುದಿಲ್ಲ. ಬಸ್‌ ಬರುವವರೆಗೂ ಬಿಸಿಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಯಾವ ತಪ್ಪಿಗಾಗಿ ನಮಗೀ ಶಿಕ್ಷೆ? -ರೂಪಾ ಬಿ.ಕೆ., ಪ್ರೌಢಶಾಲೆ ವಿದ್ಯಾರ್ಥಿನಿ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next