Advertisement

ದಿಬ್ಬಣದ ಬಸ್‌ ಪಲ್ಟಿ: 10 ಜನರಿಗೆ ಗಂಭೀರ ಗಾಯ

03:39 PM Jun 20, 2019 | Suhan S |

ಸಕಲೇಶಪುರ: ಖಾಸಗಿ ಬಸ್‌ ಚಾಲಕನ ಅಜಾರೂಗತೆಯಿಂದಾಗಿ ಬಸ್‌ ಪಲ್ಟಿಯಾಗಿ ಮದುವೆಗೆಂದು ಹೊರಟ ದಿಬ್ಬಣ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನಲ್ಲಿ ಬುಧವಾರ ನಡೆದಿದೆ.

Advertisement

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ಸಿದ್ದಲಿಂಗಸ್ವಾಮಿ ಹಾಗೂ ಕನಕಪುರ ಜಿಲ್ಲೆ ಸಾತನೂರು ಸಮೀಪ ಚಿಕ್ಕ ಹಾಲಳ್ಳಿಯ ಕೀರ್ತಿ ಎಂಬುವರ ವಿವಾಹ ಮಹೋತ್ಸವ ಧರ್ಮಸ್ಥಳದಲ್ಲಿ ನಿಶ್ಚಿತವಾಗಿದ್ದು ಈ ಹಿನ್ನೆಲೆಯಲ್ಲಿ ಹುಡುಗನ ಸಂಬಂಧಿಕರು ಉದಯರಂಗ ಟ್ರಾನ್ಸ್‌ಪೋರ್ಟ್‌ನ ಖಾಸಗಿ ಬಸ್‌ನಲ್ಲಿ ಧರ್ಮಸ್ಥಳಕ್ಕೆ ಮದುವೆಗೆಂದು ತೆರಳುತ್ತಿದ್ದರು. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಆನೆಮಹಲ್ ಗ್ರಾಮದ ದುರ್ಗಾಂಬ ರೈಸ್‌ ಮಿಲ್ ಸಮೀಪ ಚಾಲಕ ವೇಗವಾಗಿ ಬಸ್‌ ಚಲಾಯಿಸಿದ್ದು ತಿರುವಿನಲ್ಲಿ ಬಸ್‌ ನಿಯಂತ್ರಣಕ್ಕೆ ಸಿಗದ ಕಾರಣ ಬಸ್‌ ಮಗುಚಿ ಬಿದ್ದಿದೆ. ಬಸ್‌ ಅಪಘಾತಕ್ಕೆ ಈಡಾದ ಕಾರಣ ಬಸ್‌ನಲ್ಲಿದ್ದ 54 ಜನರಲ್ಲಿ ಸುಮಾರು 8ರಿಂದ 10 ಮಂದಿಗೆ ಗಂಭೀರ ಪೆಟ್ಟು ಬಿದ್ದಿದ್ದು ಬಾಕಿ ಉಳಿದವರಿಗೆ ಸಣ್ಣಪುಟ್ಟ ಪೆಟ್ಟು ಬಿದ್ದಿದೆ. ಗಾಯಾಳುಗಳಿಗೆ ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡ ಚನ್ನಯ್ಯ, ಸಿದ್ದರಾಜು, ಶಿವರಾಜು, ಮಲ್ಲಮ್ಮ, ಶಿವಮ್ಮ ಎಂಬುವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ಬಹುತೇಕರಿಗೆ ಬಲಗೈ, ಹಣೆ ಹಾಗೂ ತಲೆಗೆ ಪೆಟ್ಟು ಬಿದ್ದಿದೆ. ಆನೆಮಹಲ್ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕ್ರಾಫ‌ರ್ಡ್‌ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸಹ ತುರ್ತು ಚಿಕಿತ್ಸೆ ನೀಡಿದರು.

ವರ ಸಿದ್ದಲಿಂಗಸ್ವಾಮಿ ಕಾರಿನಲ್ಲಿ ತನ್ನ ತಾಯಿ ಯೊಂದಿಗೆ ತೆರಳಿದ್ದರಿಂದ ಅಪಾಯದಿಂದ ಪಾರಾಗಿ ದ್ದಾನೆ. ವಧು ಕೀರ್ತಿ ಮನೆಯವರು ಬೇರೆ ವಾಹನ ಗಳಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಘಟನೆಯಿಂದ ಕೆಲ ಸಮಯ ರಾಷ್ಟ್ರೀಯಯ ಹೆದ್ದಾರಿ 75ರಲ್ಲಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ನಗರ ಠಾಣೆಯ ಪಿಎಸ್‌ಐ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲು ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next