Advertisement

ಬಂಟರ ಸಂಘದ ಅದ್ದೂರಿ ವಾರ್ಷಿಕ ಸ್ನೇಹ ಸಮ್ಮಿಲನ, ಪ್ರಶಸ್ತಿ ಪ್ರದಾನ

03:29 PM Apr 18, 2018 | Team Udayavani |

ಮುಂಬಯಿ: ಸುಮಾರು 90 ವರ್ಷಗಳ ಇತಿಹಾಸವಿರುವ ಬಂಟರ ಸಂಘವು ಕಳೆದ ಇಪ್ಪತ್ತೆ$çದು ವರ್ಷಗಳಲ್ಲಿ ಮಾಡಿದ ಸಾಧನೆ, ಪರಿವರ್ತನೆ ಅಮೋಘವಾದುದು, ಬಂಟ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಂಟ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಂಟ ಕುಟುಂಬಗಳಿಗೆ ಸಹಕಾರ ನೀಡುವಲ್ಲಿ ಬಂಟ ದಾನಿಗಳು ಇಂದು ಸಂಘದ ಮೂಲಕ ಮುಂದೆ ಬರುತ್ತಿದ್ದಾರೆ. ಸಂಘದ ಇಂತಹ ಸೇವೆಯ ಬಗ್ಗೆ ಬಂಟರಲ್ಲಿ ಹೆಚ್ಚಿನ ಅಭಿಮಾನ, ಆತ್ಮವಿಶ್ವಾಸ ತುಂಬಿರುದು ಸಂತಸ ತಂದಿದೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

Advertisement

ಎ. 14ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಸಂಘದ ವಾರ್ಷಿಕ ಸ್ನೇಹ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಕೃಷಿಕರಿಗಾಗಿ ಜೀವನ ಸಾಗಿಸುತ್ತಿದ್ದ ಬಂಟರಾದ ನಾವು ಊರು ಬಿಟ್ಟು ಪರದೇಶ ಸೇರಿ ಪರಿಶ್ರಪಟ್ಟ ಕಾರಣದಿಂದಲೇ ಇಂದು ಎತ್ತರಕ್ಕೇರಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಾಗಿದೆ. ಕಷ್ಟದ ಅರಿವು ಇರುವುದರಿಂದಲೇ ಇಂದು ನಮ್ಮ ಬಂಧುಗಳ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದೇವೆ. ಸಾಧ್ಯವಾದಷ್ಟು ನೆರವು ನೀಡಲು ಮುಂದೆ ಬರುತ್ತಿದ್ದೇವೆ. ಬಂಟರಿಗೆ ಬಂಟ ಸಮುದಾಯದ ಮೇಲಿನ ಪ್ರೀತಿ ಹೆಚ್ಚಾಗಬೇಕು. ಸ್ನೇಹ-ಸೌಹಾರ್ದತೆ, ಅನ್ಯೋನ್ಯತೆಯಲ್ಲಿ ಇರಬೇಕು. ನಾವು ನಮ್ಮವರ ಸುಖ-ದುಃಖಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶ ಬಂಟರ ಸಂಘದ್ದಾಗಿದೆ. ಹಾಗಾಗಿಯೇ ಇಂತಹ ಸ್ನೇಹ ಸಮ್ಮಿಲನ, ಸಾಂಸ್ಕೃತಿಕ ಉತ್ಸವ, ಕ್ರೀಡೋತ್ಸವ ಇತ್ಯಾದಿ ಕಾರ್ಯಕ್ರಮಗಳಿಗೆ ಸಂಘವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಬಂಟರ ಒಮ್ಮತ, ಒಗ್ಗಟ್ಟಿನ ಬಲದಲ್ಲಿ ಮುಂದೆ ವಿಶೇಷ ಆಸಕ್ತಿಯ ಸಂಚಲನವಾಗಬೇಕು. ಬಂಟ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅದೆಷ್ಟೋ ಸಾಧಕರಿದ್ದಾರೆ. ಅವರೆಲ್ಲರನ್ನ ಗುರುತಿಸುವಂತಹ ಕಾರ್ಯವನ್ನು ಸಂಘವು ಸದಾ ಮಾಡುತ್ತಿದೆ. ಇಂದು ಸಮ್ಮಾನ, ಪ್ರಶಸ್ತಿ ಸ್ವೀಕರಿಸಿದವರು ಮಹಾನ್‌ ಸಾಧಕರಾಗಿದ್ದಾರೆ. ಅವರಿಂದ ಸಮಾಜಕ್ಕೆ ಇನ್ನಷ್ಟು ಸಲ್ಲುವಂತಾಗಲಿ. ನಾವು ನಮ್ಮ ಹಿರಿಯರು ತೋರಿಸಿದ ದಾರಿಯಲ್ಲಿ ಮುನ್ನಡೆಯೋಣ. ವಿಶ್ವದಲ್ಲೇ ಬಂಟರ ಶಕ್ತಿ ಏನೆಂಬುವುದನ್ನು ಪರಿಚಯಿಸಲು ಪ್ರಯತ್ನಿಸೋಣ ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ, ವಿಸ್ವಾತ್‌ ಕೆಮಿಕಲ್ಸ್‌ ಲಿಮಿಟೆಡ್‌ ಇದರ ಕಾರ್ಯಾಧ್ಯಕ್ಷ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ ಬಿ. ವಿವೇಕ್‌ ಶೆಟ್ಟಿ ಇವರು ಮಾತನಾಡಿ, ಇಂದಿನ ಸಮ್ಮಾನಿತರಲ್ಲಿ ಇಬ್ಬರು ಮಹಿಳಾ ಸಾಧಕಿಯರನ್ನು ಸಂಘವು ಗುರುತಿಸಿರುವುದು ಮಹಿಳೆಯರ ಬಗ್ಗೆ ಸಂಘಕ್ಕಿರುವ ಗೌರವ, ಅಭಿಮಾನವನ್ನು ಸೂಚಿಸುತ್ತದೆ. ಪುರುಷರು ಮಹಿಳೆಯರಿಗೆ ಸಂಘದಲ್ಲಿ ಹಿಂದಿನಿಂದಲೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಇದು ನಿಜಕ್ಕೂ ಸಂತಸದ ವಿಚಾರವಾಗಿದೆ. ನಾವು ನಮ್ಮ ಅಹಂ ತೊರೆದು ಹೊರ ಬರಬೇಕು. ಆಗ ಮಾತ್ರ ಬಂಟರ ಮನಸ್ಸುಗಳು ಪರಿಶುದ್ಧವಾಗಲು ಸಾಧ್ಯ. 23 ಲಕ್ಷ ಬಂಟರಲ್ಲಿ ಒಂದು ಲಕ್ಷ ಬಂಟರು ಮಾತ್ರ ಆರ್ಥಿಕವಾಗಿ ಮೇಲು ಪಂಕ್ತಿಯಲ್ಲಿದ್ದಾರೆ. ಸುಮಾರು 10 ಲಕ್ಷ ಬಂಟರು ಮಧ್ಯಮ ವರ್ಗದವರಾದರೆ, ಉಳಿದ 12 ಲಕ್ಷ ಬಂಟರ ಸ್ಥಿತಿ ತೀರಾ ಶೋಚನೀಯವಾಗಿದೆ. ಅವರನ್ನು ಮೇಲೆತ್ತುವ ಕಾರ್ಯ ನಡೆಯಬೇಕಾಗಿದೆ. ಬಂಟ ಮಹಾದಾನಿಗಳ ನೆರವು ಬೇರೆಲ್ಲೂ ಹರಿದು ಹೋಗದಂತೆ ಸಂಘವು ಜಾಗೃತವಾಗುವ ಆವಶ್ಯಕತೆಯಿದೆ. ಮಹಾದಾನಿಗಳೂ ಈ ಬಗ್ಗೆ ಚಿಂತನೆ ನಡೆಸಬೇಕು. ಮುಂಬಯಿ ಎಂಬುವುದು ಬಂಟರ ಶಕ್ತಿ ಕೇಂದ್ರವಾಗಿದೆ. ಸಂಘವು ಮಹಾದಾನಿಗಳಿಂದ ಪ್ರಯೋಜನ ಪಡೆದು ಶಕ್ತಿಯನ್ನು ಹೆಚ್ಚಿಸಬೇಕು. ಸಂಘವು 90 ವರ್ಷಗಳ ಹೊಸ್ತಿಲಲ್ಲಿದೆ. ಮುಂದಿನ ಶತಮಾನೋತ್ಸವ ಸಂಭ್ರಮಕ್ಕೆ ಈಗಿನಿಂದಲೇ ನಾವು ಸಿದ್ಧರಾಗಬೇಕಾಗಿದೆ. ಸಂಘದ ಬ್ರಾಂಡ್‌ ಹೆಚ್ಚಾಗಿದೆ. ಸದ್ಭಾವನೆ ಬೆಳೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದರ ಸಿಇಒ ಮತ್ತು ಆಡಳಿತ ನಿರ್ದೇಶಕ ರಾಜ್‌ಕಿರಣ್‌ ರೈ ಮಾತನಾಡಿ, ನಾವು ಬಂಟರಾಗಿ ಬಂಟ ಮನೆತನದಲ್ಲಿ ಹುಟ್ಟಿರುವುದಕ್ಕೆ ಅಭಿಮಾನ ಪಡಬೇಕು. ಬಂಟ ಸಮಾಜದಲ್ಲಿ ಶೇ. 90ರಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿದ್ದಾರೆ. ನಾವು ನಮ್ಮ ಸಮಾಜವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗೋಣ. ಸಂಪಾದಿಸುವ ಒಂದಾಂಶವನ್ನು ಸಮಾಜ ಕಾರ್ಯಗಳಿಗಾಗಿ ತೊಡಗಿಸೋಣ, ಸಮಾಜದ ಋಣ ತೀರಿಸುವ ಕಾಯಕದಲ್ಲಿ ಕೈಜೋಡಿಸೋಣ. ಸಂಘವು ನನ್ನನ್ನು ಗುರುತಿಸಿ ಸಮ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿ ಶುಭಹಾರೈಸಿದರು.

ರಮಾನಾಥ ಪಯ್ಯಡೆ ಸ್ಮರಣಾರ್ಥ ಡಾ| ಪಿ. ವಿ. ಶೆಟ್ಟಿ ಮತ್ತು ಪಯ್ಯಡೆ ಕುಟುಂಬವು ಪ್ರತಿವರ್ಷ ನೀಡುವ ವರ್ಷದ ಶ್ರೇಷ್ಠ ಬಂಟ ಸಾಧಕ-2018 ಪ್ರಶಸ್ತಿಯನ್ನು ಈ ಬಾರಿ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮತ್ತು ಚಂದ್ರಿಕಾ ಐಕಳ ಹರೀಶ್‌ ಶೆಟ್ಟಿ ದಂಪತಿಗೆ ಪ್ರದಾನಿಸಲಾಯಿತು. ಡಾ| ಪಿ. ವಿ. ಶೆಟ್ಟಿ, ಪದ್ಮನಾಭ ಎಸ್‌. ಪಯ್ಯಡೆ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.

Advertisement

ಸಂಘದ ಹೆಲ್ತ್‌ಕೇರ್‌ ಸೆಂಟರ್‌ನ ಮಾಜಿ ಕಾರ್ಯಾಧ್ಯಕ್ಷ ಡಾ| ಡಾ| ಮನೋಹರ ಹೆಗ್ಡೆ, ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಮನೋಹರ ಹೆಗ್ಡೆ ದಂಪತಿಯ ಪುತ್ರಿ ಶೆಫಾಲಿ ರೈ ಹೆಗ್ಡೆ ಸ್ಮರಣಾರ್ಥ ಪ್ರತೀ ವರ್ಷ ನೀಡುವ ವರ್ಷದ ಶ್ರೇಷ್ಠ ಬಂಟ ಸಾಧಕಿ-2018 ಪ್ರಶಸ್ತಿಯನ್ನು ಈ ಬಾರಿ ಬದ್ಲಾಪುರ ಭಾರತ್‌ ಕಾಲೇಜ್‌ ಆಫ್‌ ಎಂಜಿನೀಯರಿಂಗ್‌ ಇದರ ಸಂಸ್ಥಾಪಕ ಹಾಗೂ ಮಾಲಕಿ ಪ್ರೊ| ಶುಭಲಕ್ಷ್ಮೀ ಸುದರ್ಶನ್‌ ಹೆಗ್ಡೆ ಇವರಿಗೆ ಪ್ರದಾನಿಸಲಾಯಿತು. ಮನೋಹರ ಹೆಗ್ಡೆ, ಆಶಾ ಮನೋಹರ್‌ ಹೆಗ್ಡೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸಮ್ಮಾನಿಸಲಾಯಿತು. ಅತಿಥಿ-ಗಣ್ಯರುಗಳನ್ನು ಚಂದ್ರಹಾಸ್‌ ಕೆ. ಶೆಟ್ಟಿ, ಸಿಎ ಪ್ರದೀಪ್‌ ಶೆಟ್ಟಿ, ಅನುಶ್ರೀ ಪರಿಚಯಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಮಹೇಶ್‌ ಎಸ್‌. ಶೆಟ್ಟಿ, ಶೋಭಾ ಎಸ್‌. ಶೆಟ್ಟಿ, ಸಮ್ಮಾನಿತರನ್ನು ಸಿಎ ರಮೇಶ್‌ ಎ. ಶೆಟ್ಟಿ, ಡಾ| ಪ್ರಭಾಕರ ಬಿ. ಶೆಟ್ಟಿ, ಗುಣಪಾಲ್‌ ಆರ್‌. ಶೆಟ್ಟಿ ಐಕಳ, ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಜಯ ಎ. ಶೆಟ್ಟಿ, ಬಿ. ಆರ್‌. ಶೆಟ್ಟಿ, ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಚಿತ್ರಾ ಆರ್‌. ಶೆಟ್ಟಿ, ಸಾಗರ್‌ ಶೆಟ್ಟಿ ಪರಿಚಯಿಸಿದರು. ಸಂಘದ ವಿವಿಧ ಸಮಿತಿಯ ಪದಾಧಿಕಾರಿಗಳು, ಸಮ್ಮಾನಿತರ ಕುಟುಂಬಿಕರು ಉಪಸ್ಥಿತರಿದ್ದರು.

ಗಾಯಕ ಸುರೇಶ್‌ ಎಲ್‌. ಶೆಟ್ಟಿ ಶಿಬರೂರು ಪ್ರಾರ್ಥನೆಗೈದರು. ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಹಾಗೂ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಸಂಘದ ವಾರ್ಷಿಕ ವರದಿ ವಾಚಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ ಕೊನೆಯಲ್ಲಿ ವಂದಿಸಿದರು. 

ಬಂಟರ ಸಂಘವು ಮಹಿಳೆಯರ ಬಗ್ಗೆ ತಳೆದಿರುವ ಗೌರವ, ಪ್ರೀತಿ, ವಿಶ್ವಾಸಕ್ಕೆ ಕೃತಜ್ಞತೆಗಳು. ಇಂದು ಇಬ್ಬರು ಮಹಿಳೆಯರನ್ನು ಗುರುತಿಸಿ ಸಮ್ಮಾನಿಸಿದ್ದೀರಿ. ಸಮಾಜದಲ್ಲಿ ಹೆಸರು ಪಡೆದ ಅನೇಕರನ್ನು ಸಮಾಜ ಗುರುತಿಸುತ್ತದೆ. ಆದರೆ ಇನ್ನೂ ಕೆಲವು ಹೆಸರು ಪಡೆದ ಸಾಧಕರು ಹೇಳ ಹೆಸರಿಲ್ಲದೆ ಕಮರಿ ಹೋಗುತ್ತಿರುವುದು ವಿಷಾಧನೀಯ. ಬಂಟ ಪುರುಷರ ಸಾಧನೆಯ ಹಿಂದೆ ಮಹಿಳೆಯರ ಪರಿಶ್ರಮವಿದೆ. ಐಕಳ ಹರೀಶ್‌ ಶೆಟ್ಟಿ ಅವರ ಸಾಧನೆಯನ್ನು ಕಾಲೇಜು ದಿನಗಳಿಂದಲೇ ಗುರುತಿಸಿಕೊಂಡಿದ್ದೇನೆ. ಅವರೋರ್ವ ನಿಷ್ಠಾವಂತ ಸಮಾಜ ಸೇವಕ. ಬಂಟರ ಕನಸು ದೊಡ್ಡದಾಗಿರಲಿ. ಸಾಧನೆಯು ದೊಡ್ಡದಾಗಿರಲಿ. ನನಗೆ ಪ್ರಶಸ್ತಿಯೊಂದಿಗೆ ದೊರೆತ ಒಂದು ಲಕ್ಷ ರೂ. ಗಳನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಅರ್ಪಿಸುತ್ತಿದ್ದೇನೆ.
-ಪ್ರೊ| ಶುಭಲಕ್ಷ್ಮೀ ಸುದರ್ಶನ್‌ ಹೆಗ್ಡೆ, ಶೆಫಾಲಿ ರೈ ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿ ಪುರಸ್ಕೃತರು

ಈ ಪ್ರಶಸ್ತಿ ಬಂಟರ ಸಂಘಕ್ಕೆ ಅರ್ಪಿಸುತ್ತಿದ್ದೇನೆ. ಇಂದು ನಾನೇನಾದರೂ ಮಾಡಿದ್ದರೆ ಅದಕ್ಕೆ ದಾನಿಗಳ ಸಹಕಾರ, ಬಂಟರ ಸಂಘದ ಪ್ರೋತ್ಸಾಹ ಕಾರಣವಾಗಿದೆ. ಪಯ್ಯಡೆ ಕುಟುಂಬವನ್ನು 25 ವರ್ಷಗಳಿಂದ ಬಲ್ಲೆ. ದಿ| ರಮಾನಾಥ ಪಯ್ಯಡೆ ಸಹೃದಯ ಮನಸ್ಸಿನ ವ್ಯಕ್ತಿತ್ವ ಹೊಂದಿದ್ದರು. ಜೊತೆಗೆ ಓರ್ವ ದಿಟ್ಟ ನಾಯಕರಾಗಿದ್ದರು. ಅವರ ಸ್ಮರಣಾರ್ಥ ಬಂಟರ ಸಂಘಕ್ಕೆ ಆದರಾತಿಥ್ಯ ಕಾಲೇಜಿನ ಕೊಡುಗೆ ಸಂದಿದೆ. ಪ್ರಶಸ್ತಿಯೊಂದಿಗೆ ತನಗೆ ದೊರೆತ ಒಂದು ಲಕ್ಷ ರೂ. ಗಳನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ವಿನಿಯೋಗಿಸುತ್ತೇನೆ.
-ಐಕಳ ಹರೀಶ್‌ ಶೆಟ್ಟಿ, ರಮಾನಾಥ ಪಯ್ಯಡೆ ಸ್ಮರಣಾರ್ಥ ಪ್ರಶಸ್ತಿ ಪುರಸ್ಕೃತರು

ಬಿಸುಪರ್ಬ-ಸ್ನೇಹ ಸಮ್ಮಿಲನ ಹಬ್ಬದಾಚರಣೆಯಲ್ಲಿ ಬಂಟರೊಂದಿಗೆ ಬೆರೆತು ಸಂಭ್ರಮವನ್ನಾ ಚರಿಸುವ ಅವಕಾಶ ನನಗೆ ಕಲ್ಪಿಸಿದ್ದೀರಿ. ಅದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ಅನೇಕ ಬಂಟರು ಚಿತ್ರರಂಗಕ್ಕೆ ವಿಶೇಷ ಕೊಡುಗೆ ಸಲ್ಲಿಸಿದ್ದಾರೆ. ತುಳುಭಾಷೆ ಅತ್ಯಂತ ಸೊಗಸಾದ ಭಾಷೆ. ಬಂಟರು ತುಳುನಾಡಿನಿಂದ ಮಹಾರಾಷ್ಟ್ರದ ಮುಂಬಯಿಗೆ ಬಂದು ತಮ್ಮ ಅಸ್ಮಿತೆಯಿಂದ ಬೆಳಗಿದ್ದಾರೆ. ಮುಂಬಯಿಯ ಅಭಿವೃದ್ಧಿಯಲ್ಲಿ ಬಂಟರ ಪಾಲು ಹಿರಿದಾಗಿದೆ. ಬಂಟರಿಲ್ಲದೆ ಮುಂಬಯಿ ಪರಿಪೂರ್ಣವಾಗದು. ಭಾರತೀಯರು, ಬಂಟರ ಬಗ್ಗೆ ಅಭಿಮಾನ ಪಡಬೇಕು. ಬಂಟ ಸಮಾಜದಲ್ಲಿ ಎಷ್ಟೋ ಪ್ರತಿಭೆಗಳಿವೆ ಎಂಬುವುದು ಇಂದಿನ ಯಕ್ಷಗಾನ ಪ್ರದರ್ಶನದಿಂದ ಅರಿತುಕೊಂಡಿದ್ದೇನೆ. ಬಂಟರಿಗೆ ಭವಿಷ್ಯದಲ್ಲೂ ಸದಾ ಯಶಸ್ಸು ಸಿಗಲಿ.  
– ರವೀನಾ ಟಂಡನ್‌,ಬಾಲಿವುಡ್‌ ನಟಿ

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next