Advertisement

ಸಂಕಷ್ಟದಲ್ಲಿರುವ ಸಮಾಜ ಬಾಂಧವರ ಕಣ್ಣೀರೊರೆಸುವ ಧ್ಯೇಯ: ಸುಕುಮಾರ್‌ ಎನ್‌. ಶೆಟ್ಟಿ

01:39 PM Sep 27, 2021 | Team Udayavani |

ಡೊಂಬಿವಲಿ: ನಾವು ಇತರರ ಕಷ್ಟಗಳಿಗೆ ಸ್ಪಂದಿಸಿದರೆ ನಮ್ಮ ಕಷ್ಟಗಳಿಗೆ ಬೇರೊಬ್ಬರು ಸಹಾಯ ಮಾಡುತ್ತಾರೆ. ಇಂದು ಡೊಂಬಿವಲಿ ಪರಿಸರದಲ್ಲಿ  ಹಲವಾರು ಸಮಾಜ ಬಾಂಧವರು ಬಹಳಷ್ಟು  ಕಷ್ಟದಲ್ಲಿದ್ದಾರೆ. ಅಂಥವರನ್ನು ಗುರುತಿಸಿ ಶೈಕ್ಷಣಿಕವಾಗಿ ಸಮಿತಿಯು ಸಹಾಯ ಮಾಡಿದೆ. ಸುಮಾರು ಹತ್ತು, ಹದಿನೈದು ಕುಟುಂಬಗಳ ಸದಸ್ಯರಿಗೆ ಒಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಈ ಕುಟುಂಬದ ಒಂದೊಂದು ವರ್ಷದ ಆಹಾರ ಧಾನ್ಯಗಳ ವೆಚ್ಚವನ್ನು ಒಬ್ಬೊಬ್ಬರು ನೀಡಿ ಅರ್ಥಿಕವಾಗಿ ಹಿಂದುಳಿದ ಸಮಾಜದ ಕುಟುಂಬಗಳಿಗೆ ಸಹಾಯ ನೀಡುವುದರೊಂದಿಗೆ ಸಮಾಜ ಬಾಂಧವರ ಕಣ್ಣೀರೊರೆಸುವ ಕಾರ್ಯ ಮಾಡೋಣ. ಡೊಂಬಿವಲಿ ಪ್ರಾದೇಶಿಕ ಸಮಿತಿ 62 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ವಿದ್ಯಾರ್ಜನೆಗೆ ಸಹಾಯ ಮಾಡುತ್ತಿದೆ. ಈ ಬೃಹತ್‌ ಯೋಜನೆಗೆ ಕಲ್ಯಾಣ್‌ನ ಉದ್ಯಮಿ ಅಂಬ್ರೋಸಿ ದಯಾನಂದ ಶೆಟ್ಟಿ ಅವರು ಎರಡು ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಸಹಕಾರ ನೀಡಿದ್ದಾರೆ. ಅ. 24ರಂದು ಅಜ್ದೆಪಾಡದ ಶ್ರೀ ಅಯ್ಯಪ್ಪ ದೇವಸ್ಥಾನದ ಸಭಾಗೃಹದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುವುದು. ಸಮಾಜ ಬಾಂಧವರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಬಗ್ಗೆ ಈಗಾಗಲೇ ಚಿಂತನೆ ಮಾಡುತ್ತಿದ್ದೇವೆ ಎಂದು ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ  ತಿಳಿಸಿದರು.

Advertisement

ಸೆ. 22ರಂದು ಡೊಂಬಿವಲಿಯ ಹೊಟೇಲ್‌ ಸುಯೋಗ್‌ ಟೆರೇಸ್‌ ಸಭಾಗೃಹದಲ್ಲಿ  ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ನಡೆದ ಸ್ನೇಹ ಸಮ್ಮಿಲನ ಮತ್ತು ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಿತಿ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಸಹಕಾರ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಯುವ ವಿಭಾಗದಿಂದ ಶೈಕ್ಷಣಿಕ ಸಹಾಯ, ಆರೋಗ್ಯ ಸಹಾಯ, ಮಹಿಳಾ ವಿಭಾಗದಿಂದ ಆರ್ಥಿಕ ಸಹಾಯ ಹಾಗೂ ಇನ್ನಿತರ ಕಾರ್ಯಗಳಿಂದಾಗಿ ಬಂಟರ ಸಂಘದ ದ್ವಿತೀಯ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಎಲ್ಲ  ಸಾಧನೆ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎನ್ನಲು ಅತೀವ ಸಂತೋಷವಾಗುತ್ತಿದೆ. ನಮ್ಮ ಪ್ರಾದೇಶಿಕ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ, ಸಂಚಾಲಕ ಸುಬ್ಬಯ್ಯ ಶೆಟ್ಟಿ, ಸಂಘಟಕ ಕಲ್ಲಡ್ಕ ಕರುಣಾಕರ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ  ಎಕ್ಕಾರು, ಯುವ ವಿಭಾಗ, ಮಹಿಳಾ ವಿಭಾಗ ಪ್ರಾದೇಶಿಕ ಸಮಿತಿಯ ಎಲ್ಲ  ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ  ಪ್ರಾದೇಶಿಕ ಸಮಿತಿ ಉತ್ತಮ ಸಾಧನೆಗಳೊಂದಿಗೆ ಪ್ರಥಮ ಸ್ಥಾನ ಬರುವಂತೆ ಪ್ರಯತ್ನಿಸೋಣ. ಸಂಘದ ವತಿಯಿಂದ ಸಿಗುವ ಸೌಲಭ್ಯಗಳನ್ನು ಪ್ರಾದೇಶಿಕ ಸಮಿತಿಯ ಸಮಾಜ ಬಾಂಧವರಿಗೆ ತಿಳಿಸುವ ಸಲುವಾಗಿ ಪ್ರಾದೇಶಿಕ ಸಮಿತಿಯ ಫೇಸ್‌ಬುಕ್‌, ವೆಬ್‌ಸೈಟ್‌ ಅನ್ನು ನಿರ್ಮಿಸುವಲ್ಲಿ  ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್‌ ಶೆಟ್ಟಿ ಮತ್ತು ಪ್ರಜ್ವಲ್‌ ಶೆಟ್ಟಿ  ಮುಂದಾಗಿದ್ದಾರೆ. ಸಂಘದ ಅಧ್ಯಕ್ಷರ ಹಲವಾರು ಅತ್ಯುತ್ತಮ ಯೋಜನೆಗಳು ನಮ್ಮ ಮುಂದಿದ್ದು, ಈ ಎಲ್ಲ  ಕಾರ್ಯಗಳಿಗೆ ಸಮಾಜ ಬಾಂಧವರ ಸಂಪೂರ್ಣ ಸಹಕಾರವಿರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ  ಬಂಟರ ಸಂಘದ ವಾರ್ಷಿಕ ದ್ವಿತೀಯ ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ ಪುರಸ್ಕೃತ ಡೊಂಬಿವಲಿ, ಬಂಟರ ಸಂಘ ಮುಂಬಯಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಾದ ಮಕ್ಕಳ ನೃತ್ಯ ಸ್ಪರ್ಧೆಯಲ್ಲಿ  ತೃತೀಯ ಹಾಗೂ ಮುದ್ದು ಕೃಷ್ಣ, ರಾಧಾಕೃಷ್ಣ ಸ್ಪರ್ಧೆಯಲ್ಲಿ  ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು.

ಸಮಿತಿಯ ಉಪ ಕಾರ್ಯಾಧ್ಯಕ್ಷ ಆನಂದ್‌ ಶೆಟ್ಟಿ ಎಕ್ಕಾರು ಮಾತನಾಡಿ, ನಮ್ಮ ಸಮಾಜಕ್ಕೆ ಉತ್ತಮವಾದ ವೇದಿಕೆ ಸಿಕ್ಕಿದೆ. ಯುವಕ, ಯುವತಿಯರು ಮುಂದೆ ಬಂದು ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ  ಭಾಗವಹಿಸಬೇಕು. ಪ್ರಾದೇಶಿಕ ಸಮಿತಿಯ ಅಭಿವೃದ್ಧಿಯಲ್ಲಿ  ಯುವ ವಿಭಾಗ, ಮಹಿಳಾ ವಿಭಾಗದ ಕೊಡುಗೆ ಅಪಾರವಿದೆ ಎಂದರು.

ಕರ್ನಾಟಕ ಸಂಘ ಡೊಂಬಿವಲಿ ಇದರ ನಿಕಟಪೂರ್ವ ಅಧ್ಯಕ್ಷ ವಿಟuಲ್‌ ಶೆಟ್ಟಿ  ಮಾತನಾಡಿ, ಡೊಂಬಿವಲಿ ನಗರ ಆರ್ಥಿಕವಾಗಿ ಹಿಂದುಳಿದ ನಗರವಾ ಗಿರಬಹುದು. ಆದರೆ ಶೈಕ್ಷಣಿಕವಾಗಿ ಬೆಳೆದ ನಗರವಾಗಿದೆ. ಇಲ್ಲಿಯ ಶಾಲೆ, ಕಾಲೇಜುಗಳಿಗೆ ಸಮಾಜದ ಕೊಡುಗೆ ಬಹಳಷಿÒದೆ. ಸಮಾಜದ ಚಟುವಟಿಕೆಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಬೇಕು ಎಂದರು.

Advertisement

ಧರ್ಮದರ್ಶಿ ಅಶೋಕ್‌ ಶೆಟ್ಟಿ  ಮಾತನಾಡಿ, ಸಮಾಜದಲ್ಲಿ ದೀನ ದಲಿತರ ಕಣ್ಣೀರನ್ನು ಒರೆಸಿದಾಗ ಸಿಗುವ ಅನಂದ ಬೇರೆಲ್ಲೂ ಸಿಗುವುದಿಲ್ಲ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಂಜುಳಾ ಶೆಟ್ಟಿ, ಯುವ ವಿಭಾಗದ ಸಚಿನ್‌ ಶೆಟ್ಟಿ, ಸದಸ್ಯ ನೋಂದಣಿ ಸಮಿತಿಯ ಅಶೋಕ್‌ ಶೆಟ್ಟಿ ಮೂಂಡ್ಕೂರು, ಸಾಂಸ್ಕೃತಿಕ ವಿಭಾಗದ ಸುರೇಶ್‌ ಶೆಟ್ಟಿ, ಮ್ಯಾರೇಜ್‌ ಸೆಲ್‌ನ ದಯಾ ಶೆಟ್ಟಿ  ತಮ್ಮ ತಮ್ಮ ವಿಭಾಗದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ  ಮಾಜಿ ಕಾರ್ಯದರ್ಶಿ ಮಹಾದಾನಿ ಸನ್ನಿ ದಿನೇಶ್‌ ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ವಿಶ್ವ ಬಂಟರ ಸಂಘಟನೆಯ ಮಹಾದಾನಿ ಆನಂದ ಶೆಟ್ಟಿ ಎಕ್ಕಾರು, ಜಗಜ್ಯೋತಿ ಕಲಾ ವೃಂದದ ಉಪಾಧ್ಯಕ್ಷ ಜಯಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ  ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಸುಬ್ಬಯ್ಯ ಶೆಟ್ಟಿ ಅವರು ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರನ್ನು ವಿಶೇಷವಾಗಿ ಸತ್ಕರಿಸಿದರು. ವಿಜೀತ್‌ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಅರುಣ್‌ ಶೆಟ್ಟಿ  ಪಡುಕುಡೂರು, ಹೇಮಂತ ಶೆಟ್ಟಿ, ಜಯಂತ್‌ ಶೆಟ್ಟಿ, ಜಯಕರ ಶೆಟ್ಟಿ  ಪಡುಕುಡೂರು, ಸಚಿನ್‌ ಶೆಟ್ಟಿ, ಮಂಜುಳಾ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು. ಹೇಮಂತ್‌ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೊನೆಯಲ್ಲಿ  ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಜೀವನದಲ್ಲಿ  ಪ್ರತಿಯೊಬ್ಬರಿಗೂ ಕಷ್ಟ-ಸುಖ ಬರುತ್ತದೆ. ಇನ್ನೊಬ್ಬರ ಕಷ್ಟದಲ್ಲಿ  ಭಾಗಿಯಾಗಿ ಅವರಿಗೆ ಸಹಾಯ ಮಾಡಿದಾಗ ದೇವರು ನಮಗೆ ಬೇರೆ ರೀತಿಯಲ್ಲಿ  ಸಹಾಯ ಮಾಡುತ್ತಾರೆ. ನಮ್ಮ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ, ಮಹಾದಾನಿ ಸನ್ನಿ ದಿನೇಶಣ್ಣ ಅನಾರೋಗ್ಯವನ್ನು ಗೆದ್ದು ಬಂದವರು. ಅವರು ಸಮಿತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಪ್ರಾದೇಶಿಕ ಸಮಿತಿಯ ಮಕ್ಕಳು ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿ ತೃತೀಯ ಬಹುಮಾನ ಗೆದ್ದಿದ್ದಾರೆ. ಪ್ರತಿಯೊಂದು ಸ್ಪರ್ಧೆಯಲ್ಲಿ  ಭಾಗವಹಿಸುವುದು ಬಹಳ ಮುಖ್ಯ. ಆಗ ಗೆಲ್ಲುವ ಹುರುಪು ತನ್ನಿಂದ ತಾನೇ ಬರುತ್ತದೆ. ನಾವೆಲ್ಲರೂ ಸೇರಿ ಪ್ರಾಮಾಣಿಕವಾಗಿ ಸಮಾಜದ ಕೆಲಸಗಳನ್ನು ಮಾಡಿದಾಗ ಸಮಾಜ ಇನ್ನಷ್ಟು ಅಭಿವೃದ್ಧಿಯಾಗುವುದರಲ್ಲಿ  ಸಂದೇಹವಿಲ್ಲ. ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ ಒಳ್ಳೆಯ ಕಾರ್ಯಕರ್ತರಿದ್ದು, ಈ ಸಮಿತಿಯು ಸಮಾಜ ಸೇವೆಯಲ್ಲಿ  ಕ್ರಾಂತಿಯನ್ನುಂಟು ಮಾಡಬಹುದು.ಇಂದ್ರಾಳಿ ದಿವಾಕರ್‌ ಶೆಟ್ಟಿ ಜತೆ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ

ಸುಕುಮಾರ್‌ ಎನ್‌. ಶೆಟ್ಟಿ ಅವರ ಪದಗ್ರಹಣ ಸಂಧರ್ಭ ಇದೇ ವೇದಿಕೆಯಲ್ಲಿ  ಡೊಂಬಿವಲಿ ಪ್ರಾದೇಶಿಕ ಸಮಿತಿ ಅತ್ಯುತ್ತಮ ಸಮಿತಿಯೆಂಬ ಹೆಗ್ಗಳಿಕೆ ಪಡೆಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದೆ. ಅದು ಇಂದು ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವನೆ ಮಾಡಿ ಪ್ರಥಮ ಸ್ಥಾನ ಪಡೆಯೋಣ. ಅದಕ್ಕಾಗಿ ಎಲ್ಲರು ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗೋಣ.ಕಲ್ಲಡ್ಕ ಕರುಣಾಕರ ಶೆಟ್ಟಿ ಸಂಘಟಕರು, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ

ಭಿವಂಡಿ-ಬದ್ಲಾಪುರ, ನವಿಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಗಳು ನನ್ನ ಸಂಚಾಲಕತ್ವದಲ್ಲಿವೆ. ಈ ಮೂರೂ ಸಮಿತಿಗಳು ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಗೆದ್ದಿವೆ. ದಿವಾಕರ ಶೆಟ್ಟಿ ಇಂದ್ರಾಳಿ, ಐಕಳ ಗಣೇಶ್‌ ಶೆಟ್ಟಿ, ರಾಜೀವ್‌ ಭಂಡಾರಿ, ಕಲ್ಲಡ್ಕ ಕರುಣಾಕರ ಶೆಟ್ಟಿ ಅವರು ಹಾಕಿದ ಭದ್ರ ಬುನಾದಿಯಿಂದ ಹಾಗೂ ಕಾರ್ಯಕಾರಿ ಸಮಿತಿಯ ಪ್ರಾಮಾಣಿಕ ಸಮಾಜ ಸೇವೆಯಿಂದ ದ್ವಿತೀಯ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂಬ ಹೆಗ್ಗಳಿಕೆಯನ್ನು ಡೊಂಬಿವಲಿ ಪ್ರಾದೇಶಿಕ ಸಮಿತಿ ಪಡೆದಿದೆ ಎನ್ನಲು ಅತೀವ ಸಂತೋಷವಾಗುತ್ತಿದೆ. ಸುಬ್ಬಯ ಶೆಟ್ಟಿ , ಸಂಚಾಲಕರು,  ಮಧ್ಯ ವಲಯ ಪ್ರಾದೇಶಿಕ ಸಮಿತಿಗಳು

ಡೊಂಬಿವಲಿ ಸಮಿತಿ ನಮ್ಮೆಲ್ಲರ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ನನ್ನ ಸಹಕಾರ ಸದಾ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ಅನಾರೋಗ್ಯದಿಂದ ಬಳಲುತ್ತಿದ್ದವನು ಎಲ್ಲವನ್ನು ಗೆದ್ದು ಬಂದಿದ್ದೇನೆ. ಈ ಸಮ್ಮಾನವನ್ನು ಕಾಪು ಮಾರಿಯಮ್ಮ ಮತ್ತು ಶ್ರೀ ಜನಾರ್ದನ ದೇವರ ಪ್ರಸಾದವೆಂದು ಸ್ವೀಕರಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇದೇ ರೀತಿಯಲ್ಲಿ ಇರಲಿ. ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ನನ್ನ ಸಹಕಾರ ಸದಾಯಿದೆ. ಸಮಿತಿಯಿಂದ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿ.ದಿನೇಶ್‌ ಶೆಟ್ಟಿ , ಸಮ್ಮಾನಿತರು

Advertisement

Udayavani is now on Telegram. Click here to join our channel and stay updated with the latest news.

Next