Advertisement

ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ ದೊರೆಯಲಿ

09:26 PM Nov 11, 2020 | Suhan S |

ಚಿತ್ರದುರ್ಗ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನಿಜವಾದ ಕಾರ್ಮಿಕರಿಗೆ ಸೌಲಭ್ಯಗಳನ್ನು ತಲುಪಿಸಬೇಕು. ಸರ್ಕಾರದ ಸೌಲಭ್ಯಕ್ಕಾಗಿ  ನೋಂದಾಯಿಸಿಕೊಂಡಿರುವ ವಂಚಕರನ್ನು ದೂರವಿಡಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.

Advertisement

ಮಂಡಳಿ ರಚನೆಯಾದ ಉದ್ದೇಶ ಈಡೇರಿಲ್ಲ. ನಿಜವಾದ ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಲು ಹೋದರೆ ಒಂದು ದಿನದ ಕೂಲಿ ನಷ್ಟವಾಗುತ್ತದೆ ಎಂದು ಕೆಲಸ ಮಾಡುತ್ತಿದ್ದಾರೆ. ಇದರ ಲಾಭವನ್ನು ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಿ ನಿಜವಾದ ಕಾರ್ಮಿಕರನ್ನು ಗುರುತಿಸಬೇಕುಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಂಡಳಿಯಿಂದ ನೀಡುವ ಮದುವೆ ಸಹಾಯಧನವನ್ನು 2 ಲಕ್ಷ ರೂ.ಗೆ ಹೆಚ್ಚಿಸಿ ಠೇವಣಿ ಇಡದಂತೆ ಮೊದಲಿನಂತೆ ಮುಂದುವರೆಸಬೇಕು. ಹೆರಿಗೆ ಸಹಾಯಧನವನ್ನು 50 ಸಾವಿರ ರೂ. ಗೆ ಹೆಚ್ಚಿಸುವುದು, ಕಟ್ಟಡ ಕಾರ್ಮಿಕರು ಕೆಲಸಕ್ಕೆ ಹೋಗುವ ಮತ್ತು ಬರುವ ಸಮಯದಲ್ಲಿ ಅಪಘಾತವಾದರೆ 8 ಲಕ್ಷ ರೂ. ಪರಿಹಾರ ನೀಡುವುದು, ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಸಹಾಯಧನ ನೀಡಬೇಕು. ಕಟ್ಟಡ ಕಟ್ಟುವ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆಕೋವಿಡ್‌ ಸಂದರ್ಭದಲ್ಲಿ ಘೋಷಣೆ ಮಾಡಿದ ಪರಿಹಾರ ಹಣ ಕೆಲವು ಕಾರ್ಮಿಕರಿಗೆ ತಲುಪಿಲ್ಲ. ಕೂಡಲೇ ಅವರ ಖಾತೆಗೂ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಗೌರವಾಧ್ಯಕ್ಷ ಸಿ.ವೈ. ಶಿವರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ರಾಜ್ಯ ಮಂಡಳಿ ಸದಸ್ಯ ಟಿ.ಆರ್‌. ಉಮಾಪತಿ, ದೊಡ್ಡಉಳ್ಳಾರ್ತಿ ಕರಿಯಣ್ಣ, ಜಾಫರ್‌ ಶರೀಫ್‌, ಕೆ.ಎನ್‌. ರಮೇಶ್‌, ಕುಮಾರ್‌, ಕೌಸರ್‌, ಬಿ.ರಾಜಪ್ಪ, ಸೋಮಶೇಖರ್‌ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next