Advertisement

ಕಟ್ಟಡ -ಇತರ ನಿರ್ಮಾಣ ಕಾರ್ಮಿಕರಿಗಿದೆ ವಿವಿಧ ಸೌಲಭ್ಯ

01:38 AM Oct 15, 2019 | mahesh |

ಉಡುಪಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 84 ಸಾವಿರ ಕಾರ್ಮಿಕರು ಸದಸ್ಯತ್ವ ಪಡೆದುಕೊಂಡು ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳು ತ್ತಿದ್ದಾರೆ. ಮಂಡಳಿಯಿಂದ 2018-19ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ 7 ಕೋ. ರೂ. ಮತ್ತು ಉಡುಪಿಯಲ್ಲಿ 5.55 ಕೋ.ರೂ. ಸಹಾಯಧನ ವಿತರಣೆಯಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ ವೆಚ್ಚವಾಗಿ 2.63 ಕೋ.ರೂ., ಹೆರಿಗೆಗೆ 2.55 ಲ.ರೂ.,
ವೈದ್ಯಕೀಯ ವೆಚ್ಚ 9.41 ಲ.ರೂ., ಮದುವೆಗೆ 2.24 ಕೋ.ರೂ ಸೇರಿದಂತೆ ಒಟ್ಟು 5.22 ಕೋ.ರೂ. ವಿತರಣೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಡಿ 195 ಕಾರ್ಮಿಕರಿಗೆ 80.16 ಲ.ರೂ ವಿತರಣೆಯಾಗಿದೆ.

ಸದಸ್ಯತ್ವ ಪಡೆಯುವುದು ಹೇಗೆ?
ಸದಸ್ಯತ್ವ ಪಡೆಯಲು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿನ ಕಾರ್ಮಿಕ ಅಧಿಕಾರಿ ಕಚೇರಿ
ಅಥವಾ ಸಮೀಪದ ಸೇವಾ ಸಿಂಧು ಕೇಂದ್ರವನ್ನು ಸಂಪರ್ಕಿಸಬಹುದು. ಸದಸ್ಯತ್ವಕ್ಕೆ ಶುಲ್ಕವಾಗಿ 25 ರೂ. ಪಾವತಿಸಬೇಕು. ಕಟ್ಟಡ ಕಾರ್ಮಿಕನಾಗಿ 120 ದಿನ ಕೆಲಸ ಮಾಡಿದ್ದಕ್ಕೆ ಪ್ರಮಾಣ ಪತ್ರ ಪಡೆಯಬೇಕು. ಜತೆಗೆ ಆಧಾರ್‌, ಮತದಾರರ ಚೀಟಿ, ಮೂರು ಭಾವಚಿತ್ರ ಲಗತ್ತಿಸಬೇಕು. ನೋಂದಣಿ ಬಳಿಕ ಪ್ರತಿ ವರ್ಷ ಶುಲ್ಕ ಪಾವತಿಸಿ ನವೀಕರಣ ಮಾಡಬೇಕು.

ಯಾರೆಲ್ಲ ಸೌಲಭ್ಯ ಪಡೆಯಬಹುದು?
ನಿರ್ಮಾಣ, ದುರಸ್ತಿ, ವಿದ್ಯುದೀಕರಣ, ಪೈಪ್‌ಲೈನ್‌, ಪ್ಲಾಸ್ಟರಿಂಗ್‌, ಟೈಲ್ಸ್‌, ಒಳಾಂಗಣ ವಿನ್ಯಾಸ, ನೀರಾವರಿ ಚರಂಡಿ, ಅಣೆಕಟ್ಟು, ನಾಲೆ, ಕೊಳವೆ ಮಾರ್ಗ ಕಾಮಗಾರಿ, ಕಲ್ಲು ಗಣಿಗಾರಿಕೆ ಮತ್ತಿತರ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಸದಸ್ಯತ್ವ ಪಡೆಯಬಹುದು.

ಸೌಲಭ್ಯಗಳೇನು?
ಕಾರ್ಮಿಕರು ಕೆಲಸ ಮಾಡುವಾಗ ಮೃತಪಟ್ಟರೆ 5 ಲ.ರೂ. ಪರಿಹಾರ ನಿಧಿ, ಗಂಭೀರ ಅಪಘಾತಕ್ಕೆ 2 ಲ.ರೂ. ಸಹಾಯಧನ ನೀಡಲಾಗುತ್ತದೆ. ಸಾಮಾಜಿಕ ಭದ್ರತೆ, ವೈದ್ಯಕೀಯ ವೆಚ್ಚ, ಅಪಘಾತ ವಿಮೆ, ಪಿಂಚಣಿ, ಮದುವೆಗೆ ಪ್ರೋತ್ಸಾಹಧನ ಮತ್ತು ಮಕ್ಕಳ ಶಿಕ್ಷಣ ಸಹಿತ 12 ಸೌಲಭ್ಯಗಳನ್ನು ನೀಡಲಾಗುತ್ತದೆ.

Advertisement

ಶೈಕ್ಷಣಿಕ ಸಹಾಯಧನ
ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಆರ್ಥಿಕ ಸೌಲಭ್ಯ ವಿತರಿಸಲಾಗುತ್ತದೆ. 4, 5, 6ನೇ ತರಗತಿಗೆ 3 ಸಾವಿರ ರೂ., 7, 8, 9ನೇ ತರಗತಿಗೆ 4 ಸಾವಿರ ರೂ., 10, 11ನೇ ತರಗತಿಗೆ 6 ಸಾವಿರ ರೂ., ದ್ವಿತೀಯ ಪಿಯು 8 ಸಾವಿರ ರೂ., ಐಟಿಐ ಮತ್ತು ಡಿಪ್ಲೋಮಾ 7 ಸಾವಿರ ರೂ., ಪದವಿಗೆ 10 ಸಾವಿರ ರೂ., ಎಂಜಿಯರಿಂಗ್‌ ವಿದ್ಯಾಭ್ಯಾಸಕ್ಕೆ 25 ಸಾವಿರ ರೂ., ಪಿಎಚ್‌ಡಿ ಅಧ್ಯಯನಕ್ಕೆ 20 ಸಾವಿರ ರೂ., ಎಂಬಿಬಿಎಸ್‌ಗೆ ಪ್ರತಿ ವರ್ಷ ತಲಾ 30 ಸಾವಿರ ರೂ. ವಿದ್ಯಾರ್ಥಿ ವೇತನ ಸಿಗುತ್ತದೆ.

ವೈದ್ಯಕೀಯ ವೆಚ್ಚ ಧನಸಹಾಯ
ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್‌, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮಾ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ನರರೋಗ, ಅನ್ನನಾಳ, ಡಯಾಲಿಸಿಸ್‌, ಕಿಡ್ನಿ, ಇಎನ್‌ಟಿ, ಮೂತ್ರಪಿಂಡ, ಮಿದುಳಿನ ರಕ್ತಸ್ರಾವ, ಅಲ್ಸರ್‌, ಕರುಳಿನ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಹರ್ನಿಯಾ ಶಸ್ತ್ರಚಿಕಿತ್ಸೆ, ಮೂಳೆ ಮುರಿತ, ಡಿಸ್‌ಲೊಕೇಶನ್‌ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ 2 ಲ.ರೂ. ವರೆಗಿನ ವೈದ್ಯಕೀಯ ವೆಚ್ಚವನ್ನು ಕಲ್ಯಾಣ ಮಂಡಳಿ ಭರಿಸಲಿದೆ.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಸಿದರೆ ಅನೇಕ ಸೌಕರ್ಯಗಳು ಸಿಗುತ್ತವೆ. ಈ ಕುರಿತು ಗ್ರಾ.ಪಂ. ಮಟ್ಟದಲ್ಲಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ, ಎಲ್ಲರೂ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ.
-ಎಂ. ಬಾಲಕೃಷ್ಣ, ಕಾರ್ಮಿಕ ಅಧಿಕಾರಿಗಳು, ಉಡುಪಿ.
– ವಿಲ್ಮಾ, ಕಾರ್ಮಿಕ ಅಧಿಕಾರಿಗಳು, ದ.ಕ.

8 ಸಾವಿರ ಕೋ.ರೂ. ಅನುದಾನ
ಕಾರ್ಮಿಕರ ಯೋಗಕ್ಷೇಮಕ್ಕಾಗಿ 10 ಲ.ರೂ.ಗಿಂತ ಹೆಚ್ಚಿನ ಮೊತ್ತದಲ್ಲಿ ನಿರ್ಮಾಣ ಮಾಡುವ ಕಟ್ಟಡದ ಮಾಲಕರಿಂದ ಸ್ಥಳೀಯಾಡಳಿತ ಶೇ.1ರಷ್ಟು ತೆರಿಗೆಯನ್ನು ಸಂಗ್ರಹಿಸಿ ಇಲಾಖೆ ಖಾತೆಗೆ ಜಮೆ ಮಾಡುತ್ತದೆ. ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಒಟ್ಟು 8 ಸಾವಿರ ಕೋ.ರೂ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next