Advertisement

ನರೇಗಾದಡಿ ಶಾಲಾ ಕಾಂಪೌಂಡ್‌ ನಿರ್ಮಿಸಿ

10:17 AM Jun 29, 2019 | Team Udayavani |

ಕೊಪ್ಪಳ: ನರೇಗಾದಡಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳ, ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಜಿಪಂ ಅಧ್ಯಕ್ಷ ಎಚ್.ವಿಶ್ವನಾಥರೆಡ್ಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಪಂ ಮಾಸಿಕ ಕೆಡಿಪಿ (20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರೇಗಾದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ಅಂಗನವಾಡಿ ಕೇಂದ್ರಗಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲೆಗಳ ಕಾಂಪೌಂಡ್‌ ನಿರ್ಮಾಣ ಮಾಡಬಹುದು. ಈ ಕುರಿತು ಜಿಪಂ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಂಪೌಂಡ್‌ ನಿರ್ಮಾಣ ಅಗತ್ಯವಿರುವ ಅಂಗನಾಡಿ ಮತ್ತು ಶಾಲೆಗಳ ಮಾಹಿತಿ ಒದಗಿಸುವಂತೆ ಸಿಡಿಪಿಒ ಹಾಗೂ ಡಿಡಿಪಿಐ ಕ್ರಮ ವಹಿಸಬೇಕು. ಜಿಪಂನಿಂದ ಸ್ವಚ್ಛಮೇವ ಜಯತೆ ಅಭಿಯಾನವನ್ನು ಏರ್ಪಡಿಸಲಾಗಿದ್ದು, ಎಲ್ಲಾ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಸಬೇಕು. ತಾಲೂಕವಾರು ಕಾರ್ಯಕ್ರಮದ ಪಟ್ಟಿ ತಯಾರಿಸಿ, ಸ್ವಚ್ಛ ಮೇವ ಜಯತೆ ಕಾರ್ಯಕ್ರಮಗಳಲ್ಲಿ ಸಂಬಂಧಿಸಿದ ಜಿಪಂ, ತಾಪಂ ಸದಸ್ಯರನ್ನು ಆಹ್ವಾನಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮೀಣ ಭಾಗಗಳಲ್ಲಿ ಬಹುತೇಕ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿವೆ. ಆದರೆ ಕೆಲವೆಡೆ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿಲ್ಲ. ಇದರಿಂದ ಜನರಿಗೆ ತುಂಬು ಸಮಸ್ಯೆ ಉಂಟಾಗುತ್ತಿದೆ. ಶೀಘ್ರ ಚರಂಡಿಗಳನ್ನು ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ತೋಟಗಾರಿಕೆ ಇಲಾಖೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಕೆಲವು ಕಾರ್ಯಕ್ರಮಗಳನ್ನು ತಾಲೂಕ ಮಟ್ಟದಲ್ಲೂ ಹಮ್ಮಿಕೊಳ್ಳಬೇಕು. ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಮೂಡಿಸಬೇಕು. ಜಿಲ್ಲೆಯ ಹಲವು ರೈತರು ಕೃಷಿ ಹೊಂಡ ನಿರ್ಮಾಣ ಮಾಡಿದ್ದು, ಕೃಷಿ ಹೊಂಡದ ಪಕ್ಕದಲ್ಲಿ ನೆಡಲು ಒಬ್ಬ ರೈತರಿಗೆ ಕನಿಷ್ಟ ಎರಡು ಕರಿಬೇವು, ಲಿಂಬೆಯಂತಹ ಸಸಿಗಳನ್ನು ವಿತರಿಸಿ, ಪಶು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಜಾನುವಾರುಗಳು ಎಷ್ಟಿವೆ ಎಂಬ ಮಾಹಿತಿ ವರದಿಯನ್ನು ನೀಡಬೇಕು. ಜಾನುವಾರುಗಳ ಪಾಲನೆಗೆ ರೈತರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯ ರೈತರಿಗೆ ಸಿಗಬೇಕಾದರೇ ಕೆಎಂಎಫ್‌ ಮತ್ತು ಪಶು ಇಲಾಖೆ ಜಂಟಿಯಾಗಿ ರೈತರ ಬೆನ್ನಿಗೆ ನಿಲ್ಲುವಂತಹ ಕೆಲಸ ಮಾಡಬೇಕು. ಕುರಿ, ಆಡು, ದನ, ಎಮ್ಮೆ ಸಾಕಿರುವವರಿಗೆ ಸಹಕಾರ ಸಂಘ ಪ್ರಾರಂಭಿಸಲು ಅವರಿಗೆ ಪ್ರೋತ್ಸಾಹಿಸಬೇಕು. ಸಹಕಾರ ಸಂಘಗಳ ಉಪನಿಬಂಧಕರು ಸಹ ಸಹಕಾರ ನೀಡಬೇಕು ಎಂದರು.

ಜಿಪಂ ಸಿಇಒ ಆರ್‌.ಎಸ್‌. ಪೆದ್ದಪ್ಪಯ್ಯ ಮಾತನಾಡಿ, ಗ್ರಾಪಂನಿಂದ ಚರಂಡಿಗಳ ಪ್ರಾರಂಭಿಸಲು ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ನರೇಗಾದಡಿ ಗ್ರಾಮೀಣ ಪ್ರದೇಶಗಳಲ್ಲಿ ದನಗಳ ದೊಡ್ಡಿ ನಿರ್ಮಾಣ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಸೂಚನೆ ನೀಡಿದ್ದು, ದನಗಳ ದೊಡ್ಡಿ ನಿರ್ಮಾಣ ಮಾಡುವ ಗುರಿಯನ್ನು ನಿಗದಿ ಮಾಡುವಂತೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

Advertisement

ಜಿಪಂ ಉಪಕಾರ್ಯದರ್ಶಿ ಎನ್‌.ಕೆ. ತೊರವಿ ಮಾತನಾಡಿ, ಪಶು ಸಂಗೋಪನಾ ಇಲಾಖೆಗೆ ಬೇಕಾಗುವ ಅನುದಾನವನ್ನು ಜಿಪಂನಿಂದ ಒದಗಿಸಲಾಗುತ್ತಿದೆ. ಪಶು ಇಲಾಖೆಯ ಕಾರ್ಯಕ್ರಮಕ್ಕೆ ಯಾವುದೇ ಅನುದಾನ ಕೊರತೆಯಿಲ್ಲ. ಅವರು ತಮ್ಮ ಸಿಬ್ಬಂದಿಗಳಿಂದ ಸರಿಯಾದ ಕೆಲಸ ತೆಗೆದುಕೊಳ್ಳಬೇಕು. ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ, ತಮ್ಮ ಇಲಾಖೆಯ ಕಾರ್ಯಕ್ರಮಗಳ ಪ್ರಗತಿಯನ್ನು ತಿಳಿದುಕೊಳ್ಳಬಹುದು. ರೈತರಲ್ಲಿ, ಜನ ಸಾಮಾನ್ಯರಲ್ಲಿ ಪಶು ಇಲಾಖೆಯ ಸಹಾಯಧನ, ಇತ್ಯಾದಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ತೋಟಗಾರಿಕೆ ಮತ್ತು ಕೃಷಿ ಇಲಾಖೆ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಂದರು.

ಪಶುಸಂಗೋಪನೆ ಮತ್ತು ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ| ಬಸಯ್ಯ ಸಾಲಿ ಮಾತನಾಡಿ, 2018ರ ಅ. 1ರಿಂದ 20ನೇ ಜಾನುವಾರುಗಳ ಗಣತಿಯು ಜಿಲ್ಲಾದ್ಯಂತ ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಮುಕ್ತಾಯವಾಗಲಿದೆ. 19ನೇ ಗಣತಿಯ ಸಂಖ್ಯೆಗಿಂತಲೂ 20ನೇ ಗಣತಿಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಬಹುದಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರ ಹನುಮಂತಗೌಡ ಪಾಟೀಲ, ಜಿಪಂ ಯೋಜನಾ ನಿರ್ದೇಶಕ ರವಿ ಬಿಸರಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next