Advertisement

ಡಿಸ್ಕೌಂಟ್‍ನಲ್ಲಿ ಮನೆ ಕಟ್ಟಿ

08:55 PM Sep 29, 2019 | Team Udayavani |

ಇಂಧನ ಬೆಲೆ ಏರಿಕೆಯಾದರೆ- ಮನೆ ನಿರ್ಮಾಣದ ವಸ್ತುಗಳ ಬೆಲೆಯೂ ದುಬಾರಿ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಾವು ಮನೆ ಕಟ್ಟುವಾಗ ಕೆಲ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದ್ದರೆ, ಕೆಲವಾರು ಲಕ್ಷಗಳನ್ನು ಉಳಿತಾಯ ಮಾಡಬಹುದು.

Advertisement

ಮನೆ ಕಟ್ಟುವುದು ಎಲ್ಲ ಕಾಲದಲ್ಲೂ ದುಬಾರಿ ಸಂಗತಿಯೇ ಆದರೂ, ಕೆಲವೊಮ್ಮೆ ಅತಿ ಎನ್ನುವಷ್ಟು ಬೆಲೆ ಏರಿಕೆ ಆಗುತ್ತಿರುತ್ತದೆ. ಬೆಲೆಗಳು ಇದೇ ರೀತಿಯಲ್ಲಿ ಏರುತ್ತವೆ ಎಂದು ನಿಖರವಾಗಿ ಹೇಳಲು ಬಾರದಿದ್ದರೂ, ಕೆಲವೊಂದು ಅಂಶಗಳನ್ನು ಗಮನಿಸಿದರೆ ಬೆಲೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ನಿರ್ಧರಿಸಬಹುದು. ಕಟ್ಟಡ ಸಾಮಗ್ರಿಗಳಲ್ಲಿ ಬಹುಪಾಲು, ಇಂಧನಗಳ ಬೆಲೆ ಮೇಲೆ ಅವುಗಳ ಮೌಲ್ಯ ನಿರ್ಧಾರ ಆಗಿರುತ್ತದೆ, ಪೆಟ್ರೋಲ್‌- ಡೀಸೆಲ್‌ ಹಾಗೂ ಇತರೆ ಇಂಧನಗಳ ಬೆಲೆ ಏರಿಕೆ ಆದರೆ- ಮನೆ ನಿರ್ಮಾಣದ ವಸ್ತುಗಳ ಬೆಲೆಯೂ ದುಬಾರಿ ಆಗುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ, ನಾವು ಮನೆ ಕಟ್ಟುವಾಗ ಕೆಲ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದ್ದರೆ, ಕೆಲವಾರು ಲಕ್ಷಗಳನ್ನು ನಿರಾಯಾಸವಾಗಿ ಉಳಿತಾಯ ಮಾಡಬಹುದು.

ಬೆಲೆಗಳ ನಿಯಂತ್ರಣ: ಕೆಲವೊಂದು ಸಾಮಗ್ರಿಗಳ ಬೆಲೆ ದಿನವೂ ಏರುಪೇರು ಆಗುತ್ತಿರುತ್ತದೆ. ಇದೂ ಒಂದು ರೀತಿಯಲ್ಲಿ ತರಕಾರಿ ಬೆಲೆಗಳಂತೆಯೇ ಎಂದೆನಿಸಿಬಿಡುತ್ತದೆ. ತರಕಾರಿಯಂತೆಯೇ, ಎಷ್ಟು ಉತ್ಪಾದನೆ ಆಯಿತು? ಎಷ್ಟಕ್ಕೆ ಬೇಡಿಕೆ ಇದೆ? ಎನ್ನುವುದರ ಮೇಲೆ ಮರಳು, ಜೆಲ್ಲಿಕಲ್ಲು, ಇಟ್ಟಿಗೆ ಇತ್ಯಾದಿಗಳ ಬೆಲೆ ನಿರ್ಧಾರ ಆಗುತ್ತದೆ. ಇನ್ನು ನೀವು ಮರಳು ಜೆಲ್ಲಿಗಾಗಿ, ಬಝಾರ್‌ ಅಂದರೆ ಅವುಗಳು ನಿಲುಗಡೆ ಆಗಿ ಮಾರಾಟ ಆಗುವ “ಸ್ಟ್ಯಾಂಡ್‌’ ಗಳ ಬಳಿ ತೆರಳಿದರಂತೂ ಅದು ಒಂದು ರೀತಿಯಲ್ಲಿ ಹರಾಜಿನಂತೆಯೇ ಇರುತ್ತದೆ, ಸಾಕಷ್ಟು ಚೌಕಾಸಿಯೂ ನಡೆಯುತ್ತದೆ. ಹಾಗಾಗಿ ನಿಮ್ಮ ವ್ಯವಹಾರ ಜ್ಞಾನದ ಮೇಲೆ ಇಲ್ಲಿ ಹಣ ತೆರಬೇಕಾಗುತ್ತದೆ.

ಈ ಮಾದರಿಯಲ್ಲಿ ಹೆಚ್ಚು ಉಳಿತಾಯ ಇದೆ ಎಂದೆನಿಸಿದರೂ, ಹೆಚ್ಚು ವೇಳೆ ಹಾಗೂ ಅನಿರ್ದಿಷ್ಟ ಬೆಲೆ ಕೊಡಲು ತಯಾರಿರಬೇಕಾಗುತ್ತದೆ. ಇದರ ಬದಲು, ನೀವು ಒಬ್ಬ ಲಾರಿ ಮಾಲೀಕ- ಕ್ರಷರ್‌ನವರನ್ನು ಗೊತ್ತು ಮಾಡಿಕೊಂಡು, ಮನೆ ನಿರ್ಮಾಣದ ಕೆಲಸ ಮುಗಿಯುವವರೆಗೂ ಒಂದೇ ಬೆಲೆಗೆ ಸರಬರಾಜು ಮಾಡಬೇಕು ಎಂದು ಮಾತಾಡಿಕೊಂಡರೆ, ಬೆಲೆಯಲ್ಲಿ ಏರುಪೇರು ಆಗುವುದು ತಪ್ಪುತ್ತದೆ. ಆದರೆ, ಇವರ ಬೆಲೆ ಮಾರುಕಟ್ಟೆ ಬೆಲೆಗಿಂತ ಸ್ವಲ್ಪ ಹೆಚ್ಚಿರಬಹುದು, ಗುಣಮಟ್ಟದ ಬಗ್ಗೆ ಹೆಚ್ಚು ಖಾತರಿ ಇರುವುದರಿಂದ, ನಮಗೆ ಹೆಚ್ಚು ತಲೆ ಬಿಸಿ ಆಗುವುದಿಲ್ಲ. ಬೆಲೆಯೂ ನಿರ್ದಿಷ್ಟವಾಗುತ್ತದೆ.

ಅಮದಾಗುವ ಮರಮುಟ್ಟುಗಳು: ನಮ್ಮಲ್ಲಿನ ಬಹುತೇಕ ಕಾಡುಗಳನ್ನು ಕಡಿದು ಹಾಕಿರುವುದರಿಂದ, ದೇಸಿ ಮರಗಳು ಇನ್ನೂ ಕೆಲವಾರು ವರ್ಷ ಸಿಗುವುದಿಲ್ಲ. ಈಗ ಮಾರುಕಟ್ಟೆಯಲ್ಲಿ ಸಿಗುವ ಮರಗಳು ಬರ್ಮಾ, ಸಿಲೋನ್‌, ಆಫ್ರಿಕ, ಮಲೇಶಿಯ ಮುಂತಾದ ದೇಶಗಳಿಂದ ಆಮದಾಗುತ್ತಿದೆ. ಈ ಮರಗಳ ಬೆಲೆ, ಜಾಗತಿಕ ಮಾರುಕಟ್ಟೆಯ ಮೇಲೆ ನಿರ್ಧಾರ ಆಗಿರುತ್ತದೆ. ಎಲ್ಲೆಡೆ ಬೇಡಿಕೆ ಕುದುರಿದ್ದರೆ, ಭಾರತದಲ್ಲೂ ಬೆಲೆ ಏರುತ್ತದೆ. ಮುಖ್ಯವಾಗಿ, ಇವುಗಳ ಸಾಗಣೆಯಲ್ಲಿ ಇಂಧನದ ಬೆಲೆ ಮುಖ್ಯ ಆಗಿರುವುದರಿಂದ, ತೈಲ ಬೆಲೆ ಏರಿದರೆ, ಮರಮುಟ್ಟುಗಳ ಬೆಲೆಯೂ ಗಗನ ಮುಟ್ಟುತ್ತದೆ. ನೀವು ಮನೆ ಕಟ್ಟಲು ಶುರು ಮಾಡುವಾಗ ಇದ್ದ ಬೆಲೆ, ಮರಮುಟ್ಟುಗಳ ಅಧಿಕ ಬಳಕೆ ಆಗುವ ಹಂತ, ಅಂದರೆ ಕೊನೆಯ ಹಂತದಲ್ಲಿ ಇರುವುದಿಲ್ಲ. ಹಾಗಾಗಿ ನಿಮ್ಮಲ್ಲಿ ಮರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲು ಜಾಗ ಇದ್ದರೆ, ಹಣವನ್ನೂ ಹೊಂದಿಸಲು ಸಾಧ್ಯ.

Advertisement

ಆದರೆ- ಇಡೀ ಮನೆಗೆ ಬೇಕಾಗುವ ಮರವನ್ನು ಲೆಕ್ಕ ಮಾಡಿ ತಂದು ಜೋಡಿಸಿಕೊಳ್ಳಬಹುದು. ಇದರಿಂದ ನಿಮಗೆ ಕಡಿಮೆ ಬೆಲೆಗೆ ಮರ ಸಿಗುವುದರ ಜೊತೆಗೆ, ಅವು ಚೆನ್ನಾಗಿ ಸೀಸನ್‌ ಆಗಲೂ ಸಾಧ್ಯ ಆಗುತ್ತದೆ. ದೊಡ್ಡ ದೊಡ್ಡ ದಿಮ್ಮಿಗಳನ್ನು ದೂರದೇಶಗಳಿಂದ ಸಾಮಾನ್ಯವಾಗಿ ತೆರೆದ ಹಡಗುಗಳಲ್ಲೇ ತರಲಾಗುತ್ತದೆ. ಜೊತೆಗೆ ಅವುಗಳನ್ನು ಸಾಮಿಲ್‌ಗ‌ಳಲ್ಲೂ ಮಳೆಗೆ ತೆರೆದಂತೆಯೇ ಇಡಲಾಗಿರುತ್ತದೆ. ಹಾಗಾಗಿ ಅವುಗಳು ಸರಿಯಾಗಿ ಒಣಗಲು ಆಗಿರುವುದಿಲ್ಲ. ನಮಗೆ ಬೇಕಾದ ಅಳತೆಯಲ್ಲಿ ಕತ್ತರಿಸಿ, ನೆರಳಿನಲ್ಲಿ ಮಳೆ ತಾಗದಂತೆ, ಆದರೆ ಗಾಳಿ ಆಡುವಂತೆ ಶೇಖರಿಸಿ ಇಟ್ಟರೆ ಒಳ್ಳೆ ಗುಣಮಟ್ಟದ ಮರ ಕೆಲವೇ ತಿಂಗಳುಗಳಲ್ಲಿ ನಮ್ಮದಾಗುತ್ತದೆ.

ತಯಾರಿ ಇಲ್ಲದಿದ್ದರೆ ಬೆಲೆ ತೆರಬೇಕಾದೀತು: ಕೆಲವೊಮ್ಮೆ ಮನೆಯ ವಿವಿಧ ಹಂತಗಳನ್ನು ಸರಿಯಾಗಿ ನಿರ್ಧರಿಸದಿದ್ದರೆ, ಅವುಗಳಿಗೆ ಬೇಕಾದ ತಯಾರಿಯನ್ನು ಮೊದಲೇ ಮಾಡಿಕೊಳ್ಳದಿದ್ದರೆ, ಎಲ್ಲವೂ ಒಂದೇ ಸಾರಿಗೆ ಬಂದು ಧುತ್ತೆಂದು ಎದುರಿಗೆ ನಿಂತುಬಿಡುತ್ತವೆ. ಆಕಡೆ ಮುಂದೂಡಲೂ ಆಗದೆ, ಈ ಕಡೆ ದುಬಾರಿ ಬೆಲೆ ಕೊಡಲೂ ಆಗದೆ ಚಿಂತೆಗೀಡು ಮಾಡುತ್ತದೆ. ಆದುದರಿಂದ, ಮುಂದಿನ ಹೆಜ್ಜೆಗಳನ್ನು ಮೊದಲೇ ನಿರ್ಧರಿಸಿ, ಆಯಾ ಕಾಲಘಟ್ಟದ ಕಾರ್ಯ- ಕಾರ್ಮಿಕರನ್ನು ಗೊತ್ತುಮಾಡಿಕೊಳ್ಳಬೇಕು. ಕೆಲ ಒಳ್ಳೆಯ- ಶುಭ ಎನ್ನಲಾಗುವ ತಿಂಗಳುಗಳು ಮನೆ ಕಟ್ಟುವವರಿಗೆ ಅತಿ ದುಬಾರಿ ಆಗಿಬಿಡುತ್ತದೆ. ಹೇಳಿದ ವೇಳೆಗೆ ಕುಶಲಕರ್ಮಿಗಳು ಕೈಗೆ ಸಿಗುವುದಿಲ್ಲ, ಎಲ್ಲರೂ ಎಲ್ಲಾದರೂ ಗೃಹಪ್ರವೇಶ ಇಲ್ಲವೇ ಮತ್ತೂಂದಕ್ಕೆ ಗೊತ್ತಾಗಿ ಬಿಟ್ಟಿರುತ್ತಾರೆ.

ಹಾಗಾಗಿ, ದುಬಾರಿ ಕೂಲಿ ಕೊಟ್ಟು ಉಳಿಕೆ ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಇದನ್ನು ತಪ್ಪಿಸಲು, ಆದಷ್ಟೂ ಫಿನಿಶಿಂಗ್‌ ಕೆಲಸವನ್ನು ಮೊದಲೇ ನಿರ್ಧರಿಸಿ ಮುಗಿಸಿಬಿಡುವುದು ಒಳ್ಳೆಯದು. ಬಣ್ಣಬಳಿಯುವುದನ್ನು ಕೊನೆಗೇ ಮಾಡಬೇಕು ಎಂದೇನೂ ಇಲ್ಲ, ಉಜ್ಜುವುದು, ಪ್ರçಮರ್‌ ಪಟ್ಟಿನೋಡುವುದು, ಇತ್ಯಾದಿ ಮೊದಲೇ ಮಾಡಿಸಿದರೆ, ಮನೆಯ ಗೃಹಪ್ರವೇಶದ ನಂತರವೂ ಫೈನಲ್‌ ಬಣ್ಣ ಮಾಡಿಸಿಕೊಳ್ಳಬಹುದು. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿರುತ್ತದೆ. ನೀವು ಮನೆಗೆ ಕೊನೆಯ ಪದರ ಬಣ್ಣ ಮೊದಲೇ ಬಳಿಸಿದರೂ, ಅದೆಲ್ಲವೂ ಹೋಮ ಮತ್ತೂಂದರಲ್ಲಿ, ನೂರಾರು ಜನರ ಬರುವಿಕೆಯಲ್ಲಿ ಒಂದಷ್ಟು ಕಳೆಗುಂದುವ ಸಾಧ್ಯತೆ ಇದ್ದೇ ಇರುತ್ತದೆ.

ಲೆಕ್ಕಾಚಾರದಲ್ಲಿ ಮೋಸ ಹೋಗದಿರಿ: ದುಬಾರಿ ದಿನಗಳಲ್ಲೂ ವಸ್ತುಗಳನ್ನು ಸರಬರಾಜು ಮಾಡುವವರು ತಮ್ಮದೇ ಆದ ರೀತಿಯಲ್ಲಿ ಒಂದಷ್ಟು ಹಣ ಮಾಡಿಕೊಳ್ಳಲು ನೋಡುತ್ತಾರೆ. ಅದರಲ್ಲೂ ಅಮಾಯಕರು ಸಿಕ್ಕರೆ, ಸಹಜವಾಗೇ ಹೆಚ್ಚು ವಸೂಲಿಗೆ ಇಳಿದುಬಿಡುತ್ತಾರೆ. ಮಾರುಕಟ್ಟೆ ಅಂದರೆ ಪೈಪೋಟಿ ಇದ್ದೇ ಇರುವುದರಿಂದ, ಕಡಿಮೆ ಬೆಲೆ ಹೇಳಿ ಸರಬರಾಜಲ್ಲಿ, ಒಂದಷ್ಟು ಕಡಿಮೆ ಕೊಟ್ಟು ಹೆಚ್ಚುವರಿ ಲಾಭ ಸಂಪಾದಿಸಲು ನೋಡುತ್ತಾರೆ. ಹಾಗಾಗಿ ಮನೆ ಕಟ್ಟುವವರು ಒಂದಷ್ಟು ಪ್ರಾಥಮಿಕ ಲೆಕ್ಕಾಚಾರ ತಿಳಿದುಕೊಳ್ಳುವುದು ಅಗತ್ಯ. ಲಾರಿ ಮರಳನ್ನು ಸಿ.ಎಫ್.ಟಿ ಅಂದರೆ ಘನ ಅಡಿ ಲೆಕ್ಕದಲ್ಲಿ ಕೊಳ್ಳುವುದಿದ್ದರೆ, ಅಳತೆಯ ಬಗ್ಗೆ ಗಮನಿಸಿ. ಲಾರಿಯ ಉದ್ದ, ಅಗಲ ಹಾಗೂ ಎತ್ತರದ ಜೊತೆಗೆ, ಅದರ ಮೇಲೆ ಗೋಪುರದಂತೆ ಪೇರಿಸಿರುವ ಮರಳಿನ ಲೆಕ್ಕಚಾರ ಒಂದಷ್ಟು ತಲೆ ನೋವು ಕೊಡಬಹುದು.

ಟೇಪು ಹಿಡಿಯುವಾಗ ಕೆಲಸದವರು ಅರ್ಧಕ್ಕಿಂತ ಹೆಚ್ಚಿನ ಎತ್ತರದಲ್ಲಿ ಹಿಡಿಯಲು ನೋಡುತ್ತಾರೆ, ನಿಮಗೆ ಲಾರಿ ಮೇಲೆ ಹತ್ತಿ ನೋಡಲು ಆಗುವುದಿಲ್ಲ. ಹಾಗಾಗಿ ಯಾವುದು ಹೆಚ್ಚಾ ಕಡಿಮೆ ಆಗುವ ಸಾಧ್ಯತೆ ಇದೆಯೋ ಅದನ್ನು ಬಿಗಿ ಹಿಡಿದು ಲೆಕ್ಕ ಮಾಡಿ. ಹಾಗೆಯೇ, ಲಾರಿಗಳಲ್ಲಿ ಹೊರಗಿನಿಂದ ಕಾಣುವ ಮಟ್ಟಕ್ಕೆ ಅವರು ತುಂಬಿರುವುದಿಲ್ಲ. ಕೆಳಗಿನ “ಪ್ಲಾಟ್‌ ಫಾರಂ’ ಏರಿಸಿರುತ್ತಾರೆ, ಇದರಿಂದಾಗಿ, ನೂರಾರು ಘನ ಅಡಿ ಕಡಿಮೆ ಆಗಬಹುದು. ಹಾಗಾಗಿ, ಲಾರಿಗಳ ಅಳತೆ ಹೊರಗಿನಿಂದ ಅಳೆಯುವ ಬದಲು ಖಾಲಿ ಆದಮೇಲೆ, ಒಳಗಿನಿಂದ ಅಳೆಯುವುದು ಒಳ್ಳೆಯದು. ಆದರೆ, ಗೋಪುರದಂತೆ ಲೋಡು ಇದ್ದರೆ, ಆ ಭಾಗವನ್ನು ಬಾಡಿ ಮೇಲೆಯೇ ಅಳೆಯಬೇಕಾಗುತ್ತದೆ!

ಹೆಚ್ಚಿನ ಮಾಹಿತಿಗೆ: 9844132826

* ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next