Advertisement

ಕಲಾಪಕ್ಕೆ ಕಾಸ್‌ಗಂಜ್‌, ಗೋ ಮಸೂದೆ ಅಡ್ಡಿ

07:00 AM Feb 03, 2018 | Karthik A |

ಹೊಸದಿಲ್ಲಿ: ಉತ್ತರ ಪ್ರದೇಶದ ಕಾಸ್‌ಗಂಜ್‌ ಕೋಮು ಹಿಂಸಾಚಾರ ಮತ್ತು ಹೊಸದಿಲ್ಲಿಯಲ್ಲಿ ಅಕ್ರಮ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ ಶುಕ್ರವಾರ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಹೀಗಾಗಿ, ಬೆಳಗಿನ ಅವಧಿಯಲ್ಲಿ ಯಾವುದೇ ಕಲಾಪ ನಡೆಯಲಿಲ್ಲ. ಕಲಾಪ ಆರಂಭವಾದೊಡನೆ ಸಮಾಜವಾದಿ ಪಕ್ಷದ ಸಂಸದರು ಕಾಸ್‌ಗಂಜ್‌ ಹಿಂಸಾಚಾರವನ್ನು ಪ್ರಸ್ತಾವಿಸಿದರೆ, ರಾಜ್ಯಸಭೆಗೆ ಹೊಸತಾಗಿ ಆಯ್ಕೆಯಾದ ಆಪ್‌ನ ಮೂವರು ಸದಸ್ಯರು ಅಕ್ರಮ ಮಳಿಗೆಗಳ ವಿರುದ್ಧ ಕ್ರಮಕ್ಕೆ ಆಕ್ಷೇಪವೆತ್ತಿ ಸದನದ ಬಾವಿಗೆ ಇಳಿದು ಘೋಷಣೆ ಕೂಗಿದರು. ಸದನ ಸಮಾವೇಶಗೊಳ್ಳುತ್ತಲೇ ಆಂಧ್ರಪ್ರದೇಶದ ಕಾಂಗ್ರೆಸ್‌ ಸಂಸದ ಕೆ.ವಿ.ಪಿ. ರಾಮಚಂದ್ರ ರಾವ್‌ ‘ಆಂಧ್ರಕ್ಕೆ ಸಹಾಯ ನೀಡಿ’ ಎಂಬ ಫ‌ಲಕ ಹಿಡಿದು ಘೋಷಣೆ ಕೂಗಿದರು. ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ಗೆ ಪಕ್ಷದ ಸಂಸದರನ್ನು ಹಿಂದಕ್ಕೆ ಕರೆಸುವಂತೆ ಉಪಸಭಾಪತಿ ಪಿ.ಜೆ.ಕುರಿಯನ್‌ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಅವರು ಕಲಾಪ ಮುಂದೂಡಬೇಕಾಯಿತು.

Advertisement

ಗೋರಕ್ಷಣಾ ವಿಧೇಯಕ 2017ನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಶುಕ್ರವಾರ ಮೇಲ್ಮನೆಯಲ್ಲಿ ಮಂಡಿಸಿದರು. ಸದಸ್ಯರ ಖಾಸಗಿ ಮಸೂದೆಯಾಗಿರುವ ಅದರಲ್ಲಿ ಭಾರತದ್ದೇ ಆಗಿರುವ ಗೋವುಗಳ ವಧೆ ಮಾಡಿದರೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಇದೆ. ಆದರೆ ಕೇಂದ್ರ ಸರಕಾರ ವಿಧೇಯಕ ಹಿಂಪಡೆಯುವಂತೆ ಒತ್ತಾಯಿಸಿದ್ದರಿಂದ ಡಾ| ಸ್ವಾಮಿ ಅದನ್ನು ಹಿಂಪಡೆದುಕೊಂಡರು. ಆದರೂ ಈ ಮಸೂದೆಯ ಮೇಲೆ ಬರೋಬ್ಬರಿ 2 ಗಂಟೆ ಚರ್ಚೆ ನಡೆಯಿತು. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದವೂ ನಡೆಯಿತು. ಎಸ್‌ಪಿ ಸಂಸದ ಜಾವೇದ್‌ ಅಲಿ ಖಾನ್‌ ಮಾತನಾಡಿ, ಗೋವನ್ನು ಕೂಡಲೇ ರಾಷ್ಟ್ರ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು. ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಪ್ರಮುಖ ವಿಚಾರದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತ ಗೋಮಾಂಸ ಬಳಕೆ ಮಾಡುವ ರಾಷ್ಟ್ರಗಳ ಜತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ವಿ.ವಿಜಯಸಾಯಿ ರೆಡ್ಡಿ ಇತರ ಹಿಂದುಳಿದ ವರ್ಗದವರಿಗಾಗಿ ಶಾಸಕಾಂಗ, ಶಿಕ್ಷಣ ಸಂಸ್ಥೆಗಳಲ್ಲಿ, ಸರಕಾರಿ ಉದ್ಯೋಗಗಳಲ್ಲಿ ಅವರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಧ್ಯಪ್ರವೇಶವಿಲ್ಲ
ಈ ನಡುವೆ, ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಮತ್ತು ಇತರ ಹಿರಿಯ ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸುವುದಿಲ್ಲ  ಎಂದು ಕೇಂದ್ರ ಕಾನೂನು ಖಾತೆ ಸಹಾಯಕ ಸಚಿವ ಪಿ.ಪಿ.ಚೌಧರಿ ಹೇಳಿದ್ದಾರೆ. ಈ ಬೆಳವಣಿಗೆಯಿಂದ ನ್ಯಾಯಾಂಗದ ಮೇಲೆ ಯಾವುದೇ ಋಣಾತ್ಮಕ ಪ್ರಭಾವ ಬೀರಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next