Advertisement

ಕೇಂದ್ರ ಬಜೆಟ್ ಬಗ್ಗೆ ಬೆಂಗಳೂರಿಗರ ನಿರೀಕ್ಷೆಗಳೇನು ಗೊತ್ತಾ?..

09:59 AM Jan 28, 2020 | Suhan S |

ಬೆಂಗಳೂರು ಉಪನಗರ ರೈಲು ಯೋಜನೆ ವಿಚಾರದಲ್ಲಿ ಕೇಂದ್ರದ ನಡೆಯೇ ನಿಗೂಢವಾಗಿದೆ. ಒಂದೆಡೆ ಬಜೆಟ್‌ನಲ್ಲಿ ಕಳೆದೆರಡು ವರ್ಷಗಳಿಂದ ಇದಕ್ಕಾಗಿ ಅನುದಾನ ಮೀಸಲಿಡುತ್ತಿದೆ. ಮತ್ತೂಂದೆಡೆ ಆ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಸಚಿವ ಸಂಪುಟದ ಅನುಮೋದನೆ ನೀಡುತ್ತಿಲ್ಲ. ಈ ಮಧ್ಯೆಯೇ ಕೇಂದ್ರದಿಂದ ಇನ್ನೊಂದು ಬಜೆಟ್‌ ಮಂಡನೆ (ಫೆ. 1) ಆಗುತ್ತಿದ್ದು, ನಿರೀಕ್ಷೆಗಳು ಮತ್ತೆ ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಗೊಂದಲಕ್ಕೆ ತೆರೆಬೀಳಬಹುದು ಎಂದು ಜನ ಕಾತುರರಾಗಿದ್ದಾರೆ.

Advertisement

ಈ ಕಾತುರಕ್ಕೆ ಸಕಾರಣವೂ ಇದೆ. ಅದು- ಬಜೆಟ್‌ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇವರಿಬ್ಬರೂ “ನಮ್ಮವರೇ’ ಎಂಬ ಅಭಿಮಾನ. ಈ ಅಂಶವು ಬೆಂಗಳೂರಿಗರ ನಿರೀಕ್ಷೆಯನ್ನು ಸಹಜವಾಗಿ ಇಮ್ಮಡಿಗೊಳಿಸಿದೆ. ಹಾಗಾಗಿ, ಸಂಪುಟದಲ್ಲಿ ಈ ಯೋಜನೆ ಅನುಮೋದನೆ ಆಗಿಲ್ಲದಿದ್ದರೂ ಕಳೆದೆರಡು ವರ್ಷಗಳಿಗಿಂತ ಹೆಚ್ಚಿನ ಅನುದಾನ “ನಮ್ಮವರಿಂದ’ದಕ್ಕಬಹುದು. ಜತೆಗೆ “ಆರ್ಥಿಕ ವ್ಯವಹಾರಗಳ ಮೇಲಿನ ಸಚಿವಸಂಪುಟ (ಸಿಸಿಎ)ದ ಅನುಮೋದನೆ ದೊರೆಯಲಿದೆ’ ಎಂದು ಹಣಕಾಸು ಸಚಿವರು ಭರವಸೆಯಾದರೂ ನೀಡಬಹುದು ಎಂದು ಜನ ಎದುರುನೋಡುತ್ತಿದ್ದಾರೆ.

“ಯಾವೊಂದು ಯೋಜನೆ ಘೋಷಿಸಿದಾಗ, ಅದರ ಸಾಧಕ-ಬಾಧಕಗಳ ಅಧ್ಯಯನ ಮತ್ತಿತರ ಕೆಲಸ ಕಾರ್ಯಗಳಿಗೆ ಮುಂಗಡ ಹಣ (ಟೋಕನ್‌ ಮೊತ್ತ)ವನ್ನು ಸರ್ಕಾರ ನೀಡುತ್ತದೆ. ಅದೇ ರೀತಿ, ಉಪನಗರ ರೈಲಿಗೆ ಕಳೆದೆರಡು ವರ್ಷ ನೀಡಿತ್ತು. ಬರುವ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ. ಇದಲ್ಲದೆ ಚಾಲ್ತಿಯಲ್ಲಿರುವ ಹಲವು ಯೋಜನೆಗಳಿದ್ದು, ಅವುಗಳ ತ್ವರಿತ ಪ್ರಗತಿಗೂ ಆದ್ಯತೆ ನೀಡಬಹುದು’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಒಂದು ವೇಳೆ ಉಪನಗರ ರೈಲು ಯೋಜನೆಗೆ ಸಂಬಂಧಿಸಿದ ನಿರೀಕ್ಷೆ ಸಾಕಾರಗೊಂಡರೆ ನಗರದ ಸಂಚಾರದಟ್ಟಣೆ ಸಮಸ್ಯೆಗೆ ದೊಡ್ಡ “ರಿಲೀಫ್’ ಸಿಕ್ಕಂತಾಗುತ್ತದೆ. ಈಗಾಗಲೇ ಯೋಜನೆಗೆ ಪೂರಕವಾದ ಬೆಳವಣಿಗೆಗಳಿಗೆ ಸದ್ದಿಲ್ಲದೆ ಚಾಲನೆ ಸಿಕ್ಕಿದೆ. ಈ ಪೈಕಿ ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ರಚನೆಯಾಗಿದೆ. ದೇವನಹಳ್ಳಿ ಮಾರ್ಗದಲ್ಲಿ ಬರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಾಲ್ಟ್ ಸ್ಟೇಷನ್‌ ಬರುತ್ತಿದೆ. ವಿಮಾನ ನಿಲ್ದಾಣದ ಒಳಗೆ ಸುರಂಗದಲ್ಲಿ ರೈಲು ಕೊಂಡೊಯ್ಯಲು ಸಿದ್ಧತೆ ನಡೆಯುತ್ತಿದೆ.

ಬೆಂಗಳೂರು-ವೈಟ್‌ ಫೀಲ್ಡ್‌, ಬೆಂಗಳೂರು- ತುಮಕೂರು, ಬೆಂಗಳೂರು-ರಾಮನಗರ ಸೇರಿದಂತೆ ಹಲವೆಡೆ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಬೆನ್ನಲ್ಲೇ ರಾಜ್ಯ ಸರ್ಕಾರ ಇದಕ್ಕೆ ನೆರವು ನೀಡುವ ಉತ್ಸಾಹ ತೋರಿದೆ. ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ದೊರಕಿದೆ.

ಪೂರ್ವ ಸಿದ್ಧತಾ ಕ್ರಮ ಅಗತ್ಯ : ಉಪನಗರ ರೈಲು ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯೇ? ಉತ್ತರ- ಇಲ್ಲ. ಸದ್ಯ ಬರೀ ಹಾಲ್ಟ್ ಸ್ಟೇಷನ್‌, ಯೋಜನಾ ವರದಿ ಸಿದ್ಧತೆ, ಉಪನಗರಗಳಿಗೆ ರೈಲು ಓಡಿಸುವ ಪ್ರಯೋಗಗಳಿಗೇ ಇಲಾಖೆ ಪ್ರಯತ್ನಗಳು ಸೀಮಿತವಾಗಿವೆ. ಇವುಗಳಿಗಿಂತ ಮುಖ್ಯವಾಗಿ ವಿದ್ಯುದ್ದೀಕರಣ, ಆಟೋಮೆಟಿಕ್‌ ಸಿಗ್ನಲ್‌ಗಳು, ಲೆವೆಲ್‌ ಕ್ರಾಸಿಂಗ್‌ ತೆರವು, ಕೋಚಿಂಗ್‌ ಟರ್ಮಿನಲ್‌, ಜೋಡಿ ಮಾರ್ಗಗಳು ಸೇರಿದಂತೆ ಹಲವಾರು ಪೂರ್ವಸಿದ್ಧತಾ ಕ್ರಮಗಳು ಆಗಬೇಕಾಗಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು ಮತ್ತು ತಜ್ಞರು. ಹೀಗೆ ಉಪನಗರ ರೈಲಿನ ಜತೆಗೆ ಮತ್ತಿತರ ಪೂರಕ ಚಟುವಟಿಕೆಗಳೂ ಒಟ್ಟೊಟ್ಟಿಗೆ ನಡೆದರೆ, ಸಮಯ ಉಳಿತಾಯವಾಗುತ್ತದೆ. ಕೇವಲ ಆಟೋಮೆಟಿಕ್‌ ಸಿಗ್ನಲ್‌ ಅಳವಡಿಕೆಯಿಂದಲೇ ರೈಲುಗಳ ವೇಗ ಒಂದೂವರೆಪಟ್ಟು ಹೆಚ್ಚಾಗುತ್ತದೆ. ಆಗ, ಹೆಚ್ಚು ರೈಲುಗಳು ಕಾರ್ಯಾಚರಣೆ ಸಾಧ್ಯವಾಗುತ್ತದೆ. ಬಜೆಟ್‌ನಲ್ಲಿ ಇಂತಹ ಸಣ್ಣ-ಪುಟ್ಟ ಕ್ರಮಗಳಿಗೆ ಒತ್ತುನೀಡಬೇಕು ಎಂದು ಪ್ರಜಾರಾಗ್‌ ಸಂಸ್ಥೆಯ ಸಂಜೀವ್‌ ದ್ಯಾಮಣ್ಣವರ ಒತ್ತಾಯಿಸಿದ್ದಾರೆ.

Advertisement

ಭವಿಷ್ಯದ ದೃಷ್ಟಿಯಿಂದ ಚಿಕ್ಕಜಾಲದಲ್ಲಿ ಮತ್ತೂಂದು ಟರ್ಮಿನಲ್‌ ಘೋಷಿಸಬೇಕು. ಹಾಗೂ ಇದಕ್ಕಾಗಿ ಅನುದಾನ ಮೀಸಲಿಡಬೇಕು. ಇದರಿಂದ ಹೊರಭಾಗದಲ್ಲಿ ರೈಲುಗಳ ಕಾಯುವಿಕೆ ತಪ್ಪುತ್ತದೆ. ಪ್ರಯಾಣಿಕರಿಗೂ ಸಮಯ ಉಳಿತಾಯವಾಗಲಿದೆ ಎಂದು ರೈಲ್ವೆ ಹೋರಾಟಗಾರ ರಘೋತ್ತಮ್‌ ರಾವ್‌ ಆಗ್ರಹಿಸುತ್ತಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿ ಹಾಲ್ಟ್ ಸ್ಟೇಷನ್‌ ನಿರ್ಮಿಸಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಆ ಮಾರ್ಗದ ವಿದ್ಯುದ್ದೀಕರಣವೂ ಆಗಬೇಕು. ಗಂಟೆಗೊಂದು ರೈಲು ಸೇವೆ ಅಲ್ಲಿ ಕಲ್ಪಿಸಬೇಕು. ಇದು ಬಜೆಟ್‌ನ ಪ್ರಮುಖ ನಿರೀಕ್ಷೆಯಲ್ಲೊಂದು ಎಂದು ಕೃಷ್ಣಪ್ರಸಾದ್‌ ತಿಳಿಸುತ್ತಾರೆ.

ಟೇಕ್‌ಆಫ್ ಆಗದ ಯೋಜನೆ? :  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್‌ಮೆಂಟ್‌ ನಿಲ್ದಾಣ ಹಾಗೂ ಯಶವಂತಪುರ ನಿಲ್ದಾಣಗಳನ್ನು ಆಧುನೀಕರಣ ಗೊಳಿಸಿ, ಮರುವಿನ್ಯಾಸಗೊಳಿಸುವುದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ. ಇದಲ್ಲದೆ, ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ಹಲವು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಇನ್ನೂ ಟೇಕ್‌ಆಫ್ ಆಗಿಲ್ಲ.

ಬರಲಿ ಎಮು ರೈಲು : ಡೆಮು, ಮೆಮು ಬಳಿಕ ಈಗ ಎಮು (ಎಲೆಕ್ಟ್ರಿಕ್‌ ಮೇನ್‌ಲೈನ್‌ ಯೂನಿಟ್‌) ಬರಲಿ! ಡೆಮು ರೈಲುಗಳು ಡೀಸೆಲ್‌ ಆಧಾರಿತವಾಗಿದ್ದು, ಈ ಮಾದರಿಯ ರೈಲುಗಳು ಈಗಾಗಲೇ ನಿರುಪಯುಕ್ತ ಆಗುತ್ತಿವೆ. ಅವುಗಳ ಜಾಗವನ್ನು ಮೆಮು ರೈಲು (ಮೇನ್‌ಲೈನ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯೂನಿಟ್‌)ಗಳು ತುಂಬುತ್ತಿವೆ. ಬೆಂಗಳೂರಿನಂಥ ಮಹಾನಗರಕ್ಕೆ ಭವಿಷ್ಯದಲ್ಲಿ ಎಮು ರೈಲುಗಳನ್ನು ಪರಿಚಯಿಸುವ ಅಗತ್ಯವಿದೆ. ಯಾಕೆಂದರೆ, ಎಮು ರೈಲುಗಳ ವಿನ್ಯಾಸ ತುಸು ಭಿನ್ನವಾಗಿದ್ದು, ಮೆಮು ರೈಲುಗಳಿಗೆ ಹೋಲಿಸಿದರೆ ಪ್ರಯಾಣಿಕರನ್ನು ಕೊಂಡೊಯ್ಯುವ ಶೇ. 40 ಅಧಿಕ. ಅಲ್ಲದೆ, ಪ್ರವೇಶ ದ್ವಾರಗಳು ಅಗಲವಾಗಿರುತ್ತವೆ. ಆದರೆ, ಈ ಮಾದರಿಯ ರೈಲುಗಳಿಗೆ ಮೆಟ್ಟಿಲು ಇರುವುದಿಲ್ಲ. ಮೆಟ್ರೋದಂತೆಯೇ ನೇರ ಪ್ರವೇಶವಿರುತ್ತದೆ. ಹಾಗಾಗಿ, ಅದಕ್ಕೆ ಅನುಗುಣವಾಗಿ ಪ್ಲಾಟ್‌ ಫಾರಂಗಳ ರಚಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

 

ನಿರೀಕ್ಷೆಗಳೇನು?: 

  • ಬೆಂಗಳೂರು ನಗರದಿಂದ ಮಂಡ್ಯ, ತುಮಕೂರು, ವೈಟ್‌ ಪೀಲ್ಡ್- ಬಂಗಾರಪೇಟೆ ಮಾರ್ಗಗಳ ನಡುವೆ ಆಟೋಮೆಟಿಕ್‌ ಸಿಗ್ನಲ್‌ ವ್ಯವಸ್ಥೆಗೆ ಅನುಮೋದನೆ.
  • 130 ಕೋಟಿ ರೂ. ವೆಚ್ಚದಲ್ಲಿ ಯಶವಂತಪುರ ಕೋಚಿಂಗ್‌ ಟರ್ಮಿನಲ್‌ ಪೂರ್ಣಗೊಳ್ಳಬೇಕು (ಹಲವು ಬಾರಿ ಗಡುವು ವಿಸ್ತರಣೆ ಆಗಿದೆ).
  • 23 ಕಿ.ಮೀ. ಉದ್ದದ ಯಲಹಂಕ-ದೇವನಹಳ್ಳಿ ಮಾರ್ಗವನ್ನು 20 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣ.
  • ಚಿಕ್ಕಬಾಣಾವರ-ಹಾಸನ ಜೋಡಿ ಮಾರ್ಗ ನಿರ್ಮಾಣ.
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮರುವಿನ್ಯಾಸಗೊಳಿಸಿ, ರೈಲುಗಳ ನಿಲುಗಡೆ ಸಾಮರ್ಥ್ಯ ವೃದ್ಧಿಸಬೇಕು.
  • ನಗರದಲ್ಲಿ 30ಕ್ಕೂ ಅಧಿಕ ಲೆವೆಲ್‌ ಕ್ರಾಸಿಂಗ್‌ಗಳಿದ್ದು, ಅವುಗಳ ತೆರವಿಗೆ ಕ್ರಮ.

 

 

-ವಿಜಯಕುಮಾರ್‌ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next