Advertisement

ಆದಾಯವಿಲ್ಲದಿದ್ದರೂ ಅಬ್ಬರದ ಬಜೆಟ್‌

06:27 AM Feb 21, 2019 | |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಮಂಡಿಸಿದ 2019-20ನೇ ಸಾಲಿನ ಬಿಬಿಎಂಪಿ ಬಜೆಟ್‌ ಅವಾಸ್ತವಿಕ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ.

Advertisement

ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಜೆಟ್‌ ಮಂಡನೆ ದಿನ ರಾಜ್ಯ ಸರ್ಕಾರದಿಂದ ಪತ್ರ ಬಂದಿದ್ದು, ಆದಾಯಕ್ಕೆ ತಕ್ಕಂತೆ ಬಜೆಟ್‌ ಮಂಡಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ನೀವು 5 ಸಾವಿರ ಕೋಟಿ ರೂ. ಆದಾಯ ಇಟ್ಟುಕೊಂಡು 10,688 ಕೋಟಿ ರೂ. ಬಜೆಟ್‌
ಮಂಡಿಸಿದ್ದೀರಿ. ಹೀಗಾಗಿ, ಇದು ಅವಾಸ್ತವಿಕ ಬಜೆಟ್‌ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.

2018-19ನೇ ಸಾಲಿನ ಆಯವ್ಯಯ ಕಾರ್ಯ ನಿರ್ವಹಣಾ ವರದಿಯಂತೆ ಬಜೆಟ್‌ ಕಾರ್ಯಕ್ರಮಗಳು ಶೇ.10ರಷ್ಟೂ ಅನುಷ್ಠಾನಗೊಂಡಿಲ್ಲ. ಆದರೆ, ಜಾರಿಯಾಗದ ಯೋಜನೆಗಳನ್ನು ಜಾರಿಯಾಗಿವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.

 ಜಾಬ್‌ಕೋಡ್‌ ಬಜೆಟ್‌: ಕಳೆದ ಸಾಲಿನ ಬಜೆಟ್‌ನ ಯಾವುದೇ ಯೋಜನೆ ಅನುಷ್ಠಾನಗೊಳಿಸಿದೆ ಕೇವಲ ಜಾಬ್‌ ಸಂಖ್ಯೆ ನೀಡುವ ಮೂಲಕ 2018-19ನೇ ಸಾಲಿನ ಬಜೆಟ್‌ನ್ನು “ಜಾಬ್‌ಕೋಡ್‌ ಬಜೆಟ್‌’ ಮಾಡಿದ್ದಾರೆ. ಜತೆಗೆ ಸೈನಿಕರಿಗೆ ಆಸ್ತಿ ತೆರಿಗೆ ವಿನಾಯಿತಿ, ಟೋಟಲ್‌ ಸ್ಟೇಷನ್‌ ಸರ್ವೆ, ಸ್ಯಾನಿಟರಿ ಇನ್ಸಿನೇಟರ್‌ ನಂತಹ ಸಣ್ಣ ಯೋಜನೆಗಳನ್ನು ಜಾರಿಗೊಳಿಸಲೂ ಮೈತ್ರಿ ಆಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಪದ್ಮನಾಭರೆಡ್ಡಿ, ತರಾಟೆಗೆ ತೆಗೆದುಕೊಂಡರು. ಬರುವ ಅನುದಾನದ ಮೇಲೆ 10,688 ಕೋಟಿ ರೂ. ಬಜೆಟ್‌ ಮಂಡಿಸಲಾಗಿದೆ. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಿಗೆ 2,954 ಕೋಟಿ ರೂ. ಚಾಲ್ತಿ ಕಾಮಗಾರಿಗಳಿಗೆ 4,167.87 ಕೋಟಿ ರೂ., ಕಾರ್ಯಾದೇಶ ನೀಡಿ ಕಾಮಗಾರಿ ಆರಂಭಿಸಬೇಕಿರುವ ಯೋಜನೆಗಳಿಗೆ 728.10 ಕೋಟಿ ರೂ., ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 1,996.08 ಕೋಟಿ ರೂ. ಮೀಸಲಿಡಲಾಗಿದೆ.

ಇದರೊಂದಿಗೆ ಕಾಮಗಾರಿ ಸಂಖ್ಯೆ ನೀಡಿ ಟೆಂಡರ್‌ ಕರೆಯಬೇಕಿರುವ ಕಾಮಗಾರಿಗಳಿಗೆ 1,801.28 ಕೋಟಿ, ಆಡಳಿತಾತ್ಮಕ ಆದೇಶ ನೀಡಿ ಕಾಮಗಾರಿ ಸಂಖ್ಯೆ ನೀಡಬೇಕಿರುವ ಯೋಜನೆಗಳಿಗೆ 1,193.66 ಕೋಟಿ ರೂ. ಹಾಗೂ 2019-20ನೇ ಸಾಲಿಗೆ ಹೊಸ ಕಾಮಗಾರಿಗಳಿಗೆ 6886.75 ಕೋಟಿ ರೂ. ಸೇರಿ ಒಟ್ಟಾರೆ 19,728.57 ಕೋಟಿ ರೂ. ಅಗತ್ಯವಿರುವಾಗ 10,688 ಕೋಟಿ ರೂ.ಗಳ ಬಜೆಟ್‌ ಮಂಡಿಸಿರುವುದು ಅವಾಸ್ತವ ಎಂದು ಹೇಳಿದರು.

Advertisement

ಅವರದು ಮನ್‌ ಕೀ ಬಾತ್‌, ನಮ್ಮದು ಕಾಮ್‌ ಕೀ ಬಾತ್‌ ಬಜೆಟ್‌ ಮೇಲಿನ ಚರ್ಚೆಯ ಸಭೆಯಲ್ಲಿ ವಿಷಯ ಮಂಡಿಸಿದ ಆಡಳಿತ ಪಕ್ಷ ನಾಯಕ ಅಬ್ದುಲ್‌ ವಾಜಿದ್‌, 2019-20ನೇ ಸಾಲಿನ ಬಜೆಟ್‌ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಜತೆಗೆ ಕಳೆದ ಸಾಲಿನಲ್ಲಿ ನಾವು ಘೋಷಿಸಿದ ಯೋಜನೆಗಳ ಪೈಕಿ ಶೇ.73ರಷ್ಟು ಅನುಷ್ಠಾನಗೊಂಡಿವೆ. ಕಾಂಗ್ರೆಸ್‌-ಜೆಡಿಎಸ್‌ ಆಡಳಿತ ಬರುವ ಮೊದಲು ಶೇ.39-40ರಷ್ಟು ಮಾತ್ರ ಬಜೆಟ್‌ ಜಾರಿಯಾಗುತ್ತಿತ್ತು ಎಂದು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದರು. ಬಜೆಟ್‌ನಲ್ಲಿ ಮಹಾಲಕ್ಷ್ಮೀ, ಅನ್ನಪೂರ್ಣೇಶ್ವರೀ, ಆರೋಗ್ಯ ಕವಚ ಸೇರಿದಂತೆ ಹತ್ತಾರು ಯೋಜನೆಗಳನ್ನು ಮಹಿಳೆಯರಿಗಾಗಿ ಘೋಷಿಸಿದ್ದೇವೆ. ಆದರೆ, ಮಹಿಳೆಯೊಬ್ಬರು ಮಂಡಿಸುತ್ತಿದ್ದ ಬಜೆಟ್‌ಗೆ ಅಡ್ಡಿಪಡಿಸುವ ಮೂಲಕ ಮಹಿಳೆಯರ ಬಗ್ಗೆ  ನಗೆಷ್ಟು ಗೌರವವಿದೆ ಎಂದು ಬಿಜೆಪಿ ಸಾಬೀತುಪಡಿಸಿದೆ. ಕೆಲವರು ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಾರೆ. ಆದರೆ, ನಾವು ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸಿದ್ದೇವೆ. ಅವರದು “ಮನ್‌ ಕೀ ಬಾತ್‌’, ನಮ್ಮದು “ಕಾಮ್‌ ಕೀ ಬಾತ್‌’ ಎಂದು ಪ್ರತಿಪಕ್ಷದ ಸದಸ್ಯರಿಗೆ ಟಾಂಗ್‌ ನೀಡಿದರು.

ಅವರ ಶಾಪ ತಟ್ಟುತ್ತೆ
ಕಳೆದ ವರ್ಷ ಕಾರ್ಯ ನಿರ್ವಹಣಾ ವರದಿಯ ಕುರಿತು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬಜೆಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದ್ದ 1 ಕೋಟಿ ರೂ.ಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಬಳಸಿಲ್ಲ ಎಂದು ದೂರಿ ಆಡಳಿತ ಪಕ್ಷದ ಕಡೆಗೆ ತಿರುಗಿ ಚಪ್ಪಾಳೆ
ಹೊಡೆದು, ಅವರ ಶಾಪ ನಿಮಗೆ ತಟ್ಟುತ್ತದೆ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. 

ಚರ್ಚೆಗೆ ನಿರಾಸಕ್ತಿ
ಪಾಲಿಕೆ ಬಜೆಟ್‌ ಮೇಲಿನ ಚರ್ಚೆಯ ಮೊದಲ ದಿನ ಬಹುತೇಕ ಪಾಲಿಕೆ ಸದಸ್ಯರು ಸಭೆಗೆ ಗೈರಾಗಿದ್ದರು. ಮೇಯರ್‌ ಗಂಗಾಂಬಿಕೆ, ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸಭೆ ಬೆಳಗ್ಗೆ 10.30ರ ಬದಲು 11.45ಕ್ಕೆ ಶುರುವಾಯಿತು. ಈ ವೇಳೆ ಮೇಯರ್‌, ಉಪ ಮೇಯರ್‌
ಹೊರತುಪಡಿಸಿ ಕೇವಲ 40 ಸದಸ್ಯರು ಹಾಜರಿದ್ದರು. ಇನ್ನು ಮಧ್ಯಾಹ್ನದ ನಂತರ ಕಾಂಗ್ರೆಸ್‌ನ 15, ಬಿಜೆಪಿಯ 9 ಹಾಗೂ ಜೆಡಿಎಸ್‌ನ 4 ಸದಸ್ಯರು ಮಾತ್ರ ಹಾಜರಿದ್ದರು.

ರುಚಿಸದ ಇಂದಿರಾ ಕ್ಯಾಂಟೀನ್‌ ಊಟ
ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಆಹಾರ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಳೆದ ನಾಲ್ಕು ತಿಂಗಳಿಂದ ಬಿಬಿಎಂಪಿ ಸಾಮಾನ್ಯ ಸಭೆಗೆ ಪೂರೈಕೆಯಾಗುತ್ತಿದ್ದ ಕ್ಯಾಂಟೀನ್‌ ಊಟ ಸ್ಥಗಿತಗೊಂಡಿದ್ದು, ಬೇರೆಡೆಯಿಂದ ಸಸ್ಯಹಾರ, ಮಾಂಸಹಾರ ಪೂರೈಕೆಯಾಗಿದೆ. ಪಾಲಿಕೆ ಬಜೆಟ್‌ ಮೇಲೆ ಬುಧವಾರದಿಂದ ಚರ್ಚೆ ಆರಂಭವಾಗಿದ್ದು, ಮಧ್ಯಾಹ್ನದ ಊಟಕ್ಕೆ ಇಂದಿರಾ
ಕ್ಯಾಂಟೀನ್‌ ಊಟದ ಬದಲಿಗೆ ಈ ಹಿಂದಿನಂತೆ ಬೇರೆಡೆಯಿಂದ ಊಟ ತರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಇಷ್ಟು ದಿನ ಖಾಲಿ ಹೊಡೆಯುತ್ತಿದ್ದ ಕೌನ್ಸಿಲ್‌ ಕ್ಯಾಂಟೀನ್‌ ಬುಧವಾರ ತುಂಬಿತ್ತು. 2018ರ ಅಕ್ಟೋಬರ್‌ನಿಂದ ಕೌನ್ಸಿಲ್‌ಗೆ ಇಂದಿರಾ ಕ್ಯಾಂಟೀನ್‌ ನಿಂದ ಆಹಾರ ಪೂರೈಕೆಯಾಗುತ್ತಿತ್ತು. ಅದರೆ,
ಮೇಯರ್‌, ಆಡಳಿತ ಪಕ್ಷ ನಾಯಕ ಹಾಗೂ ಆಯುಕ್ತರನ್ನು ಹೊರತುಪಡಿಸಿ ಯಾರೂ ಆ ಊಟ ಸೇವಿಸುತ್ತಿರಲಿಲ್ಲ.

ಮೇಯರ್‌ಗೇ ಮಾಹಿತಿ ಇಲ್ಲ: ಬುಧವಾರ ಮೇಯರ್‌ ಗಮನಕ್ಕೂ ಬಾರದೆ ಏಕಾಏಕಿ ಬೇರೆಡೆ ಯಿಂದ ಕ್ಯಾಂಟೀನ್‌ಗೆ ಆಹಾರ ಪೂರೈಕೆಯಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next