Advertisement

ಬಿಟಿಡಿಎ ಭ್ರಷ್ಟಾಚಾರಕ್ಕೆ ಬಿತ್ತು ಲಕ್ಷ ರೂ. ದಂಡ!

04:17 PM Oct 11, 2018 | |

ಬಾಗಲಕೋಟೆ: ಸಂತ್ರಸ್ತರ ಪ್ರತಿಯೊಂದು ಕೆಲಸಕ್ಕೂ ಹಣದ ಬೇಡಿಕೆ ಇಟ್ಟು, ಹಣ ಕೊಡದವರ ಕೆಲಸ- ಕಾರ್ಯ ವಿಳಂಬ ಮಾಡುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ-ಸಿಬ್ಬಂದಿ ಕಾರ್ಯ ವೈಖರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸರಿಯಾದ ದಂಡ ಪ್ರಯೋಗಿಸಿದೆ.

Advertisement

ಬಿಟಿಡಿಎ ವ್ಯಾಪ್ತಿಯ ಸಂತ್ರಸ್ತರಿಗೆ (ಗ್ರಾಹಕರು) ಸರಿಯಾದ ಸೇವೆ ಒದಗಿಸದೇ ಸೇವಾ ನೂನ್ಯತೆ ಎಸಗಿದ ಬಿಟಿಡಿಎ ಮುಖ್ಯ ಎಂಜಿನಿಯರ್‌ ಹಾಗೂ ಪುನರ್‌ವಸತಿ ಅಧಿಕಾರಿಗೆ 1 ಲಕ್ಷ ರೂ. ದಂಡ ಹಾಗೂ ದೂರುದಾರರು ದೂರಿಗೆ ಖರ್ಚು ಮಾಡಿದ 5 ಸಾವಿರ ರೂ. ನೀಡಲು ಮಹತ್ವದ ತೀರ್ಪು ನೀಡಿದೆ.

ಏನಿದು ಪ್ರಕರಣ: ನಗರದ ಯಲ್ಲಪ್ಪ ಜಕಾತಿ ಅವರು ಈಚೆಗೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಅವರು ಜೀವಂತ ಇರುವಾಗ ಅರಕೇರಿಯ ಟಿ.ಬಿ. ಮಾಸರಡ್ಡಿ ಮತ್ತು ತುಳಸಿಗೇರಿಯ ಎಸ್‌.ಎಚ್‌. ಸಂಕರಡ್ಡಿ ಎಂಬುವವರು, ಜಕಾತಿ ಅವರಿಗೆ ಸೇರಿದ ಸೆಕ್ಟರ್‌ ನಂ. 5ರ ಪ್ಲಾಟ್‌ ನಂ. 1 (ಡಿ ಮಾದರಿ) ನಿವೇಶನ ಮತ್ತು ಝಂಕ್‌ ಶೀಟ್‌ ಇರುವ ಮನೆಯನ್ನು ಖರೀದಿ ಮಾಡಿದ್ದರು. ಒಟ್ಟು 70 ಲಕ್ಷ ಮೊತ್ತಕ್ಕೆ ಈ ಆಸ್ತಿ ಖರೀದಿಸಿ, 2017ರ ನವ್ಹೆಂಬರ್‌ 30ರಂದು ಖರೀದಿ ಹಾಕಿಸಿಕೊಂಡಿದ್ದರು.

ಈ ಖರೀದಿ ಪತ್ರದ ಪ್ರಕಾರ, ಬಿಟಿಡಿಎನಲ್ಲಿ ಮೂಲ ಮಾಲಿಕ ಯಲ್ಲಪ್ಪ ಜಕಾತಿ ಅವರ ಹೆಸರು ಕಡಿಮೆ ಮಾಡಿ, ಟಿ.ಬಿ. ಮಾಸರಡ್ಡಿ ಮತ್ತು ಎಸ್‌.ಎಚ್‌. ಸಂಕರಡ್ಡಿ ಅವರ ಹೆಸರಿನಲ್ಲಿ ಹಕ್ಕುಪತ್ರ ನೀಡುವಂತೆ ಬಿಟಿಡಿಎಗೆ ನಿಗದಿತ 1 ಸಾವಿರ ರೂ. ಶುಲ್ಕ ಪಾವತಿಸಿ, ವಿನಂತಿಸಿಕೊಂಡಿದ್ದರು. ಮಾಸರಡ್ಡಿ ಮತ್ತು ಸಂಕರಡ್ಡಿ ಅವರು ಬಿಟಿಡಿಎಗೆ ಅರ್ಜಿ ಸಲ್ಲಿಸಿ ಐದು ತಿಂಗಳಾದರೂ ಮೂಲ ಮಾಲಿಕರು ಹೆಸರು ಕಡಿಮೆ ಮಾಡಿ, ಖರೀದಿದಾರರ ಹೆಸರು ನಮೂದಿಸಿರಲಿಲ್ಲ. ಆ ಜಾಗೆಯಲ್ಲಿ 2 ಕೋಟಿ ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಅರ್ಜಿದಾರರು ಪರವಾನಿಗೆಯನ್ನೂ ಕೇಳಿದ್ದರು. ಆದರೂ, ಬಿಟಿಡಿಎ ಅಧಿಕಾರಿಗಳು- ಸಿಬ್ಬಂದಿ, ಅರ್ಜಿದಾರರ ಕೆಲಸ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು. ನೀವು ಕೆಲಸ ಮಾಡಿ, ಬಳಿಕ ಕೊಡುತ್ತೇವೆ ಎಂದು ಅರ್ಜಿದಾರರು ತಿಳಿಸಿದ್ದರು. ಇದರಿಂದ ಕಾರ್ಯ ವಿಳಂಬವಾಗಿತ್ತು.

ಮಾನಸಿಕ ವ್ಯಥೆ: ಅರ್ಜಿ ಸಲ್ಲಿಸಿ ಐದು ತಿಂಗಳಾದರೂ ಹಕ್ಕುಪತ್ರ ನೀಡಿಲ್ಲ, ಇದರಿಂದ ನಾವು ಉದ್ದೇಶದಿದ್ದ ಕಟ್ಟಡ ನಿರ್ಮಾಣಕ್ಕೆ ವಿವಿಧ ಸಾಮಗ್ರಿಗಳ ದರ ಹೆಚ್ಚಳದಿಂದ 15 ಲಕ್ಷ ರೂ. ಹಾನಿಯಾಗಿದೆ. ಬಿಟಿಡಿಎಗೆ ಅಲೆದಾಡಿ ಮಾನಸಿಕ ವ್ಯಥೆಯಾಗಿದೆ. ಇದರಿಂದ ನಾವು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ದಾಖಲಿಸುವ ಪ್ರಮೇಯ ಉಂಟಾಗಿದ್ದು, ಅದಕ್ಕೆ 5 ಸಾವಿರ ಖರ್ಚಾಗಿದೆ. ಸೇವೆ ನ್ಯೂನ್ಯತೆ ತೋರಿದ ಬಿಟಿಡಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ನಮಗೆ ಮಾನಸಿಕ ವ್ಯಥೆಗೆ 2 ಲಕ್ಷ, ಕಟ್ಟಡ ಸಾಮಗ್ರಿ ದರ ಹೆಚ್ಚಳದಿಂದ ಆದ ಹಾನಿಗೆ 15 ಲಕ್ಷ ಹಾಗೂ ದೂರು ಖರ್ಚಿನ 5 ಸಾವಿರ ಪರಿಹಾರ ನೀಡಲು, ಟಿ.ಬಿ. ಮಾಸರಡ್ಡಿ ಮತ್ತು ಎಸ್‌.ಎಚ್‌. ಸಂಕರಡ್ಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ 2018ರ ಜೂನ್‌ 6ರಂದು ಪ್ರಕರಣ ದಾಖಲಿಸಿದ್ದರು.

Advertisement

ವೇದಿಕೆಯ ನೋಟಿಸ್‌ಗೂ ಉತ್ತರವಿಲ್ಲ: ವೇದಿಕೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವೇದಿಕೆಯಿಂದ ಬಿಟಿಡಿಎ ಮುಖ್ಯ ಇಂಜಿನಿಯರ್‌ ಸೈಯ್ಯದ್‌ ಇಸಾಕ್‌ ಅಪ್ಸರ ಮತ್ತು ಪುನರ್‌ವಸತಿ ಅಧಿಕಾರಿ ರಾಜಶೇಖರ ಡಂಬಳ ಅವರಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಗೆ ಹಾಜರಾಗಲು ಮತ್ತು ವಿವರಣೆ ನೀಡಲು ಕೇಳಲಾಗಿತ್ತು. ಆದರೆ, ಇಬ್ಬರು ಅಧಿಕಾರಿಗಳು ತಾವಾಗಲಿ, ತಮ್ಮ ವಕೀಲರ ಮೂಲಕವಾಗಲಿ ವಿಚಾರಣೆಗೆ ಹಾಜರಾಗದೇ, ವಿವರಣೆ ನೀಡದೇ ನಿರ್ಲಕ್ಷé ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಶಾರದಾ ಕೆ. ವೇದಿಕೆಯ ಮಹಿಳಾ ಸದಸ್ಯೆ ಸುಮಂಗಲಾ ಹದ್ಲಿ ಸಮಕ್ಷಮ ಆದೇಶ ಹೊರಡಿಸಿದ್ದಾರೆ. 

1 ಲಕ್ಷ ರೂ. ದಂಡ: ಬಿಟಿಡಿಎ ಮುಖ್ಯ ಎಂಜಿನಿಯರ್‌ ಸೈಯ್ಯದ್‌ ಇಸಾಕ್‌ ಅಪ್ಸರ ಹಾಗೂ ಪುನರ್‌ವಸತಿ ಅಧಿಕಾರಿ ರಾಜಶೇಖರ ಡಂಬಳ (ಪ್ರಭಾರಿ) ಅವರು, ದೂರುದಾರರಾದ ಬಿ.ಟಿ. ಮಾಸರಡ್ಡಿ ಮತ್ತು ಎಸ್‌.ಎಚ್‌. ಸಂಕರಡ್ಡಿ ಅವರಿಗೆ ಮಾನಸಿಕ ವ್ಯಥೆ ಉಂಟು ಮಾಡಿದ್ದಕ್ಕೆ 1 ಲಕ್ಷ ದಂಡ, ದೂರಿನ ಖರ್ಚು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ತೀರ್ಪು ನೀಡಿದ 30 ದಿನಗಳ ಒಳಗಾಗಿ ಜಾಗೆಯ ಮೂಲ ಮಾಲಿಕರ ಹೆಸರು ಕಡಿಮೆ ಮಾಡಿ, ಖರೀದಿದಾರರ ಹೆಸರು ದಾಖಲಿಸಿ ಹಕ್ಕುಪತ್ರ ಕೊಡಬೇಕು. 30 ದಿನಗಳ ಒಳಗಾಗಿ ಕೊಡದಿದ್ದರೆ ಮುಂದಿನ ಪ್ರತಿ ದಿನಕ್ಕೆ 100 ರೂ. ದಂಡ ಹಾಕಿ, ಹಕ್ಕುಪತ್ರ ಕೊಡಬೇಕು ಎಂಬ ತೀರ್ಪು ನೀಡಲಾಗಿದೆ. ಹಣಕ್ಕಾಗಿ ಬೇಡಿಕೆ ಇಟ್ಟು, ಸಂತ್ರಸ್ತರ ಕೆಲಸ- ಕಾರ್ಯ ವಿಳಂಬ ಮಾಡುವ ಬಿಟಿಡಿಎ ಅಧಿಕಾರಿಗಳಿಗೆ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಛಾಟಿ ಗ್ರಾಹಕರ ವೇದಿಕೆ ನೀಡಿದೆ. ಇನ್ನಾದರೂ ಅಧಿಕಾರಿಗಳು, ತಮ್ಮ ಕಾರ್ಯ ವೈಖರಿ ಬದಲಿಸಿಕೊಳ್ಳಲಿ ಎಂಬುದು ಸಂತ್ರಸ್ತರ ಒತ್ತಾಯ.

ಟಿಫಿನ್‌ ಕ್ಯಾರಿಯರ್‌ಗಳೇ ಸೂಟಗೇಸ್‌!
ಬಿಟಿಡಿಎನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಇಂದು- ನಿನ್ನೆಯ ಆರೋಪವಲ್ಲ. ಹಿಂದೆ ಸ್ವತಃ ಹಿರಿಯ ಅಧಿಕಾರಿಗಳೇ ಲೋಕಾಯುಕ್ತ, ಎಸಿಬಿ ಬೆಲೆಗೆ ಬಿದ್ದ ಘಟನೆ ನಡೆದಿವೆ. ಆದರೂ, ಅಧಿಕಾರಿಗಳು, ಸಿಬ್ಬಂದಿ ಬದಲಾಗಿಲ್ಲ. ಇಲ್ಲಿನ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯೂ ದೊಡ್ಡ ದೊಡ್ಡ ಟಿಫಿನ್‌ ಕ್ಯಾರಿಯರ್‌ ತರುತ್ತಾರೆ. ಅದರಲ್ಲಿ ಊಟ ತರುವ ಉದ್ದೇಶಕ್ಕಿಂತ, ಸಂಜೆ ಹಣ ತುಂಬಿಕೊಂಡು ಹೋಗುವ ಉದ್ದೇಶ ಹೊಂದಿರುತ್ತಾರೆ. ಇದೂ ಕೂಡ ನಗರದ ಬಹುತೇಕರಿಗೆ ತಿಳಿದಿರುವ ಸತ್ಯ.

ಬಿಟಿಡಿಎನಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ಇರುವುದು ಬಹಿರಂಗ ಸತ್ಯ. ಹಲವು ಬಾರಿ ಸಭೆಯಲ್ಲಿ ಈ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆದರೂ ಕಾರ್ಯವೈಖರಿ ಬದಲಾಗಿಲ್ಲ. ಈ ಕುರಿತು ನಮಗೂ ಅಸಮಾಧಾನವಿದೆ.
 ಆನಂದ ಜಿಗಜಿನ್ನಿ,
ಬಿಟಿಡಿಎ ನಿಕಟಪೂರ್ವ ಸದಸ್ಯ

ಹಣ ಕೊಡದ್ದಕ್ಕೆ ವಿಳಂಬ
ಬಿಟಿಡಿಎ ಅಧಿಕಾರಿಗಳು ಹಕ್ಕುಪತ್ರ ಕೊಡಲು ಹಣದ ಬೇಡಿಕೆ ಇಟ್ಟಿದ್ದರು. ಕೆಲಸ ಮಾಡಿಕೊಡಿ, ಬಳಿಕ ನೋಡೋಣ ಎಂದು ಸಮಜಾಯಿಸಿದ್ದೆ. ಅವರು ಕೆಲಸವೂ ಮಾಡದೇ, ಅರ್ಜಿಯನ್ನೂ ತಿರಸ್ಕರಿಸದೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದರು. ಹೀಗಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಹೋಗಬೇಕಾಯಿತು. ವೇದಿಕೆ ಕಳೆದ ಸೆ.29ರಂದು ತೀರ್ಪು ನೀಡಿ, 30 ದಿನಗಳ ಒಳಗಾಗಿ ಹಕ್ಕುಪತ್ರ ನೀಡಲು ಆದೇಶಿಸಿದೆ.
ಸುನೀಲ ಮಾಸರಡ್ಡಿ,
ವಕೀಲರು ಮತ್ತು ದೂರುದಾರರ ಪುತ್ರ.

ಶ್ರೀಶೈಲ ಕೆ. ಬಿರಾದಾರ 

Advertisement

Udayavani is now on Telegram. Click here to join our channel and stay updated with the latest news.

Next