Advertisement

ಟಿಪ್ಪು ವೇಷ ಹಾಕಿದ್ದನ್ನು ಬಿಎಸ್‌ವೈ, ಡಿವಿಎಸ್‌ ಮರೆತಿದ್ದಾರಾ?

11:21 AM Nov 11, 2018 | Team Udayavani |

ಹುಣಸೂರು: ಟಿಪ್ಪು ಅಧಿಕಾರದಲ್ಲಿ ಎಲ್ಲ ಧರ್ಮ, ಮತ, ಜಾತಿಯವರನ್ನು ಪ್ರೀತಿ ವಿಶ್ವಾಸದಿಂದ ಕಂಡ ಜನನಾಯಕ, ಅಂತಹ ಮಹಾನಾಯಕನನ್ನು ಬಿಜೆಪಿ ನಾಯಕರು ರಾಜಕಾರಣಕ್ಕೆ ಬೆಸೆದಿರುವುದು ಸರಿಯಲ್ಲ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಹಾಗೂ ಶಾಸಕ ಎಚ್‌.ವಿಶ್ವನಾಥ್‌ ಹೇಳಿದರು. 

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಟಿಪ್ಪು ಜಯಂತಿ ಸಮಾರಂಭದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರಪ್ರೇಮಿ ಟಿಪ್ಪುವಿನ ಮೇರು ವ್ಯಕ್ತಿತ್ವದ ಬಗ್ಗೆ ಬಿಜೆಪಿಯವರು ಧರ್ಮ-ರಾಜಕಾರಣ ಹಾಗೂ ಮತಗಳಿಗಾಗಿ ಸುಳ್ಳು ಹೇಳುತ್ತಾ ಅವಹೇಳನ ಮಾಡುತ್ತಿದ್ದಾರೆ.

ಈತ ಮುಸಲ್ಮಾನನೆಂಬ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ. ಈತ ನಿಜವಾಗಿಯೂ ಹಿಂದೂ ವಿರೋಧಿಯಾಗಿದ್ದ ಎಂಬುದಕ್ಕೆ ಎಲ್ಲೂ ದಾಖಲೆಗಳಿಲ್ಲ. ರಾಜಕಾರಣಕ್ಕಾಗಿ ಕತೆಕಟ್ಟಿದ್ದಾರೆ. ತನ್ನ ಆಡಳಿತದಲ್ಲಿ ಹಿಂದೂ ದೇವಾಲಯಗಳಿಗೆ ಆದ್ಯತೆ ನೀಡಿದ್ದರು. ಹಿಂದೂಗಳನ್ನೇ ಮಂತ್ರಿಯಾಗಿಸಿಕೊಂಡಿದ್ದರು. ಇದೆಲ್ಲ ಗೊತ್ತಿದ್ದೂ ಟೀಕೆ ಮಾಡುವುದೇಕೆಂದು ಪ್ರಶ್ನಿಸಿದರು. 

ಪ್ರಶಂಸಿಸಿದವರೇ ವಿರೋಧಿಸುವುದೇಕೆ: ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಟಿಪ್ಪು ಸಾಧನೆ ಕುರಿತು ಬದಲಾವಣೆಯ ಹರಿಕಾರ ಎಂಬ ಪುಸ್ತಕ ಬರೆಸುತ್ತಾರೆ, ಮುನ್ನುಡಿ ಅವರೇ ಬರೆಯುತ್ತಾರೆ, ಇನ್ನು ಯಡಿಯೂರಪ್ಪ, ಸದಾನಂದಗೌಡ ಟಿಪ್ಪು ವೇಷ ಹಾಕಿಕೊಂಡು ಖಡ್ಗ ಝಳಪಿಸಿ ಟಿಪ್ಪು ಮಹಾವೀರ ಎಂದು ಹೇಳಿದ್ದ ನೀವುಗಳೇ ಈಗೇಕೆ ವಿರೋಧ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ, ನಿಮ್ಮ ಕೈ ಮುಗಿದು ಪ್ರಾರ್ಥಿಸುವೆ,

ದೊಡ್ಡ ನಾಯಕರಾದ ನೀವು ಸುಖಾಸುಮ್ಮನೆ ಟೀಕೆ ಮಾಡಿ ಜನಸಾಮಾನ್ಯರ ಮುಂದೆ ಸಣ್ಣವರಾಗಬೇಡಿ, ನೀವು ಹೃದಯ ತೆರೆದು ಟಿಪ್ಪು ಆಡಳಿತವನ್ನೊಮ್ಮೆ ನೋಡಿ, ಈ ಹಿಂದೆ ನೀವೇ ಪ್ರೀತಿಯ ಮಾತುಗಳನ್ನಾಡಿ, ಇದೀಗ ಅವಹೇಳನಕಾರಿಯಾಗಿ ಮಾತನಾಡಬೇಡಿ. ಜನ ನಿಮ್ಮ ಮಾತುಗಳನ್ನು ನಂಬಲ್ಲ.  ವೀರಪ್ಪಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ತಾವೇ ವಿಧಾನಸೌಧ ಸೇರಿದಂತೆ ಎಲ್ಲ ಕಚೇರಿಗಳಲ್ಲೂ ಝಾನ್ಸಿರಾಣಿ ಲಕ್ಷ್ಮೀಬಾಯಿ, ಟಿಪ್ಪುಸುಲ್ತಾನ್‌ ಫೋಟೋ ಹಾಕಿಸಿದ್ದೆ. ನಿಮಗೆ ತಾಕತ್ತಿದ್ದರೆ ತೆಗೆಸಿ ನೋಡೋಣವೆಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. 

Advertisement

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಸಿದ್ದೇಗೌಡ, ನಗರಸಭೆ ಅಧ್ಯಕ್ಷ ಮಹದೇವ್‌, ತಾಪಂ ಇಒ ಕೃಷ್ಣಕುಮಾರ್‌, ತಹಶೀಲ್ದಾರ್‌ ರಾಜು, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್‌, ಸದಸ್ಯರಾದ ಪ್ರಭಾಕರ್‌, ಮಾಜಿ ಸದಸ್ಯ ಅಜYರ್‌ಪಾಷಾ, ನಗರಸಭಾ ಸದಸ್ಯರಾದ ಸುನಿತಾ, ನಸ್ರುಲ್ಲಾ, ಮುಷಾಹಿದ್‌, ಬಷೀರ್‌ ಅಹಮದ್‌, ಹರಿಹರ ಆನಂದಸ್ವಾಮಿ, ನಿಂಗರಾಜಮಲ್ಲಾಡಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next