Advertisement

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

10:23 PM Jul 26, 2021 | Team Udayavani |

ಶಿಕಾರಿಪುರದ ಒಂದು ಕಾರ್ಯಕ್ರಮದಲ್ಲಿ ನಡೆದ ಘಟನೆ ಅದು. ಸ್ನೇಹಿತರೊಬ್ಬರು ಯಡಿಯೂರಪ್ಪ ಅವರಿಗೆ “ಅಜ್ಜ’ ಎಂದು ಸಂಬೋಧಿಸಿದರು. ತಕ್ಷಣ ನಾನು ಅವರ ಬಳಿಯೇ ಹೋಗಿ ಹೇಳಿದೆ, “ಅಜ್ಜ’ ಪದ ಬಳಸಬೇಡಿ. ಯಾಕೆಂದರೆ ಯುವಕರು ನಾಚುವಂತೆ ಅಪ್ಪ ಕೆಲಸ ಮಾಡುತ್ತಿದ್ದಾರೆ. ನಂತರ ಅವರು ಅದನ್ನು ತಿದ್ದುಪಡಿ ಮಾಡಿಕೊಂಡರು.

Advertisement

ತಂದೆಗೆ 78 ವರ್ಷವಾದರೂ ಅವರಿಗೆ ವಿಶ್ರಾಂತಿ ಬೇಕು ಅನಿಸುವುದೇ ಇಲ್ಲ. ಈಗಲೂ ನಿತ್ಯ ಬೆಳಗಿನಜಾವ 5ಕ್ಕೇ ತಾವು ಅನುಮೋದನೆ ನೀಡಿದ ಕಡತಗಳನ್ನು ಮರುಪರಿಶೀಲಿಸುತ್ತಾರೆ. ವಾಕಿಂಗ್‌ಗೆ ಹೋಗಿ ಬಂದು, ದಿನದ 24 ಗಂಟೆ ದುಡಿಯುತ್ತಾರೆ. ಅವರ ಬದುಕಿನಲ್ಲಿ ವಿಶ್ರಾಂತಿ ಪಡೆದಿದ್ದನ್ನು ನಾನು ನೋಡಿಯೇ ಇಲ್ಲ. ಹಾಗಾಗಿ, ರಾಜೀನಾಮೆ ಅವರಿಗೆ ನಿವೃತ್ತಿ ಎಂದು ನಾನು ಒಪ್ಪುವುದಿಲ್ಲ. ಆದರೆ, ಅವರು ತೆಗೆದುಕೊಂಡ ತೀರ್ಮಾನ ತುಂಬಾ ಸೂಕ್ತವಾದುದು ಅನಿಸುತ್ತದೆ. ಯಾಕೆಂದರೆ, ಯಾರಿಗೂ ನೀಡದ ಅವಕಾಶವನ್ನು ಪಕ್ಷ ಅವರಿಗೆ ಕೊಟ್ಟಿದೆ. ಅಷ್ಟಕ್ಕೂ ನಮ್ಮದೇ ಸರ್ಕಾರ ಇರುತ್ತದೆ ಅಲ್ಲವೇ? ಎಲ್ಲ ಸಚಿವರೂ, ಶಾಸಕರೂ ಅವರ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಮುಂದಿನ ಇನ್ನಾವುದೋ ಉತ್ತಮ ಜವಾಬ್ದಾರಿ ಅವರಿಗೆ ಕಾಯುತ್ತಿರಬಹುದು.

ಯಾವತ್ತೂ ಅಪ್ಪ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಹಾಗೊಂದು ವೇಳೆ ಅಧಿಕಾರದ ಹಿಂದೆಬಿದ್ದಿದ್ದರೆ, ಅವರು ಇಂದು ಎಲ್ಲೋ ಇರುತ್ತಿದ್ದರು. ಸಂದರ್ಭ ಬಂದಂತೆ ಇರುವವರು. ನಾನು ಕಣ್ಣು ಬಿಟ್ಟಾಗಿನಿಂದಲೂ ಅಪ್ಪ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆಯಲ್ಲಿ ಇದ್ದಂತಹವರು. ಸೋಲು-ಗೆಲುವು ಎಲ್ಲವನ್ನೂ ನೋಡುತ್ತಾ ಬಂದವರು. ಹಣ ಬಲದಿಂದ ಅಲ್ಲ; ಜನ ಬಲದಿಂದ ರಾಜಕಾರಣ ಮಾಡಿದವರು. ಆ ಮೂಲಕ ತಮ್ಮನ್ನು ತಾವು ರೂಪಿಸಿಕೊಂಡವರು. ಒಂದು ರೀತಿ ಅವರೊಬ್ಬ “ಸೆಲ್ಫ್ ಮೇಡ್‌ ಪರ್ಸನ್‌’.

ಅಪ್ಪ ಉಪ ಮುಖ್ಯಮಂತ್ರಿ ಆಗಲೂ ಇನ್ನೂ ಎರಡು ತಿಂಗಳು ಇತ್ತು. ಆಗ ನನ್ನೊಂದಿಗೆ ಹರಟುವಾಗ ಹೇಳಿದ್ದ ಮಾತು- “ಜನರಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಎಂಬ ಅಧಿಕಾರ ಬೇಕು. ಆರು ತಿಂಗಳು ಆ ಅಧಿಕಾರ ಸಿಕ್ಕರೆ ಸಾಕು ಅರುಣಾ, ಇಡೀ ದೇಶಕ್ಕೆ ಮಾದರಿಯಾಗು ವಂತಹ ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದರು. ಜನಪರ ಕೆಲಸ ಮಾಡಲು ಅವರಿಗೆ ಆ ಅಧಿಕಾರ ಬೇಕಿತ್ತು. ಇದೇ ಕಾರಣಕ್ಕೆ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದರು. ಪ್ರತಿಪಕ್ಷದಲ್ಲೇ ಹೆಚ್ಚು ಅವಧಿ ಇದ್ದು, ಜನರನ್ನು ಹತ್ತಿರದಿಂದ ನೋಡಿದ ಅವರ ಜನಪರ ಕಾಳಜಿಯು ಕೋವಿಡ್‌ಗೆ ಸ್ಪಂದಿಸಿದ ರೀತಿಯೇ ಮಾದರಿ. ಬಡತನ ನೋವು ಅನುಭವಿಸಿ ಬಂದವರು ಎಂಬುದು ಅದರಿಂದ ಗೊತ್ತಾಗುತ್ತದೆ.

ನನಗೆ ಈಗಲೂ ನೆನಪಿದೆ, ದ್ವಿತೀಯ ಪಿಯುಸಿ ಮುಗಿಸಿ ಪದವಿ ವ್ಯಾಸಂಗಕ್ಕೆ ಬೆಂಗಳೂರಿಗೆ ಬಂದಿದ್ದೆ. ಆಗ ತಂದೆಯವರು ಪ್ರತಿಪಕ್ಷದ ನಾಯಕರಾಗಿದ್ದರು. ಸಂಜೆ ವಿಧಾನಸೌಧ ವಿದ್ಯುದ್ದೀಪಾಲಂಕಾರಗಳಿಂದ ಸಿಂಗಾರಗೊಂಡಿತ್ತು. ಅದನ್ನು ನೋಡಲು ಕುಟುಂಬವನ್ನು ಕರೆದುಕೊಂಡು ಹೋಗಿದ್ದರು. ಆವರಣದ ಹುಲ್ಲಿನ ಹಾಸಿನಲ್ಲಿ ಕುಳಿತಿದ್ದೆವು. ಆಗ, “ಒಮ್ಮೆ ನಾನು ಅಲ್ಲಿ ವಿಧಾನಸೌಧದ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಬೇಕು. ಅದು ನನ್ನ ಬದುಕಿನ ಗುರಿ’ ಎಂದು ಅಪ್ಪ ಹೇಳಿದ್ದರು. ಅಲ್ಲಿ ಕುಳಿತು ಎಂಜಾಯ್‌ ಮಾಡಲು ಅಲ್ಲ; ಜನರಿಗೆ ನ್ಯಾಯ ಒದಗಿಸಬೇಕು ಎನ್ನುವುದು. ಅವರ ಅಪೇಕ್ಷೆ ಆಗಿತ್ತು.

Advertisement

ನಾನು ಬಾಲ್ಯದಿಂದಲೂ ಅಪ್ಪನ ಜನಪರ ಚಳವಳಿಗಳು, ಹೋರಾಟಗಳನ್ನು ನೋಡಿಕೊಂಡು ಬೆಳೆದವಳು. ಜೀತದಾಳು ಮುಕ್ತಿಗೆ ಅವರು ಮಾಡಿದ ಪಾದಯಾತ್ರೆ, ವಿಧಾನಸೌಧದಲ್ಲಿ ಒಬ್ಬರೇ ಇದ್ದಾಗಲೂ ಅವರು ಹೋರಾಟ, ನಂತರ ನಿಧಾನವಾಗಿ ಗೆಲುವು ಸಾಧಿಸುತ್ತಾ ಬಂದರು. ಶಿಕಾರಿಪುರದಲ್ಲಿ ಕೌನ್ಸಿಲರ್‌ ಚುನಾವಣೆ ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಇದ್ದಕ್ಕಿದ್ದಂತೆ ಪಟ್ಟಣದ ಅಂಗಡಿ-ಮುಂಗಟ್ಟು ಬಾಗಿಲು ಹಾಕಿದವು. ಶಾಲೆಯಲ್ಲಿದ್ದ ನಮಗೆ ಶಿಕ್ಷಕರು ಹುಷಾರಾಗಿ ಮನೆಗೆ ಕಳುಹಿಸಿದರು. ಅಲ್ಲಿ ಬಂದರೆ, ಅಪ್ಪನೊಂದಿಗೇ ಓಡಾಡಿಕೊಂಡಿದ್ದ ಚೂರಿ ಶಿವಮೂರ್ತಿ ಅಪ್ಪನ ತಲೆ ಒಡೆದಿದ್ದ. ಒಂದೆಡೆ ರಕ್ತ ಹರಿಯುತ್ತಿದೆ. ಆ ರಕ್ತವನ್ನು ನಾಯಿಗಳು ನೆಕ್ಕುತ್ತಿವೆ. ಅಂತಹ ಸಂದರ್ಭದಲ್ಲಿ ಇನ್ನು ಮುಂದೆ ನನ್ನ ಬದುಕು ಸಮಾಜಕ್ಕೆ ಮುಡಿಪು ಎಂದು ಹೇಳಿಬಿಟ್ಟರು. ಅವರ ನಿರ್ಣಯಕ್ಕೆ ಬದ್ಧರಾಗಿ ನಮ್ಮ ತಾಯಿ ಹೆಗಲು ಕೊಟ್ಟು ನಿಂತರು. ತಮ್ಮ ಷಷ್ಠ್ಯಬ್ದಿ ಕಾರ್ಯಕ್ರಮದಲ್ಲೂ ಅಪ್ಪ ಇದನ್ನು ಘೋಷಿಸಿದ್ದರು.

ನಾವ್ಯಾರೂ ಬೇಜಾರಾಗಿಲ್ಲ. ಅವರು ಅಧಿಕಾರ ಸ್ವೀಕರಿಸುವಾಗ ನಮ್ಮ ಮನೆಯಲ್ಲಿ ಎಷ್ಟು ಖುಷಿ ಇತ್ತೋ ಅಷ್ಟೇ ಸಂತೋಷ-ಖುಷಿ ನಮ್ಮಲ್ಲಿ ಇಂದೂ ಇದೆ. ಕೆಲಸ ಮಾಡಿ ನಿರಾಳವಾಗಿ ಬಂದಿದ್ದಾರೆ. ಆದರೆ, ಇದೆಲ್ಲದರ ನಡುವೆ ಅಪ್ಪ ನಮ್ಮ ಜತೆಗಿಂತ ಜನರೊಂದಿಗೆ ಇದ್ದಾಗ ಲವಲವಿಕೆಯಿಂದ ಇರುತ್ತಾರೆ. ಜೀವನದ ಕೊನೆ ಕ್ಷಣದವರೆಗೂ ಕೆಲಸ ಮಾಡುತ್ತಿರುತ್ತಾರೆ. ಜನರೊಂದಿಗೆ ಬದುಕಲು ಇಷ್ಟಪಡುತ್ತಾರೆ.

 

ಎಸ್‌.ವೈ. ಅರುಣಾದೇವಿ

ಬಿ.ಎಸ್‌. ಯಡಿಯೂರಪ್ಪ  ಪುತ್ರಿ

Advertisement

Udayavani is now on Telegram. Click here to join our channel and stay updated with the latest news.

Next