Advertisement

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

12:09 AM Jul 28, 2021 | Team Udayavani |

ಬೆಂಗಳೂರು: “ವಯಸ್ಸಿನ’ ಅಧಿಕೃತ ಕಾರಣಕ್ಕೆ ಸಿಎಂ ಪದವಿಯನ್ನು ತ್ಯಾಗ ಮಾಡಿದ ಯಡಿಯೂರಪ್ಪ, ತಮ್ಮ ಸರಕಾರದ ದ್ವಿತೀಯ ವರ್ಷದ ಸಮಾರಂಭದಲ್ಲೇ ವಿದಾಯವನ್ನೂ ಹೇಳಬೇಕಾಗಿ ಬಂತು. ವಿದಾಯ ಭಾಷಣದಲ್ಲಿ  ತಾವು ಏಕಾಂಗಿಯಾಗಿ ಪಕ್ಷ ಕಟ್ಟಿದ ಸಂದರ್ಭ, ಎದುರಿಸಿದ ಹಲವಾರು ಅಗ್ನಿಪರೀಕ್ಷೆಗಳನ್ನು ವಿವರಿಸುತ್ತಲೇ ಅವರ ದುಃಖ ಉಮ್ಮಳಿಸಿತು. ಕಣ್ಣೀರನ್ನು ಸುರಿಸುತ್ತಲೇ “ಎಲ್ಲರ  ಒಪ್ಪಿಗೆ ಪಡೆದು’ ರಾಜೀನಾಮೆ ಘೋಷಣೆ ಮಾಡಿದರು.

Advertisement

ಈಗ ರಾಜ್ಯ ಬಿಜೆಪಿಯಲ್ಲಿ ಪಿತೃ ಸ್ಥಾನ ದಲ್ಲಿರುವ ಯಡಿಯೂರಪ್ಪ  ಹರಿಸಿದ ಕಣ್ಣೀರು ರಾಜ್ಯ ರಾಜಕಾರಣ ದಲ್ಲಿ  ಅಪಾರ್ಥ ಸಂದೇಶ ರವಾ ನಿಸುವ ಸಾಧ್ಯತೆ ದಟ್ಟವಾಗಿತ್ತು.  ಪಕ್ಷದ ಕಾರ್ಯಕರ್ತರಲ್ಲಿ, ಅವರ ಹಿಂದೆ ಇರುವ ಪ್ರಬಲ ಲಿಂಗಾ ಯತ ಸಮುದಾಯದಲ್ಲಿ  ಹರಡ ಬಹುದಾಗಿದ್ದ ಋಣಾತ್ಮಕತೆ. ಅವು ಗಳೆಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಸ್ಥಿತ್ಯಂತರವನ್ನು ಕಾಂಗ್ರೆಸ್‌ ಬಳಸಿ ಕೊಳ್ಳುವ ಸಾಧ್ಯತೆ ಬಹುತೇಕ ಹೆಚ್ಚಿತ್ತು. ಜತೆಗೆ, ಮುಂದಿನ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ ಲೋಕಸಭೆ ಚುನಾವಣೆಯನ್ನೂ ಎದುರಿಸ ಬೇಕಾದಾಗ ಯಡಿಯೂರಪ್ಪ ಅವರ ಅಗತ್ಯತೆ ಇವೆಲ್ಲವನ್ನೂ ಮನಗಂಡ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಮನ್ನಣೆ ನೀಡಿರುವುದು ವೇದ್ಯವಾಗುತ್ತದೆ.  ಜತೆಗೆ, ಯಡಿ ಯೂರಪ್ಪ ಅವರ  ಅಧಿಕಾರ ತ್ಯಾಗದ ಸಂದರ್ಭದ ಭಾವುಕ ಕಣ್ಣೀರನ್ನು ಒರೆಸುವ ಉದ್ದೇಶವೂ ವರಿಷ್ಠರಿಗೆ  ಇರುವಂತಿದೆ.

ಹಾಗಾಗಿ ಯಡಿಯೂರಪ್ಪ ಅವರ ಕಣ್ಣೀರಿನ ಗಂಭೀರ ಸಂದೇಶಕ್ಕೆ ಅವರ ಕಣ್ಣೀರು ಒರೆಸುವ ಸಂದೇಶದ ಮೂಲಕ ಪ್ರಮುಖವಾಗಿ ಲಿಂಗಾಯಿತ ಸಮುದಾಯವನ್ನು ಸಮಾಧಾನಿಸುವ ಮತ್ತು ಯಡಿ ಯೂರಪ್ಪ ಅವರ ಮಾತಿಗೆ ಮಣೆ ಹಾಕಿದೆ. ಆ  ಮೂಲಕ ಅವರ ಅಧಿಕಾರ ರಾಜಕಾರಣಕ್ಕೆ ಗೌರವಯುತವಾಗಿ ವಿದಾಯ ಹೇಳುವ ನಿರ್ಧಾರಕ್ಕೆ ಬಿಜೆಪಿ ಬಂದಿರುವ ಸಾಧ್ಯತೆಯಿದೆ. ಶಾಸಕಾಂಗ ಪಕ್ಷ ಸಭೆಯಲ್ಲಿ ಯಡಿಯೂರಪ್ಪ ಅವರ ಮೂಲಕವೇ ಮುಂದಿನ ಮುಖ್ಯಮಂತ್ರಿ ಹೆಸರನ್ನು ಸೂಚಿಸುವಂತೆ ಮಾಡಿ ಅವರ ಆಪ್ತನನ್ನೇ ಮುಖ್ಯಮಂತ್ರಿ ಮಾಡುವ ಮೂಲಕ ಜಾಣ್ಮೆಯ ಸಂದೇಶ ರವಾನಿಸಿದೆ.

ಖಡಕ್‌ ಸಂದೇಶ?:

ಏನಿದ್ದರೂ, ಯಡಿಯೂರಪ್ಪ ತಮ್ಮ ವಿದಾಯದಲ್ಲೂ ರಾಜಕೀಯವಾಗಿ ಮತ್ತಷ್ಟು ಶಕ್ತಿಯುತವಾಗಿ ಹೊರ ಹೊಮ್ಮುವ ಲಕ್ಷಣ ತೋರಿಸಿದ್ದಾರೆ. ತಮ್ಮ ಆಪ್ತನನ್ನೇ ಮುಖ್ಯಮಂತ್ರಿಯಾಗಿಸುವ ಮೂಲಕ ತಮ್ಮ ವಿರೋಧಿ ಬಣದ ನಾಯಕರಿಗೂ ಖಡಕ್‌ ಸಂದೇಶ ನೀಡಿದ್ದಾರೆ. ಅವರ ಪದಚ್ಯುತಿಗೆ ಕಾರಣರಾದ ರಾಜಕೀಯ ನಾಯಕರು ಒಳದಾರಿಯಿಂದ ಸಿಎಂ ಪದವಿಯತ್ತ ಬರುವುದನ್ನು ತಡೆದಿದ್ದಾರೆ.

Advertisement

ಅವರ ರಾಜಕೀಯ ಅನುಭವದ ಅಗಾಧತೆ ಮುಂದೆ ಚಿಕ್ಕವರಾಗಿದ್ದರೂ, ವಿರುದ್ಧ ಮಾತನಾಡಿದ ಕೆಲ ನಾಯಕರಿಗೆ  ಮಾತಿನೇಟು ನೀಡದೆ, ರಾಜಕೀಯ ಪೆಟ್ಟಿನ ಮೂಲಕ ಆಘಾತ ನೀಡಿರುವುದನ್ನು ಗಮನಿಸಬೇಕಿದೆ.

ಆದರೆ ಪಕ್ಷದ ಕೇಂದ್ರ ನಾಯ ಕರೂ ಮುಂದಿನ ರಾಜಕೀಯ ನಡಾವಳಿಗಳನ್ನು ಖಂಡಿತ ಹತ್ತಿರ ದಿಂದ ನೋಡಲಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಮ್ಮ ಪಕ್ಷದ ನಿಲುವಿಗೆ ತಕ್ಕಂತೆ ರೂಪಿಸುವ ಸಾಧ್ಯತೆ ಹೆಚ್ಚಿದೆ. ಜನತಾ ಪರಿವಾರ ದಿಂದ ಬಂದ ಬೊಮ್ಮಾಯಿ, ಸಮಾಜವಾದಿ ನಾಯಕರ ಗರಡಿ ಯಲ್ಲಿ ಪಳಗಿದವರು. ಈಗ ಬಿಜೆಪಿ ಮುಖ್ಯಮಂತ್ರಿಯಾಗಿರುವ ಅವರನ್ನು ತನ್ನ ಪಕ್ಷದ ಚೌಕಟ್ಟಿನಲ್ಲಿ ಹೇಗೆ ತನ್ನ ಮುಂದಿನ ನಾಯಕನಾಗಿ ರೂಪಿಸುತ್ತದೆ ಮತ್ತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರುವಂತೆ ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

 

-ನವೀನ್‌ ಅಮ್ಮೆಂಬಳ

 

Advertisement

Udayavani is now on Telegram. Click here to join our channel and stay updated with the latest news.

Next