Advertisement

ಸೋದರನೇ ಆತ್ಮಹತ್ಯಾ ಬಾಂಬರ್‌!

10:11 AM Jan 15, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಘಟಿತ ಉಗ್ರಗಾಮಿ ಪಡೆಗಳ ಪ್ರಮುಖ ಮನ್ಸೂರ್‌ ಖಾನ್‌ ತನ್ನ ಸ್ವಂತ ಸಹೋದರನನ್ನೇ “ಸೂಸೈಡ್‌ ಬಾಂಬರ್‌’ ಆಗಿ ಸಜ್ಜುಗೊಳಿಸಿದ್ದ ಎನ್ನಲಾಗಿದ್ದು, ಈ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Advertisement

ತಮಿಳುನಾಡಿನ ಖ್ವಾಜಾ ಮೊಹಮದ್‌ ಮತ್ತು ಬೆಂಗಳೂರಿನ ಮೆಹಬೂಬ್‌ ಪಾಷಾನ ಆಪ್ತನಾಗಿರುವ ಮನ್ಸೂರ್‌ ಖಾನ್‌ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚಿನಲ್ಲಿ ಕೈಜೋಡಿಸಿದ್ದ. ಆರಂಭದಲ್ಲಿ ತಮ್ಮ ನಿಲುವುಗಳಿಗೆ ಬದ್ಧರಾಗುವ ಯುವಕರಿಗೆ ತಲಾಷೆ ನಡೆಸಿದ ಈ ತಂಡ ತಮ್ಮ ಕುಟುಂಬಗಳಿಗೆ ಸಂಬಂಧಿಕರಾದ ಯುವಕರನ್ನು ಗೊರಗುಂಟೆಪಾಳ್ಯದ ಮನ್ಸೂರ್‌ ಮನೆಗೆ ಕರೆಸಿಕೊಳ್ಳುತ್ತಿತ್ತು. ಸಭೆಗಳಲ್ಲಿ ಯುವಕರಿಗೆ “ಜೆಹಾದ್‌’ ವಿಚಾರಗಳನ್ನು ತುಂಬಿ ಮಾನಸಿಕವಾಗಿ ಅವರನ್ನು ಸಜ್ಜುಗೊಳಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಮನ್ಸೂರ್‌ ಖಾನ್‌ ತನ್ನ ಸ್ವಂತ ಸಹೋದರ, ಕಾರು ಚಾಲಕ ಮೊಹಮದ್‌ ಹನೀಫ್ ಖಾನ್‌ಗೆ ಜೆಹಾದ್‌ ವಿಚಾರಗಳನ್ನು ತುಂಬತೊಡಗಿದ್ದ. ಅಣ್ಣನ ಮಾತುಗಳಿಗೆ ತಲೆಯಾಡಿಸಿದ್ದ ಹನೀಫ್ ಕೆಲವೇ ದಿನಗಳಲ್ಲಿ “ಜೆಹಾದ್‌’ ಸಲುವಾಗಿ “ಆತ್ಮಾಹುತಿ ಬಾಂಬರ್‌’ ಆಗಲೂ ತಾನು ಸಿದ್ಧ ಎಂಬ ನಿಲುವಿಗೆ ಬಂದಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ.

ಆರೋಪಿ ಮೊಹಮದ್‌ ಹನೀಫ್, ಚೆನೈನ “ಕ್ಯು’ ಬ್ರಾಂಚ್‌ ಪೊಲೀಸರ ವಶದಲ್ಲಿದ್ದಾನೆ. ತನ್ನ ಸಹೋದರ ಮನ್ಸೂರ್‌ ಖಾನ್‌, ಚಿಕ್ಕಪ್ಪ ಮೆಹಬೂಬ್‌ ಪಾಷಾ ಅವರ ಅಣತಿಯಂತೆ ನಡೆದುಕೊಂಡಿದ್ದೇನೆ. ಜತೆಗೆ ಅವರ ಜತೆಗಿನ ಸಭೆಗಳಲ್ಲಿ ಭಾಗಿಯಾಗಿದ್ದೇನೆ ಎಂದು ಹನೀಫ್ ತಿಳಿಸಿದ್ದಾನೆ. ಬೆಂಗಳೂರಿನಲ್ಲಿ ಶುರುವಾದ ಜೆಹಾದಿಗಳ ನೇಮಕ ಪ್ರಕ್ರಿಯೆ ಹಂತ, ಹಂತವಾಗಿ ರಾಜ್ಯದ ಹಲವು ನಗರಗಳಿಗೆ ವಿಸ್ತರಣೆಯಾಗಿತ್ತು. ಇನ್ನೇನು ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಅಡಗುತಾಣ, ಶಸ್ತ್ರಾಸ್ತ್ರಗಳ ಶೇಖರಣೆ, ಯುವಕರಿಗೆ ತರಬೇತಿ ನೀಡುವ ಸಿದ್ಧತೆಯನ್ನು ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ.

ಮದುವೆ ಮನೆಯಲ್ಲಿ ಬಲೆಗೆ ಬಿದ್ದ ಹನೀಫ್!
ತಮಿಳುನಾಡು ಪೊಲೀಸರು ನೀಡಿದ್ದ ಸುಳಿವಿನ ಮೇರೆಗೆ ರಾಜ್ಯ ಆಂತರಿಕ ಭದ್ರತಾ ದಳ (ಐಎಸ್‌ಡಿ), ಸಿಸಿಬಿಯ ಒಂದು ತಂಡ ಖ್ವಾಜಾ ಮೊಹಮದ್‌ನ ತಂಡದ ಬಗ್ಗೆ ಮಾಹಿತಿ ಕಲೆ ಹಾಕುತ್ತಿತ್ತು. ಕೆ.ಆರ್‌. ಪುರದಲ್ಲಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹನೀಫ್ ಬಗ್ಗೆ ಬಾಯ್ಬಿಟ್ಟಿದ್ದ. ಡಿಸೆಂಬರ್‌ ಅಂತ್ಯದಲ್ಲಿ ಚನ್ನಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಹನೀಫ್ ಭಾಗಿಯಾಗಿರುವ ಸುಳಿವಿನ ಮೇರೆಗೆ ಅಲ್ಲಿಗೆ ತೆರಳಲಾಗಿತ್ತು. ಆತನನ್ನು ಹೊರಗಡೆ ಕರೆಯಿಸಿ ವಶಕ್ಕೆ ಪಡೆಯಲಾಗಿತ್ತು.

ಟ್ರಸ್ಟ್‌ ಬುಡಕ್ಕೆ ಬರಲಿದೆಯೇ ತನಿಖೆ?
ಪ್ರಮುಖ ಆರೋಪಿಗಳಾದ ಮೆಹಬೂಬ್‌ ಪಾಷಾ ಹಾಗೂ ಮನ್ಸೂರ್‌ ಖಾನ್‌ ಬೆಂಗಳೂರಿನಲ್ಲಿರುವ ಟ್ರಸ್ಟ್‌ವೊಂದರಲ್ಲಿ ಪ್ರಭಾವಿಗಳಾಗಿದ್ದಾರೆ. ಅದೇ ಟ್ರಸ್ಟ್‌ ಮೂಲಕ ಯುವಕರನ್ನು ಸೇರಿಸುತ್ತಿದ್ದರಲ್ಲದೆ ಹಣ ಸಂಗ್ರಹಿಸುತ್ತಿದ್ದರು. ಕೆಲವು ಯುವಕರನ್ನು ಮೈಂಡ್‌ ವಾಶ್‌ ಮಾಡಿ ಸಭೆಗಳಿಗೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಸಭೆಗಳಲ್ಲಿ ಸ್ಫೋಟಕ ಕೃತ್ಯ, ಆತ್ಮಾಹುತಿ ದಾಳಿ ಮತ್ತಿತರ ವಿಚಾರಗಳನ್ನು ಹೇಳಿಕೊಡುತ್ತಿದ್ದರು ಎಂಬ ಮಾಹಿತಿಯಿದೆ.

Advertisement

- ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next