Advertisement

ಎರಡು ದಶಕದ ಕಾಲ ತೂಗಿದ ಸೇತುವೆಗೆ ಬೇಕಿದೆ ಕಾಯಕಲ್ಪ

10:50 PM Jan 14, 2021 | Team Udayavani |

ಬೆಳ್ತಂಗಡಿ: ನದಿ ದಾಟಲು ತೆಪ್ಪವನ್ನು ಆಶ್ರಯಿಸಿದ್ದ ಕಾಲವೊಂದಿತ್ತು, ಬದಲಾದ ದಿನಗಳಲ್ಲಿ ಕಿರು ಸೇತುವೆ, ಕಿಂಡಿ ಅಣೆಕಟ್ಟುಗಳಿಗಾಗಿ ಪರ್ಯಾಯವಾಗಿ ತೂಗು ಸೇತುವೆಗಳ ನಿರ್ಮಾಣದಿಂದ ಅಗತ್ಯ ಸಂಪರ್ಕ ಸೇತುವಾಗಿ ಗ್ರಾಮೀಣ ಜನರಿಗೆ ಅನುಕೂಲವಾಗಿತ್ತು.

Advertisement

ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪ್ರವಾಹದ ಪ್ರತಾಪಕ್ಕೆ ಕಿಂಡಿ ಅಣೆಕಟ್ಟು, ಸೇತುವೆಗಳು ಜಲಸಮಾಧಿಯಾಗಿತ್ತು. ಇದಕ್ಕೆ ತಾಲೂಕಿನ ತೂಗುಸೇತುವೆಗಳು ಹೊರತಾಗಿಲ್ಲ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮುಂಡಾಜೆ ಗ್ರಾ.ಪಂ.ಗೆ ಒಳಪಟ್ಟಂತೆ ದೂಂಬೆಟ್ಟು ಬಳಿ ಮೃತ್ಯುಂಜಯ ಹೊಳೆಗೆ ನಿರ್ಮಿಸಿದ ತೂಗು ಸೇತುವೆ ಭವಿಷ್ಯವೂ ನಿರ್ವಹಣೆಯಿಲ್ಲದೆ ತೂಗುಯ್ನಾಲೆಯಲ್ಲಿದೆ.

ಸಂಸದ ಶ್ರೀಕಂಠಪ್ಪ ಅವರ ಅವಧಿ :

1999-2000ರಲ್ಲಿ ಅಂದಿನ ಚಿಕ್ಕಮಗಳೂರು ಸಂಸದರಾಗಿದ್ದ ಶ್ರೀಕಂಠಪ್ಪ ಅವರ 3 ಲಕ್ಷ ರೂ., ಶ್ರೀ ಕ್ಷೇತ್ರ ಧರ್ಮಸ್ಥಳ ಡಾ| ಡಿ.ವೀರೇಂದ್ರ ಹೆಗ್ಗಡೆ-1.50 ಲಕ್ಷ ರೂ., ಅಂದಿನ ಶಾಸಕ ಪ್ರಭಾಕರ ಬಂಗೇರ ಅವರ 1 ಲಕ್ಷ ರೂ. ಸೇರಿದಂತೆ ಸ್ಥಳೀಯಾಡಳಿತದ ಒಟ್ಟು 12 ಲಕ್ಷ ರೂ. ಅನುದಾನದಲ್ಲಿ 130 ಅಡಿ ಉದ್ದ 6 ಅಡಿ ಅಗಲದ ತೂಗು ಸೇತುವೆ ನಿರ್ಮಿಸಲಾಗಿತ್ತು. ಉಮಾನಾಥ ಪಾಠಕ್‌ ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತು ಸ್ಥಳೀಯರ ಸಹಕಾರದಿಂದ ದೂಂಬೆಟ್ಟು ಬಳಿ ತೂಗು ಸೇತುವೆ ರಚನೆಗೊಂಡಿತ್ತು. ಇದರಿಂದ ಕಡಿರುದ್ಯಾವರ, ಕಾನರ್ಪ ರಸ್ತೆಯಿಂದ ಕಕ್ಕಿಂಜೆ, ಚಾರ್ಮಾಡಿಗೆ ನಡೆದು ಸಾಗುವವರಿಗೆ 4 ಕಿ.ಮೀ. ಉಳಿತಾಯ ಆಗುತ್ತಿತ್ತು.

ಇಂಡಿ ಅಣೆಕಟ್ಟು, ಸೇತುವೆ ನಿರ್ಮಾಣಕ್ಕೆ ಬೇಡಿಕೆ :

Advertisement

ತಾಲೂಕಿನಲ್ಲಿ ಶಿಶಿಲ, ಮುಗೇರಡ್ಕ, ದೂಂಬೆಟ್ಟು ಸೇರಿದಂತೆ ಹಲವೆಡೆ ತೂಗು ಸೇತುವೆಗಳಿದ್ದವು. ಮುಗೇರಡ್ಕ ಬಳಿ ನೇತ್ರಾವತಿಗೆ ಅಡ್ಡಲಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿ ಹೋಗಿತ್ತು. ತಾತ್ಕಾಲಿಕವಾಗಿ ನದಿ ದಾಟಲು ಶಾಸಕ ಹರೀಶ್‌ ಪೂಂಜ ನಾಡದೋಣಿ ಒದಗಿಸಿದ್ದರು. ಇದೇ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಪ್ರಗತಿ ಕಂಡಿಲ್ಲ. ಶಿಶಿಲ ತೂಗು ಸೇತುವೆ ದುರಸ್ತಿ ನಡೆಸಲಾಗಿದೆ. ಪ್ರಸಕ್ತ ದೂಂಬೆಟ್ಟು ಪರಿಸರದಲ್ಲಿ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿಮಾರ್ಣಕ್ಕೆ ಬೇಡಿಕೆ ಇದ್ದು, ಸೇತುವೆ ನಿರ್ಮಾಣವಾದಲ್ಲಿ ಸಹಕಾರಿಯಾಗಲಿದೆ.

ಕಾಲನಿ ಅಭಿವೃದ್ಧಿಗೂ ಪ್ರಯೋಜನ :

ದೂಂಬೆಟ್ಟು ಸಮೀಪ ಸುಮಾರು 20ರಷ್ಟು ಪರಿಶಿಷ್ಟ ವರ್ಗಕ್ಕೆ ಸೇರಿದ ಮನೆಗಳಿವೆ. ಕಾನರ್ಪ, ಕಡಿರುದ್ಯಾವರ, ಮುಂಡಾಜೆಗೆ ಅಗತ್ಯ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ಕೃಷಿಕರಿಗೆ, ಹೈನುಗಾರರಿಗೆ, ಗೊಬ್ಬರ ಸಾಗಾಟಕ್ಕೆ, ಆರೋಗ್ಯ ಕೇಂದ್ರಕ್ಕೆ ತೆರಳಲು, ಶಾಲಾ ಮಕ್ಕಳಿಗೆ, ಕೂಲಿ ಕೆಲಸಕ್ಕೆ ತೆರಳಲು ಅಗತ್ಯ ಸಂಪರ್ಕ ರಸ್ತೆ ಯಾಗಿದೆ. ಕಡಿರುದ್ಯಾವರ ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರವಿದೆ. ಸೇತುವೆ ಸಂಪರ್ಕಿಸುವ ರಸ್ತೆಗೆ 25 ಲಕ್ಷ ರೂ.ನ ಕಾಂಕ್ರೀಟ್‌ ಕಾಮಗಾರಿ ನಡೆಸಲಾಗಿದೆ. ಉಳಿದಂತೆ 1 ಕಿ.ಮೀ. ನಷ್ಟು ಕಾಂಕ್ರೀಟ್‌ ಆಗಬೇಕಿದೆ. ತೂಗು ಸೇತುವೆ ಸಂಪರ್ಕ ರಸ್ತೆಯು ದುರಸ್ತಿ ನಡೆಸದಿರುವುದರಿಂದ ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ.

ಪ್ರವಾಹದಲ್ಲಿ ಹಾನಿಗೀಡಾದ ತಾಲೂಕಿನ ತೂಗು ಸೇತುವೆಗಳ ದುರಸಿ ¤ಕಾರ್ಯ ಒಂದೊಮ್ಮೆ ನಡೆದಿದೆ. ದೂಂಬೆಟ್ಟು ಸೇತುವೆ ಪರಿಶೀಲನೆ ನಡೆಸಿ ಸೇತುವೆ ಅವಶ್ಯ ಕಂಡಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಮುಗೇರಡ್ಕದಲ್ಲಿ ಸೇತುವೆ ಜತೆಗೆ ನೀರಿನ ಕೊರತೆ ನೀಗಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.-ಹರೀಶ್‌ ಪೂಂಜ, ಶಾಸಕರು

20 ವರ್ಷಗಳ ಹಿಂದೆ ನಿರ್ಮಾಣವಾದ ತೂಗುಸೇತುವೆ ಅಪಾಯದಲ್ಲಿದೆ. ಹೀಗಾಗಿ ನೂತನ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಕೃಷಿ ನೀರಿಗೆ ಅವಶ್ಯ ನೀರು ಲಭ್ಯವಾಗುವುದರೊಂದಿಗೆ ಕೃಷಿಕರಿಗೆ ಅಗತ್ಯ ಸಂಚಾರಕ್ಕೆ ಅನುಕೂಲವಾಗಲಿದೆ. -ಶಶಿಧರ್‌ ಎಸ್‌. ಕಾಡಿಲ್ಕರ್‌, ದೂಂಬೆಟ್ಟು, ಕೇತಕ್‌ ಕುಂಜ್‌ ನಿವಾಸಿ

 

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next