Advertisement

ಮೆದುಳು ಜ್ವರ; ನಿರ್ಲಕ್ಷ್ಯ ಮಾಡಿದರೆ ಪ್ರಾಣಾಪಾಯ

10:27 PM Jul 15, 2019 | Sriram |

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗ ಜ್ವರ. ಈ ಜ್ವರದಲ್ಲಿ ಬಹಳಷ್ಟು ವಿಧಗಳಿವೆ. ಡೆಂಗ್ಯೂ, ಮಲೇರಿಯಾ ಹೀಗೆ ಅನೇಕ ಜ್ವರಗಳು ಈಗಾಗಲೇ ದೇಶದೆಲ್ಲೆಡೆ ಮನುಷ್ಯನನ್ನು ಬಿಡದೇ ಕಾಡುತ್ತಿವೆ. ಇದೀಗ ಈ ಜ್ವರಗಳ ಪಟ್ಟಿಗೆ ಹೊಸ ಸೇರ್ಪಡೆ ಮೆದುಳು ಜ್ವರ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಜ್ವರ ಕಂಡುಬಂದಿಲ್ಲವಾದರೂ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

Advertisement

ಕಾಯಿಲೆಗಳು ಹೇಳಿಕೇಳಿ ಬರುವಂತದ್ದಲ್ಲ. ಒಂದು ಪ್ರದೇಶದಲ್ಲಿ ಒಬ್ಬನಿಗೆ ಜ್ವರ ಬಂತೆಂದರೆ ಸಾಂಕ್ರಾಮಿಕವಾಗಿ ಎಲ್ಲರನ್ನೂ ವ್ಯಾಪಿಸಿಕೊಳ್ಳುತ್ತದೆ. ಅಂತಹ ಜ್ವರಗಳ ಪೈಕಿ ಮೆದುಳು ಜ್ವರವೂ ಒಂದು. ಇತ್ತೀಚೆಗಷ್ಟೇ ಬಿಹಾರ ರಾಜ್ಯದಲ್ಲಿ ಈ ಮೆದುಳು ಜ್ವರವು ಹಲವಾರು ಮಕ್ಕಳನ್ನು ಬಲಿ ತೆಗೆದುಕೊಂಡ ವಿಷಾದ ಜನರಲ್ಲಿ ಇನ್ನೂ ಮರೆಯಾಗಿಲ್ಲ. ಬಿಹಾರದಲ್ಲಿ ಜ್ವರ ವ್ಯಾಪಿಸಿದಂತೆ ಇತರ ರಾಜ್ಯಗಳಲ್ಲಿಯೂ ಈ ಜ್ವರದ ಬಗ್ಗೆ ಹೈ ಅಲರ್ಟ್‌ ಶುರುವಾಗಿತ್ತು.

ಅಷ್ಟಕ್ಕೂ ಏನಿದು ಮೆದುಳು ಜ್ವರ, ಹೇಗೆ ಬರುತ್ತದೆ ಎಂಬುದನ್ನು ತಿಳಿಯಬೇಕಾದುದು ಅವಶ್ಯವೂ ಆಗಿದೆ. ಜ್ವರಗಳ ರಾಜ ಎಂದೇ ಮೆದುಳು ಜ್ವರವನ್ನು ಉಲ್ಲೇಖೀಸಲಾಗುತ್ತದೆ. ಏಶ್ಯ ಮತ್ತು ಪಶ್ಚಿಮ ಪೆಸಿಫಿಕ್‌ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಮೆದುಳು ಜ್ವರವು “ಜಪಾನೀಸ್‌ ಎನ್‌ಸೆಪಲೈಟಿಸ್‌’ ಎಂಬುದಾಗಿಯೂ ನಾಮಾಂಕಿತಗೊಂಡಿದೆ. ಸಾಕು ಹಂದಿಗಳು, ವಲಸೆ ಹೋಗುವ ಬಿಳಿ ಕೊಕ್ಕರೆ, ಕಾಡು ಹಕ್ಕಿಗಳಲ್ಲಿ ಈ ವೈರಸ್‌ ಕಂಡು ಬಂದು ಕ್ಯೂಲೆಕ್ಸ್‌ ಎಂಬ ಜಾತಿಯ ಸೊಳ್ಳೆ ಕಡಿತದಿಂದಾಗಿ ಮನುಷ್ಯನ ದೇಹ ಪ್ರವೇಶಿಸುತ್ತದೆ.

ಮೆದುಳು ಜ್ವರವು ಒಂದಿಡೀ ಪ್ರದೇಶವನ್ನು ಆಕ್ರಮಿಸಿದರೂ, ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಮಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ಕಾಯಿಲೆಗಳಂತೆ ಸೊಳ್ಳೆ ಕಡಿತದಿಂದಲೇ ಮೆದುಳು ಜ್ವರ ಮನುಷ್ಯರನ್ನು ಬಾಧಿಸುತ್ತದೆ. ಮೆದುಳು ಜ್ವರ ಮಾರಣಾಂತಿಕವಲ್ಲದಿದ್ದರೂ, ಮೆದುಳಿನ ಊತಕ್ಕೆ ಗುರಿಯಾಗಿ ಸಾವನ್ನಪ್ಪುವ ಸಂದರ್ಭಗಳೂ ಇರುತ್ತವೆ.

ರೋಗ ಲಕ್ಷಣಗಳು
ಸೊಳ್ಳೆ ಕಡಿತಕ್ಕೊಳಗಾದ ಮನುಷ್ಯನ ದೇಹದಲ್ಲಿ ಮೆದುಳು ಜ್ವರದ ಲಕ್ಷಣ ಕಾಣಿಸಿಕೊಳ್ಳಲು ಸುಮಾರು 5ರಿಂದ 15 ದಿನ ತಗಲುತ್ತದೆ. ಆದರೆ, ಔಷಧವಿಲ್ಲದೆಯೇ ಹೆಚ್ಚಿನವರು ಗುಣಮುಖರಾದರೆ, 100ರಲ್ಲಿ ಒಂದಿಬ್ಬರು ವಿಪರೀತ ಹಂತಕ್ಕೆ ತಲುಪುತ್ತಾರೆ. ವಿಪರೀತ ಜ್ವರ, ಅಸಹನೀಯ ತಲೆನೋವು, ಆಲಸಿಕೆ, ಆಯಾಸ, ಹಸಿವಿಲ್ಲದಿರುವುದು, ಚಡಪಡಿಕೆ, ನರ ದೌರ್ಬಲ್ಯ, ವಾಂತಿ, ಅಪಸ್ಮಾರದಂತಹ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಭೇಟಿ ನೀಡುವುದು ಉತ್ತಮ. ಜ್ವರ ಉಲ್ಬಣವಾದರೆ ಕೋಮಾ ಹಂತಕ್ಕೆ ತೆರಳುವ ಸಾಧ್ಯತೆಗಳಿರುತ್ತವೆ.

Advertisement

ಗ್ರಾಮೀಣ
ಭಾಗದಲ್ಲೇ ಹೆಚ್ಚು
ದ್ದೆಗಾಡಿನ ಪ್ರದೇಶಗಳು, ಹಳ್ಳಿಗಳಲ್ಲಿ ಕಾಣಿಸಿಕೊಳ್ಳುವ ಸಂದರ್ಭಗಳೇ ಹೆಚ್ಚಿರುತ್ತದೆ. ಉಷ್ಣವಲಯದಲ್ಲಿ ಮಳೆಗಾಲದಲ್ಲಿ ಹೆಚ್ಚು ಈ ರೋಗ ಕಾಣಿಸಿಕೊಳ್ಳುತ್ತದೆ. ಆದರೆ, ಇದಕ್ಕೆ ನಿರ್ದಿಷ್ಟವಾದ ಯಾವುದೇ ಚಿಕಿತ್ಸೆ ಇರುವುದಿಲ್ಲ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ಬಳಿಕ ಕಾಯಿಲೆ ಉಲ್ಬಣಗೊಳ್ಳದಂತೆ ವೈದ್ಯರು ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ದೇಹಕ್ಕೆ ಪೌಷ್ಟಿಕಾಂಶ ಒದಗಿಸುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತೆ ಮಾಡುವುದರ ಮೂಲಕ ಜ್ವರ ಕಡಿಮೆಯಾಗುವಂತೆ ವೈದ್ಯರು ನೋಡಿಕೊಳ್ಳುತ್ತಾರೆ. ಜತೆಗೆ ಇತರ ಸಾಂಕ್ರಾಮಿಕ ರೋಗಗಳಂತೆ ಜ್ವರ ವ್ಯಾಪಕವಾಗಿರುವ ಪ್ರದೇಶಗಳಿಗೆ ವೈದ್ಯರು ತೆರಳಿ ಲಸಿಕೆ ನೀಡುವ ಮೂಲಕ ವ್ಯಾಪಿಸುವುದನ್ನು ತಡೆಗಟ್ಟುತ್ತಾರೆ.

ಮೆದುಳು ಜ್ವರ ತಡೆಗಟ್ಟುವಿಕೆ
ಸೊಳ್ಳೆ ವಿಕರ್ಷಣಾ ದ್ರಾವಣಗಳ ಉಪಯೋಗ, ಗದ್ದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆನಾಶಕ ದ್ರಾವಣ ಸಿಂಪಡಣೆ, ಉದ್ದ ತೋಳಿನ ಬಟ್ಟೆಗಳ ಬಳಕೆ, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳುವುದರಿಂದ ಮೆದುಳು ಜ್ವರ ಬಾರದಂತೆ ನೋಡಿಕೊಳ್ಳಬಹುದು. ಸೊಳ್ಳೆ ಕಡಿತದ ಬಗ್ಗೆ ಗೊತ್ತಾದಲ್ಲಿ ತಡಮಾಡದೆ ವೈದ್ಯರ ಬಳಿ ತೆರಳಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆ ನಿಯಂತ್ರಣಕ್ಕೆ ನಿರಂತರ ಫಾಗಿಂಗ್‌ ಅಗತ್ಯ. ಹಂದಿ ಸಾಕಾಣಿಕೆದಾರರು ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.

ಚ್ಚೆತ್ತುಕೊಳ್ಳಿ
ಮಂಗಳೂರಿನಲ್ಲಿ ಮೆದುಳು ಜ್ವರ ಪ್ರಕರಣಗಳಿಲ್ಲ. ಆದರೆ, ಇತರ ಸಾಂಕ್ರಾಮಿಕ ಕಾಯಿಲೆಗಳಂತೆ ಮೆದುಳು ಜ್ವರ ಹರಡದಂತೆ ತಡೆಯಲು ಜನರು ಎಚ್ಚೆತ್ತುಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಮನೆ ಅಕ್ಕಪಕ್ಕ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯಾವುದೇ ಜ್ವರಗಳನ್ನು ನಿರ್ಲಕ್ಷé ಮಾಡದೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು.
-ಡಾ| ಮಂಜಯ್ಯ ಶೆಟ್ಟಿ ವೈದ್ಯಾಧಿಕಾರಿ

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next