Advertisement

ತುಂಬಿದ ಭದ್ರೆಗೆ ಶಾಸಕರಿಂದ ಬಾಗಿನ

03:39 PM Jul 30, 2018 | Team Udayavani |

ಭದ್ರಾವತಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತಮ ಮಳೆಯಾಗುತ್ತಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ ಎಂದು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಅವರು ಭಾನುವಾರ ಭದ್ರಾ ಜಲಾಶಯದ ಅತಿಥಿ ಗೃಹದ ಮುಂಭಾಗದಲ್ಲಿ ನಡೆದ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ
ಭಾಗವಹಿಸಿ ಮಾತನಾಡಿದರು.

Advertisement

 ಸತತ ಮೂರು ವರ್ಷಗಳ ಮಳೆ ಕೊರತೆಯಿಂದಾಗಿ ಜಲಾಶಯಗಳು ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ
ಉತ್ತಮ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿದ್ದು ರೈತರ ಮುಖದಲ್ಲಿ ಸಂತಸ ಕಾಣುವಂತಾಗಿದೆ. ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವರೊಂದಿಗೆ ನಡೆದ ಸಭೆಯಲ್ಲಿ ಇಲ್ಲಿನ ಶಾಸಕ ಬಿ.ಕೆ. ಸಂಗಮೇಶ್‌ ಸಹ ಪಾಲ್ಗೊಂಡಿದ್ದು ಭದ್ರಾ ಜಲಾಶಯದಿಂದ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ಸಮ್ಮತಿ ನೀಡಿದೆ. ಪ್ರತೀ ವರ್ಷ ಇದೇ ರೀತಿ ಉತ್ತಮ ಮಳೆಯಾಗಿ ನಾವೆಲ್ಲರೂ ಜಂಟಿಯಾಗಿ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವಂತಾಗಲಿ ಎಂದರು.

ಹರಿಹರದ ಶಾಸಕ ರಾಮಪ್ಪ ಮಾತನಾಡಿ, ಈ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರನ್ನು ನೋಡಲು ಬರುವ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದರು.

ಜಲಾಶಯದ ಪರಿಸರವನ್ನು ಇನ್ನಷ್ಟು ಆಧುನೀಕರಣಗೊಳಿಸಿ ವಿಶ್ವೇಶ್ವರಯ್ಯನವರ ನೆನಪಿಗಾಗಿ ಅವರ ಪುತ್ಥಳಿಯನ್ನು ಇಲ್ಲಿ ಪ್ರತಿಷ್ಠಾಪಿಸಬೇಕು ಎಂದರು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಕ್ಷೇತ್ರದ ಜೀವನದಿ ಭದ್ರೆಗೆ ಕ್ಷೇತ್ರದ ನಾಗರಿಕರು, ಬೆಂಬಲಿಗರು ಹಾಗೂ ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.

 ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ನನ್ನನ್ನು ಕ್ಷೇತ್ರದ ಜನತೆ ಶಾಸಕನಾಗಿ ಆರಿಸಿದಾಗಲೆಲ್ಲ ಮಳೆ ಉತ್ತಮವಾಗಿ ಆಗಿ ಭದ್ರಾ ಜಲಾಶಯ ತುಂಬಿದೆ. ನಾನು ಸೋತಾಗ ಜಲಾಶಯ ತುಂಬಿಲ್ಲ. ನಾನು 3ಬಾರಿ ಶಾಸಕನಾದಾಗಾಲೂ ಸಹ ತುಂಬಿದೆ ಎಂದರು.

Advertisement

ತಾವು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ. ಆದರೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಮಂತ್ರಿಯಾಗುವ ನಂಬಿಕೆ ಇದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ತಮಗೆ ಸಚಿವ ಸ್ಥಾನ ನೀಡುವ ಸಂಬಂಧ ಈಗಾಗಲೇ ಮನವರಿಕೆ ಮಾಡಲಾಗಿದೆ. ಶ್ರಾವಣ ಮಾಸದಲ್ಲಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದ್ದು, ತಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಿ.ಕೆ. ಸಂಗಮೇಶ್‌ ದೋಣಿಯಲ್ಲಿ ಭದ್ರಾ ಜಲಾಶಯದ ಮಧ್ಯಭಾಗಕ್ಕೆ ತೆರಳಿ ಬಾಗಿನ ಅರ್ಪಿಸಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ ನಾಯ್ಕ ಮಾತನಾಡಿ, ಭದ್ರಾ ಜಲಾಶಯ ದಾವಣಗೆರೆ, ಶಿವಮೊಗ್ಗ ಕ್ಷೇತ್ರದ ಜನರ ಜೀವನದ ಅವಿಭಾಜ್ಯ ಅಂಗದಂತಾಗಿದ್ದು ಈ ಜಲಾಶಯ ತುಂಬಿರುವುದು ಕ್ಷೇತ್ರದ ಜನತೆ ಹಾಗೂ ರೈತರಿಗೆ ಬಹಳ ಸಂತಸ ತಂದಿದೆ ಎಂದರು.

ವೇದಿಕೆಯಲ್ಲಿ ಏಕೈಕ ಬಿಜೆಪಿ ಶಾಸಕ: ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಏರ್ಪಡಿಸಿದ್ದ ಬಾಗಿನ ಸಮರ್ಪಣೆಯ
ವೇದಿಕೆ ಕಾರ್ಯಕ್ರಮದಲ್ಲಿ ದಾವಣಗೆರೆ, ಹರಿಹರ ಕ್ಷೇತ್ರದ ಕಾಂಗ್ರೆಸ್‌ ಶಾಸಕರು ಭಾಗವಹಿಸಿದ್ದರು. ಹಾಗಾಗಿ ಭಾಷಣ
ಮಾಡಿದ ಪ್ರತಿಯೊಬ್ಬರೂ ತಮ್ಮ ಭಾಷಣದಲ್ಲಿ ವೇದಿಕೆ ಮೇಲಿರುವ ಕಾಂಗ್ರೆಸ್‌ ಪಕ್ಷದ ಶಾಸಕರೇ, ನಾಯಕರೇ
ಎಂದು ಭಾಷಣ ಮಾಡುತ್ತಿದ್ದರು. 

ಆದರೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ ನಾಯ್ಕ ಅವರು ಯಾವಾಗ
ಕಾಂಗ್ರೆಸ್‌ ಸೇರಿದರೆಂದು ಜನರ ಮಾತನಾಡಿಕೊಳ್ಳುತ್ತಿದ್ದರು. ಸ್ವಾಮೀಜಿಗಳಾದ ಸಿದ್ಧರಾಮೇಶ್ವರ, ಲಕ್ಷ್ಮಣಾರ್ಯ ಹಾಗೂ ಕೃಷ್ಣ ಮೂರ್ತಿ ಸೋಮಯಾಜಿ, ಮೌಲಾನಾ ಸಿದ್ದಿಕ್‌, ಡೆವಿಡಾನ್‌, ಮಾಜಿ ಶಾಸಕ ರಾಜೇಶ್‌, ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ, ದಾವಣಗೆರೆ ಮೇಯರ್‌ ಪಲ್ಲಾಗಟ್ಟಿ, ಭದ್ರಾವತಿ ಕಾಂಗ್ರೆಸ್‌ ನಗರಾಧ್ಯಕ್ಷ ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಷಡಾಕ್ಷರಿ,ತಹೀಲ್ದಾರ್‌ ನಾಗರಾಜ್‌, ಮುಖಂಡರಾದ ಬಿ.ಟಿ. ನಾಗರಾಜ್‌, ಮಾಜಿ ಉಪಮೇಯರ್‌ ಮಹಮದ್‌ ಸನಾವುಲ್ಲಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next