Advertisement

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನ: ಪ್ರಮೋದ್‌

11:26 AM Sep 24, 2017 | Team Udayavani |

ಉಡುಪಿ: ಸ್ಥಗಿತಗೊಂಡಿರುವ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ನಿರ್ಧರಿಸಲಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಪ್ರಸ್ತುತ ಇರುವ ಕಾರ್ಖಾನೆ ಕಟ್ಟಡ, ಯಂತ್ರೋಪಕರಣಗಳನ್ನು ಉಳಿಸಿ ಪುನರಾರಂಭಿಸುವ ಸಾಧ್ಯತೆ ಬಗ್ಗೆ, ಹೊಸ ಕಟ್ಟಡ, ಆಧುನಿಕ ಯಂತ್ರಗಳನ್ನು ಅಳವಡಿಸುವ ಬಗ್ಗೆ ತಜ್ಞರ ವರದಿ, ಹಣಕಾಸಿನ ವೆಚ್ಚದ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು. ಈ ಸಂಬಂಧ ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಅವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಮುಖ್ಯಮಂತ್ರಿ ಬಳಿ ನಿಯೋಗ ತೆರಳುವುದಾಗಿ ಸಚಿವರು ತಿಳಿಸಿದರು.

ಕಬ್ಬು ಬೆಳೆ ಸಾಧ್ಯ
ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮಾತನಾಡಿ, ಈಗ ವಾರಾಹಿ ನೀರಿನ ಪ್ರಯೋಜನ ದೊರೆಯುತ್ತಿರುವುದರಿಂದ ಕಬ್ಬು ಬೆಳೆಯಲು ಸಾಧ್ಯವಿದೆ. ಪ್ರಸ್ತುತ ವಾರಾಹಿ ಯೋಜನೆಯಿಂದ 3,800 ಎಕರೆಗೆ ನೀರಾವರಿ ಸೌಲಭ್ಯ ದೊರೆತಿದೆ. ಕಾರ್ಖಾನೆ ಪುನಶ್ಚೇತನಕ್ಕೆ ಹಣದ ಆವಶ್ಯಕತೆಗಾಗಿ ಕಾರ್ಖಾನೆ 25 ಎಕರೆ ಪ್ರದೇಶವನ್ನು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಮಾರಾಟ ಆದಾಯ ಕ್ರೋಡೀಕರಣ ಮಾಡಬಹುದು. ಸಕ್ಕರೆ ಕಾರ್ಖಾನೆಯನ್ನು ವರ್ಷದಲ್ಲಿ 10 ತಿಂಗಳು ಕಾರ್ಯ ನಿರ್ವಹಿಸುವ ಯೋಜನೆ ರೂಪಿಸಿ. ನೀರಾವರಿ ಸೌಲಭ್ಯ ಇರುವ ಕಾರಣ ರೈತರು ವರ್ಷಪೂರ್ತಿ ಕಬ್ಬು ಬೆಳೆಯಲು ಸಾಧ್ಯ ಎಂದು ಹೇಳಿದರು.

ಸಕಾಲದಲ್ಲಿ ಹಣ ಪೂರೈಕೆ ಅಗತ್ಯ
ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, 2,800 ರೈತರು ಈಗಾಗಲೇ ಕಬ್ಬು ಬೆಳೆದು ಕಾರ್ಖಾನೆಗೆ ಪೂರೈಸುವುದಾಗಿ ಒಪ್ಪಿಗೆ ಪತ್ರ ನೀಡಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ ಪಡಿಸಿ ಕಬ್ಬು ಬೆಳೆಯುವ ರೈತರಿಗೆ ಸಕಾಲದಲ್ಲಿ ಹಣ ಪೂರೈಸುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ರೈತರ ಉತ್ಸಾಹ
ಭಾರತೀಯ ಕಿಸಾನ್‌ ಸಂಘದ ಬಿ.ವಿ. ಪೂಜಾರಿ, ಸತ್ಯನಾರಾಯಣ ಉಡುಪ ಮಾತನಾಡಿ, ಸರಕಾರ ಕಬ್ಬಿಗೆ ಕನಿಷ್ಠ 3,000 ರೂ. ಬೆಂಬಲ ಬೆಲೆ ಘೋಷಣೆ ಮಾಡಿ, ಕಬ್ಬು ಲಾಭದಾಯಕ ಎಂಬ ಭಾವನೆಯನ್ನು ರೈತರಲ್ಲಿ ಮೂಡಿಸಬೇಕು. ಕಬ್ಬು ಬೆಳೆಯಲು ರೈತರು ಸಿದ್ಧರಿದ್ದಾರೆ ಎಂದರು.

Advertisement

ವಿಸ್ತೃತ ವರದಿ ಸಿದ್ಧ
ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ ಮಾತನಾಡಿ, ಕಾರ್ಖಾನೆ ಪುನಶ್ಚೇತನಕ್ಕೆ 24 ಕೋ.ರೂ. ಅಂದಾಜು ವರದಿ ಹಾಗೂ ವಿಸ್ತರಣೆಗಾಗಿ 60 ಕೋ.ರೂ. ಮೊತ್ತದ ಅಂದಾಜು ವರದಿಯನ್ನು ತಜ್ಞರಿಂದ ಸಿದ್ದಪಡಿಸಿದೆ. ಪುನಶ್ಚೇತನಗೊಳಿಸುವ ಕುರಿತಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತರು ವರದಿಯನ್ನು ನೀಡಿದ್ದು, ಕೃಷಿ ಇಲಾಖೆಯಿಂದಲೂ ಸಹ ಸೂಕ್ತ ಆಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.

ಕಾರ್ಖಾನೆ ಜಾಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿ.ವಿ., ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲು ಮಾತ್ರ ಚಿಂತಿಸಿದ್ದು ಕೈಗಾರಿಕಾ ಇಲಾಖೆಗೆ ನೀಡುವ ಯಾವುದೇ ಉದ್ದೇಶ ಇಲ್ಲ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಸಹಕಾರ ಇಲಾಖೆಯ ಉಪನಿಬಂಧಕ ಪ್ರವೀಣ್‌ ನಾಯಕ್‌, ವಾರಾಹಿ ಮುಖ್ಯ ಎಂಜಿನಿಯರ್‌ ಪದ್ಮನಾಭ, ಬೋಸ್ಲಂ ಫೆರ್ನಾಂಡಿಸ್‌, ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next