Advertisement

ಗುರುಪ್ರಥಮ ವಾಸದೇವಾಷ್ಟಕ ನೃತ್ಯ ರೂಪಕ

06:32 PM Apr 25, 2019 | Team Udayavani |

ಮಂಗಳೂರು ವಿಶ್ವ ವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಾರಾಯಣ ಗುರುಗಳ ಬಗ್ಗೆ ವಿಚಾರ ಸಂಕಿರಣವನ್ನು ಯುವವಾಹಿನಿ ಸಹಯೋಗದಲ್ಲಿ ಆಯೋಜಿಸಿತ್ತು.ಈ ಸಂದರ್ಭದಲ್ಲಿ ಗುರುಗಳ ಪ್ರಥಮ ರಚನೆಯಾದ “ವಾಸುದೇವಾಷ್ಟಕ’ವನ್ನು ಅರವಿಂದ ಚೊಕ್ಕಾಡಿಯವರ ಪರಿಕಲ್ಪನೆಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆಯ ಆರು ಮತ್ತು ಏಳನೆಯ ತರಗತಿಯ ವಿದ್ಯಾರ್ಥಿಗಳು ನೃತ್ಯ ರೂಪಕವಾಗಿ ಪ್ರದರ್ಶಿಸಿದರು.

Advertisement

1876ರಲ್ಲಿ ನಾರಾಯಣ ಗುರುಗಳು ರಾಮನ್‌ ಪಿಳ್ಳೆ ಅವರ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಒಮ್ಮೆ ನಾರಾಯಣ ಗುರುಗಳು ಮೂರ್ಚೆ ಹೋಗಿದ್ದರು.ಮೂರ್ಚೆಯಿಂದ ಎದ್ದ ಅವರ ಬಳಿ ರಾಮನ್‌ ಪಿಳ್ಳೆ ಏನಾಗಿತ್ತು ಎಂದು ಕೇಳಿದಾಗ ನಾರಾಯಣ ಗುರುಗಳು,ನಾನು ಕೃಷ್ಣನನ್ನು ನೋಡಿ ಬಂದೆ ಎನ್ನುತ್ತಾರೆ.ನೀನು ನೋಡಿದ ಕೃಷ್ಣ ಹೇಗಿದ್ದ ಎಂದು ಕೇಳಿದಾಗ “ಭೂಯೋವೃತ್ತಿರ ಪಾಸೃತಾಥ್‌ ಭುವನಂ ಸತ್ಯೇವಂ ಮಸ್ತ ಯಥೌ ಪೀಯೂಷಧ್ವನಿ ರಸ್ತಮಾಪ ಪರಿತೋ ವ್ಯಾಪತ್ಛ ದಿವ್ಯಪ್ರಭಾ’ ಎಂದು ಉತ್ತರಿಸುತ್ತಾರೆ.ಆಗ ರಾಮನ್‌ ಪಿಳ್ಳೆ ಅವರು ಕೃಷ್ಣನ ಈ ವಿವರಣೆಯನ್ನು ಪೂರ್ಣ ರೂಪದಲ್ಲಿ ಬರೆಯುವಂತೆ ಹೇಳಿದರು.ಆಗ ನಾರಾಯಣ ಗುರುಗಳು ರಚಿಸಿದ್ದೇ ಪೂರ್ಣ ರೂಪದ ಅವರ ಮೊದಲ ರಚನೆ “ಶ್ರೀ ವಾಸುದೇವಾಷ್ಟಕಂ’.

“ಶ್ರೀವಾಸುದೇವ ಸರಸೀರುಹ ಪಾಂಚಜನ್ಯ ಕೌಮೋದಕೀಭಯ ನಿವಾರಣ ಚಕ್ರಪಾಣೇ…’ಎಂದು ಪ್ರಾರಂಭವಾಗುವ ವಾಸುದೇವಾಷ್ಟಕವು ಕೃಷ್ಣನ ವ್ಯಕ್ತಿತ್ವದ ಹಲವು ಮಗ್ಗುಲುಗಳನ್ನು ವರ್ಣಿಸುವುದಲ್ಲದೆ,ಕೃಷ್ಣನ ಮೂಲ ರೂಪವಾದ ವಿಷ್ಣುವನ್ನು ಪ್ರತೀ ನುಡಿಯಲ್ಲಿಯೂ ನೆನೆಯುತ್ತದೆ. ದ್ವೆ„ತದಿಂದ ಅದ್ವೆ„ತದ ಕಡೆಗಿನ ಜಿಗಿತವನ್ನೂ ಕಾಣುತ್ತದೆ.

ಗುರುಗಳ ಈ ರಚನೆಯನ್ನು ಸ್ವಸ್ತಿಕ್‌ ಮತ್ತು ಪದ್ಮರೇಖಾ ಹಿಂಧೋಳ ರಾಗದಲ್ಲಿ ಸುಶ್ರಾವ್ಯವಾಗಿ ಹಾಡಿದ್ದರು. ನೃತ್ಯ ರೂಪಕಕ್ಕೆ ಪಾತ್ರ ರಚನೆಯ ಸ್ವರೂಪ ಆಸಕ್ತಿಯುತವಾಗಿತ್ತು.ಕೃಷ್ಣನ ವಿವಿಧ ವ್ಯಕ್ತಿತ್ವವನ್ನು ಕಾಣಿಸುವ ಸಲುವಾಗಿ ರಾಧೆಯ ಜೊತೆಯಲ್ಲಿರುವ ಬಾಲಕೃಷ್ಣ ಮತ್ತು ಅರ್ಜುನನ ಜೊತೆಯಲ್ಲಿರುವ ಯೋಗೀಶ್ವರ ಕೃಷ್ಣನ ಪಾತ್ರವನ್ನು ಸೃಷ್ಟಿಸಲಾಗಿತ್ತು.ಬಾಲಕೃಷ್ಣ ಮತ್ತು ರಾಧೆಗೆ ವಾಸುದೇವಾಷ್ಟಕದಲ್ಲಿ ಕಾಣಿಸುವ ಕೃಷ್ಣನ ವಿವಿಧ ಚಟುವಟಿಕೆಗಳನ್ನು ಸೂಚಿಸುವ ನೃತ್ಯವನ್ನು ಸಂಯೋಜಿಸಲಾಗಿತ್ತು.ಯೋಗೀಶ್ವರ ಕೃಷ್ಣ ಮತ್ತು ಅರ್ಜುನನಿಗೆ ವಾಸುದೇವಾಷ್ಟಕವು ಸೂಚಿಸುವ ತತ್ವಗಳನ್ನು ಕಾಣಿಸುವಂತೆ ಸಂವಾದವನ್ನು ಸಂಯೋಜಿಸಲಾಗಿತ್ತು.ಆದರೆ ಸಂವಾದ ವಾಸುದೇವಾಷ್ಟಕದ ಗಾಯನದ ಆಸ್ವಾದನೆಯನ್ನು ಹಾಳು ಮಾಡುತ್ತದೆ. ಅದಕ್ಕಾಗಿ ಮಕ್ಕಳಿಗೆ ವಾಸುದೇವಾಷ್ಟಕದ ಅವಶ್ಯಕತೆಗೆ ಹೊಂದುವ ಭಗವದ್ಗೀತೆಯ ಕೆಲವು ಭಾಗಗಳನ್ನು ಬಾಯಿಪಾಠ ಮಾಡಿಸಿ ಅದನ್ನು ಆಂಗಿಕ ಅಭಿನಯ ಮತ್ತು ತುಟಿ ಚಲನೆಯಲ್ಲಿ ಸೂಚಿಸುವಂತೆ ಮೌನ ಸಂವಾದವಾಗಿ ಪ್ರದರ್ಶಿಸಲಾಯಿತು.ಮಕ್ಕಳೇ ತಯಾರಿಸಿದ ಅರ್ಜುನನ ಬಿಲ್ಲು,ಬಾಣ,ಬತ್ತಳಿಕೆಗಳು,ಗಾಯನದಲ್ಲಿ ಪಾಂಚಜನ್ಯ ಎಂದು ಬಂದಾಗ ಇಡೀ ನೃತ್ಯ ತಂಡ ಸ್ತಬ್ಧವಾಗಿ ಕೃಷ್ಣನ ಮುಂಭಾಗಕ್ಕೆ ಬಂದು ಶಂಖ ಊದುವುದು ಈ ಭಾಗದ ಆಕರ್ಷಕ ಅಂಶಗಳಾಗಿದ್ದವು.

ವಾಸುದೇವಾಷ್ಟಕದ ಪ್ರತೀ ನುಡಿಯೂ, “ಶ್ರೀಭೂಪತೇ ಹರಹರೇ ಸಕಲ ಕಲಾಮಯಂ ಮೇ’ ಎಂದು ಕೊನೆಯಾಗುತ್ತದೆ. ಆಗ ಕೃಷ್ಣನ ಮೂಲರೂಪವಾದ ವಿಷ್ಣುವನ್ನು ತೋರಿಸಬೇಕು.ವಿಷ್ಣು ಶ್ರೀಭೂಪತಿಯಾಗಿ ಬರುತ್ತಾನೆ.ಆದ್ದರಿಂದ ವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳಬೇಕಾಗುತ್ತದೆ.ಈ ಮೂರೂ ಪಾತ್ರಗಳಿಗೆ ನೃತ್ಯವಿಲ್ಲ.ಈ ಮೂರೂ ಪಾತ್ರಗಳೂ ಎತ್ತರದಲ್ಲಿ ನಿಂತಿದ್ದು ಅವುಗಳ ಎದುರಿಗೆ ನೃತ್ಯ ನಡೆಯುವಂತೆ ಸಂಯೋಜಿಸಲಾಗಿತ್ತು.ವಿಷ್ಣುವಿನ ಕೈಯಲ್ಲಿ ಮಕ್ಕಳೆ ತಯಾರಿಸಿದ ಸುದರ್ಶನ ಚಕ್ರ, ಗದೆ, ಶ್ರೀದೇವಿಯ ಹಸ್ತದಿಂದ ನಾಣ್ಯಗಳು ಬೀಳುವುದು,ಭೂದೇವಿ ಹಸಿರು ಸೀರೆ ಧರಿಸಿ ಸಸ್ಯವನ್ನು ಹಿಡಿದು ನಿಂತಿರುವುದು ಈ ಭಾಗದ ಆಕರ್ಷಕ ವಿನ್ಯಾಸಗಳಾಗಿದ್ದವು.ವಿಷ್ಣು, ಶ್ರೀದೇವಿ,ಭೂದೇವಿಯರ ಸಮ್ಮುಖದಲ್ಲಿ ವಾಸುದೇವಾಷ್ಟಕವು ಹೇಳುವಂತೆ ಋಷಿಗಳನ್ನು ನಿಲ್ಲಿಸಲಾಗಿತ್ತು.ಋಷಿಗಳ ಪಾತ್ರವೂ ಸ್ಥಿರ ಪಾತ್ರಗಳೆ ಹೊರತು ನೃತ್ಯ ನಿರ್ವಹಿಸುವ ಪಾತ್ರಗಳಲ್ಲ.

Advertisement

ಇಡೀ ನೃತ್ಯವನ್ನು ನಿರ್ವಹಿಸಿದ್ದು ನಾರಾಯಣ ಗುರುಗಳ ಮಾನಸಿಕ ರೂಪ ಎಂದು ಸೃಷ್ಟಿಸಲ್ಪಟ್ಟ ಪಾತ್ರ. ವಾಸುದೇವಾಷ್ಟಕವು ಸಾಗಿದಂತೆ ಅದರ ಅರ್ಥ ಮತ್ತು ಭಾವಕ್ಕನುಗುಣವಾಗಿ ನೃತ್ಯ ಮತ್ತು ಅಭಿನಯ ಹಾಗೂ ಭಾವಾಭಿವ್ಯಕ್ತಿಯನ್ನು ನಿರ್ವಹಿಸಿದ ಪಾತ್ರವಿದು.ಕೊನೆಯಲ್ಲಿ ಕೃಷ್ಣಾರ್ಜುನರು ಮತ್ತು ರಾಧಾಕೃಷ್ಣರನ್ನು ಜೊತೆಯಾಗಿಸಿ ವಿಷ್ಣುವಿನೆಡೆಗೆ ರೆದೊಯ್ದು,ವಿಷ್ಣು,ಶ್ರೀದೇವಿ,ಭೂದೇವಿಯರನ್ನು ಎತ್ತರದಿಂದ ಕರೆತಂದು, ಕೃಷ್ಣಂದಿರನ್ನು ವಿಷ್ಣುವಿನೊಂದಿಗೆ ಲೀನಗೊಳಿಸುವುದನ್ನು ನೃತ್ಯದಲ್ಲೆ ನಿರ್ವಹಿಸಿದ ಈ ಪಾತ್ರದ ನಿರ್ವಹಣೆ ಮನೋಜ್ಞವಾಗಿತ್ತು.ಇದಿಷ್ಟನ್ನೂ ಆರು ಮತ್ತು ಏಳನೆಯ ತರಗತಿಯ ವಿದ್ಯಾರ್ಥಿಗಳು ನಿರ್ವಹಿಸಿರುವುದೇ ಅಭಿನಂದನಾರ್ಹ. ಉಷಾ ಮತ್ತು ಯಶೋದಾ ಅವರು ನೃತ್ಯವನ್ನು ನಿರ್ದೇಶಿಸಿದ್ದರು.

ಡಾ| ರವಿರಾಜ್‌ ಬಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next