Advertisement

ಇಂದು ಪುತ್ತೂರು ಸೀಮೆಯ ಒಡೆಯನ ಬ್ರಹ್ಮರಥೋತ್ಸವ

07:35 AM Apr 17, 2018 | Karthik A |

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ಎ. 17 ರಂದು ರಾತ್ರಿ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥವೆಂದರೆ ಅದು ನಡೆ ದೇಗುಲ. ಪತಾಕೆ, ಅಷ್ಟ ದಿಕ್ಪಾಲಕರು, ಶಿಖರ ಕಲಶ, ಶ್ವೇತ ಛತ್ರ ಮತ್ತು ಸತ್ತಿಗೆ ಅಳವಡಿಸಿದ 70 ಅಡಿ ಎತ್ತರದ ಬ್ರಹ್ಮರಥದಲ್ಲಿ ವರ್ಷದಲ್ಲಿ ಒಂದು ದಿನ ದೇವರು ವಿರಾಜಮಾನರಾಗುತ್ತಾರೆ. ರಾತ್ರಿ 8ರ ಬಳಿಕ ಬ್ರಹ್ಮ ರಥೋತ್ಸವ ನಡೆಯುತ್ತದೆ. ಮುಂಭಾಗದ ರಥ ಬೀದಿಯಲ್ಲಿ 400 ಮೀ. ಉದ್ದಕ್ಕೆ ಬ್ರಹ್ಮರಥ ಸಂಚರಿಸಿ, ಸ್ವಸ್ಥಾನಕ್ಕೆ ಮರಳಿ ಬರುತ್ತದೆ.

Advertisement

ಅಪೂರ್ವ ಕ್ಷಣ
ಬ್ರಹ್ಮವಾಹಕರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಬ್ರಹ್ಮರಥವನ್ನು ಏರುವ ಸಮಯ ಪುತ್ತೂರು ಸೀಮೆಯ ಜನರಿಗೆ ಅಪೂರ್ವ ಧಾರ್ಮಿಕ ಕ್ಷಣವಾಗಿದೆ. ಚೆಂಡೆ ಮೇಳ, ಮಂಗಳವಾದ್ಯ, ಬ್ಯಾಂಡ್‌ ವಾಲಗ, ಶಂಖ ಜಾಗಟೆ, ಮಂಗಳಕರ ನಿನಾದದ ಹಿನ್ನೆಲೆಯಲ್ಲಿ ಶ್ರೀ ದೇವರು ಬ್ರಹ್ಮರಥಾರೂಢರಾಗುತ್ತಾರೆ. ದೇವಾಲಯದ ಮುಂಭಾಗದ ಗದ್ದೆಯಲ್ಲಿ ಸೇರಿದ ಸಹಸ್ರಾರು ಭಕ್ತರು ಏಕ ಕಂಠದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪಾದಾರವಿಂದಗಳಿಗೆ ಗೋವಿಂದ ಎನ್ನಿ ಗೋವಿಂದ ಎಂದು ಜಯಘೋಷ ಹಾಕುತ್ತಾರೆ.


ಮಹಾಲಿಂಗೇಶ್ವರ ಜಾತ್ರೆಗೆ ಸಿದ್ಧಗೊಳ್ಳುತ್ತಿರುವ ಬ್ರಹ್ಮರಥ.

ಜಾತ್ರೆ ಗದ್ದೆಯಲ್ಲಿ ಜನಸಾಗರ
ದೇವಾಲಯದ ಎದುರುಗದ್ದೆಯಲ್ಲಿ ಬ್ರಹ್ಮರಥೋತ್ಸವ ಹಾಗೂ ಸುಡುಮದ್ದು ಪ್ರದರ್ಶನ ನೋಡಲು ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುತ್ತಾರೆ. ರಥಬೀದಿಯ ಇಕ್ಕೆಲಗಳಲ್ಲೂ ಸಾವಿರಾರು ಭಕ್ತರು ನಿಂತಿರುತ್ತಾರೆ. ಬೆಳಗ್ಗೆ ದೇವಾಲಯದಲ್ಲಿ ದೇವರ ಉತ್ಸವ ಬಲಿ ಮತ್ತು ದರ್ಶನ ಬಲಿ ಇರುತ್ತದೆ. ಹೀಗೆ ಸೇರತೊಡಗಿದ ಜನಜಂಗುಳಿ ಕರಗುವುದು ದೇವರು ಬ್ರಹ್ಮರಥದಿಂದ ಇಳಿದು ಪೇಟೆ ಸವಾರಿಗೆ ತೆರಳಿದ ಬಳಿಕವೇ.

ವಾಹನ ನಿಲುಗಡೆಗೆ ವ್ಯವಸ್ಥೆ
ಪುತ್ತೂರು ನಗರದ ತೆಂಕಿಲ, ಕೊಂಬೆಟ್ಟು, ಕಿಲ್ಲೆ ಮೈದಾನ, ಎಪಿಎಂಸಿ ರಸ್ತೆ ಬಳಿಯ ಗದ್ದೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಯಿಂದ ರಾತ್ರಿ ಬ್ರಹ್ಮರಥೋತ್ಸವ ಮುಗಿಯುವ ತನಕ ಮುಖ್ಯ ರಸ್ತೆಯಲ್ಲಿ ಕೊಂಬೆಟ್ಟು ಕ್ರಾಸ್‌ನಿಂದ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಸುರಕ್ಷಾ ಕ್ರಮವಾಗಿ ಗದ್ದೆಯಲ್ಲಿ ಅಗ್ನಿಶಾಮಕದಳದ ವಾಹನ, ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ ಮತ್ತು ವೈದ್ಯರು ಇರುತ್ತಾರೆ.

Advertisement

ಬಸ್ಸಿನ ವ್ಯವಸ್ಥೆ
ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಾರಿಗೆ ಸಂಸ್ಥೆ ತಾಲೂಕಿನ ವಿವಿಧ ಕಡೆಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿದೆ. ಸಂಜೆ ಕೊನೆಯ ಟ್ರಿಪ್‌ ತೆರಳಿದ ಬಸ್ಸುಗಳು ರಾತ್ರಿ ಮರಳಿ ಪುತ್ತೂರಿಗೆ ಬರಲಿವೆ. ರಥೋತ್ಸವ ಮುಗಿದ ಕೂಡಲೇ ಭಕ್ತರನ್ನು ಕರೆದೊಯ್ಯುತ್ತವೆ.

ಜಾತ್ರೆಯಲ್ಲಿ ಇಂದು
ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ರಾತ್ರಿ ಉತ್ಸವ, ಸಿಡಿಮದ್ದು ಪ್ರದರ್ಶನ, ಬ್ರಹ್ಮರಥೋತ್ಸವ, ಬಂಗಾರ್‌ ಕಾಯರ್‌ ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಬೀಳ್ಕೊಡುಗೆ, ಶ್ರೀಭೂತಬಲಿ, ಶಯನ ನಡೆಯಲಿದೆ.

ಚಿತ್ರ : ಪ್ರಸನ್ನ ರೈ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next