Advertisement

ಗುರುವಿಗೆ ನಮಿಸುತ್ತಾ…

12:10 AM Jul 16, 2019 | Sriram |

ಮಹರ್ಷಿ ವೇದವ್ಯಾಸರನ್ನು ಪರಮ ಗುರುಗಳೆಂದು ಗೌರವಿಸಲಾಗುತ್ತದೆ. ಇದರಂತೆ ಶಂಕರಾಚಾರ್ಯರು, ಗೋವಿಂದಾಚಾರ್ಯರು, ಗೌಢಪಾದಾಚಾರ್ಯರು ಮುಂತಾದ ವಿಭೂತಿಗಳೆಲ್ಲರೂ ಪರಮ ಗುರುಗಳೇ.

Advertisement

ಅನಂತವಾಗಿದ್ದ ವೇದಗಳನ್ನು ಅಧ್ಯಯನಕ್ಕೆ ಅನುಕೂಲ ಆಗುವಂತೆ ನಾಲ್ಕು ವೇದಗಳಾಗಿ ವರ್ಗೀಕರಣ ಮಾಡಿದ್ದರಿಂದ ಇವರಿಗೆ ವೇದವ್ಯಾಸರೆಂಬ ಹೆಸರು ಬಂದಿತು. ಈ ನಾಲ್ಕು ವೇದಗಳನ್ನು ಶಿಷ್ಯರಾದ ಪೈಲವ, ವೈಶಂಪಾಯನ, ಜೈಮಿನಿ ಮತ್ತು ಸುಮಂತರಿಗೆ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳನ್ನು ಬೋಧಿಸಿದರು. ತಮ್ಮ ಐದನೆಯ ಶಿಷ್ಯನಾದ ಸೂತ ರೋಮಹರ್ಷಣರಿಗೆ ಇತಿಹಾಸ, ಪುರಾಣಗಳಲ್ಲಿ ತರಬೇತಿ ಕೊಟ್ಟರು.

ವೇದವ್ಯಾಸರು ಮಹಾಭಾರತ ಕರ್ತೃ. ಈ ಗ್ರಂಥದ ಮೂಲ ಹೆಸರು ಜಯ ಎಂಬುದಾಗಿತ್ತು. ಇದರಲ್ಲಿ ಕೌರವ ಪಾಂಡವರ ಚರಿತ್ರೆ, ಅವರ ಯುದ್ಧ, ಇವುಗಳನ್ನು ಮುಖ್ಯ ವಾಗಿ ವಿವರಿಸಿದ್ದರೂ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ವಿಚಾರಣೆಗಳೂ ಕೂಡ ಹೇಳಲ್ಪಟ್ಟಿರುತ್ತವೆ. ಇದು ಐದನೆಯ ವೇದವೆಂದೇ ಪ್ರಸಿದ್ಧಿ ಪಡೆದಿರುತ್ತದೆ. ಅಲ್ಲದೇ ಜಗತ್ತಿಗೆ ಮೂಲ ಕಾರಣನಾದ ಪರಬ್ರಹ್ಮ ತತ್ವವನ್ನು ತಿಳಿಯಲು ಬ್ರಹ್ಮ ಸೂತ್ರಗಳನ್ನು ರಚಿಸಿದ್ದಾರೆ. ಅವರ ತಪಸ್ಸು, ಜ್ಞಾನ, ವೈರಾಗ್ಯ, ಲೋಕ ವ್ಯವಹಾರ ಜ್ಞಾನ ಅತ್ಯದ್ಭುತವಾದವು. ಅವರು ಕಲಿಯುಗದಲ್ಲಿ ಆಚರಿಸಬೇಕಾದ ವಿಧಿ-ವಿಧಾನಗಳನ್ನು ಹೇಳಿದ್ದಾರೆ.

ಇದರಿಂದ ಸಾಮಾನ್ಯ ವ್ಯಕ್ತಿಯೂ ಲಾಭವನ್ನು ಪಡೆದುಕೊಳ್ಳಬಲ್ಲನು. ಮಹಾ ಯಜ್ಞಗಳನ್ನು ಮಾಡುವದರ ಬದಲಾಗಿ ಕಲಿಯುಗದಲ್ಲಿ ಅನ್ನದಾನ, ಪವಿತ್ರ ಸ್ಥಾನಗಳಲ್ಲಿ ಜಲಸ್ನಾನ, ತೀರ್ಥಯಾತ್ರೆ, ವ್ರತ, ಶ್ರಾದ್ಧಾದಿಗಳ ವ್ಯವಸ್ಥೆಯನ್ನು ಹೇಳಿರುತ್ತಾರೆ. ಮಹರ್ಷಿ ವೇದವ್ಯಾಸರ ಈ ವಿಧಾನಗಳಿಂದ ಇಂದಿಗೂ ಶ್ರದ್ಧಾಳುಗಳು, ಸ್ತ್ರೀ-ಪುರುಷರು ಲಾಭ ಪಡೆಯುತ್ತಲಿದ್ದಾರೆ ಎಂಬುದನ್ನು ಯಾವುದೇ ಧರ್ಮದ ಪ್ರೇಮಿಯೂ ತಿಳಿದುಕೊಳ್ಳಬಲ್ಲನು.ಇಂತಹ ಮಹಾನ್‌ ಋಷಿಗಳಿಗೆ ವಿಶ್ವವೇ ಋಣಿಯಾಗಿರುತ್ತದೆ. ಆದ್ದರಿಂದಲೇ ನಮ್ಮ ಭಾರತದಲ್ಲಿ ಆಷಾಢ ಪೌರ್ಣಿಮೆಯನ್ನು ಅರ್ಥಾತ್‌ ವೇದವ್ಯಾಸರ ಜಯಂತಿಯನ್ನು ಗುರು ಪೂರ್ಣಿಮೆಯ ಮಹಾಪರ್ವವೆಂದು ಮನ್ನಿಸಲಾಗುತ್ತದೆ. ಆದ್ದರಿಂದ ಈ ದಿನ ಮಹರ್ಷಿ ವೇದವ್ಯಾಸರ ಸ್ಮರಣೆ ಮಾಡುವುದಕ್ಕಾಗಿ ಎಲ್ಲರೂ ತಮ್ಮ ತಮ್ಮ ಗುರುಗಳ ಪೂಜೆಯನ್ನು ಮಾಡುವ ಸಂಪ್ರದಾಯ ಅನೂಚಾನವಾಗಿ ನಡೆದು ಬಂದಿರುತ್ತದೆ.

ವೇದವ್ಯಾಸರು ಲೌಕಿಕವಾಗಿ ಹತ್ತು ಪ್ರಕಾರದ ಗುರುಗಳನ್ನು ಉಲ್ಲೇಖ ಮಾಡಿದ್ದಾರೆ. ಉಪಾಧ್ಯಾಯ, ತಂದೆ-ತಾಯಿ, ಅಣ್ಣ, ಮಾವ (ಗಂಡನ ತಂದೆ), ಪತ್ನಿ, ಅಜ್ಜ, ತರುಣಿ, ಸ್ತ್ರೀ, ಪಿತಾಮಹ, ಬ್ರಾಹ್ಮಣ, ರಾಜಾ. ಬ್ರಹ್ಮಜ್ಞಾನಿ ಆಚಾರ್ಯರು ಮಾತಾ ಪಿತೃಗಳಿಗಿಂತ ಉಚ್ಛಸ್ಥಾನದಲ್ಲಿರುತ್ತಾರೆ.

Advertisement

ಗುರು ಎಂದರೆ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಕೊಡುವವನು ಎಂದು ಸಾಮಾನ್ಯ ಅರ್ಥವಾಗಿರುತ್ತದೆ. ಆದರೆ ಗುರುಗಳಲ್ಲಿ ಲೌಕಿಕ ಗುರು, ಧರ್ಮಗುರು, ಆಧ್ಯಾತ್ಮಿಕ ಗುರು, ಪರಮ ಗುರು, ಪರಾತ್ಪರ ಗುರು ಇತ್ಯಾದಿ ಪ್ರಕಾರಗಳಿರುತ್ತವೆ. ಶಾಸ್ತ್ರಗಳಲ್ಲಿ ಗುರುಗಳನ್ನು ಹೇಗೆ ಗುರುತಿಸಬೇಕು ಎಂಬುದು ನಿರ್ಧಾರವಾಗಿರುತ್ತದೆ.

ಗುರುವು ಶುದ್ಧ-ಶುಭ್ರ ವೇಷಧಾರಣೆ ಮಾಡುವವ ನಾಗಿರಬೇಕು. ಶುಭ ಲಕ್ಷಣಗಳಿಂದ ಕೂಡಿರಬೇಕು. ಆಕರ್ಷಕ ವ್ಯಕ್ತಿತ್ವವಿರಬೇಕು. ವೇದೋಪನಿಷತ್‌ ಶಾಸ್ತ್ರಗಳನ್ನು ಬಲ್ಲವನಾ ಗಿರಬೇಕು. ತಂತ್ರ ಹಾಗೂ ತಾಂತ್ರಿಕ ಸಂಕೇತಗಳನ್ನು ಮತ್ತು ಕ್ರಿಯೆಗಳನ್ನು ತಿಳಿದವನಾಗಿರಬೇಕು. ಬುದ್ಧಿವಂತ ಆಗಿರಬೇಕು. ಭ್ರಮೆ ಅಥವಾ ಸಂಶಯಗಳನ್ನು ನಾಶಮಾಡುವಂತಹವನಾಗಿರಬೇಕು. ನಿಗ್ರಹ ಮತ್ತು ಅನುಗ್ರಹಗಳ ಸಾಮರ್ಥ್ಯವನ್ನು ಹೊಂದಿರಬೇಕು. ಶಕ್ತಿಪಾತ ಮತ್ತು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಶಾಂತ, ದಯಾಳು, ಭಕ್ತ ವತ್ಸಲ, ಧೈರ್ಯವಂತ, ಸಂಯಮಿ, ಷಡ್‌ರಿಪುಗಳನ್ನು ಗೆದ್ದವನಾಗಿರಬೇಕು. ಪಾತ್ರ- ಅಪಾತ್ರಗಳನ್ನು ತಿಳಿದವನಾಗಿರಬೇಕು. ನಿತ್ಯ ನೈಮಿತ್ತಿಕ ಹಾಗೂ ಕಾಮ್ಯ ಕರ್ಮಗಳಲ್ಲಿ ತೊಡಗಿರಬೇಕು. ದ್ವೇಷ, ಅಸೂಯೆ, ಭಯ, ಲೋಭ, ಮೋಹ, ಅಹಂಕಾರರಹಿತನಾಗಿರಬೇಕು. ತನ್ನ ವಿದ್ಯೆಯಲ್ಲಿ ಅನುಷ್ಠಾನ ನಿರತನಾಗಿರಬೇಕು. ಧನ, ಸ್ತ್ರೀ ಇತ್ಯಾದಿಗಳಲ್ಲಿ ಅನಾಸಕ್ತನಾಗಿರಬೇಕು. ದುರ್ಜನರ ಸಂಗದಿಂದ ದೂರವಿರುವವನಿರಬೇಕು. ನಿಷ್ಪಕ್ಷ, ಸಂಶಯ ಹಾಗೂ ವಿಕಲ್ಪರಹಿತನಾಗಿರಬೇಕು. ಸ್ತುತಿ ಮತ್ತು ನಿಂದೆಗಳನ್ನು ಸಮಾನ ದೃಷ್ಟಿಯಿಂದ ನೋಡುವವನಾಗಿರಬೇಕು.

ಗುರುವು ಕಲ್ಯಾಣ ಸ್ವರೂಪ, ಪರಮಾತ್ಮ ತತ್ವವು ಸರ್ವವ್ಯಾಪಿ, ಸೂಕ್ಷ್ಮ, ನಿಷ್ಕಲ, ಆಕಾಶದಂತೆ ಶೂನ್ಯ, ಅಜನ್ಮ, ಅನಂತವಾಗಿರುತ್ತದೆ. ಆದ್ದರಿಂದ ಆ ಪರಮಾತ್ಮ, ಪ್ರತ್ಯಕ್ಷ ಗುರು ರೂಪದಿಂದ ಪ್ರಕಟವಾಗುತ್ತಾನೆ.

ಅನೇಕ ಮಹತ್ವಪೂರ್ಣವಾದ ವಿದ್ಯೆಗಳು ಗುರುವಿನ ಮಾಧ್ಯಮದಿಂದಲೇ ಪ್ರಾಪ್ತವಾಗಿರುತ್ತವೆ. ತಂತ್ರ, ಮಂತ್ರ, ಯಂತ್ರ, ಶಿಲ್ಪ, ಸಂಗೀತ, ಗಣಿತ, ವಿಜ್ಞಾನ, ಜ್ಯೋತಿಷ್ಯ ಮುಂತಾದ ಎಲ್ಲ ವಿದ್ಯೆಗಳು ಗುರುವಿನ ಮಾರ್ಗದರ್ಶನ ಇಲ್ಲದೇ ದೊರೆಯಲಾರವು.

ಗುರುವಿನ ಸ್ಮರಣೆ, ಪೂಜನ, ಧ್ಯಾನಗಳಿಂದ ಸಾಧಕನು ಪೂರ್ಣತೆಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಸಾಧನೆಯ ಸಿದ್ಧಿಯು ಗುರುತತ್ವದ ಮೇಲೆ ಅವಲಂಬಿಸಿರುತ್ತವೆ. ಗುರುವಿನ ಭಕ್ತಿ ಪೂರ್ವಕ ಆರಾಧನೆಯಿಂದ ಭೋಗ ಮತ್ತು ಮೋಕ್ಷ ಎರಡೂ ಪ್ರಾಪ್ತವಾಗುತ್ತವೆ. ಇಂದು ನಮ್ಮ ಪರಮ ಗುರುಗಳ ಮತ್ತು ಆಧ್ಯಾತ್ಮಿಕ ಗುರುಗಳ ಸ್ಮರಣೆ ಪೂಜೆ, ಧ್ಯಾನ ಮಾಡೋಣ ಮತ್ತು ಲೌಕಿಕ ಗುರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ.

-ಶ್ರೀ ಮೌನೇಶ್ವರ ಗುರೂಜಿ ರಾಣೇಬೆನ್ನೂರು

Advertisement

Udayavani is now on Telegram. Click here to join our channel and stay updated with the latest news.

Next