Advertisement

“ಕಾಲುಗಳೆರಡೂ ಕೈಗಳ ಹಾಗೆಯೇ ಸಹಕರಿಸುತ್ತಿವೆ’

12:35 PM Nov 18, 2019 | mahesh |

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

Advertisement

ಬೆಳ್ತಂಗಡಿ: ಬದುಕಿನ ಪಯಣದಲ್ಲಿ ಸಣ್ಣ ವೈಫ‌ಲ್ಯಕ್ಕೇ ಧೈರ್ಯಗುಂದಿ ಜೀವನವನ್ನು ಕೊನೆಯಾಗಿಸುವವರ ಮಧ್ಯೆ ಜೀವನದ ಪ್ರತಿ ಕ್ಷಣವನ್ನು ಸಾಧನೆಗಾಗಿ ಮುಡಿಪಾಗಿ ಇರಿಸಿದವರು ನಮ್ಮ ನಡುವೆ ಇದ್ದಾರೆ. ಅಂಥವರ ಸಾಧನೆಯ ಪಥ ಯುವ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂಬ ಸದುದ್ದೇಶದಿಂದ ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿಯು ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ನ.13ರಂದು ಸಾಧಕ ರೊಂದಿಗೆ ಸಂವಾದ ಆಯೋಜಿಸಿತ್ತು. ಬೆಳ್ತಂಗಡಿ ತಾಲೂಕಿನ ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ಕೈಗಳಿಲ್ಲದಿದ್ದರೂ ಕಾಲ್ಬೆರಳುಗಳನ್ನು ಉಪಯೋಗಿಸಿ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಉದ್ಯೋಗಿಯೂ ಆಗಿರುವ ಬೆಳ್ತಂಗಡಿಯ ಸಬಿತಾ ಮೋನಿಸ್‌ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಯಾದರು.

ಆಳ್ವಾಸ್‌ ಕಾಲೇಜಿನಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾಗಿರುವ ಸಬಿತಾ ಮೋನಿಸ್‌ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಹುಟ್ಟುವ ಮುನ್ನ ದೇಹದ ಅಂಗಾಂಗಗಳ ಮಹತ್ವ ನಮಗೆ ಅರಿವಿರುವುದಿಲ್ಲ. ಬೆಳೆಯುತ್ತ ಸಾಗಿದಾಗಲೇ ಅದು ಅರಿವಾಗುತ್ತದೆ. ನಮ್ಮ ನಿಮ್ಮೆಲ್ಲರಲ್ಲೂ ವಿಶೇಷ ಪ್ರತಿಭೆಗಳಿವೆ. ಬದುಕಿನ ಕಠಿನ ಸನ್ನಿವೇಶಗಳೇ ನಿಮ್ಮನ್ನು ಸಾಧಕರನ್ನಾಗಿ ರೂಪಿಸುತ್ತವೆ ಎಂದರು. ನಾನು ಬಾಲ್ಯದಲ್ಲಿ ಅಣ್ಣ, ಅಕ್ಕಂದಿರನ್ನು ಅವಲಂ ಬಿಸಿದ್ದೆ. ಕಾಲಕ್ರಮೇಣ ಅವರನ್ನು ಅನುಕರಿಸಲು ಆರಂಭಿ ಸಿದೆ. ಕೈ ಇಲ್ಲದ ಕಾರಣ ನಾನು ಕಾಲಿಗೆ ಕೆಲಸ ನೀಡಿದೆ. ಮುಂದುವರಿಯುತ್ತ ನನ್ನೆಲ್ಲ ಕೆಲಸಗಳು ಕಾಲಿನಿಂದಲೇ ಆರಂಭಗೊಂಡವು. ಈ ಒಟ್ಟೂ ಜೀವನ ಪಯಣದಲ್ಲಿ ಹೆತ್ತವರು, ಶಿಕ್ಷಕರು, ಸಹಪಾಠಿಗಳ ಸಹಕಾರ ಅತ್ಯಪೂರ್ವ. ಈ ಮಧ್ಯೆ ಸಾಕಷ್ಟು ಸವಾಲುಗಳನ್ನೂ ಎದುರಿಸಿದ್ದೆ. ಮಳೆಗಾಲದಲ್ಲಿ ಛತ್ರಿ ಹಿಡಿದು ನಡೆಯಲು, ಊಟ ಮಾಡಲು, ಬಸ್‌ ಹತ್ತಲು, ಇತರ ಶ್ರಮದ ಕೆಲಸಗಳಿಗೆ ಜತೆಗೆ ಇರುವವರನ್ನು ಅವಲಂಬಿ ಸುತ್ತಿದ್ದೆ. ಅವಲಂಬನೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಆಗಬೇಕು ಎಂದು ಹಂಬಲಿಸಿದ ಪರಿಣಾಮ ವಾಗಿಯೇ ನನ್ನ ಕಾಲುಗಳೆರಡೂ ಕೈಗಳ ಹಾಗೆ ನನಗೆ ಸಹಕರಿಸುತ್ತಿವೆ. ಅವಲಂಬನೆಯೇ ನನ್ನ ಜೀವನವೇ ಎಂದು ಅಂದು ಧೃತಿಗೆಡುತ್ತಿದ್ದರೆ ಇಂದಿನ ಚೆಲುವಾದ ಬದುಕು ನನಗೆ ದಕ್ಕುತ್ತಿರಲಿಲ್ಲ. ನನ್ನ ಸ್ಫೂರ್ತಿಗೆ ಸಹಪಾಠಿಗಳು ಪ್ರೋತ್ಸಾಹದ ಮೂಲಕ ಬೆನ್ನುತಟ್ಟಿದ್ದಾರೆ. ಒಂದೊಮ್ಮೆ ಪ್ರಯತ್ನಗಳು ವಿಫಲವಾದರೆ ಎದೆಗುಂದದೆ ಮರು ಪ್ರಯತ್ನಮಾಡುವುದಷ್ಟೆ ನಮ್ಮ ಉದ್ದೇಶವಾಗಬೇಕು ಎಂದು ಸಬಿತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿ.ಪಂ. ಮಾ. ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್‌ ಎಂ. ಮಾತನಾಡಿ, ಸಬಿತಾ ಅವರ ಸಾಧನೆ ನಮಗೆಲ್ಲ ಸ್ಫೂರ್ತಿ. ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು “ಉದಯವಾಣಿ’ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಈ ಸಂವಾದ ಕಾರ್ಯಕ್ರಮ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದೆ. ಸಬಿತಾ ಅವರ ಅಕ್ಷರಗಳು ಕೈಯಲ್ಲಿ ಬರೆಯುವ ನಮ್ಮ ಅಕ್ಷರಗಳಿಗಿಂತಲೂ ಚೆಂದ ವಾಗಿವೆ. ಈ ಸಂವಾದ ರೋಮಾಂಚಕಾರಿ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್‌ ಎಂ., ಮಕ್ಕಳ ದಿನಾಚರಣೆ ಪ್ರಯುಕ್ತ “ಉದಯವಾಣಿ’ಯು ಮಕ್ಕಳಿಗೆ ಸಾಧಕರೊಂದಿಗೆ ಬೆರೆಯಲು ಅವಕಾಶ ಒದಗಿಸಿದೆ. ಆಸಕ್ತಿ ಇರುವ ವಿಷಯದಲ್ಲಿ ಕಠಿನ ಪ್ರಯತ್ನ ಮಾಡಿದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಜೀವನದಲ್ಲಿ ಗುರಿ ಬೇಕು. ಅದನ್ನು ಮುಟ್ಟಲು ಕಠಿನ ಪರಿಶ್ರಮ ಬೇಕು. ವಿಶೇಷ ಚೇತನರಲ್ಲೂ ಪ್ರತಿಭೆಗಳು ಇದ್ದೇ ಇರುತ್ತದೆ ಎನ್ನುವುದಕ್ಕೆ ಸಬಿತಾ ಸಾಕ್ಷಿಯಾಗಿದ್ದಾರೆ. ಅವರ ಜೀವನವೇ ನಮಗೆ ಆದರ್ಶ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿನೇಂದ್ರ ಜೈನ್‌, ಶಿಕ್ಷಕರು ಮತ್ತು ತಾಲೂಕಿನ ವಾಣಿ ಆಂಗ್ಲಮಾಧ್ಯಮ ಶಾಲೆ ಹಳೆಕೋಟೆ, ಎಸ್‌.ಡಿ.ಎಂ. ಆಂಗ್ಲ ಮಾಧ್ಯ ಶಾಲೆ, ಚರ್ಚ್‌ ಅ.ಹಿ.ಪ್ರಾ.ಶಾಲೆ, ಕರ್ನೋಡಿ ಲಾೖಲ, ಗುರುವಾಯನಕೆರೆ ಸ.ಹಿ.ಪ್ರಾ. ಶಾಲೆ, ಸರ್ವ ಶಿಕ್ಷಣ ಅಭಿಯಾನ ಮುಗುಳಿ, ಮಾದರಿ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡರು. ಜಾಹೀರಾತು ವಿಭಾಗದ ಅಸಿಸ್ಟೆಂಟ್‌ ಮ್ಯಾನೇಜರ್‌ ಜಯಂತ್‌ ಬಾಯಾರು, ಜಾಹೀರಾತು ಪ್ರತಿನಿಧಿ ಗುರು ಮುಂಡಾಜೆ, ಪ್ರಸರಣ ವಿಭಾಗದ ಶೈಲೇಶ್‌, ವೇಣೂರು ವರದಿಗಾರ ಪದ್ಮನಾಭ ಕುಲಾಲ್‌ ಸಹಕರಿಸಿದರು.

Advertisement

ಶಿಕ್ಷಕ ಮಂಜುನಾಥ್‌ ಸ್ವಾಗತಿಸಿ, ಬೆಳ್ತಂಗಡಿ ವರದಿಗಾರ ಚೈತ್ರೇಶ್‌ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾ ಶೆಣೈ ವಂದಿಸಿದರು.

ಬದುಕಿನ ಗೆಲುವು ಬಿಚ್ಚಿಟ್ಟ ಸಂವಾದ
 ಕಾಲಿನಲ್ಲೇ ಬರೆಯುತ್ತೀರಾ? ಅಂತಿಮ ಪರೀಕ್ಷೆ ಗಳಿಗೆ ಸಮಯ ಸಾಕಾಗಿತ್ತೇ?
ನಾನು 7 ಮತ್ತು 10ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ಬರೆದಿದ್ದೇನೆ. ಎಲ್ಲರಿಗೂ ಇದ್ದಷ್ಟೇ ಸಮಯ ದಲ್ಲಿ ಪರೀಕ್ಷೆ ಬರೆದು ಉತ್ತರ ಪತ್ರಿಕೆ ನೀಡುತ್ತಿದ್ದೆ.

ಉದ್ಯೋಗದಲ್ಲಿ ನಿಮಗೆ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸುತ್ತೀರಿ?
ನಾನು ಮಕ್ಕಳ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಹೋದ್ಯೋಗಿಗಳು ಸಹಕಾರ ನೀಡುತ್ತಾರೆ. ಸಮಸ್ಯೆ ಆಗುವುದಿಲ್ಲ.

 ದೇಹದ ಎಲ್ಲ ಅಂಗಾಂಗಗಳು ಸರಿಯಾಗಿದ್ದೂ ಭಿಕ್ಷಾಟನೆಗೆ ಇಳಿಯುತ್ತಾರಲ್ಲ; ಅಂಥವರಿಗೆ ನಿಮ್ಮ ಸಲಹೆ ಏನು?
ಕೈಲಾಗದವರು ಮಾತ್ರ ಇಂತಹದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದೇವರ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ಭಿನ್ನರು. ಅವರವರ ಸಾಮರ್ಥ್ಯ ಅನಾವರಣಕ್ಕೆ ಸಾಕಷ್ಟು ವೇದಿಕೆಗಳಿವೆ. ಆಯ್ಕೆ ಮಾತ್ರ ನಮ್ಮದಾಗಿರಬೇಕು.

 ಕಲ್ಯಾಣಾಧಿಕಾರಿ ಆಗದೇ ಇದ್ದರೆ ಏನಾಗಿರುತ್ತಿದ್ದಿರಿ?
ನಾನು ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಯಾಗಬೇಕು ಎಂದು ಕೊಂಡಿದ್ದೆ. ಪರೀಕ್ಷೆಯೂ ಬರೆದಿದ್ದೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಪ್ರೌಢ ಶಿಕ್ಷಣದಲ್ಲೇ ಪೂರ್ವ ತಯಾರಿ ಅಗತ್ಯ. ನನಗೆ ಇದು ಸಾಧ್ಯವಾಗಲಿಲ್ಲ ಎಂಬುದು ನಿಮಗೆ ಎಚ್ಚರಿಕೆಯ ಕರೆಘಂಟೆ. ಪ್ರಾಥಮಿಕ, ಪ್ರೌಢಶಿಕ್ಷಣವನ್ನು ನಿರ್ಲಕ್ಷಿಸಬೇಡಿ. ಈಗಿಂದೀಗಲೇ ತಯಾರಿ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next