Advertisement

ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಹಿಂದೇಟು ಸಲ್ಲದು

11:05 PM Apr 10, 2022 | Team Udayavani |

ಕೇಂದ್ರ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಎಲ್ಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ನೀಡಿಕೆ ಆರಂಭವಾಗಿದೆ. ಸದ್ಯ ಈ ಮುನ್ನೆಚ್ಚರಿಕೆ ಡೋಸ್‌ಗಳನ್ನು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಕಂಪನಿಗಳು ಲಸಿಕೆಗೆ ಕನಿಷ್ಠ ದರವನ್ನು ನಿಗದಿಪಡಿಸಿವೆ.

Advertisement

ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿನ ಮೂರು ಅಲೆಗಳು ಕಾಣಿಸಿಕೊಂಡಿದ್ದು ಒಂದು ಮತ್ತು ಎರಡನೇ ಅಲೆಗಳು ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದವು. ಮೊದಲ ಅಲೆಯ ವೇಳೆ ಜನರಲ್ಲಿನ ತಿಳಿವಳಿಕೆ ಕೊರತೆ, ನಿರ್ಲಕ್ಷ್ಯ ಮತ್ತಿತರ ಕಾರಣಗಳಿಂದಾಗಿ ಹಾನಿ ಸಂಭವಿಸಿತ್ತು. ಎರಡನೇ ಅಲೆ ದೇಶವನ್ನು ಸಂಪೂರ್ಣವಾಗಿ ಕಂಗೆಡುವಂತೆ ಮಾಡಿತ್ತಲ್ಲದೆ ಅಪಾರ ಸಾವು-ನೋವು ಸಂಭವಿಸಿತ್ತು. ಈ ಎರಡು ಅಲೆಗಳಿಂದ ಪಾಠ ಕಲಿತಿದ್ದ ಜನರು ಮತ್ತು ಸರಕಾರ ಸಾಕಷ್ಟು ಮುಂಜಾಗ್ರತೆ ವಹಿಸಿದ್ದರಿಂದಾಗಿ ಮೂರನೇ ಅಲೆ ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಅಲ್ಲದೆ ಈ ವೇಳೆಗೆ ದೇಶದ ಬಹುತೇಕ ವಯಸ್ಕರು ಕೊರೊನಾ ನಿರೋಧಕ ಲಸಿಕೆಗಳನ್ನು ಪಡೆದುಕೊಂಡಿದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು. ಮಾತ್ರವಲ್ಲದೆ ಎರಡು ಅಲೆಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸೋಂಕು ಬಾಧಿಸಿದ್ದರಿಂದಾಗಿ ಸಹಜವಾಗಿಯೇ ಅವರಲ್ಲಿ ಕೊರೊನಾ ನಿರೋಧಕ ಶಕ್ತಿ ವೃದ್ಧಿಯಾಗಿತ್ತು. ಹೀಗಾಗಿ ಅತ್ಯಂತ ತೀವ್ರಗತಿಯಲ್ಲಿ ಹರಡುತ್ತಿದ್ದ ಒಮಿಕ್ರಾನ್‌ ಸೋಂಕು ಅಷ್ಟೇನೂ ಪರಿಣಾಮ ಬೀರಲಿಲ್ಲ.

ವಯಸ್ಕರಿಗೆ ಕೊರೊನಾ ನಿರೋಧಕ ಲಸಿಕೆ ನೀಡಿಕೆ ಪ್ರಕ್ರಿಯೆ ಮುಕ್ತಾಯದ ಹಂತ ತಲುಪುತ್ತಿದ್ದಂತೆಯೇ ಸರಕಾರ ಎರಡು ಹಂತಗಳಲ್ಲಿ 12ರಿಂದ 18 ವರ್ಷದೊಳಗಿನವರಿಗೆ ಲಸಿಕೆ ನೀಡಿಕೆ ಕೈಗೆತ್ತಿಕೊಂಡಿದೆ. ಇದರ ನಡುವೆಯೇ ಹಂತಹಂತವಾಗಿ ಜನತೆಗೆ ಮೂರನೆಯ ಅಥವಾ ಮುನ್ನೆಚ್ಚರಿಕೆ ಡೋಸ್‌ ಅನ್ನು ನೀಡಲು ಆರಂಭಿಸಿದೆ. ರವಿವಾರದಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲ ಈ ಹೆಚ್ಚುವರಿ ಡೋಸ್‌ ನೀಡಲಾಗುತ್ತಿದೆ. ಲಸಿಕೆಯ ದರವನ್ನು ಲಸಿಕೆ ತಯಾರಿಕ ಕಂಪೆನಿಗಳು ಗಣನೀಯವಾಗಿ ಇಳಿಕೆ ಮಾಡಿವೆ. ಸದ್ಯ ದೇಶದಲ್ಲಿ ನೀಡಲಾಗುತ್ತಿರುವ ಪ್ರಮುಖ ಎರಡು ಲಸಿಕೆಗಳಾದ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗೆ 225 ರೂ. ದರ ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ವಿತರಣ ಶುಲ್ಕವಾಗಿ 150 ರೂ. ವಿಧಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. 18 ವರ್ಷ ಮೇಲ್ಪಟ್ಟವರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ ಪಡೆಯಬಹುದಾಗಿದೆ.

ದೇಶಾದ್ಯಂತ ಕೊರೊನಾದ ತೀವ್ರತೆ ಕಡಿಮೆಯಾಗಿರುವಾಗ ಈ ಮುನ್ನೆಚ್ಚರಿಕೆ ಡೋಸ್‌ನ ಆವಶ್ಯಕತೆ ಏನು ಎಂಬ ಪ್ರಶ್ನೆ ಸದ್ಯ ಬಹುತೇಕ ಜನರನ್ನು ಕಾಡುತ್ತಿದೆ. ಕಳೆದ ಅಲೆಯ ವೇಳೆ ಒಮಿಕ್ರಾನ್‌ ಸೋಂಕು ಅಷ್ಟೇನೂ ಪರಿಣಾಮ ಬೀರಿಲ್ಲ. ಮಾತ್ರವಲ್ಲದೆ ಕೊರೊನಾ ಸಾಂಕ್ರಾಮಿಕ ಈಗ ಇತರ ಸಾಂಕ್ರಾಮಿಕಗಳಂತೆ ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದ್ದು, ಇದನ್ನು ಎದುರಿಸಲು ನಮ್ಮ ದೇಹ ಸಶಕ್ತವಾಗಿದೆ ಎಂಬ ವಾದವನ್ನು ಮುಂದಿಡತೊಡಗಿದ್ದಾರೆ. ಆದರೆ ಕೊರೊನಾ ನಿರೋಧಕ ಲಸಿಕೆಯ ಪರಿಣಾಮ ಸೀಮಿತ ಅವಧಿಯದ್ದಾಗಿರುವುದರಿಂದ ಮುನ್ನೆಚ್ಚರಿಕೆಯಾಗಿ ಮೂರನೇ ಡೋಸ್‌ ಪಡೆಯುವುದು ನಮ್ಮೆಲ್ಲರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸೂಕ್ತ. ಇಷ್ಟು ಮಾತ್ರವಲ್ಲದೆ ದೇಶದ ಕೆಲವೆಡೆ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಎಕ್ಸ್‌ಇ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ಹೊತ್ತಿನಲ್ಲಿ ಮೈಮರೆಯುವುದಾಗಲೀ ಉಡಾಫೆ ವರ್ತನೆಯಾಗಲೀ ಸಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next