Advertisement

ಸಾಹಿತ್ಯ ಸಮ್ಮೇಳನ ಪುಸ್ತಕ ಪರಿಷೆ

12:30 AM Jan 13, 2019 | |

84ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದು, ಹಾರಿದ್ದ ದೂಳು ಈಗಷ್ಟೇ ಆರುತ್ತಿದೆ. ಹಲವಾರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಮ್ಮೇಳನದ ಪೋಸ್ಟ್‌ ಮಾರ್ಟ್‌ಂ ನಡೆಯುತ್ತಿದೆ. ಸಮ್ಮೇಳನಕ್ಕೆ 12 ಕೋಟಿ ಖರ್ಚು ಮಾಡಬೇಕಾ? ಇದ್ಯಾವ ಪುರುಷಾರ್ಥಕ್ಕೆ? ಎಂಬಲ್ಲಿಂದ ತೊಡಗಿ ಸಂಘಟಕರು ಇಲ್ಲಿ ಎಡವಿದ್ದಾರೆ, ಅಲ್ಲಿ ತೊಡಕಿದ್ದಾರೆ ಎಂಬಲ್ಲಿಯವರೆಗೆ ಚರ್ಚೆ ನಡೆಯುತ್ತಿದೆ. ನಮ್ಮ ಹಿರಿಯ ವಿಜಾnನ ಬರಹಗಾರ ನಾಗೇಶ ಹೆಗಡೆಯವರು; ಸಮ್ಮೇಳನದ ಸಂದರ್ಭದಲ್ಲಿ ಖಾಸಗಿಯಾಗಿ ಹೇಳಿದ್ದ “ಮುಂದಿನ ಸಮ್ಮೇಳನದಲ್ಲಿ ಕೇವಲ ಧ್ವಜವನ್ನು ಮಾತ್ರ ಹಸ್ತಾಂತರಿಸುವುದಲ್ಲ, ಈ ಸಮ್ಮೇಳನದ ಕುಂದುಕೊರತೆಗಳ ಪಟ್ಟಿಯನ್ನೂ ಹಸ್ತಾಂತರಿಸಬೇಕು. ಇಲ್ಲಿ ಆಗಿರುವ ತಪ್ಪು ತಡೆಗಳನ್ನು ತಿದ್ದಿಕೊಳ್ಳಬೇಕು’- ಅರ್ಥಪೂರ್ಣವಾದ ಈ ಸಲಹೆಯನ್ನು ಅವರು ದಿನಪತ್ರಿಕೆಯೊಂದರಲ್ಲಿ ಪತ್ರ ರೂಪದಲ್ಲಿ ಪ್ರಕಟಿಸಿಯೂ ಆಯಿತು. ಎಷ್ಟೇ ಎಚ್ಚರಿಕೆಯಿಂದ ಸಿದ್ಧತೆ ಮಾಡಿದ್ದರೂ ಲಕ್ಷಾಂತರ ಜನರು ಸೇರುವ ಜಾತ್ರೆಯಲ್ಲಿ ಇಷ್ಟು ತೊಂದರೆ ಆಗಿಯೇ ಆಗುತ್ತದೆ. ನಾವು ಒಳಿತನ್ನಷ್ಟೇ ನೋಡಬೇಕಲ್ಲವೇ? ಎಂದು ಪ್ರಶ್ನಿಸಿದ ಸಾಹಿತ್ಯ ಸಮ್ಮೇಳನ ಅಭಿಮಾನಿಗಳೂ ಇದ್ದಾರೆ. 

Advertisement

“ಸಾಹಿತ್ಯ ಸಮ್ಮೇಳನಕ್ಕೆ ಹೋಗುವುದು ಸಾಹಿತಿಗಳನ್ನು ನೋಡಲು, ಗೆಳೆಯರನ್ನು ಭೇಟಿಯಾಗಲು ಮತ್ತು ಒಂದಷ್ಟು ಪುಸ್ತಕಗಳನ್ನು ತರಲು’ ಎಂದು ಅಭಿಪ್ರಾಯಪಡುವ ಹಲವರನ್ನು ನೋಡಿದ್ದೇನೆ. ಎಲ್ಲರೂ ಸಾಹಿತ್ಯ ಸಮ್ಮೇಳನದ ಘನ ಗಂಭೀರ ಗೋಷ್ಠಿಗಳನ್ನು ಕೇಳಲೆಂದೋ, ಸಮ್ಮೇಳನಾಧ್ಯಕ್ಷರ ಭಾಷಣ ಕೇಳಿ ಬದುಕು ಬದಲಾಯಿಸಿಕೊಳ್ಳಲೆಂದೋ ಬರುವುದಿಲ್ಲ. ಹಾಗೆ ನೋಡಿದರೆ, ಸಾಹಿತ್ಯ ಸಮ್ಮೇಳ ನಗಳ ಪ್ರಮುಖ ಆಕರ್ಷಣೆಯೇ ಪುಸ್ತಕ ಮಳಿಗೆಗಳು. ಕನ್ನಡದ ಬಹುಮುಖ್ಯ ಪ್ರಕಾಶಕರೆಲ್ಲರೂ ಪುಸ್ತಕಗಳನ್ನು ಪ್ರದರ್ಶಿಸುವ ಬಹುದೊಡ್ಡ ವೇದಿಕೆ ಯಾದ ಸಾಹಿತ್ಯ ಸಮ್ಮೇಳನದ ಆಯೋಜನೆಯ ವಹಿವಾಟು ಬಿಟ್ಟರೆ ಅತಿ ಹೆಚ್ಚು ಹಣಕಾಸಿನ ವ್ಯವಹಾರ ನಡೆಯುವುದು ಪುಸ್ತಕ ಮಾರಾಟ ವಲಯದಲ್ಲಿ. ಕೆಲವು ಪ್ರಕಾಶಕರು ವ್ಯಾಪಾರ ಭರ್ಜರಿಯಾಗಿದೆ ಎಂದು ಸಂತಸ ಪಡುವುದು, ಇನ್ನು ಕೆಲವರು ಏನೂ ವ್ಯಾಪಾರ ಇಲ್ಲ, ಖರ್ಚು ಮೈಮೇಲೆ ಎಂದು ಸಣ್ಣ ಮುಖ ಮಾಡುವುದು ಎಲ್ಲ ಸಮ್ಮೇಳನಗಳಲ್ಲೂ ಸರ್ವೆàಸಾಮಾನ್ಯ ಸಂಗತಿ.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳನ್ನು ಪ್ರಧಾನ ವೇದಿಕೆಯ ಸುತ್ತ ವೃತ್ತಾಕಾರವಾಗಿ ಹಾಕುವುದನ್ನು ನೋಡಿದ್ದೆವು. ಇದರಿಂದ ವೇದಿಕೆಯ ಭಾಷಣಗಳನ್ನು ಕೇಳಿಸಿಕೊಳ್ಳುತ್ತಲೇ ಪುಸ್ತಕಗಳನ್ನು ನೋಡುವ, ಕೊಳ್ಳುವ ಅವಕಾಶವಿರುತ್ತಿತ್ತು. ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ವಿಶ್ವವಿದ್ಯಾಲಯದ ಪ್ರವೇಶ ರಸ್ತೆಯ ಮಧ್ಯಭಾಗದಲ್ಲಿ ಎರಡೂ ಕಡೆ ಪುಸ್ತಕ ಮಳಿಗೆಗಳನ್ನು ಹಾಕಿ ಓಡಾಡಲು ಕಷ್ಟವಾಗುವಂತೆ ಮಾಡಿದ್ದಕ್ಕೆ ದೊಡ್ಡ ಪ್ರಮಾಣದ ಆಕ್ಷೇಪಣೆ ವ್ಯಕ್ತವಾಯಿತು. ನೂರಾರು ಮಳಿಗೆಗಳನ್ನು ದಾಟಿ ಇನ್ನೊಂದು ಸಾಲಿಗೆ ಹೋಗಬೇಕಾದುದರಿಂದ ಬಹಳಷ್ಟು ಜನರಿಗೆ ಅಡ್ಡಾಡುವುದೇ ತೊಂದರೆ ಎನ್ನುತ್ತಿದ್ದರು. ಒಂದು ಹತ್ತಾರು ಮಳಿಗೆಗಳ ನಡುವೆ ಸಣ್ಣ ಜಾಗ ಬಿಟ್ಟು ಇನ್ನೊಂದು ಪಾರ್ಶ್ವಕ್ಕೆ ಹೋಗಲು ಅನುಕೂಲ ಮಾಡಿಕೊಡಬಹುದಿತ್ತು. ಸಾಹಿತ್ಯ ಸಮ್ಮೇಳನದಲ್ಲಿ ನೂರಾರು ವಾಣಿಜ್ಯ ಮಳಿಗೆಗಳಿಗೆ ಜಾಗ ಕೊಡುವ ಅಗತ್ಯವಿತ್ತೇ? ಎಂಬುದು ಇನ್ನೊಂದು ಪ್ರಶ್ನೆ. ಜಾಕೀಟು. ಟಾವೆಲ್ಲು, ಬೂಟು, ಬಳೆ-ಬಿಂದಿ ಇವುಗಳ ಮಾರಾಟ ಜೋರಾಗಿದ್ದುದು ಕಂಡುಬಂತು.

ಪುಸ್ತಕ ಮಳಿಗೆಗಳ ಸ್ವರೂಪ ಇಂದು ಬದಲಾಗಿದೆ. ಅವು ಕೇವಲ ನಿರ್ಜೀವ ಪುಸ್ತಕಗಳನ್ನು ಮಾರಾಟ ಮಾಡುವ ತಾಣಗಳು ಮಾತ್ರವಲ್ಲ, ಹೊಸ ಪುಸ್ತಕಗಳ ಬಿಡುಗಡೆ, ಸಾಹಿತಿಗಳ ಸಾನ್ನಿಧ್ಯ, ಗೆಳೆಯರ ಭೇಟಿಯ ತಾಣ. ಅಭಿನವ ಮಳಿಗೆಯಲ್ಲಿ ಬಹುಶಿಸ್ತೀಯ ಸಂಶೋಧಕರಾದ ಷ. ಶೆಟ್ಟರ್‌ ಅವರ “ಕರ್ನಾಟಕ ಬಹುತ್ವದ ಆಯಾಮಗಳು’ ಪುಸ್ತಕ ಮತ್ತು ಅಭಿನವ ಚಾತುರ್ಮಾಸಿಕದ ಹೊಸ ಸಂಚಿಕೆ “ನನ್ನದೊಂದು ಕನಸಿದೆ’ ಬಿಡುಗಡೆಗೊಂಡವು. ಲೇಖಕರಾದ ಡಾ. ವಿಕ್ರಮ ವಿಸಾಜಿ, ಹಿರಿಯ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಳಿಗೆಯಲ್ಲಿ ಉಪಸ್ಥಿತರಿದ್ದರು. ತಮ್ಮ ವೈಜ್ಞಾನಿಕ ಕೃತಿಗಳನ್ನು ಭೂಮಿ ಬುಕ್ಸ್‌ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸುತ್ತಿರುವ ವಿಜಾnನ ಬರಹಗಾರ ನಾಗೇಶ ಹೆಗಡೆಯವರು ಮಳಿಗೆಯಲ್ಲಿದ್ದು, ಪುಸ್ತಕ ಪ್ರೇಮಿಗಳು ಕೊಂಡ ಪುಸ್ತಕಗಳಿಗೆ ಹಸ್ತಾಕ್ಷರ ಹಾಕುತ್ತ, ಕೈಯಲ್ಲಿ ಬರೆಯುವುದೇ ಮರೆತು ಹೋಗಿದೆ ಎನ್ನುತ್ತ ಸಹಿ ಮಾಡಲು ಕಷ್ಟಪಡುತ್ತಿದ್ದರು. ಅಭಿಮಾನಿಗಳಂತೂ ಸೆಲ್ಫಿ ಭಾವಚಿತ್ರಕ್ಕಾಗಿ ಕುಂತಲ್ಲಿ ನಿಂತಲ್ಲಿ ಕಾಡುತ್ತಿದ್ದರು. ಇದು ಎಲ್ಲÉ ಜನಪ್ರಿಯ ಹಾಗೂ ಬಹುಜನರಿಗೆ ಪರಿಚಿತವಿರುವ ಬರಹಗಾರರ ಕತೆಯಾಗಿತ್ತು. ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದ ಹಿರಿಯ ಲೇಖಕರಾದ ಕುಂ.ವೀ., ಮೂಡ್ನಾಕೂಡು ಚಿನ್ನಸ್ವಾಮಿಯಂಥವರನ್ನು ಸಾಹಿತ್ಯಾಸಕ್ತರು ಬೆರಗುಗಣ್ಣುಗಳಿಂದ ನೋಡುತ್ತಿದ್ದರು.

ದೊಡ್ಡ ದೊಡ್ಡ ಪ್ರಕಾಶಕರು ಹತ್ತಾರು ಮಳಿಗೆಗಳ ಜಾಗವನ್ನು ಆಕ್ರಮಿಸಿಕೊಂಡಿದ್ದರೆ, ಕೇವಲ ಒಂದೇ ಪುಸ್ತಕ ಪ್ರಕಟಿಸಿದವರೂ ಮಳಿಗೆ ಹಾಕಿದ್ದರು. ಕೆಲವು ಜನಪ್ರಿಯ ಪ್ರಕಟಣೆಗಳಂತೂ ಬಹಳಷ್ಟು ಮಳಿಗೆಗಳಲ್ಲಿ ಲಭ್ಯವಿದ್ದವು. ಕೆಲವು ಹಳೆಯ ಪುಸ್ತಕಗಳ ಮಾರಾಟ ಮಳಿಗೆಗಳೂ ಇದ್ದು , ಪುಸ್ತಕ ಪ್ರೇಮಿಗಳು ಗೋಣಿ ಚೀಲದಲ್ಲಿ ಪುಸ್ತಕ ತುಂಬಿಕೊಂಡು ಹೋಗುವುದನ್ನು ಕಾಣಬಹುದಿತ್ತು. ಪುಸ್ತಕಗಳನ್ನು ಜೋಡಿಸಿಡುವುದರಲ್ಲಿಯೂ ಕೆಲವು ಮಳಿಗೆಗಳಲ್ಲಿ ಕಲಾತ್ಮಕತೆಯಿದ್ದರೆ, ಇನ್ನು ಕೆಲವು ಮಳಿಗೆಗಳಲ್ಲಿ ರಾಶಿಯನ್ನು ತೋಡಿ ಬೇಕಾದ ಪುಸ್ತಕವನ್ನು ಹುಡುಕಬೇಕಾದ ಅನಿವಾರ್ಯತೆಯಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಪುಸ್ತಕ ಸಿಗುವ ಮಳಿಗೆಗಳಂತೂ ಯಾವಾಗಲೂ ಯುವಕರಿಂದ ತುಂಬಿರುತ್ತಿದ್ದವು, ಭರಪೂರ ರಿಯಾಯ್ತಿ ಬೇರೆ. “ಛಂದ ಪುಸ್ತಕ’ದ ರೂವಾರಿ, ಬರಹಗಾರ ವಸುಧೇಂದ್ರ ದಾನಿಗಳಿಂದ ಪುಸ್ತಕ ಅಥವಾ ಹಣ ಸಂಗ್ರಹಿಸಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ಉಚಿತವಾಗಿ ಹಂಚುವ ಯೋಜನೆ ಪ್ರಕಟಿಸಿದ್ದು, ಒಳ್ಳೆಯ ಪ್ರತಿಕ್ರಿಯೆಯಿತ್ತು. ಇದು ಹೊಸ ತಲೆಮಾರನ್ನು ಓದಿನ ಅಭಿರುಚಿಗೆ ತೆರೆಸುವುದರೊಂದಿಗೆ ಪುಸ್ತಕ ಲೋಕದ ಬೆಳವಣಿಗೆಗೂ ಪೂರಕವಾಗುವ ಸಂಗತಿ. ವಿಜಯಪುರದ ಪ್ರಾಧ್ಯಾಪಕರೊಬ್ಬರು ಮಗಳ ಮದುವೆಗೆ ಆಗಮಿಸುವ ಹಿತೈಷಿಗಳಿಗೆ ಉಡುಗೊರೆಯಾಗಿ ಕೊಡಲು ರಾಶಿ ರಾಶಿ ಪುಸ್ತಕಗಳನ್ನು ಹೊತ್ತೂಯ್ದದ್ದೂ ಧನಾತ್ಮಕ ಬೆಳವಣಿಗೆ. ಇನ್ನೊಂದು ವೈಶಿಷ್ಟ್ಯವೆಂದರೆ ಧಾರವಾಡದ ಕವಿ ರಾಜಕುಮಾರ ಮಡಿವಾಳರ ಅವರ ಫೇಸ್‌ಬುಕ್‌ ಪುಸ್ತಕದಂಗಡಿ. ಫೇಸ್‌ಬುಕ್‌ನಲ್ಲಿ ನಿಯಮಿತವಾಗಿ ತಮ್ಮ ಬರವಣಿಗೆಯನ್ನು ಪ್ರಕಟಿಸುವ, ನಂತರ ಅವನ್ನು ಪುಸ್ತಕ ರೂಪದಲ್ಲಿ ಹೊರತರುವ ಎಲ್ಲ ಬರಹಗಾರರ ಕೃತಿಗಳು ಅಲ್ಲಿ ಲಭ್ಯವಿದ್ದವು. ಜೊತೆಗೆ ರಾಜಣ್ಣ; ಸಂಘಟಕರು ಕುಮಾರವ್ಯಾಸನನ್ನು ಮರೆತಿದ್ದಾರೆಂದು ಪ್ರತಿಭಟಿಸಿ ಕುಮಾರವ್ಯಾಸನ ಕಾವ್ಯದ ಭಿನ್ನ ಭಿನ್ನ ಆವೃತ್ತಿಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. 

Advertisement

ಸಮ್ಮೇಳನದ ಮಳಿಗೆಗಳಲ್ಲಿ ಪುಸ್ತಕ ಕೊಳ್ಳುವ ಅಭಿಮಾನಿಗಳನೇಕರು ದುಡ್ಡು ಖಾಲಿಯಾಯೆ¤ಂದು ಪರದಾಡುತ್ತಿದ್ದರು. ಹತ್ತಿರದಲ್ಲಿ ಯಾವುದೇ ಎಟಿಎಂ ಇರಲಿಲ್ಲ. ಕೊನೆಯ ಪಕ್ಷ ಕಾರ್ಡ್‌ ಬಳಸೋಣವೆಂದರೆ ನೆಟ್‌ವರ್ಕ್‌ ಇಲ್ಲವೇ ಇಲ್ಲ. ಗೆಳೆಯರನ್ನು ಭೇಟಿ ಮಾಡಲು, ಕಳಕೊಂಡವರನ್ನು ಹುಡುಕಲು ಮೊಬೈಲ್‌ ಕರೆ ಮಾಡಲು ಪೇಚಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಷ್ಟರಮಟ್ಟಿಗೆ ಆಧುನಿಕತೆಗೆ ಸಮ್ಮೇಳನ ಎರವಾಯಿತು. ಸಮ್ಮೇಳನದ ಗೋಷ್ಠಿಗಳಲ್ಲಿ ಆಡಿದ ಮಾತುಗಳು ಗಾಳಿಯಲ್ಲಿ ಹಾರಿ ಹೋಗುತ್ತವೆ. ಸಮ್ಮೇಳನದ ನೆನಪು ನಿಧಾನವಾಗಿ ಮಾಸತೊಡಗುತ್ತದೆ. ಆದರೆ, ಕೊಂಡುಹೋದ ಪುಸ್ತಕಗಳು ಮಾತ್ರ ಮತ್ತೆ ಮತ್ತೆ ಕಣ್ಣಿಗೆ ಬೀಳುತ್ತ, ಓದಿಸಿಕೊಳ್ಳುತ್ತ ಕಚಗುಳಿಯಿಡುತ್ತಿರುತ್ತವೆ. ಕೊನೆಗೂ ಉಳಿಯುವವು ಇವೇ ಅಲ್ಲವೆ? 

ಶ್ರೀಧರ ಹೆಗಡೆ ಭದ್ರನ್‌

Advertisement

Udayavani is now on Telegram. Click here to join our channel and stay updated with the latest news.

Next