Advertisement

ಸರ್ಕಾರಿ ಶಾಲಾ ಬಾಗಿಲಿಗೆ ಪುಸ್ತಕ ರವಾನೆ

10:50 AM May 23, 2019 | Suhan S |

ಕೋಲಾರ: ಸರ್ಕಾರಿ ಶಾಲೆ ಆರಂಭಕ್ಕೆ ಮುನ್ನವೇ ಶಿಕ್ಷಕರಿಗೆ ಹೊರೆಯಾಗದ ರೀತಿ ಶಾಲೆ ಬಾಗಿಲಿಗೆ ಪುಸ್ತಕ ಪೂರೈಕೆ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಯತ್ನವನ್ನು ಡಿಡಿಪಿಐ ಕೆ.ರತ್ನಯ್ಯ ಶ್ಲಾಘಿಸಿದರು.

Advertisement

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯೇ ಸಮಯಕ್ಕೆ ಪಠ್ಯಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಮಾಡುವ ಮೂಲಕ ಶಿಕ್ಷಕರು ತರಗತಿ ಬಿಟ್ಟು, ಪುಸ್ತಕಗಳನ್ನು ಹೊತ್ತೂಯ್ಯುವ ಕೆಲಸಕ್ಕೆ ಕಡಿವಾಣ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವಿವರಿಸಿದರು.

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ 8ನೇ ಸ್ಥಾನ ಬರುವ ಮೂಲಕ ಗೌರವ ಬಂದಿದೆ. ಇದಕ್ಕೆ ಚ್ಯುತಿ ಬಾರದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕ್ರಿಯಾಯೋಜನೆ ತಯಾರಿಸಿಕೊಂಡು ಮುಂದಿನ ಬಾರಿಯ ಉತ್ತಮ ಫಲಿತಾಂಶಕ್ಕೆ ಕಾರ್ಯೋನ್ಮುಖರಾಗುವಂತೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಲಹೆ ನೀಡಿದರು.

ಈ ಬಾರಿ ಖಾಸಗಿ ಶಾಲೆಗಳವರು ಆನ್‌ಲೈನ್‌ನಲ್ಲಿ ಮಾತ್ರವೇ ಪುಸ್ತಕಗಳ ಹಣ ಪಾವತಿಸಿದ್ದು, ನಗದು ವ್ಯವಹಾರಕ್ಕೆ ಅವಕಾಶವೇ ಇಲ್ಲದಂತೆ ಪಾರದರ್ಶಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಾಹನದಲ್ಲಿಯೇ ಶಾಲೆಗೆ ಪುಸ್ತಕ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಈ ಬಾರಿ ಪಠ್ಯಪುಸ್ತಕಗಳನ್ನು ಮೇ 28ಕ್ಕೆ ಮುನ್ನವೇ ಶಾಲೆಗಳಿಗೆ ತಲುಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. 24 ರಿಂದ 28ರವರೆಗೂ ನಿರಂತರ ಐದು ದಿನ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಪುಸ್ತಕಗಳು ಶಾಲೆ ಬಾಗಿಲಿಗೆ ತಲುಪಲಿವೆ ಎಂದು ವಿವರಿಸಿದರು.

Advertisement

ಸೂಚಿಸಿರುವ ದಿನಾಂಕಗಳಂದು ಶಾಲೆಗಳಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಜರಿದ್ದು ಪಠ್ಯಪುಸ್ತಕ ಪಡೆದುಕೊಳ್ಳಲು ಸೂಚಿಸಿದ ಅವರು, ಶಾಲಾ ಪ್ರಾರಂಭೋತ್ಸವದಂದೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಬೇಕು ಎಂದರು.

24ರಿಂದಲೇ ಕ್ಲಸ್ಟರ್‌ವಾರು ಸಾಗಣೆ: ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಸಹಕಾರ ನೀಡುವಂತೆ ಕೋರಿರುವ ಅವರು, ನಿಮ್ಮ ಶಾಲೆಗೆ ಪುಸ್ತಕ ಬರುವ ಮುನ್ನಾದಿನ ಬಿಇಒ ಕಚೇರಿ ಆವರಣದಲ್ಲಿನ ಉಗ್ರಾಣದಲ್ಲಿ ಪುಸ್ತಕಗಳನ್ನು ಸಿಆರ್‌ಪಿಗಳ ನೇತೃತ್ವದಲ್ಲಿ ಡಿ ದರ್ಜೆ ನೌಕರರು ಬಂಡೆಲ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈ ಬಂಡೆಲ್ಗಳನ್ನು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು ಆಯಾ ದಿನಗಳಂದು ಶಾಲೆಗಳಿಗೆ ಸಾಗಾಣೆ ವಾಹನದ ಮೂಲಕ ತಲುಪಿಸಲು ವ್ಯವಸ್ಥೆಯಾಗಿದೆ. ಎಸ್‌ಟಿಎಸ್‌ನಲ್ಲಿ ಅಳವಡಿಕೆಯಾಗಿರುವ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಸಿಆರ್‌ಪಿಗಳು ನೀಡುವ ಪಟ್ಟಿಯನ್ನು ಇದರೊಂದಿಗೆ ತಾಳೆ ನೋಡಿ ಪುಸ್ತಕ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ ಎಂದರು.

ಮೇ 24ರಂದು ಬೆಳಗ್ಗೆ 9.30ರಿಂದ 1 ಗಂಟೆಯವರೆಗೂ ಪಿ.ಸಿ.ಹಳ್ಳಿ, ಕಮಲಮಹಡಿ, ಕೊಂಡರಾಜನಹಳ್ಳಿ, ಮಧ್ಯಾಹ್ನ 2 ಗಂಟೆಯಿಂದ 5.30ರವರೆಗೂ ಬೆಗ್ಲಿಹೊಸಹಳ್ಳಿ, ವಕ್ಕಲೇರಿ, ಮುದುವತ್ತಿ ಕ್ಲಸ್ಟರ್‌ಗಳಿಗೆ ಪುಸ್ತಕ ರವಾನೆಯಾಗುವುದು. 25 ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಹರಟಿ, ಅಬ್ಬಣಿ, ಹುತ್ತೂರು, ವಡಗೂರು ಕ್ಲಸ್ಟರ್‌ಗಳಿಗೆ, ಮಧ್ಯಾಹ್ನ 2 ಗಂಟೆಯಿಂದ 5.30ರವರೆಗೂ ಅಣ್ಣಿಹಳ್ಳಿ, ಐತರಾಸನಹಳ್ಳಿ, ಹೋಳೂರು, ಶಾಲೆಗಳಿಗೆ ತಲುಪಿಸಲಾಗುವದು.

26 ರಂದು ತಾಲೂಕಿನ ಎಲ್ಲಾ ಅನುದಾನಿತ ಶಾಲೆಗಳಿಗೆ ಪುಸ್ತಕ ಪೂರೈಕೆ ಮಾಡಲಾಗುವುದು. 27ರಂದು ಬೆಳಗ್ಗೆ 9.30 ರಿಂದ 1 ಗಂಟೆಯವರೆಗೂ ಟಿ.ಡಿ.ಹಳ್ಳಿ, ಮುದುವಾಡಿ, ಸುಗಟೂರು, ಮದನಹಳ್ಳಿ, ಕೋಡಿಕಣ್ಣೂರು ಕ್ಲಸ್ಟರ್‌ಗಳಿಗೆ, ಮಧ್ಯಾಹ್ನ 2 ರಿಂದ 5.30 ರವರೆಗೂ ವೇಮಗಲ್, ಕುರಗಲ್, ಕ್ಯಾಳನೂರು, ಬೆಳಮಾರನಹಳ್ಳಿ ಕ್ಲಸ್ಟರ್‌ಗಳಿಗೆ ಪುಸ್ತಕ ತಲುಪಲಿದೆ ಎಂದು ವಿವರಿಸಿದರು.

28 ರಂದು ಬೆಳಗ್ಗೆ 9.30 ರಿಂದ 1ಗಂಟೆಯವರೆಗೆ ಸೂಲೂರು, ಅರಾಭಿಕೊತ್ತನೂರು, ನರಸಾಪುರ ಕ್ಲಸ್ಟರ್‌ಗಳು ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಮದ್ದೇರಿ, ಕಾಡಹಳ್ಳಿ, ಮೇಡಿಹಾಳ ಕ್ಲಸ್ಟರ್‌ಗಳಿಗೆ ಪುಸ್ತಕಗಳು ತಲುಪಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಸದಾನಂದ್‌, ಮುಳಬಾಗಿಲು ಬಿಇಒ ಕೆಂಪರಾಮು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ.ಬಿ. ರಾಮಕೃಷ್ಣಪ್ಪ,ವಿಷಯ ಪರಿವೀಕ್ಷಕ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ವೆಂಕಟಾ ಚಲಪತಿ, ಮುನಿರತ್ನಯ್ಯಶೆಟ್ಟಿ, ಆರ್‌.ಶ್ರೀನಿವಾಸನ್‌, ರಾಘವೇಂದ್ರ, ಬೈರರೆಡ್ಡಿ, ಮುಖ್ಯಶಿಕ್ಷಕ ಹುತ್ತೂರು ನಾರಾಯಣಸ್ವಾಮಿ, ಖಾಸಗಿ ಶಾಲೆಗಳ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next