Advertisement

ಸಮಸ್ಯೆ ಪ‌ರಿಹಾರಕ್ಕೆ ಸುಲಭ ಮಾರ್ಗ ಕಂಡುಕೊಳ್ಳುವುದು ಅಗತ್ಯ

03:29 PM Aug 29, 2017 | Team Udayavani |

ಮುಂಬಯಿ: ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರದ ಕೊರತೆ ಮತ್ತು ಕಾನೂನಿನ ಅರಿವಿಲ್ಲದೆ ಜನಸಾಮಾನ್ಯರು ಮನಬಂದಂತೆ ವರ್ತಿಸಿ, ಅನಂತರ ಜೀವನದಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಾರೆ. ನ್ಯಾಯಾಂಗದ ಬಾಗಿಲು ಹತ್ತದೆ ನಮ್ಮ ಸಮಸ್ಯೆಗಳಿಗೆ ಪರಿಹಾರದ ಸೂಕ್ತ ಮಾರ್ಗ ಯಾವುದೆಂದು ಕಂಡು ಹುಡುಕಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ  ಅನೇಕ ವರ್ಷಗಳಿಂದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಕಾನೂನು ಮತ್ತು ಸಂವಿಧಾನ ಸಮಿತಿ ಈ ಕಾನೂನು ಸಲಹಾ ಶಿಬಿರ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸಿ ಜನಸಾಮಾನ್ಯರಿಗೆ ಮಾರ್ಗದರ್ಶನ ನೀಡುತ್ತಿದೆ. ಇಂತಹ ಅತ್ಯಗತ್ಯದ ಶಿಬಿರಗಳನ್ನು ನಗರದ ಇತರ ಸಂಘ-ಸಂಸ್ಥೆಗಳು ಏರ್ಪಡಿಸುವುದಕ್ಕೆ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಬಂಟ್ಸ್‌ ನ್ಯಾಯ ಮಂಡಳಿಯ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

Advertisement

ಆ. 19ರಂದು ಸಂಜೆ ಸಾಯನ್‌ನ ಸ್ವಾಮಿ ವಿವೇಕಾನಂದ ಸಭಾಗೃಹದಲ್ಲಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಕಾನೂನು ಮತ್ತು ಸಂವಿಧಾನ ಉಪಸಮಿತಿಯ ಕಾರ್ಯಾಧ್ಯಕ್ಷ ಡಿ. ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಲ್ಪಟ್ಟ ಕಾನೂನು ಸಲಹಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಪ್ರಜ್ವಲಿಸಿ ಶಿಬಿರವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿವಾಹ ವಿಚ್ಛೇದನ ಮತ್ತು ಕೌಟುಂಬಿಕ ಆಸ್ತಿ ವಿವಾದಗಳು ಹೆಚ್ಚಾಗುವುದಕ್ಕೆ ನಮ್ಮಲ್ಲಿನ ಸಂಸ್ಕೃತಿ, ಸಂಸ್ಕಾರದ ಕೊರತೆಯೇ ಪ್ರಮುಖ ಕಾರಣ ಎಂದರು.

ಕಾನೂನು ಮತ್ತು ಸಂವಿಧಾನ ಉಪಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಯುವ ಪೀಳಿಗೆಯು ದಾರಿ ತಪ್ಪಿ ಹೋಗದಂತೆ ಎಚ್ಚರಿಕೆಯ ಘಂಟೆ ಎಂಬಂತೆ ಈ ಶಿಬಿರವನ್ನು ಏರ್ಪಡಿಸಿದ್ದೇವೆ. ಜೊತೆಗೆ ಹಿರಿಯರು ಪತ್ನಿ, ಮಕ್ಕಳ ಅಥವಾ ರಕ್ತ ಸಂಬಂಧಿಗಳ ನಡುವೆ ಭಿನ್ನಾಭಿಪ್ರಾಯ ಉದ್ಭವ ಆಗದಂತೆ ನೋಡಿಕೊಳ್ಳಬೇಕಾದ ಪ್ರಾಮುಖ್ಯ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮನೆ ಮಂದಿಗಳ ನಡುವಿನ ಸಂಬಂಧ ಖಾಯಂ ಆಗಿ ಉಳಿಯಬೇಕು. ವೈವಾಹಿಕ ಸಂಬಂಧ ಜೀವನ ಪರ್ಯಂತ ಉಳಿಯಬೇಕು. ಸಮಾಜ ಬೆಳೆದು ನಿಂತು ಇತರರಿಗೆ ಆದರ್ಶ ಸಮಾಜವೆಂದು ಗುರುತಿಸಿಕೊಳ್ಳುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಸಮಾಜರಹಿತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಚಿರಋಣಿ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಅಸೋಸಿಯೇಶನ್‌ನ ಅಧ್ಯಕ್ಷ  ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ ಅವರು ಮಾತನಾಡಿ, ನಮ್ಮ ಸಮಾಜದ ಜನರಲ್ಲಿ ಯಮ್ಮ ಕಠಿಣ ಪರಿಶ್ರಮ ಮತ್ತು ದೈವ ದೇವರ ಅನುಗ್ರಹ ಹಾಗೂ ವ್ಯವಹಾರದ ಜ್ಞಾನ ಭಂಡಾರ ಇರುವುದರಿಂದ ಶ್ರೀಮಂತಿಕೆ ಮೈಗೂಡಿಸಿಕೊಂಡಿದೆ. ಆದರೆ, ಕಾನೂನು, ಸಂಸ್ಕಾರ, ಸಂಸ್ಕೃತಿಯ ಅರಿವು ಸ್ವಲ್ಪ ಕಡಿಮೆ ಇರುವುದರಿಂದ ನಾವು ಕೆಲವೊಮ್ಮೆ ಹೆಜ್ಜೆ ತಪ್ಪುತ್ತೇವೆ. ನಮ್ಮ ಸಮಾಜ ಹೆಜ್ಜೆ ತಪ್ಪಬಾರದು. ಅಡಿಪಾಯ ಗಟ್ಟಿಯಾಗಿರಬೇಕು. ಹಿರಿಯರು, ಯುವಕರು, ಯುವತಿಯರು ಮತ್ತು ಮಹಿಳೆಯರು ಎಲ್ಲರನ್ನು ಒಂದೇ ಕಡೆ ಒಟ್ಟುಗೂಡಿಸಿ ಕಾನೂನು ಸಲಹಾ ಶಿಬಿರ ಎಂಬ ಆಶ್ರಯದ ನೆರಳನ್ನು ನೀಡುವ ಪ್ರಯತ್ನವನ್ನು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಡುತ್ತಾ ಬಂದಿದೆ. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸದಸ್ಯರು ಮಾತ್ರವಲ್ಲದೆ ಇನ್ನಿತರ ಸಮಾಜ ಬಾಂಧವರು ಸ್ಪಂದಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಉಮಾ ಕೆ. ಶೆಟ್ಟಿ ಮತ್ತು ಗೀತಾ ಡಿ. ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಅತಿಥಿಗಳು ಅಧ್ಯಕ್ಷಕರು ದೀಪ ಪ್ರಜ್ವಲಿಸಿ ಚಾಲನೆ ನೀಡಿದ ಈ ಶಿಬಿರದಲ್ಲಿ ನಗರದ ಖ್ಯಾತ ವಕೀಲರು ಮಾತ್ರವಲ್ಲದೆ, ಸಾಮಾಜಿಕ ಚಿಂತಕರೂ ಆಗಿರುವ ನಚಿಕೇತ್‌ ಡಿ. ಜಯವಂತ್‌ ಅವರು ಉಪನ್ಯಾಸ ನೀಡುತ್ತಾ, ಜನಸಾಮಾನ್ಯರು ಆರೋಗ್ಯದ ಬಗ್ಗೆ ಯಾವ ಯಾವ ರೀತಿಯಲ್ಲಿ ನಿರ್ಲಕ್ಷé ವಹಿಸುತ್ತಾರೆ. ಅದರಿಂದಾಗುವ ದುಷ್ಪರಿಣಾಮಗಳೇನೆಂಬುದರ ಬಗ್ಗೆ, ಮೂಲ ಅಪರಾಧ ಮತ್ತು ಬಾಲ ಅಪರಾಧ ಮತ್ತದರ ಕಾನೂನು ಕ್ರಮ ಏನು ? ಮತ್ತು ಹೇಗೆಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

Advertisement

ಇನ್ನೋರ್ವ ವಕೀಲ ಅಡ್ವೊಕೇಟ್‌ ಕೆ. ಬಾಲಕೃಷ್ಣ ಅಡ್ಯಂತಾಯ ಅವರು ಉಪನ್ಯಾಸ ನೀಡುತ್ತ, ಇಂದಿನ ದಿನಗಳಲ್ಲಿ ವಿವಾಹ ಸಂಬಂಧದ ತಕರಾರು, ಕೌಟುಂಬಿಕ ಆಸ್ತಿ ವಿವಾದಗಳು ಹೆಚ್ಚಾಗುವುದಕ್ಕೆ ಕಾರಣಗಳೇನು ? ಹಾಗೂ ಅದರ ಪರಿಹಾರ ಮಾರ್ಗ ಯಾವುದೆಂಬುದರ ಬಗ್ಗೆ ಹತ್ತಾರು ಉದಾಹರಣೆಗಳನ್ನು ನೀಡಿ, ನ್ಯಾಯಾಲಯದ ಮೆಟ್ಟಿಲು ಹತ್ತದೆ, ನಮ್ಮ ನಮ್ಮೊಳಗೆ ಹೊಂದಾಣಿಕೆ ಮಾಡಿಕೊಂಡು ಇತ್ಯರ್ಥಗೊಳಿಸುವುದು ಸೂಕ್ತ ಮಾತ್ರವಲ್ಲದೆ, ಅರೋಗ್ಯಕರ ಎಂದು ತಿಳಿಸಿದರು.

ಉಪನ್ಯಾಸಕರನ್ನು, ಅತಿಥಿಯನ್ನು, ಅಧ್ಯಕ್ಷರು ಮತ್ತು  ಪದಾಧಿಕಾರಿಗಳು ಹೂಗುತ್ಛ ನೀಡಿ ಗೌರವಿಸಿದರು.

ಯುವ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಎಚ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಎಸ್‌. ಶೆಟ್ಟಿ, ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ ಅವರು ಉಪನ್ಯಾಸಕರು ಮತ್ತು ಅತಿಥಿ ಗಣ್ಯರ ಪರಿಚಯ ಮಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಅಡ್ವೊಕೇಟ್‌ ಸುಭಾಷ್‌ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ಅಡ್ವೊಕೇಟ್‌ ಅಶೋಕ್‌ ಡಿ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next