Advertisement

ಸರ್ಕಾರಿ ಆಸ್ಪತ್ರೆಬಳಿ ನಿಲ್ಲಿಸಿದ್ದ ಕಾರಿನಲ್ಲಿ ಶವ ಪತ್ತೆ; ಕೊಲೆ ಮಾಡಿದ್ದಾರೆಂದು ಮಗನ ದೂರು

07:41 PM Jul 30, 2024 | keerthan |

ವಿಜಯಪುರ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವ್ಯಕ್ತಿಯೊಬ್ಬರು ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿರುವ ಕಾರಿನಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮಂಗಳವಾರ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿರುವ ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರಿನಲ್ಲಿ ಪತ್ತೆಯಾಗಿರುವ ಶವವನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿಯ 58 ವರ್ಷದ ಸಂಗಪ್ಪ ದೇವಕತೆ ಎಂದು ಗುರುತಿಸಲಾಗಿದೆ.

ನಿಗೂಢ ರೀತಿಯಲ್ಲಿ ಪತ್ತೆಯಾಗಿರುವ ಸಂಗಪ್ಪ ಅವರದು ಅಸಹಜ ಸಾವು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೃತ ಸಂಗಪ್ಪ ಅವರ ಮಗ ಸಚಿನ್ ನಮ್ಮ ತಂದೆಯನ್ನು ಹತ್ಯೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಥಣಿ ತಾಲೂಕಿನ ಬಾಡಗಿ ಗ್ರಾಮದ ಶಂಭುಲಿಂಗ ಮಮದಾಪುರ ಎಂಬವರ ಬಳಿ ನಾವು 1 ಲಕ್ಷ ರೂ. ಸಾಲ ಪಡೆದಿದ್ದೆವು. ಇದೇ ವಿಷಯವಾಗಿ ನನ್ನ ತಂದೆಯನ್ನು ಇತರೆ ನಾಲ್ವರೊಂದಿಗೆ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಶಂಭುಲಿಂಗ ಅಪಹರಿಸಿದ್ದರು. ಹೀಗಾಗಿ ಅವರೇ ಈ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ನನ್ನ ತಂದೆಯನ್ನು ಕಾರಿನಲ್ಲಿ ಅಪಹರಿಸಿದ ಬಳಿಕ ಶಂಭುಲಿಂಗಗೆ ಕರೆ ಮಾಡಿದ ನಾನು, ಹಣ ಪಾವತಿಸುತ್ತೇವೆ ನಮ್ಮ ತಂದೆಯನ್ನು ಮನೆ ತಂದು ಬಿಡುವಂತೆ ಮನವಿ ಮಾಡಿದ್ದೆ. ಆದರೆ ತನ್ನ ಬದಲಾಗಿ ಬೇರೆಯವರ ಬಳಿ ಹಣ ಕೊಡಲು ಶಂಭುಲಿಂಗ ಹೇಳಿದ್ದರಿಂದ ನಾನು ನಿರಾಕರಿಸಿದೆ ಎಂದಿದ್ದಾರೆ.

Advertisement

ಬದಲಾಗಿ ಬ್ಯಾಂಕ್ ಖಾತೆಗೆ ಆರ್‌ಡಿಜಿಎಸ್ ಮೂಲಕ ಹಣ ಜಮೆ ಮಾಡುತ್ತೇನೆ. ನಗದು ಹಣವೇ ಬೇಕಿದ್ದರೆ ನಾಲ್ಕದು ದಿನ ಸಮಯಾವಕಾಶ ಬೇಕು ಎಂದು ಕೇಳಿದ್ದೆ. ಈ ಹಂತದಲ್ಲೇ ನಾನು ಐಗಳಿ ಠಾಣೆ ಪೊಲೀಸರಿಗೆ ನನ್ನ ತಂದೆಯ ಅಪಹರಣದ ಕುರಿತು ಮಾಹಿಯನ್ನೂ ನೀಡಿದ್ದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಆದರೆ ಬೆಳಕು ಹರಿಯುವ ವೇಳೆಗೆ ನನ್ನ ತಂದೆ ಶವವಾಗಿ ಪತ್ತೆಯಾಗಿದ್ದು, ತಂದೆಯ ಸಾವಿನ ಸುದ್ಧಿ ಆಘಾತ ಉಂಟು ಮಾಡಿದೆ. ಹಣ ವಸೂಲಿ ನೆಪದಲ್ಲಿ ನನ್ನ ತಂದೆಯನ್ನು ಶಂಭುಲಿಂಗ ಅವರ ತಂಡ ಹತ್ಯೆ ಮಾಡಿದೆ ಎಂದು ಆರೋಪಿಸಿರುವ ಮೃತನ ಮಗ ಸಚಿನ್, ನಗರ ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.

ಸ್ಥಳಕ್ಕೆ ಆಗಮಿಸಿರುವ ವಿಜಯಪುರದ ಗಾಂಧಿಚೌಕ್ ಠಾಣೆ ಹಾಗೂ ಅಥಣಿ ತಾಲೂಕಿನ ಐಗಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಳಿಕ ಸಂಗಪ್ಪ ಅವರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next