Advertisement

ಮೀನುಗಾರಿಕೆಗೆ ಸನ್ನದ್ಧವಾದ ಬೋಟುಗಳು

02:29 AM Nov 04, 2019 | Team Udayavani |

ಮಲ್ಪೆ: ಚಂಡಮಾರುತದಿಂದಾಗಿ 10-12 ದಿನಗಳಿಂದ ದಡ ಸೇರಿದ್ದ ಮೀನುಗಾರಿಕೆ ದೋಣಿಗಳು ಸಮುದ್ರದ ಅಲೆಗಳ ಅಬ್ಬರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಕಡಲಿಗಿಳಿಯಲು ಸಿದ್ಧವಾಗಿವೆ.

Advertisement

ಶನಿವಾರ ಮಲ್ಪೆ ಮೀನುಗಾರಿಕೆ ಬಂದರಿನಿಂದ ಸುಮಾರು 70-80ರಷ್ಟು ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಬಹುತೇಕ ದೋಣಿಗಳು ರವಿವಾರ ರಾತ್ರಿಯಿಂದ ಆಳಸಮುದ್ರಕ್ಕೆ ತೆರಳಲು ಸಿದ್ಧವಾಗಿವೆ.

ಕೆಲವು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕ್ಯಾರ್‌ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಮೀನು ಗಾರಿಕೆಗೆ ತೆರಳಿದ ಎಲ್ಲ ಬೋಟುಗಳು ದಡ ಸೇರಿದ್ದವು. ಅದು ಒಮಾನ್‌ನತ್ತ ಮುಖ ಮಾಡಿದ ಬಳಿಕ ಮೀನುಗಾರಿಕೆ ಆರಂಭಿಸಲು ಸಿದ್ಧತೆ ನಡೆದಿದ್ದರೂ “ಮಹಾ’ ಉಂಟಾಗುವ ಎಚ್ಚರಿಕೆ ಮೀನುಗಾರರನ್ನು ತತ್ತರಿಸುವಂತೆ ಮಾಡಿತ್ತು. ಹವಾಮಾನ ಮತ್ತು ಮೀನುಗಾರಿಕೆ ಇಲಾಖೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿತ್ತು. ಸಮುದ್ರ ಪ್ರಕ್ಷುಬ್ಧಗೊಂಡು ಕೆಲವೆಡೆ ಸಮುದ್ರ ಕೊರೆತ ಕಾಣಿಸಿಕೊಂಡಿತ್ತು.

“ಮಹಾ’ ನಿರೀಕ್ಷಿತ ಪರಿಣಾಮ ಬೀರದೆ ಈಗ ಸಮುದ್ರದ ಅಬ್ಬರ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ದೋಣಿಗಳು ತೀರಕ್ಕೆ ಹತ್ತಿರದಲ್ಲಿ ಮೀನುಗಾರಿಕೆ ನಡೆಸಲು ಹೊರಟಿವೆ.

ತತ್ತರಿಸಿದ ಮೀನುಗಾರಿಕೆ
ಪಶ್ಚಿಮ ಸಮುದ್ರದಲ್ಲಿ ಪದೇ ಪದೇ ಉಂಟಾಗುತ್ತಿರುವ ಹವಾಮಾನ ವೈಪರೀತ್ಯದಿಂದ ಕರಾವಳಿಯ ಮೀನುಗಾರಿಕೆ ತತ್ತರಿಸಿದೆ. ಈ ಋತುವಿನ ಆರಂಭದಿಂದಲೇ ಬೆನ್ನುಬೆನ್ನಿಗೆ ಸಮಸ್ಯೆಗಳು ಎದುರಾಗಿರುವುದರಿಂದ ನಿರೀಕ್ಷಿತ ಲಾಭ ದೊರೆತಿಲ್ಲ. ಪಸೀìನ್‌ ಬೋಟುಗಳು ಸಂಪೂರ್ಣ ನಷ್ಟವನ್ನು ಅನುಭವಿಸುತ್ತಿವೆ.

Advertisement

ತೀರಕ್ಕೆ ಸನಿಹ ಮೀನುಗಾರಿಕೆ
“ಕ್ಯಾರ್‌’ ಚಂಡಮಾರುತದ ಬಳಿಕ ಉಂಟಾಗಿರುವ “ಮಹಾ’ ಚಂಡಮಾರುತದ ಪ್ರಭಾವ ನ. 6ರ ವರೆಗೆ ಗೋಚರಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹಾಗಾಗಿ ಮೀನುಗಾರಿಕೆಗೆ ತೆರಳದಂತೆ ನ. 6ರ ವರೆಗೆ ಮೀನುಗಾರಿಕೆ ಬೋಟುಗಳಿಗೆ ನೀಡುವ ಡೀಸೆಲ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಡೀಸೆಲ್‌, ಮಂಜುಗಡ್ಡೆ ಸಂಗ್ರಹ ಇರುವ ದೋಣಿಗಳು ಮಾತ್ರ ತೀರಕ್ಕೆ ಸನಿಹ ಮೀನುಗಾರಿಕೆ ನಡೆಸಲು ಮುಂದಾಗಿವೆ.

ಡೀಸೆಲ್‌ ಪೂರೈಕೆ ನಿಲ್ಲಿಸಲಾಗಿದೆ
ತೀರದಲ್ಲಿ ಶಾಂತವಾಗಿದ್ದರೂ ಆಳ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುವ ಸಾಧ್ಯತೆ ಇದೆ. ಇಲಾಖೆಯ ಸೂಚನೆಯನ್ವಯ ಡೀಸೆಲ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಮಲ್ಪೆ ಬಂದರಿನಿಂದ ಶೇ. 20ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳಿವೆ.
– ಕೃಷ್ಣ ಎಸ್‌. ಸುವರ್ಣ ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ನ. 6ರ ವರೆಗೆ ಕಡಲಿಗಿಳಿಯುವಂತಿಲ್ಲ
“ಮಹಾ’ ಚಂಡಮಾರುತದ ಪ್ರಭಾವ ನ. 6ರ ವರೆಗೆ ಇರುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲಿಯವರೆಗೂ ಡೀಸೆಲ್‌ ಪೂರೈಕೆ ನಿಲ್ಲಿಸುವಂತೆ ಬಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಬಂದರಿನಲ್ಲಿ ನಿರಂತರವಾಗಿ ಘೋಷಣೆ ಮಾಡಲು ಸೂಚನೆ ಕೊಟ್ಟಿದೆ.
-ಗಣೇಶ್‌ ಕೆ., ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next