Advertisement

ಲಕ್ಷದ್ವೀಪದಲ್ಲಿ ಬೋಟು ಮುಳುಗಡೆ: 7 ಕಾರ್ಮಿಕರ ರಕ್ಷಣೆ

10:14 AM Jan 02, 2020 | sudhir |

ಮಂಗಳೂರು: ಲಕ್ಷದ್ವೀಪಕ್ಕೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಬೃಹತ್‌ ದೋಣಿಯೊಂದು ಲಕ್ಷದ್ವೀಪದ ಕಿಲ್ತಾನ್‌ ದ್ವೀಪದ ಬಳಿ ಭಾಗಶಃ ಮುಳುಗಡೆಯಾಗಿದ್ದು, ಎಲ್ಲ 7 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಆದರೆ ಅದರಲ್ಲಿರುವ ಲಕ್ಷಾಂತರ ರೂ. ಕಟ್ಟಡ ನಿರ್ಮಾಣ ಸಾಮಗ್ರಿಗಳು ನೀರು ಪಾಲಾಗುವ ಭೀತಿ ಎದುರಾಗಿದೆ.

Advertisement

ಲಕ್ಷದ್ವೀಪ ಮೂಲದ ಜಾಬಿರ್‌ ಅವರ “ಫೈಸಲ್‌ ಹುಸೈನ್‌’ ಹೆಸರಿನ ಬೋಟ್‌ ಸೋಮವಾರ ಬೆಳಗ್ಗೆ ಮಂಗಳೂರು ಹಳೆ ಬಂದರಿನಿಂದ 700 ಚೀಲ ಸಿಮೆಂಟ್‌, 400 ಬ್ಲಾಕ್‌ ಇಟ್ಟಿಗೆ, 1,000 ಚೀಲ ಜಲ್ಲಿ, ಎಂ-ಸ್ಯಾಂಡ್‌, ಸ್ಟೀಲ್‌ ಹೊತ್ತುಕೊಂಡು ಪ್ರಯಾಣ ಬೆಳೆಸಿತ್ತು.

ಮಂಗಳವಾರ ನಸುಕಿನ ಜಾವ 4ರ ಸುಮಾರಿಗೆ ದಾರಿ ಮಧ್ಯೆ ಬೋಟಿನೊಳಗೆ ನೀರು ತುಂಬಲಾರಂಭಿಸಿತು. ಕಿಲ್ತಾನ್‌ ದ್ವೀಪದ ಬಳಿ ಲಂಗರು ಹಾಕಲಾಯಿತಾದರೂ ಬೋಟು ಭಾಗಶಃ ಮುಳುಗಿತು. ಲಕ್ಷದ್ವೀಪದ ತನ್ನ ಗುರಿಯತ್ತ ತಲುಪಲು ಬೋಟಿಗೆ ಕೇವಲ ನಾಲ್ಕು ಗಂಟೆ ಪ್ರಯಾಣ ಬಾಕಿಯಿತ್ತು.

“ಘಟನೆ ಬಗ್ಗೆ ಕೂಡಲೇ ಲಕ್ಷದ್ವೀಪದ ಜನರಿಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ದೋಣಿಯಲ್ಲಿ ಬಂದ ತಂಡವೊಂದು ಬೋಟ್‌ನಲ್ಲಿದ್ದ ಎಲ್ಲ 7 ಮಂದಿ ಕಾರ್ಮಿಕರನ್ನು ರಕ್ಷಿಸಿತು. ಬೋಟು ಭಾಗಶಃ ಮುಳುಗಿರು ವುದರಿಂದ ದಡಕ್ಕೆ ಕೊಂಡೊಯ್ಯಲು ಅಸಾಧ್ಯ ಎಂಬ ಸ್ಥಿತಿಯಲ್ಲಿದೆ. ಅದರಲ್ಲಿರುವ ಸರಕು ಉಳಿಯುವ ಭರವಸೆಯಿಲ್ಲ’ ಎಂದು ಮಂಗಳೂರು ಹಳೆ ಬಂದರ್‌ನ ಬಳಕೆದಾರರ ಅಸೋಸಿಯೇಶನ್‌ನ ಕಾರ್ಯದರ್ಶಿ ಅಬ್ದುಲ್‌ ಲತೀಫ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next