Advertisement

3 ತಾಸು ಒದ್ದಾಡಿ ಮೃತಪಟ್ಟ ಅಪರೂಪದ ಕಪ್ಪು ಚಿರತೆ

08:32 PM Aug 28, 2021 | Team Udayavani |

ಶಿರಸಿ: ತಾಲೂಕಿನ ಬನವಾಸಿ ಅರಣ್ಯ ವಲಯದ ಹುಲೇಮಳಗಿಯಲ್ಲಿ ಸುಮಾರು 4 ವರ್ಷದ ಅಪರೂಪದ ಕಪ್ಪು ಚಿರತೆ ಮೂರು ಗಂಟೆಗಳಿಗೂ ಅಧಿಕ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿ ಕೊನೆಗೂ ಇಹಲೋಕ ತ್ಯಜಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಮುಂಜಾನೆ 8 ಗಂಟೆ ಸುಮಾರಿಗೆ ಸ್ಥಳೀಯರೊಬ್ಬರಿಗೆ ಚಿರತೆ ಮಣ್ಣು ಹಾಗೂ ಮರದ ಕೊಂಬೆ ನಡುವೆ ಸಿಲುಕಿ ಬಿದ್ದು ಒದ್ದಾಡುವುದು ಕಂಡು ಬಂದಿದ್ದು, ಅರಣ್ಯ ಇಲಾಖೆಗೆ ತಿಳಿಸಿದರು. ವಲಯ ಅರಣ್ಯಾಧಿಕಾರಿ ಉಷಾ ತಕ್ಷಣ ತಮ್ಮ ತಂಡದೊಂದಿಗೆ ಆಗಮಿಸಿ ಹೆಣ್ಣು ಚಿರತೆ ಟೊಂಕದ ಭಾಗಕ್ಕೆ ಉರುಳು ಹಾಕಿದ್ದು ಕಂಡು ಬಂದಿದೆ. ಹಂದಿ ನಿಯಂತ್ರಣಕ್ಕೆ ಹಾಕಿದ ಉರುಳಿಗೆ ಹೆಣ್ಣು ಚಿರತೆಯ ಟೊಂಕ ಸಿಲುಕಿರಬೇಕು ಎಂದು ಅಂದಾಜಿಸಿದರು.

ಅರವಳಿಕೆ ತಜ್ಞರ ಕರೆಸಿ ಕ್ರೋಧದಲ್ಲಿ ಇರುವ ಕಪ್ಪು ಚಿರತೆ ಹಿಡಿದು ಉಪಚರಿಸಲು ಪ್ರಯತ್ನಿಸಿದರು . ಆದರೂ ಅದು ಗರ್ಜಿಸುತ್ತ ನರಳುತ್ತಿತ್ತು. ಬಳಿಕ ಅದು ಅದೇ ಸ್ಥಿತಿಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿತು.

ಬನವಾಸಿ ಭಾಗದಲ್ಲಿ ಕಾಣಿಸಿಕೊಂಡ ಪ್ರಥಮ ಕಪ್ಪುಚಿರತೆ ಇದಾಗಿದ್ದು,ವಲಯ ಅರಣ್ಯಾಧಿಕಾರಿ ಕಚೇರಿ ಆವಾರದಲ್ಲಿ ಅಂತಿಮ ವಿಧಿ ನಡೆಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ . ಹೆಗಡೆ ಸೇರಿದಂತೆ ಅನೇಕ ಅಧಿಕಾರಿಗಳು, ನೂರಾರು ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next