Advertisement

ಸಂತೋಷ್‌ ತಂದ ಸಂದೇಶ ಏನು? ಸಿಎಂ ಭೇಟಿಯಾದ ಸಂಘಟನ ಪ್ರಧಾನ ಕಾರ್ಯದರ್ಶಿ

11:57 PM Nov 23, 2020 | sudhir |

ಬೆಂಗಳೂರು: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಬಗ್ಗೆ ಅನಿಶ್ಚಿತತೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿಯಾಗಿ ಚರ್ಚಿಸಿದ್ದು, ದಿಲ್ಲಿ ವರಿಷ್ಠರಿಂದ ಯಾವ ಸಂದೇಶ ತಂದಿದ್ದಾರೆ ಎಂಬ ಕುತೂಹಲ ಮೂಡಿದೆ.

Advertisement

ಸಂತೋಷ್‌ ಭೇಟಿ ಬೆನ್ನಲ್ಲೇ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಕೂಡ ಸಿಎಂ ಅವರನ್ನು ಭೇಟಿ ಯಾಗಿ ಚರ್ಚಿಸಿದ್ದು, ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಸಂಪುಟ ವಿಸ್ತರಣೆಯೋ ಪುನಾರಚನೆಯೋ ಅಥ ವಾ ಕೇವಲ ಗ್ರಾ.ಪಂ. ಚುನಾವಣ ಸಿದ್ಧತಾ ವಿಚಾರವೋ ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಉಭಯ ನಾಯಕರು ಭೇಟಿ ಬಗ್ಗೆ ತುಟಿ ಬಿಚ್ಚದಿರುವುದನ್ನು ನೋಡಿದರೆ, ತತ್‌ಕ್ಷಣಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ ಕ್ಷೀಣಿಸಿದೆ ಎನ್ನಬಹುದು.

ಸಿಎಂ ಅಧಿಕೃತ ನಿವಾಸ “ಕಾವೇರಿ’ಗೆ ಸೋಮವಾರ ಭೇಟಿ ನೀಡಿದ್ದ ಬಿ.ಎಲ್‌. ಸಂತೋಷ್‌ ಸುಮಾರು 20 ನಿಮಿಷ ಮಾತುಕತೆ ನಡೆಸಿದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ 30 ನಿಮಿಷ ಚರ್ಚೆ ನಡೆಸಿದರು.

ಈ ನಡುವೆ ಸಚಿವ ರಮೇಶ್‌ ಜಾರಕಿಹೊಳಿ ಅವರು ಸಂತೋಷ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಉಪಚುನಾವಣೆ, ಗ್ರಾ.ಪಂ. ಚುನಾವಣೆ, ಸರಕಾರದ ಆಡಳಿತ ಕಾರ್ಯ ವೈಖರಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೆಯೇ ಸಂಪುಟ ಕಸರತ್ತು, ಸಂಘಟನೆ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಸಂಪುಟ ವಿಚಾರವಾಗಿ ವರಿಷ್ಠರು ಈಗಾಗಲೇ ಸಿಎಂ ಜತೆಗೆ ಮಾತುಕತೆ ನಡೆಸಿದ್ದು, ಇನ್ನು ರಾಜ್ಯ ಮಟ್ಟದಲ್ಲಿ ಪಕ್ಷದ ನಾಯಕರು ಮತ್ತು ಸಿಎಂ ಸಮಾಲೋಚನೆ ನಡೆಸಿ ಈ ನಿಟ್ಟಿನಲ್ಲಿ ಮುಂದುವರಿಯಬೇಕಿದೆ ಎಂಬುದಾಗಿ ನಳಿನ್‌ ಹೇಳಿರುವುದು ಕುತೂಹಲ ಮೂಡಿಸಿದೆ.

Advertisement

ಖಾಸಗಿ ಕಾರ್ಯಕ್ಕಾಗಿ ದಿಲ್ಲಿಗೆ: ವಿಜಯೇಂದ್ರ
ಖಾಸಗಿ ಕಾರಣಕ್ಕಾಗಿ ದಿಲ್ಲಿಗೆ ಹೋಗಿದ್ದೆ, ರಾಜಕಾರಣದ ವಿಷಯಕ್ಕಲ್ಲ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿ ದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಸಿಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಿದ್ದಾರೆ. ವರಿಷ್ಠರು ತಿಳಿಸಿದಾಗ ಸಿಎಂ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಿಳಂಬ?
ಸಂಪುಟ ವಿಸ್ತರಣೆ -ಪುನಾರಚನೆ ಗೊಂದಲ ಮುಂದುವರಿದಿದೆ. ಮಾಸಾಂತ್ಯ ಇಲ್ಲವೇ ಡಿಸೆಂಬರ್‌ ಮೊದಲ ವಾರ ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕ ಸಭಾ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಡಿ. 7ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಹಾಗಾಗಿ ವಾರಾಂತ್ಯದೊಳಗೆ ಸಂಪುಟ ಕಸರತ್ತಿಗೆ ಚಾಲನೆ ಸಿಗದಿದ್ದರೆ ವಿಳಂಬವಾಗುವ ಸಾಧ್ಯತೆ ಅಧಿಕ.

Advertisement

Udayavani is now on Telegram. Click here to join our channel and stay updated with the latest news.

Next