Advertisement
ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆಲುವು ಸಾಧಿಸಿರಲಿಲ್ಲ. ಈ ಕಾರಣಕ್ಕೆ ಮೂಡಬಿದಿರೆಯಲ್ಲಿ ಎರಡು ವಿಧಗಳಲ್ಲಿ ಬಿಜೆಪಿ ತನ್ನ ಮೊದಲ ಜಯ ದಾಖಲಿಸಿಕೊಂಡಿದೆ. ರಾಜ್ಯದ 222 ಕ್ಷೇತ್ರಗಳ ಪೈಕಿ ಮೂಡಬಿದಿರೆಯ ಫಲಿತಾಂಶ ಮೊದಲು ಘೋಷಣೆಯಾಗಿದ್ದು, ಆದು ಬಿಜೆಪಿ ಪಾಲಿಗೆ ಮೊದಲ ಜಯ ಕೂಡ ಹೌದು. ಎರಡನೆಯದಾಗಿ ಮೂಡಬಿದಿರೆ ಕ್ಷೇತ್ರದ ಇತಿಹಾಸ ದಲ್ಲೇ ಬಿಜೆಪಿ ಮೊದಲ ಜಯ ಪಡೆದುಕೊಂಡು ಉಮಾನಾಥ ಕೋಟ್ಯಾನ್ ಅವರು ಕ್ಷೇತ್ರದ ಪಾಲಿಗೆ ಬಿಜೆಪಿಯ ಪ್ರಥಮ ಶಾಸಕರೆನಿಸಿಕೊಂಡಿದ್ದಾರೆ.
ಮೂಡಬಿದಿರೆ: ಬಜರಂಗ ದಳ ಕಾರ್ಯಕರ್ತನಾಗಿದ್ದು ದುಷ್ಕರ್ಮಿಗಳಿಂದ ಎರಡು ವರ್ಷಗಳ ಹಿಂದೆ ಕೊಲೆಗೀಡಾದ ಬಿರಾವು ಪರಿಸರದ ಪ್ರಶಾಂತ ಪೂಜಾರಿ ಅವರ ಮನೆಗೆ ನೂತನ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದರು. ಪ್ರಶಾಂತ ಪೂಜಾರಿ ಅವರ ತಂದೆ, ಹೂವಿನ ವ್ಯಾಪಾರಿ ಆನಂದ ಪೂಜಾರಿ ಅವರನ್ನು ತಬ್ಬಿಕೊಂಡಾಗ ಆನಂದ ಪೂಜಾರಿ ಹಾಗೂ ಅವರ ಪತ್ನಿ ಕಣ್ಣೀರ್ಗರೆದರು. ಕೋಟ್ಯಾನ್ ಅವರು ಪ್ರಶಾಂತ್ ಪೂಜಾರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಶ್ರದ್ಧಾಂಜಲಿ ಸಲ್ಲಿಸಿದರು.