Advertisement

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

05:05 PM May 02, 2024 | Team Udayavani |

ರಾಯಚೂರು: ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ರಾಯಚೂರು-ಯಾದಗಿರಿ ಲೋಕಸಭೆ ಕಣ ಕಾವೇರಿದೆ. ಬಿಜೆಪಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರನ್ನೇ ಕಣಕ್ಕಿಳಿಸಿದರೆ, ಕಾಂಗ್ರೆಸ್‌ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ ನಾಯಕ್‌ಗೆ ಮಣೆ ಹಾಕಿದೆ. ಮೋದಿ ನಾಮಬಲ, ಕಾಂಗ್ರೆಸ್‌ ಗ್ಯಾರಂಟಿ ಶಕ್ತಿಯಿಂದ ಬಿಜೆಪಿ -ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

Advertisement

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈಗ ಬಿಜೆಪಿ ತೆಕ್ಕೆಯಲ್ಲಿದ್ದು ಕೈ-ಕಮಲ ಪಾಳೆಯಕ್ಕೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಈವರೆಗೆ 18 ಚುನಾವಣೆಗಳು ನಡೆದಿದ್ದು 14 ಬಾರಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಅದರಲ್ಲೂ ಸಾಮಾನ್ಯ ವರ್ಗಕ್ಕೆ ಮೀಸಲಿದ್ದಾಗಲೂ ನಾಯಕ ಸಮುದಾಯವೇ ಹೆಚ್ಚು ಗೆಲವು ಸಾಧಿಸಿತ್ತು. ಈಗ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ನಾಯಕರ ಪಾರುಪತ್ಯ ಮುಂದುವರಿದಿದೆ.

ಈ ಕ್ಷೇತ್ರದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿದ್ದು ಐದು ಕಡೆ ಕಾಂಗ್ರೆಸ್‌, ಎರಡು ಕಡೆ ಬಿಜೆಪಿ ಮತ್ತು ಒಂದು ಕಡೆ ಜೆಡಿಎಸ್‌ ಶಾಸಕರಿದ್ದಾರೆ. ಕಳೆದ ಬಾರಿ ನಾಲ್ಕು ಕಡೆ ಬಿಜೆಪಿ, ಮೂರು ಕಡೆ ಕಾಂಗ್ರೆಸ್‌ ಹಾಗೂ ಒಂದು ಕಡೆ ಜೆಡಿಎಸ್‌ ಶಾಸಕರಿದ್ದರು. ಈ ಬಾರಿ ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಆಗಿದೆ.

ಕಮಲಕ್ಕೆ ಮೋದಿ ಬಲ: ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ನಾನು ಸ್ಥಳೀಯ ಎನ್ನುವ ಟ್ರಂಪ್‌ ಕಾರ್ಡ್‌ ಬಳಸುತ್ತಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ ಯೋಜನೆಗಳು, ಜಲಜೀವನ್‌ ಮಿಷನ್‌ ಸೇರಿ ವಿವಿಧ ಯೋಜನೆಗಳಿಗೆ 34 ಸಾವಿರ ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಸಂಸತ್‌ನಲ್ಲಿ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ಸಕ್ರಿಯ ಎನಿಸಿಕೊಂಡಿದ್ದಾರೆ. ಆದರೆ ಪಕ್ಷಕ್ಕೆ ನಿರೀಕ್ಷಿತ ಮಟ್ಟದ ಕೊಡುಗೆ ನೀಡಿಲ್ಲ. ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕವಿಲ್ಲ ಎನ್ನುವ ಕಾರಣಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನವೂ ಮೂಡಿದೆ.

ಗ್ಯಾರಂಟಿ ನೆಚ್ಚಿಕೊಂಡ ಕಾಂಗ್ರೆಸ್‌: ಮಾಜಿ ಐಎಎಸ್‌ ಅಧಿಕಾರಿಯಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದು ರಾಜ್ಯ ಸರಕಾರದ ಗ್ಯಾರಂಟಿಗಳನ್ನು ನೆಚ್ಚಿಕೊಂಡಿದ್ದಾರೆ. ಜತೆಗೆ ಸರಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದ್ದು ಈ ಭಾಗದ ಸಮಸ್ಯೆಗಳ ಅರಿವಿದೆ. ಈ ಭಾಗದ ಅಭಿವೃದ್ಧಿಗಾಗಿ
ಬೆಂಬಲಿಸುವಂತೆ ಕೋರುತ್ತಿದ್ದಾರೆ. ಕ್ಷೇತ್ರದ ಜನರಿಗೆ ಹೊಸ ಮುಖವಾಗಿದ್ದು ಸ್ಥಳೀಯರಲ್ಲ ಎನ್ನುವ ಟೀಕೆ ಎದುರಿಸುತ್ತಿದ್ದಾರೆ. ರಾಜಕೀಯ ಅನುಭವದ ಕೊರತೆ, ಮೋದಿ ಅಲೆ ಮೆಟ್ಟಿ ನಿಲ್ಲುವ ಸವಾಲು ಎದುರಿಸುತ್ತಿದ್ದಾರೆ.

Advertisement

ತಣ್ಣಗಾದ ಬಂಡಾಯ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಮಾಜಿ ಸಂಸದ ಬಿ.ವಿ. ನಾಯಕ ಟಿಕೆಟ್‌ ಸಿಗದಿದ್ದಕ್ಕೆ ಬಂಡಾಯ ಸಾರಿದ್ದು ಬಿಜೆಪಿ ವರಿಷ್ಠರ ಮನವೊಲಿಕೆ ಬಳಿಕ ಬಂಡಾಯ ಶಮನಗೊಂಡಿದೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯವಿದೆ.

ಜಾತಿವಾರು ಲೆಕ್ಕಾಚಾರ:
ಕ್ಷೇತ್ರದಲ್ಲಿ ಒಟ್ಟು 20,10,103 ಲಕ್ಷ ಮತದಾರರಿದ್ದು ಅದರಲ್ಲಿ 10.15,158 ಲಕ್ಷ ಮಹಿಳಾ ಮತದಾರರಿದ್ದರೆ, 9,94,646 ಲಕ್ಷ ಪುರುಷ ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನಂತರದ ಸ್ಥಾನದಲ್ಲಿ ಅಲ್ಪಸಂಖ್ಯಾಕರು, ಕುರುಬ, ಲಿಂಗಾಯತ ಹಾಗೂ ಇತರ ಸಮುದಾಯದವರಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ(ವಾಲ್ಮೀಕಿ) ಸಮುದಾಯದ ಮತ ಅದೇ ಸಮುದಾಯಕ್ಕೆ ಸೇರಿದ ಇಬ್ಬರು ಅಭ್ಯರ್ಥಿಗಳ ಮಧ್ಯೆ ವಿಭಜನೆಯಾಗುವ ಸಾಧ್ಯತೆಯಿದ್ದು ಕುರುಬ-ಅಲ್ಪಸಂಖ್ಯಾಕ ಮತಗಳು ಒಂದೆಡೆ ವಾಲಿದರೆ, ಲಿಂಗಾಯತರು ನಿರ್ಣಾಯಕವಾಗಲಿದ್ದಾರೆ.

ರಾಜಾ ಅಮರೇಶ್ವರ ನಾಯಕ-ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ
*ಸಾಮರ್ಥ್ಯ
1)ಪ್ರಧಾನಿ ಮೋದಿ ನಾಮ ಬಲ, ಜೆಡಿಎಸ್‌ ಬೆಂಬಲ

2)ಐದು ವರ್ಷದಲ್ಲಿ ತಾವು ಮಾಡಿದ ಅಭಿವೃದ್ಧಿ

3)ಸಜ್ಜನ ರಾಜಕಾರಣಿ, ಸ್ಥಳೀಯರು ಎಂಬ ವಿಶೇಷತೆ

ನನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದು ಐದು ವರ್ಷದಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಪ್ರಧಾನಿ ಮೋದಿ ಶಕ್ತಿ, ನನ್ನ ಅಭಿವೃದ್ಧಿಯೇ ಶ್ರೀರಕ್ಷೆಯಾಗಿವೆ. ದೇಶದ ಜನತೆಗೆ ಮತ್ತೂಮ್ಮೆ ಮೋದಿಗೆ ಅಧಿಕಾರ ಸಿಗಬೇಕೆಂಬ ಬಯಕೆಯಿದ್ದು, ಜನ ಆಶೀರ್ವದಿಸುವ ವಿಶ್ವಾಸವಿದೆ.
● ರಾಜಾ ಅಮರೇಶ್ವರ ನಾಯಕ, ಬಿಜೆಪಿ ಅಭ್ಯರ್ಥಿ

ಜಿ.ಕುಮಾರ ನಾಯಕ ಕಾಂಗ್ರೆಸ್‌ ಅಭ್ಯರ್ಥಿ
*ಸಾಮರ್ಥ್ಯ
1)ರಾಜ್ಯ ಸರಕಾರದ ಗ್ಯಾರಂಟಿಗಳ ಬಲ
2)ಡಿಸಿಯಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವ
3)5 ಕಾಂಗ್ರೆಸ್‌ ಶಾಸಕರು, 3 ಸಚಿವರ ಬಲ

ರಾಯಚೂರು ಜಿಲ್ಲೆಯಲ್ಲಿ ಹಿಂದೆ ಡಿಸಿಯಾಗಿ, ಉಸ್ತುವಾರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿದೆ. ನನ್ನ 35 ವರ್ಷಗಳ ಆಡಳಿತದ ಅನುಭವದಿಂದ ಜನರಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್‌ ಸರಕಾರದ ಗ್ಯಾರಂಟಿಗಳು ಜನರನ್ನು ತಲುಪಿದ್ದು ಹೋದಲೆಲ್ಲ ಉತ್ತಮ ಬೆಂಬಲ ಸಿಗುತ್ತಿದೆ. ಜನ ಕಾಂಗ್ರೆಸ್‌ ಗೆಲ್ಲಿಸುವ ಭರವಸೆ ಇದೆ.


● ಜಿ.ಕುಮಾರ ನಾಯಕ, ಕಾಂಗ್ರೆಸ್‌ ಅಭ್ಯರ್ಥಿ

*ಸಿದ್ಧಯ್ಯ ಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next