Advertisement

ಬಿಜೆಪಿಯಲ್ಲಿ ಮುಂದುವರಿದ ರಾಜೀನಾಮೆ ಪರ್ವ 

07:45 AM Jul 29, 2022 | Team Udayavani |

ಮೈಸೂರು: ಜಿಲ್ಲೆಯ 25 ಬಿಜೆಪಿ ಯುವ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಮತ್ತು ಮೈಸೂರು ನಗರ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದರು.

Advertisement

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಬಿಜೆಪಿ ಅಧ್ಯಕ್ಷ ಉಮೇಶ್‌ ತಲಗಾರು, ಪ್ರಧಾನ ಕಾರ್ಯದರ್ಶಿ ನೂತನ್‌ ಕುಮಾರ್‌, ವೇಣುಗೋಪಾಲ್‌ ಸಹಿತ ತಾಲೂಕು ಬಿಜೆಪಿ ಘಟಕದ ಎಲ್ಲ ಮುಖಂಡರು ಶುಕ್ರವಾರ ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ಕೋಲಾರ ಜಿಲ್ಲೆ  ಶ್ರೀನಿವಾಸಪುರದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ರಮೇಶ್‌ ಬಾಬು, ಕೋಲಾರ ಗ್ರಾಮಾಂತರ ಮಂಡಲ ಮಾಜಿ ಕಾರ್ಯದರ್ಶಿ ಹಾಗೂ ತಾಪಂ ಕೆಡಿಪಿ ನಾಮನಿರ್ದೇಶನ ಸದಸ್ಯ ಪ್ರಸಾದ್‌ ಜಿ.ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ನಾಗರಾಜ್‌, ಕೋಲಾರ ನಗರ ಘಟಕದ ಅಧ್ಯಕ್ಷ ಭರತ್‌ ಮತ್ತು ಘಟಕದ ಹತ್ತು ಮಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ತುಮಕೂರು ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು ಕೂಡ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ರಾಜ್ಯ ಬಿಜೆಪಿ ಎಸ್‌.ಟಿ. ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರಭಾಕರ್‌, ತುಮಕೂರು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವಿನಯ್‌ ಅದ್ವೈತ್‌, ರಕ್ಷಿತ್‌, ಕಿರಣ್‌, ರೇವಣಿ, ಶಕುಂತಳಾ ನಟರಾಜ್‌, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಲೇಗೌಡ ಅವರು  ರಾಜೀನಾಮೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ. ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಡಾ| ಬಾಬು ರಾಜೇಂದ್ರ ನಾಯಿಕ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಹಾಗೂ  9 ಮಂಡಲಗಳ ಪದಾಧಿಕಾರಿಗಳೂ ರಾಜೀನಾಮೆಗೆ ಮುಂದಾಗಿದ್ದಾರೆ.

Advertisement

ಗೃಹ ಸಚಿವರಿಗೆ ಭಗವದ್ಗೀತೆ  ಕಳುಹಿಸಿ ಆಕ್ರೋಶ :

ತುಮಕೂರು: ರಾಜ್ಯದಲ್ಲಿ ನಿರಂತರ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಠಿನ  ಕ್ರಮ ಕೈಗೊಳ್ಳುವಲ್ಲಿ  ವಿಫ‌ಲರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಘಟಕದ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಟಿ.ಆರ್‌.ರಾಕೇಶ್‌ ಗೃಹ ಸಚಿವರಿಗೆ ಭಗವದ್ಗೀತೆ ಕಳಿಸುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಹಂತಕರ ವಿರುದ್ಧ ಕಠಿನ ಕ್ರಮಕ್ಕೆ ಆಗ್ರಹ :

ಪ್ರವೀಣ್‌ ಹಂತಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ, ಬಜರಂಗದಳ,  ವಿಶ್ವಹಿಂದೂ ಪರಿಷತ್‌ನ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು  ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಶಿವಮೊಗ್ಗ, ಚಿಕ್ಕಮಗಳೂರು,  ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ ಮುಂತಾದೆಡೆಯೂ  ಪ್ರತಿಭಟನೆ ನಡೆಯಿತು.

ಅಗತ್ಯ ಬಿದ್ದರೆ ನಾವೂ ಬೀದಿಗೆ ಇಳಿಯುತ್ತೇವೆ’ :

ಬೆಂಗಳೂರು: ಪ್ರವೀಣ್‌ ಹತ್ಯೆಯಿಂದ ಬಿಜೆಪಿ ಕಾರ್ಯಕರ್ತರು ಸಮೂಹ ಸನ್ನಿಗೆ ಒಳಗಾದರೆ, ಅದರ ಲಾಭ ಬೇರೆಯವರಿಗೆ ಆಗುತ್ತದೆ. ಅಗತ್ಯ ಬಿದ್ದರೆ ನಾವೂ  ಕಾರ್ಯಕರ್ತರ ಜತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವೀಣ್‌ ಹತ್ಯೆಗೆ ಸಂಬಂಧಿಸಿ ಕೇರಳದ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.  ಪಿಎಫ್ಐ, ಎಸ್‌ಡಿಪಿಐ ಸಂಘಟನೆ ನಿಷೇಧ ಮಾಡುವುದು, ಯು.ಪಿ ಮಾದರಿ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ  ಶಿಫಾರಸು ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದರು. ಕಾರ್ಯಕರ್ತರು  ಸಮೂಹ ಸನ್ನಿಗೆ ಒಳಗಾಗಬೇಡಿ. ನಮ್ಮನ್ನು ನಂಬದೆ ಕಾಂಗ್ರೆಸ್‌ ಹಿಂದೂ ರಕ್ಷಕ ಎಂದು  ನಂಬುತ್ತೀರಾ ಎಂದು ಪ್ರಶ್ನಿಸಿದರು.

ಕೇರಳದಿಂದ ನಮ್ಮ ರಾಜ್ಯಕ್ಕೆ ಬಂದು ಕೊಲೆ ಮಾಡಿ ಹೋಗುವುದು ಬಹಳ ದಿನಗಳಿಂದ ನಡೆಯುತ್ತಿದೆ. ಪ್ರವೀಣ್‌ ಮನೆಯ ಪರಿಸರ ಕೇರಳ ಗಡಿಗೆ ಹೊಂದಿಕೊಂಡಿದೆ. ಕೇರಳ ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದರೆ  ಮಾತ್ರ, ಕೊಲೆಗಡುಕರಿಗೆ ಶಿಕ್ಷೆ ಆಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಪೊಲೀಸರು ಕೆಲಸ ಮಾಡುತ್ತಿದ್ದಾರೆ.ಆರಗ ಜ್ಞಾನೇಂದ್ರ,  ಗೃಹ ಸಚಿವ

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸಹಿತ ಯಾರಿಗೂ ರಕ್ಷಣೆ ಇಲ್ಲದಂತಾಗಿದ್ದು, ಸರಕಾರವೇ  ನೈತಿಕ ಪೊಲೀಸ್‌ಗಿರಿಗೆ ಪ್ರೋತ್ಸಾಹ ನೀಡಿರುವುದು ಪರಿಸ್ಥಿತಿ ಈ ಮಟ್ಟದಲ್ಲಿ ಹದಗೆಡಲು ಕಾರಣ. ಬಿಜೆಪಿ ಸರಕಾರ ಹತ್ಯೆಯಂಥ ಘಟನೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಪ್ರವೀಣ್‌ ಕೊಲೆ ಬಹಳ ಅನ್ಯಾಯವಾಗಿದ್ದು, ಇದನ್ನು ನಾವು  ಖಂಡಿಸುತ್ತೇವೆ. ನಮಗೆ ಇದರಲ್ಲಿ ರಾಜಕಾರಣ ಬೇಕಿಲ್ಲ ಹಾಗೂ ಸರಕಾರದ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ತನ್ನ ಕೆಲಸ ಮಾಡಲಿ. ಆದರೆ ಸರಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಡಿ. ಕೆ. ಶಿವಕುಮಾರ್‌ , ಕೆಪಿಸಿಸಿ ಅಧ್ಯಕ್ಷ

ಪ್ರವೀಣ್‌ ಕೊಲೆ ಪ್ರಕರಣದಲ್ಲಿ ಹತಾಶೆಗೊಂಡು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವ ಬಿಜೆಪಿ ಯುವ ನಾಯಕರ ಸಿಟ್ಟು, ಆಕ್ರೋಶ ಮುಸ್ಲಿಂ ಗೂಂಡಾಗಳ ವಿರುದ್ಧ ತಿರುಗಬೇಕು. ಸೈದ್ಧಾಂತಿಕ ವೈಷಮ್ಯಕ್ಕೆ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿರುವುದಕ್ಕೆ ಪಕ್ಷದ ನಾಯಕರು ಬೇಸರದಲ್ಲಿದ್ದಾರೆ. ನೋವಿನ ಸಂದರ್ಭದಲ್ಲಿ ಪಕ್ಷದ ವಿರುದ್ಧವೇ ತಿರುಗಿ ಬೀಳುವುದು ಸರಿಯಲ್ಲ. ಪಕ್ಷದ ಸಿದ್ಧಾಂತ, ವಿಚಾರಗಳಲ್ಲಿ ಪ್ರಬುದ್ಧತೆ ಹೊಂದದವರು ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಕೆ.ಎಸ್‌.ಈಶ್ವರಪ್ಪ,  ಮಾಜಿ ಸಚಿವ

ಅಧಿಕಾರಕ್ಕಾಗಿ ಜನರಲ್ಲಿ ವಿಶ್ವಾಸದ ಕೊರತೆ ಮೂಡಿಸುತ್ತಿದ್ದಾರೆ. ಎಲ್ಲ ಸಮಾಜದವರನ್ನು ಸೇರಿಸಿ ಧಾರ್ಮಿಕ ಸಭೆ ನಡೆಸುವಂತೆ ಸಲಹೆ ನೀಡಿದ್ದೆ. ಆದರೆ ಸರಕಾರ ಮೌನಕ್ಕೆ ಶರಣಾಗಿತ್ತು. ಶಾಂತಿ ನೆಲೆಸಲು ಗಮನ ಕೊಡಿ ಎಂದು ಹಿಂದೆಯೇ ಹೇಳಿದ್ದೆ. ನನ್ನ ಮಾತನ್ನು ಸರಕಾರ ಕೇಳಲಿಲ್ಲ. ಆದ್ದರಿಂದ ವಾರದಲ್ಲಿ ಒಂದೇ ಭಾಗದಲ್ಲಿ ಕೋಮು ಸಂಘರ್ಷದಿಂದ ಎರಡು ಹತ್ಯೆಗಳಾಗಿವೆ . ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next