Advertisement

ಕರಾವಳಿಯಲ್ಲಿ ಮುಂದುವರಿದ ಬಿಜೆಪಿ ಜೈತ್ರ ಯಾತ್ರೆ

05:05 AM May 24, 2019 | sudhir |

ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರ ವಿರುದ್ಧ 2,74,621 ಮತಗಳ ಅಂತರ ದಿಂದ ದಾಖಲೆಯ ಜಯ ಗಳಿಸಿದ್ದಾರೆ. ಇದು ಅವರಿಗೆ ಹ್ಯಾಟ್ರಿಕ್‌ ಜಯ.

Advertisement

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಬಿಗಿ ಬಂದೋಬಸ್ತ್ನಲ್ಲಿ ಗುರುವಾರ ನಿಗದಿ ಯಂತೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ಎಣಿಕೆಯ ಆರಂಭದಿಂದಲೇ ನಳಿನ್‌ ಕುಮಾರ್‌ ಕಟೀಲು ಅವರು ನಿರಂತರ ಮುನ್ನಡೆ ಸಾಧಿಸುತ್ತಾ ಬಂದಿದ್ದರು.

ಕ್ಷೇತ್ರದಲ್ಲಿ ಒಟ್ಟು 13,45039 ಮತಗಳ ಪೈಕಿ ನಳಿನ್‌ ಕುಮಾರ್‌ ಒಟ್ಟು 7,74,285 ಮತಗಳನ್ನು ಪಡೆದುಕೊಂಡಿದ್ದಾರೆ. ನಿಕಟ ಸ್ಪರ್ಧಿ ಮಿಥುನ್‌ ರೈ ಅವರಿಗೆ ಒಟ್ಟು 4,99,664 ಮತಗಳು ದೊರೆತಿವೆ. ಎಸ್‌ಡಿಪಿಐ ಅಭ್ಯರ್ಥಿ ಮಹಮ್ಮದ್‌ ಇಲ್ಯಾಸ್‌ 46,839 ಮತಗಳನ್ನು ಪಡೆದು ಗಮನಸೆಳೆದಿದ್ದಾರೆೆ. ಒಟ್ಟು ಚಲಾಯಿತ ಮತಗಳ ಪೈಕಿ ನಳಿನ್‌ ಕುಮಾರ್‌ ಅವರು ಶೇ.57.57ರಷ್ಟು ಮತಗಳನ್ನು ಮತ್ತು ಮಿಥುನ್‌ ರೈ ಅವರು ಶೇ.37.15ರಷ್ಟು ಮತಗಳನ್ನು ಪಡೆದುಕೊಂಡರು.

ದ.ಕ.ದ 8 ವಿಧಾನಸಭಾ ಕ್ಷೇತ್ರವಾರು ಪೈಕಿ 7ರಲ್ಲಿ ನಳಿನ್‌ಗೆ ಮುನ್ನಡೆ ದೊರೆ ತಿದೆ. ಮಂಗಳೂರು ಕ್ಷೇತ್ರದಲ್ಲಿ ಮಾತ್ರ ಮಿಥುನ್‌ ರೈ ಅವರಿಗೆ ಮುನ್ನಡೆ ಲಭಿಸಿದೆ. 2009ರ ಲೋಕಸಭಾ ಚುನಾ ವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲು ಅವರು ಪ್ರಥಮ ಬಾರಿಗೆ ಸ್ಪರ್ಧಿಸಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ವಿರುದ್ಧ ಜಯ ಸಾಧಿಸುವ ಮೂಲಕ ಲೋಕಸಭೆಗೆ ಪಾದಾರ್ಪಣೆ ಮಾಡಿದ್ದರು. ಇದು ನಳಿನ್‌ ಪಾಲಿಗೆ ನಿರಂತರ 3ನೇ ಗೆಲುವು ಆಗಿದೆ.

ಮಂಗಳೂರು ಉತ್ತರದಲ್ಲಿ ಬಿಜೆಪಿಗೆ ಅಧಿಕ ಲೀಡ್‌ ನೀಡಿದ 2ನೇ ಕ್ಷೇತ್ರವಾಗಿದ್ದು, ಕಾಂಗ್ರೆಸ್‌ಗಿಂತ 46,088 ಅಧಿಕ ಮತಗಳು ದೊರಕಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ 2014ರ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್‌ ಕೈ ಹಿಡಿದಿದ್ದು, ಮಿಥುನ್‌ ರೈಗೆ 11,392 ಮತಗಳ ಲೀಡ್‌ ದೊರಕಿಸಿ ಕೊಟ್ಟಿದೆ. ಆದರೆ 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ ಗಳಿಸಿದ ಲೀಡ್‌ನ‌ ಅಂತರದಲ್ಲಿ ಇಳಿಕೆಯಾಗಿದೆ. ಇಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ 19,739 ಮತಗಳ ಅಂತರದಿಂದ ಜಯ ಗಳಿಸಿತ್ತು. ಬೆಳ್ತಂ ಗಡಿಯಲ್ಲಿ 44,760, ಬಂಟ್ವಾಳದಲ್ಲಿ 32,063, ಮಂಗಳೂರು ದಕ್ಷಿಣದಲ್ಲಿ 32,835, ಮೂಡುಬಿದಿರೆಯಲ್ಲಿ 37,255 ಮತಗಳ ಮುನ್ನಡೆಯನ್ನು ಬಿಜೆಪಿ ಸಾಧಿಸಿದೆ.

Advertisement

ನೋಟಾದಲ್ಲಿ ಹೆಚ್ಚಳ
ಅಭ್ಯರ್ಥಿಗಳು ಸಮ್ಮತವಾಗದಿದ್ದರೆ ಮತದಾನ ತಿರಸ್ಕರಿಸುವ ನೋಟಾವನ್ನು ಈ ಬಾರಿ 7,380 ಮಂದಿ ಮತ ಚಲಾಯಿಸಿದ್ದಾರೆ. ನಳಿನ್‌ ಕುಮಾರ್‌ ಕಟೀಲು ಅವರು 12 ಗಂಟೆಯ ವೇಳೆಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಸಂಜೆವರೆಗೆ ಉಪಸ್ಥಿತರಿದ್ದು, ಚುನಾ ವಣಾಧಿಕಾರಿಗಳಿಂದ ಆಯ್ಕೆ ದೃಢಪತ್ರವನ್ನು ಸ್ವೀಕರಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರು ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ.

ಸುಳ್ಯದಲ್ಲಿ ಭಾರೀ ಮುನ್ನಡೆ
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಈ ಬಾರಿಯೂ ಸುಳ್ಯ ಅತ್ಯಧಿಕ ಮತಗಳ ಮುನ್ನಡೆಯನ್ನು ಒದಗಿಸಿ ಕೊಟ್ಟಿದೆ. ಇಲ್ಲಿ ನಳಿನ್‌, ಕಾಂಗ್ರೆಸ್‌ನ ಮಿಥುನ್‌ ರೈ ಅವರಿಗಿಂತ 47,159 ಅಧಿಕ ಮತಗಳನ್ನು ಪಡೆದರು. 2009 ಮತ್ತು 2014ರ ಚುನಾವಣೆಯಲ್ಲೂ ಸುಳ್ಯ ಅಧಿಕ ಮುನ್ನಡೆಯನ್ನು ಒದಗಿಸಿ ಕೊಡುವ ಮೂಲಕ ಬಿಜೆಪಿಯ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತ್ತು.

5 ವಿವಿ ಪ್ಯಾಟ್‌ ಎಣಿಕೆ: ಫಲಿತಾಂಶ ವಿಳಂಬ
ಇವಿಎಂಗಳ ಮತ ಎಣಿಕೆ ಜತೆಗೆ 5 ವಿವಿಪ್ಯಾಟ್‌ ಸ್ಲಿಪ್‌ಗ್ಳ ಎಣಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟ ವಿಳಂಬವಾಯಿತು. ಎಣಿಕೆ ಇದು ಪೂರ್ಣಗೊಂಡ ಬಳಿಕ ಫಲಿತಾಂಶ ಘೋಷಣೆ ಮಾಡಲಾಯಿತು. 2014ರ ಚುನಾವಣೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಒಂದು ವಿವಿಪ್ಯಾಟ್‌ಗಳ ಪೇಪರ್‌ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗಿತ್ತು.

ಅಂಚೆ ಮತ: ಬಿಜೆಪಿಗೆ ಲೀಡ್‌
ಒಟ್ಟು 2,130 ಅಂಚೆ ಮತ ಗಳು ಚಲಾವಣೆಯಾಗಿದ್ದು, 1,531 ಮತಗಳು ಬಿಜೆಪಿ, 277 ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿ ಪಡೆದುಕೊಂಡಿದ್ದಾರೆ. 5 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. 308 ಮತಗಳು ಅಸಿಂಧುವಾಗಿವೆ.

11 ಮಂದಿಗೆ ಠೇವಣಿ ನಷ್ಟ
ಕಣದಲ್ಲಿದ್ದ ಅಭ್ಯರ್ಥಿಗಳ ಪೈಕಿ ನಳಿನ್‌ ಕುಮಾರ್‌ ಕಟೀಲು, ಮಿಥುನ್‌ ರೈ ಹೊರತುಪಡಿಸಿ ಉಳಿದ ಎಲ್ಲ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next