Advertisement

ಬಿಜೆಪಿ-ಟಿಡಿಪಿ ಹನಿಮೂನ್‌ ಅಂತ್ಯ: ಬಿಜೆಪಿಯ ಸ್ವಯಂಕೃತ ಅಪರಾಧ

07:30 AM Mar 17, 2018 | Team Udayavani |

ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯನ್ನು ಮುಂದಿಟ್ಟು ಕೊಂಡು ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಕೂಟದಿಂದ ಹೊರ ಬರುವ ನಿರ್ಧಾರ ಪ್ರಕಟಿಸುವುದರೊಂದಿಗೆ ಬಿಜೆಪಿ ಮತ್ತು ಟಿಡಿಪಿ ಹನಿಮೂನ್‌ ಮುಕ್ತಾಯವಾದಂತಾಗಿದೆ.ಕಳೆದ ವಾರ ಟಿಡಿಪಿಯ ಇಬ್ಬರು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲೇ ಆಂಧ್ರ ಸರಕಾರದಲ್ಲಿದ್ದ ಬಿಜೆಪಿ ಸಚಿವರಿಬ್ಬರು ಹೊರಬಂದಾಗಿತ್ತು. ಹೀಗೆ ಸುಮಾರು ಹದಿನೈದು ದಿನಗಳ ಹಿಂದೆಯೇ ಸಖ್ಯ ಕಡಿದುಕೊಳ್ಳಲು ವೇದಿಕೆ ಸಿದ್ಧವಾಗಿತ್ತು. ಅದಾಗ್ಯೂ ನಾಯ್ಡು ಕೆಲ ದಿನಗಳ ಮಟ್ಟಿಗೆ ಕಾದು ನೋಡುವ ತಂತ್ರವನ್ನು ಅನುಸರಿಸಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಬ್ಲ್ಯಾಕ್‌ವೆುçಲ್‌ ತಂತ್ರಕ್ಕೆ ಮಣಿವುದಿಲ್ಲ ಎಂದು ಅರಿವಾದ ಬಳಿಕ ಅನಿವಾರ್ಯವಾಗಿ ಮೈತ್ರಿ ಕಡಿದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ.

Advertisement

2014ರಲ್ಲಿ ಆಂಧ್ರ ವಿಭಜನೆಯಾಗಿ ತೆಲಂಗಾಣ ಉದಯವಾದಾಗ ಯುಪಿಎ ಸರಕಾರ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ವಾಗ್ಧಾನವಿತ್ತಿತ್ತು. ಅನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಶೇಷ ಸ್ಥಾನಮಾನದ ಭರವಸೆ ನೀಡಿ ತೆಲುಗರ ಮನಗೆದ್ದಿತ್ತು. ಆದರೆ 2015ರಲ್ಲಿ ಹಣಕಾಸು ಆಯೋಗ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದರಿಂದ ಈಗ ಆ ಭರವಸೆಯನ್ನು ಈಡೇರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಇದು ಬಿಜೆಪಿ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ ಎನ್ನದೇ ವಿಧಿಯಿಲ್ಲ. ಆಂಧ್ರ ಮಾತ್ರವಲ್ಲದೆ ಬಿಹಾರ ಸೇರಿದಂತೆ ಹಲವು ರಾಜ್ಯಗಳು ವಿಶೇಷ ಸ್ಥಾನಮಾನ ಇಲ್ಲವೇ ವಿಶೇಷ ಪ್ಯಾಕೇಜ್‌ಗಾಗಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿವೆ. ಹೀಗೆ ಎಲ್ಲ ರಾಜ್ಯಗಳ ಬೇಡಿಕೆಗಳನ್ನು ಈಡೇರಿಸುತ್ತಾ ಹೋದರೆ ಬೊಕ್ಕಸ ಬರಿದಾಗಿ ಜನಕಲ್ಯಾಣ ಯೋಜನೆಗಳಿಗೆ ಹಣದ ಕೊರತೆ ಎದುರಾಗಬಹುದು ಎಂಬ ಕಾರಣಕ್ಕೆ ಕೇಂದ್ರ ಟಿಡಿಪಿಯ ಬೇಡಿಕೆಯನ್ನು ಈಡೇರಿಸಲು ಒಪ್ಪುತ್ತಿಲ್ಲ. ಹಣಕಾಸು ಆಯೋಗ ವಿಶೇಷ ಸ್ಥಾನಮಾನ ಮತ್ತು ಸಾಮಾನ್ಯ ಸ್ಥಾನಮಾನದ ನಡುವಿನ ಅಂತರವನ್ನು ತೆಗೆದು ಹಾಕಿದಾಗ ಯಾವುದೇ ತಕರಾರು ತೆಗೆಯದ ನಾಯ್ಡು ಈಗ ಪಟ್ಟು ಹಿಡಿದಿರುವುದರ ಹಿಂದೆ ತನ್ನ ರಾಜ್ಯದ ಒಳಿತಿಗಿಂತಲೂ ರಾಜಕೀಯ ಲೆಕ್ಕಾಚಾರವಿದೆ.

ಕಳೆದ ವಾರವೇ ಮೈತ್ರಿ ಕಡಿಯಲು ಮುಂದಾಗಿದ್ದ ನಾಯ್ಡು ಗೋರಖ್‌ಪುರ ಮತ್ತು ಫ‌ೂಲ್‌ಪುರ ಉಪಚುನಾವಣೆ ಫ‌ಲಿತಾಂಶ ಬರುವ ತನಕ ಕಾದು ಕುಳಿತಿದ್ದರು. ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಾರ್ಟಿಯ ಅಭ್ಯರ್ಥಿಗಳು ಗೆಲ್ಲುತ್ತಿದ್ದಂತೆ ಉಳಿದ ಪ್ರಾದೇಶಿಕ ಪಕ್ಷಗಳಂತೆ ಟಿಡಿಪಿಯಲ್ಲೂ 2019ರ ಲೆಕ್ಕಾಚಾರ ತೀವ್ರಗೊಂಡಿದೆ. ಒಂದೆಡೆ ಕಾಂಗ್ರೆಸ್‌ ಎಲ್ಲ ಚಿಕ್ಕಪುಟ್ಟ ಕ್ಷೇತ್ರಗಳನ್ನು ಒಗ್ಗೂಡಿಸಿ ಯುಪಿಎಯನ್ನು ಬಲಿಷ್ಠಗೊಳಿಸಲು ಪ್ರಯತ್ನಿ ಸುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್‌ ಮತ್ತು ಬಿಜೆಪಿ ರಹಿತವಾದ ತೃತೀಯ ರಂಗವೊಂದರ ರಚನೆ ಮಾತು ಕೇಳಿ ಬರುತ್ತಿದೆ. ಇನ್ನು ಆಂಧ್ರದಲ್ಲಿ ನಾಯ್ಡು ಜನಪ್ರಿಯತೆ ಕುಸಿಯುತ್ತಿದೆ. ವೈಎಸ್‌ಆರ್‌ ಕಾಂಗ್ರೆಸ್‌ನ ಜಗಮೋಹನ್‌ ರೆಡ್ಡಿ ಮತ್ತು ಜನಸೇನಾ ಪಾರ್ಟಿಯ ಪವನ್‌ ಕಲ್ಯಾಣ್‌ ಅವರು ಪ್ರಬಲ ಎದುರಾಳಿಗಳಾಗಿ ಬೆಳೆಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ನಾಯ್ಡು ಮತ್ತೂಮ್ಮೆ ಆಂಧ್ರ ಅಭಿಮಾನದ ಮೊರೆ ಹೋಗಿದ್ದು, ಇದಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಹಿಂದಿನ ಯುಪಿಎ ಹಾಗೂ ಅಟಲ್‌ ಬಿಹಾರಿ ನೇತೃತ್ವದ ಎನ್‌ಡಿಎ ಸರಕಾರವನ್ನು ಕಿರುಬೆರಳಿನಲ್ಲಿ ಕುಣಿಸಿದಂತೆ ಮೋದಿ ಸರಕಾರವನ್ನು ಕುಣಿಸುವುದು ಸಾಧ್ಯವಿಲ್ಲ ಎನ್ನುವುದು ಮಿತ್ರ ಪಕ್ಷಗಳಿಗೆ ಈಗಾಗಲೇ ಅರಿವಾಗಿದೆ.

ಸದ್ಯಕ್ಕಂತೂ ಬಿಜೆಪಿ ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯಾಬಲವನ್ನು ಲೋಕಸಭೆಯಲ್ಲಿ ಹೊಂದಿರು ವುದರಿಂದ ಮಿತ್ರ ಪಕ್ಷಗಳ ಬೆಂಬಲ ಅನಿವಾರ್ಯವೇನಲ್ಲ. ಹೀಗಾಗಿ ಯಾರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಸರಕಾರಕ್ಕೇನೂ ಅಪಾಯ ಆಗುವುದಿಲ್ಲ. ಬಹುಮತವಿದ್ದರೂ ಮೈತ್ರಿಧರ್ಮ ಪಾಲಿಸುವ ಸಲುವಾಗಿ ಮಿತ್ರ ಪಕ್ಷಗಳಿಗೂ ಸರಕಾರದಲ್ಲಿ ಅವಕಾಶಗಳನ್ನು ನೀಡುವ ಮೂಲಕ ಬಿಜೆಪಿ ಔದಾರ್ಯ ಮೆರೆದಿದೆ. ಆದರೆ ಬಿಜೆಪಿಯೆಂಬ ದೊಡ್ಡಣ್ಣನ ನೆರಳಿನಲ್ಲಿ ಬೆಳೆಯುವುದು ಸಾಧ್ಯವಿಲ್ಲ ಎಂದರಿವಾಗಿ ಒಂದೊಂದೇ ಪಕ್ಷಗಳು ಹೊರಹೋಗುವ ತಯಾರಿಯಲ್ಲಿವೆ. ಶಿವಸೇನೆ ಈಗಾಗಲೇ ದೂರವಾಗಿದೆ. ಇದೇ ರೀತಿ ಬಿಹಾರದಲ್ಲಿ ಜೆಡಿಯು ಮತ್ತು ಪಂಜಾಬಿನಲ್ಲಿ ಅಕಾಲಿ ದಳವೂ ದೂರವಾದರೆ ಸಾರ್ವತ್ರಿಕ ಚುನಾವಣೆ ಬಿಜೆಪಿ ಪಾಲಿಗೆ ಕಠಿಣವಾಗಲಿದೆ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಹೊರತು ಪಡಿಸಿದರೆ ಬಿಜೆಪಿಗೆ ಒಂದಿಷ್ಟು ಅಸ್ತಿತ್ವ ಇರುವುದು ಆಂಧ್ರದಲ್ಲಿ. ಇದೀಗ ಟಿಡಿಪಿ ದೂರವಾಗಿರುವುದರಿಂದ ಕರ್ನಾಟಕವೊಂದೇ ಉಳಿದಿರುವುದು. ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೂ ನಿರ್ಣಾಯಕ.

Advertisement

Udayavani is now on Telegram. Click here to join our channel and stay updated with the latest news.

Next