Advertisement

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಬಿರುಗಾಳಿ

06:40 AM May 16, 2018 | Team Udayavani |

ಉಡುಪಿ: ಗೆಲುವು ನನ್ನದೇ ಎಂದು ವಿಶ್ವಾಸದಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಹೇಳುತ್ತಿದ್ದರೂ, ಪ್ರತಿಸ್ಪರ್ಧಿ ಬಿಜೆಪಿಯ ರಘುಪತಿ ಭಟ್‌ ಅವರ ಚಾಲೆಂಜ್‌ ಗುರುತಿಸುವಲ್ಲಿ ಸೋತರು. ಕಾಂಗ್ರೆಸ್‌ ಕೂಡ ಇದನ್ನು ನಿರೀಕ್ಷಿಸದೇ ಇದ್ದಿದ್ದು ಸೋಲಿಗೆ ಕಾರಣವಾಯ್ತು.  

Advertisement

ರಘುಪತಿ ಭಟ್‌ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ, ಮೋದಿ ಉಡುಪಿಗೆ ಆಗಮನ ಬಳಿಕ ಕಾಂಗ್ರೆಸ್‌ ನಿದ್ದೆಗೆಟ್ಟಿದ್ದು ಹೌದು. ಪ್ರಮೋದ್‌ ವರ್ಚಸ್ಸು ಮತ ತರಬಹುದು ಎಂಬ ನಿರೀಕ್ಷೆ ಇದ್ದರೂ ಪ್ರಯೋಜನವಾಗಲಿಲ್ಲ. ಇದರೊಂದಿಗೆ ಪ್ರಮೋದ್‌ ಕಾಂಗ್ರೆಸ್‌ನೊಂದಿಗೆ ಏನೋ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಪುಕಾರುಗಳು ಚುನಾವಣೆಯ ಪೂರ್ವದಲ್ಲಿಯೇ ಹುಟ್ಟಿಕೊಂಡಿದ್ದವು!

“ಬಿಜೆಪಿ ಬಾಗಿಲು’ ತಂದಿಟ್ಟ ಸಂಕಟ
ಪ್ರಮೋದ್‌ ಮಧ್ವರಾಜ್‌ ಅವರು ಬಿಜೆಪಿ ಸೇರುತ್ತಾರೆಂದು ಎದ್ದ ಪುಕಾರುಗಳು ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದು ಸುಳ್ಳಲ್ಲ. ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ ಖಡಾಖಂಡಿತವಾಗಿ ನಿರಾಕರಿಸುತ್ತಲೇ ಬಂದಿದ್ದ ಪ್ರಮೋದ್‌ ಅವರು ಒಂದೊಮ್ಮೆ “ನಾನು ಬಿಜೆಪಿಗೆ ಹೋಗಲು ಬಿಜೆಪಿಯವರೇ ಬಾಗಿಲು ಹಾಕಿದ್ದಾರಲ್ಲ…’ ಎಂಬ ರೀತಿಯ ಹೇಳಿಕೆ ನೀಡಿದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಯ್ತು. ಇದಕ್ಕೆ ಸ್ಪಷ್ಟೀಕರಣ ನೀಡಿದರೂ ಡ್ಯಾಮೇಜಿಂಗ್‌ ಸ್ಟೇಟ್‌ಮೆಂಟಾಯ್ತು., 
 
ಅಭಿವೃದ್ಧಿ ಕೆಲಸ ಕೈ ಬಿಟ್ಟಿತೆ?
ಅಭಿವೃದ್ಧಿ ವಿಚಾರದಲ್ಲಿ ಜನರು ಹೇಳುವಂತೆ ಕೆಲವೊಂದು ಕೆಲಸ ಮಧ್ವರಾಜ್‌ ಕಡೆಯಿಂದ ಆಗಿದ್ದರೂ, ಅದು ಗೆಲುವು ತಂದುಕೊಟ್ಟಿಲ್ಲ. ಕೆಲವೊಂದು ಪರಿಹಾರ ನೀಡಲು ಅವರು ವಿಫ‌ಲರಾಗಿದ್ದಾರೆ ಎಂದರು  ಪ್ರಚಾರಸಭೆಗಳು, ಪಾದಯಾತ್ರೆ ಮೊದಲಾದ ಸಂದರ್ಭದಲ್ಲಿ ಜನಸ್ತೋಮ ಅವರ ಬೆನ್ನಿಗಿತ್ತು. ಆದರೆ ಪ್ರಯೋಜನವಾಗಿಲ್ಲ.  

ಕಾರ್ಯಕರ್ತರೇ ಪ್ಲಸ್‌
ರಘುಪತಿ ಭಟ್‌ ಅವರು ಚುನಾವಣೆ ಘೋಷಣೆಯಾಗುವ ಮೊದಲೇ ಕಾರ್ಯಕರ್ತರ ಜತೆಗೆ ಉಡುಪಿ ಕ್ಷೇತ್ರದ ಮನೆ ಮನೆಗಳಿಗೆ ತೆರಳಿ ಈ ಬಾರಿ ಬಿಜೆಪಿಗೆ ಅವಕಾಶ ಕೊಡಿ ಎಂದು ಕೇಳಲಾರಂಭಿಸಿದ್ದರು. ಸಹಜವಾಗಿಯೇ 
ಕಾರ್ಯ ಕರ್ತರು ಅವರಿಗೆ ಬೆಂಬಲವಾಗಿದ್ದರು. ಕಾರ್ಯ ಕರ್ತರನ್ನೇ ನೆಚ್ಚಿಕೊಂಡ ಭಟ್‌ ಅವರು ಗೆಲುವಿನ ಕಾರ್ಯತಂತ್ರ ಹೆಣೆದುಕೊಂಡೇ ಹೋದರು.

ಸುನಿಲ್‌ ಕುಮಾರ್‌ ಗೆಲುವಿಗೆ ಕಾಂಗ್ರೆಸ್‌ ಭಿನ್ನಮತ ನೆರವು
ಕಾರ್ಕಳ:
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರು ಮೂರನೇ ಬಾರಿಗೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಮಲ ಅರಳುವಂತೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಸೋಲಿಗೆ ಪಕ್ಷದೊಳಗಿನ ಗೊಂದಲವೇ ಕಾರಣವಾಯಿತು. 

Advertisement

ಭರ್ಜರಿ ಚುನಾವಣಾ ಸಿದ್ಧತೆ
ಕಳೆದ ಒಂದು ವರ್ಷಗಳ ಹಿಂದೆಯೇ ಬಿಜೆಪಿ ಪರಿಣಾಮಕಾರಿಯಾಗಿ ಚುನಾವಣಾ ಸಿದ್ಧತೆ ನಡೆಸುತ್ತಾ ಬಂದಿತ್ತು.   ಕಳೆದ 6 ತಿಂಗಳಿನಿಂದ ಸಂಘಟನಾ ವೇಗ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡುವಲ್ಲಿ ಯಶಸ್ವಿಯಾಗಿತ್ತು. 

ಅಭಿವೃದ್ಧಿ-ಹಿಂದುತ್ವ 
ಪ್ರಸ್ತುತ ಶಾಸಕರಾಗಿರುವ ವಿ. ಸುನಿಲ್‌ ಕುಮಾರ್‌ ಅವರು ಕಳೆದ 5 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಹಿಂದುತ್ವದ ಅಲೆ ಎರಡೂ ಪ್ರಮುಖ ಚುನಾವಣಾ ಅಸ್ತ್ರಗಳಾಗಿತ್ತು. 

ಪ್ರಾರಂಭದಿಂದಲೂ ಎಡವಟ್ಟು 
ಕಳೆದ ಎರಡು ಅವಧಿಯಲ್ಲಿ ಕಡಿಮೆ ಅಂತರದಲ್ಲಿ ಸುನಿಲ್‌ ವಿರುದ್ಧ ಸೋತಿದ್ದ ಎಚ್‌. ಗೋಪಾಲ ಭಂಡಾರಿ ಅವರಿಗೆ ಈ ಚುನಾವಣೆಯಲ್ಲಿ  ಹಿನ್ನಡೆಯಾಗಿದೆ. ಇದಕ್ಕೆ ಪಕ್ಷದೊಳಗಿನ ಭಿನ್ನಮತವೇ ಕಾರಣವಾಗಿದೆ. ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪೈಕಿ ಹರ್ಷ ಮೊಲಿ ಹೆಸರು ಕೇಳಿಬಂದಾಗಲೇ ಭಿನ್ನಮತ ಭುಗಿಲೆದ್ದಿತ್ತು. ಪ್ರಾರಂಭದಲ್ಲಿ ಮೂವರು ಆಕಾಂಕ್ಷಿಗಳಿದ್ದರು. ಅನಂತರ ಮೊಲಿ ಹಿಂದೆ ಸರಿದಿದ್ದರು. ಆ ಬಳಿಕ ಪ್ರಬಲ ಆಕಾಂಕ್ಷಿಯಾಗಿದ್ದ ಉದಯ ಕುಮಾರ್‌ ಶೆಟ್ಟಿ ಮುನಿಯಾಲ್‌ ಅವರೇ ಅಭ್ಯರ್ಥಿ ಎನ್ನಲಾಗುತ್ತಿತ್ತು. ಅದು ಅಧಿಕೃತವಾಗದಿದ್ದರೂ ಮುನಿಯಾಲ್‌ಗೆ ಟಿಕೆಟ್‌ ಕೈತಪ್ಪಿರುವುದು ಅನೇಕರಿಗೆ ಮನಸ್ತಾಪ ಉಂಟಾಗಿತ್ತು.  ಕಾಂಗ್ರೆಸ್‌ನಿಂದ ಎಚ್‌. ಗೋಪಾಲ ಭಂಡಾರಿ ಅವರು ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕವೂ ಚುನಾವಣಾ ಸಿದ್ಧತೆಯಲ್ಲಿ ಪಕ್ಷ ತೀವ್ರ ಹಿನ್ನಡೆ ಅನುಭವಿಸಿತ್ತು. ಮುನಿಯಾಲ್‌ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪಕ್ಷದ ಹಿರಿಯರು ವಿಫ‌ಲವಾಗಿದ್ದರು. 

ಕೊನೆಯ ಹಂತದ ಪ್ರಚಾರ
ಕಾಂಗ್ರೆಸ್‌ ಪರ ಪ್ರಚಾರಕ್ಕಾಗಿ ಯಾವ ಪ್ರಮುಖ ನಾಯಕರೂ ಕ್ಷೇತ್ರಕ್ಕೆ ಆಗಮಿಸಿರಲಿಲ್ಲ. ಚುನಾವಣೆಯ ಒಂದು ವಾರದ ಹಿಂದೆಯಷ್ಟೇ ಉದಯ ಶೆಟ್ಟಿ ಅವರನ್ನು ವಿಶ್ವಾಸಕ್ಕೆ ತೆಗೆದು ಕಾಂಗ್ರೆಸ್‌ ವಿಶ್ವಾಸಕ್ಕೆ ಪಡೆದು ಪ್ರಚಾರ ನಡೆಸಿತ್ತು.  

ಗೆಲುವಿನ ನಗೆ ಬೀರಿದ ಲಾಲಾಜಿ
ಉಡುಪಿ:
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಆದರೆ ಮನೆಮನೆ ಪ್ರಚಾರವನ್ನೇ ಗಟ್ಟಿಯಾಗಿ ನಂಬಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌ ಗೆಲುವಿನ ನಗೆ ಬೀರಿದ್ದಾರೆ.

ಐದು ಪಟ್ಟು ಹೆಚ್ಚು
ಕಳೆದ ಬಾರಿಗಿಂತ ಐದು ಪಟ್ಟು ಹೆಚ್ಚಿಗೆ ಮತಗಳ ಅಂತರದಲ್ಲಿ (11,919 ಮತ) ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌  ಗೆದ್ದಿದ್ದಾರೆ.

ಕೈ ಹಿಡಿಯದ ಅಭಿವೃದ್ಧಿ?
1,700 ಕೋ.ರೂ.ಗೂ ಅಧಿಕ ಮೊತ್ತದ ಅನುದಾನ ತಂದದ್ದು ಅಭಿವೃದ್ಧಿ ನಡೆಸಿದ್ದೇವೆ ಎಂದರೂ ಇದು ಕೈಹಿಡಿದಂತಿಲ್ಲ.  

ಹಿಂದೆ ಬಿಲ್ಲವ ಸಮು ದಾಯದವರೇ ಆದ ವಸಂತ ವಿ. ಸಾಲ್ಯಾನ್‌ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರೂ, ವಿನಯ ಕುಮಾರ್‌ ಸೊರಕೆ ಗೆಲುವಿನ ನಗೆ ಬೀರಿದ್ದು ವಿಶೇಷವಾಗಿತ್ತು. ಅದನ್ನು ತಾಳೆ ಹಾಕಿದಾಗ ಈ ಬಾರಿ ಅತ್ಯಧಿಕ ಮತಗಳಿಂದ ಸೊರಕೆ ಗೆಲ್ಲುತ್ತಾರೆಂದೇ ಹೇಳಲಾಗಿತ್ತು. ಆದರೆ ಯಾವ ಜಾತಿ ಸಮೀಕರಣವೂ ವಕೌìಟ್‌ ಆಗಿಲ್ಲ.

ಸೆಳೆದ ಮೋದಿ ಮೋಡಿ?
ನರೇಂದ್ರ ಮೋದಿಯವರು ಉಡುಪಿಗೆ ಕಾಲಿಟ್ಟದ್ದು ಎಲ್ಲ ಕ್ಷೇತ್ರಗಳಲ್ಲೂ ಪ್ರಭಾವ ಬೀರಿದೆ. 2004 ಮತ್ತು 2008ರಲ್ಲಿ ಉಡುಪಿ ಜಿಲ್ಲೆಗೆ ನರೇಂದ್ರ ಮೋದಿ ಆಗಮಿಸಿದ್ದರು. ಆ ಎರಡೂ ಚುನಾವಣೆಯಲ್ಲಿ ಕಾಪುವಿನಲ್ಲಿ ಲಾಲಾಜಿ ಮೆಂಡನ್‌ ಗೆದ್ದು ಶಾಸಕರಾಗಿದ್ದರು.  

ಮತ್ತೆ ಹಾಲಾಡಿ ಕರ ಹಿಡಿದ ಜನತೆ
ಕುಂದಾಪುರ:
ಇಲ್ಲಿ ಬಿಜೆಪಿಯ ಗೆಲುವು ನಿರೀಕ್ಷಿತ. ಹಾಗಂತ ಕಾಂಗ್ರೆಸ್‌ ಕಡೆಗೆ ಜನರ ಒಲವು ಇದೆ ಎಂದು ಸಾಬೀತು ಪಡಿಸಿದ ಕ್ಷೇತ್ರ ಕೂಡಾ. 

ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಗೆಲುವಿನ ವಿಚಾರದಲ್ಲಿ ಗೆಲುವಿನ ಅಂತರವೂ ಕಳೆದ ಬಾರಿಗಿಂತ ಹೆಚ್ಚು. ಹಾಲಾಡಿ ಅವರು 1,03,434 ಮತಗಳನ್ನು ಗಳಿಸಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯ ಮಟ್ಟಿಗೆ ಅವರು ಗಳಿಸಿದ ಮತ ಹಾಗೂ ಅವರ ಗೆಲುವಿನ ಅಂತರ ದಾಖಲೆ.
  
1994ರಲ್ಲಿ ಕಾಂಗ್ರೆಸ್‌ ಗೆದ್ದದ್ದೇ ಕೊನೆ!
ಕಾಂಗ್ರೆಸ್‌ಗೆ 1983ರಲ್ಲಿ 32,469 ಮತಗಳು ದೊರೆತು ಪ್ರತಾಪಚಂದ್ರ ಶೆಟ್ಟರು ವಿಜಯಿಯಾಗಿದ್ದರು. 1985ರಲ್ಲೂ ಅವರೇ 38,296 ಮತಗಳನ್ನು ಪಡೆದರೆ, 1989ರಲ್ಲಿ 46,641 ಮತಗಳನ್ನು ಪಡೆದು ಗೆದ್ದಿದ್ದರು. 1994ರಲ್ಲಿ ಕಾಂಗ್ರೆಸ್‌ ಪ್ರತಾಪಚಂದ್ರ ಶೆಟ್ಟರ ಮೂಲಕ 41,209 ಮತಗಳನ್ನು ಪಡೆದು ಗೆದ್ದ ನಂತರ ಈ ಕ್ಷೇತ್ರದಲ್ಲಿ ಗೆಲುವು ಕಾಣಲಿಲ್ಲ. 
 
ಈ ಬಾರಿ ಕಾಂಗ್ರೆಸ್‌ ಮತಗಳಿಕೆ ಯಲ್ಲಿ ಸಾಧನೆ ಮಾಡಿದೆ. ಹೊರ ಕ್ಷೇತ್ರದವರಾದರೂ ರಾಕೇಶ್‌ ಮಲ್ಲಿ ಅವರು 47,029 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ನ ತೆಕ್ಕಟ್ಟೆ ಪ್ರಕಾಶ್‌ ಶೆಟ್ಟಿ ಅವರು 2,712 ಮತಗಳನ್ನು ಪಡೆದಿದ್ದರೆ, ಜೆಡಿಯುನ ರಾಜೀವ ಕೋಟ್ಯಾನ್‌ ಅವರು 2,628 ಮತಗಳನ್ನು ಪಡೆದಿದ್ದಾರೆ. ಆರ್‌ಪಿಐಎ ಅಭ್ಯರ್ಥಿ ಸುಧಾಕರ ಸೂರ್ಗೋಳಿ ಅವರು 1,028 ಮತಗಳನ್ನು ಪಡೆದಿದ್ದಾರೆ.

ನೋಟಾ ಪ್ರಭಾವ
ಈ ಬಾರಿ ಕ್ಷೇತ್ರದಲ್ಲಿ ನೋಟಾ ಮತ ಪ್ರಭಾವ ಬೀರಿದೆ. ಬಿಜೆಪಿಯ ಒಂದಷ್ಟು ಅತೃಪ್ತರಿಂದಾಗಿ ನೋಟಾ ಮತಗಳಿಕೆ ಹೆಚ್ಚಾಗಿದೆ ಎನ್ನಲಾಗಿದ್ದು 1,813 ಮತಗಳು ನೋಟಾ ಆಗಿದೆ.

ಬೈಂದೂರಲ್ಲಿ ಸುಕುಮಾರ ಶೆಟ್ಟಿಗೆ ವಿಜಯಮಾಲೆ
ಕುಂದಾಪುರ:
ಭಾರೀ ಪೈಪೋಟಿಯ ಕಣವಾಗಿ ಮಾರ್ಪಟ್ಟಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲ ಪೂಜಾರಿಯವರು ಗೆಲ್ಲಲಿದ್ದಾರೆ ಎಂಬ ಕಾಂಗ್ರೆಸ್‌ ಲೆಕ್ಕಾಚಾರ ಬುಡಮೇಲಾಗಿದೆ. 

4 ಬಾರಿಯ ಶಾಸಕರಾಗಿದ್ದ ಪೂಜಾರಿ ಅವರನ್ನು ಬಿಜೆಪಿಯ ಬಿ.ಎಂ. ಸುಕುಮಾರ ಶೆಟ್ಟರು 24,393 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಕಾಲಿಡುತ್ತಿದ್ದಾರೆ.
  
ಗೋಪಾಲ ಪೂಜಾರಿಯವರು ಮತ್ತೂಮ್ಮೆ ಶಾಸಕರಾಗಿ ಆಯ್ಕೆಯಾಗುತ್ತಾರೆ ಎನ್ನುವ ಅಚಲ ವಿಶ್ವಾಸ ಕಾಂಗ್ರೆಸ್ಸಿಗರಲ್ಲಿತ್ತು. ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದು , ಈ ಬಾರಿಯೂ ಗೆಲುವು ನನ್ನದೇ ಎಂದು ಪೂಜಾರಿ ಹೇಳುತ್ತಿದ್ದರು. ಆದರೆ ಸುಲಭವಾಗಿ ಗೆಲ್ಲಬಹುದು ಎನ್ನುವ ಅತಿಯಾದ ನಿರೀಕ್ಷೆಯೇ ಕಾಂಗ್ರೆಸ್ಸಿಗೆ ಸೋಲಾಗಿದೆಯೇ ಎನ್ನುವ ಮಾತುಗಳು ವ್ಯಕ್ತವಾಗುತ್ತಿದೆ. 

2013 ರಲ್ಲಿ ಮತ್ತೆ ಗೋಪಾಲ ಪೂಜಾರಿಯವರು ಗೆದ್ದು, ಸುಕುಮಾರ ಶೆಟ್ಟರು ಸೋತಿದ್ದರು. ಆಗ ಕೆಜೆಪಿ ಅಭ್ಯರ್ಥಿಯಿಂದಾಗಿ ಶೆಟ್ಟರು ಸೋಲುವಂತಾಗಿತ್ತು. 

ವರವಾದ ಹಿಂದುತ್ವ, ಮೋದಿ ಅಲೆ
ಆಡಳಿತ ವಿರೋಧಿ ಅಲೆ, ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನೀತಿ ಕಾಂಗ್ರೆಸ್ಸಿಗೆ ಮುಳುವಾಗಿ ಪರಿಣಮಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಅದರಲ್ಲೂ ಪ್ರಮುಖವಾಗಿ ಬೈಂದೂರಲ್ಲಿ ಹಿಂದುತ್ವದ ಪರವಾದ ಕೂಗು ಬಿಜೆಪಿಗೆ ವರವಾಗಿದೆ.  ಇಲ್ಲಿ ಬಂಟರು, ಬಿಲ್ಲವರು ಹೆಚ್ಚು ಕಡಿಮೆ ಸಮಾನರಾಗಿದ್ದು, ಮೊಗವೀರ ಹಾಗೂ ಖಾರ್ವಿಗರು ಒಟ್ಟು  30 ಸಾವಿರಕ್ಕಿಂತಲೂ ಅಧಿಕ ಮಂದಿಯಿದ್ದಾರೆ. ಆದರೆ ಹಿಂದುತ್ವದ ಅಲೆಯೆದುರು ಜಾತಿ ಲೆಕ್ಕಾಚಾರ ಅಷ್ಟೇನೂ ಪ್ರಭಾವ ಬೀರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next