Advertisement

ಸರ್ಕಾರದ ಕಿವಿ, ಮೂಗು ಹಿಡಿದು ಕೆಲಸ ಮಾಡಿಸಿ

06:00 AM Aug 13, 2018 | |

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿಯು 104 ಸದಸ್ಯ ಬಲದೊಂದಿಗೆ ಪ್ರಬಲ ಪ್ರತಿಪಕ್ಷವಾಗಿದ್ದರೂ ಸರ್ಕಾರದ ಕಿವಿ, ಮೂಗು ಹಿಡಿದು ಕೆಲಸ ಮಾಡಿಸುವ ಕಾರ್ಯ ನಡೆಯುತ್ತಿಲ್ಲ. ಹೋರಾಟ ಮರೆತು ಹೋದಂತಿದೆ. ಇನ್ನಾದರೂ ಪಕ್ಷ ಸಂಟನೆಯಲ್ಲಿ ಸಕ್ರಿಯರಾಗಿ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಆ.9ರಿಂದ ಆರಂಭವಾದ ಪ್ರವಾಸದ ಭಾಗವಾಗಿ ಆರು ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ ತಮ್ಮ ನೇತೃತ್ವ ತಂಡ ಭಾನುವಾರ ಬೆಂಗಳೂರು ಮಹಾನಗರಕ್ಕೆ ಸಂಬಂಧಪಟ್ಟಂತೆ ಶಕ್ತಿ ಕೇಂದ್ರ ಪ್ರಮುಖರು ಹಾಗೂ ಮೇಲ್ಪಟ್ಟವರ ಸಭೆಯಲ್ಲಿ ಮಾತನಾಡಿದ ಅವರು, ಪ್ರಬಲ ಪ್ರತಿಪಕ್ಷವಾಗಿ ಮೈತ್ರಿ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಹೋರಾಟ ನಡೆಸಿ ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ 8- 9 ತಿಂಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಬೇಕಿದೆ. ಬೆಂಗಳೂರಿನ ಪ್ರತಿ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. 104 ಶಾಸಕ ಬಲವಿರುವ ನಾವು ಎದ್ದುನಿಂತರೆ ಆಡಳಿತ ಪಕ್ಷ ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌- ಜೆಡಿಎಸ್‌ನವರೇ ಹೊಡೆದಾಡಿಕೊಂಡು ಯಾವುದೇ ಕ್ಷಣದಲ್ಲಿ ಸರ್ಕಾರದಿದ ಹೊರಹೋಗಬಹುದು. ಕಾಂಗ್ರೆಸ್‌- ಜೆಡಿಎಸ್‌ ಪಕ್ಷಕ್ಕೆ ಲೋಕಸಭಾ ಚುನಾವಣೆವರೆಗೆ ಹೊಂದಾಣಿಕೆ ನಾಟಕವಾಡಿ ಹೆಚ್ಚು ಸ್ಥಾನ ಗೆಲ್ಲಲು ಭ್ರಮೆ ಒಂದನ್ನು ಬಿಟ್ಟರೆ ಬೇರೆ ಏನೂ ಕಾಣುತ್ತಿಲ್ಲ ಎಂದು ತಿಳಿಸಿದರು.

ಮಾಸಾಂತ್ಯದಿಂದ ಹೋರಾಟಕ್ಕಿಳಿಯಬೇಕು
ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕಾಂಗ್ರೆಸ್‌, ಜೆಡಿಎಸ್‌ ಇದೀಗ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸುತ್ತಿವೆ. ಕಳೆದ ಚುನಾವಣೆಯಲ್ಲಿ 135ರಿಂದ 140 ಸ್ಥಾನ ಗಳಿಸುವ ನಿರೀಕ್ಷೆಯಿತ್ತು. ಬೆಂಗಳೂರು, ಬಳ್ಳಾರಿ, ವಿಜಯಪುರ ಕ್ಷೇತ್ರದಲ್ಲಿ ನಿರೀಕ್ಷಿತ ಸ್ಥಾನ ಪಡೆಯಲಾಗದ ಕಾರಣ 104ಕ್ಕೆ ತೃಪ್ತಿಪಡಬೇಕಾಯಿತು. ಹಾಗಾಗಿ ಸಮರ್ಥ ಪ್ರತಿಪಕ್ಷವಾಗಿ ಸರ್ಕಾರದ ವೈಫ‌ಲ್ಯವನ್ನು ಜನತೆಗೆ ತಿಳಿಸಬೇಕಿದೆ. ಮಾಸಾಂತ್ಯದಿಂದಲೇ ಹೋರಾಟಕ್ಕಿಳಿಯಬೇಕು ಎಂದು ತಿಳಿಸಿದರು.

23 ಸ್ಥಾನ ಕೊಡುಗೆಯಾಗಿ ನೀಡಬೇಕು
ನಾಲ್ಕು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೊಡುಗೆ ಹಾಗೂ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ಜನರಿಗೆ ತಿಳಿಸಬೇಕು. ಲೋಕಸಭಾ ಚುನಾವಣೆಯಲ್ಲಿ 22ರಿಂದ 23 ಸ್ಥಾನ ಗೆಲ್ಲುವ ವಿಶ್ವಾಸವಿದೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ. ಅದಕ್ಕೆ ರಾಜ್ಯದಿಂದ 23 ಸ್ಥಾನವನ್ನು ಕೊಡುಗೆಯಾಗಿ ನೀಡಲು ಎಲ್ಲರೂ ಸಂಘಟಿತವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

Advertisement

ಕೇಂದ್ರ ಸಚಿವ ಅನಂತಕುಮಾರ್‌, ದೇಶದಲ್ಲಿ ಬಾಂಗ್ಲಾದಿಂದ ಲಕ್ಷಾಂತರ ಅಕ್ರಮ ನುಸುಳುಕೋರರು ನಾನಾ ರಾಜ್ಯಗಳಲ್ಲಿ ನೆಲೆಸಿದ್ದು, ಇವರನ್ನು ನಿಯಂತ್ರಿಸದಿದ್ದರೆ ಮುಂದೆ ಬಾಂಗ್ಲಾ ಪ್ರಜೆಗಳು ದೇಶದಲ್ಲಿ ಶಾಸಕ, ಸಂಸದರಾಗಿ ಆಯ್ಕೆಯಾಗುವ ಅಪಾಯವಾಗಿದೆ. ಇದನ್ನು ದೇಶದ ಜನ ಒಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ “ಭಾರತೀಯರಿಗಾಗಿ ಭಾರತ’ ಎಂಬ ಧ್ಯೇಯದೊಂದಿಗೆ ರಣಕಹಳೆ ಮೊಳಗಿಸುತ್ತಾ ಲೋಕಸಭಾ ಚುನಾವಣೆ ಎದುರಿಸಬೇಕಿದೆ ಎಂದು ಹೇಳಿದರು.

ಎನ್‌ಆರ್‌ಸಿ ವರದಿಯಿಂದಾಗಿ ಲಕ್ಷಾಂತರ ಮಂದಿ ಬಾಂಗ್ಲಾ ಅಕ್ರಮ ವಲಸಿಗರು ದೇಶದಲ್ಲಿ ನೆಲೆಸಿರುವುದು ಪತ್ತೆಯಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಇತರೆಡೆ ನೆಲೆಸಿದ್ದಾರೆ. ಇಂತಹವರಿಗೆ ಆಧಾರ್‌, ಬಿಪಿಎಲ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ನೀಡಲು ಸಾಧ್ಯವೇ. ಅವರು ಭಾರತೀಯಲ್ಲ. ಹಾಗಾಗಿ ಅವರಿಗೆ ನಾಗರಿಕ ಹಕ್ಕು ನೀಡಲು ಸಾಧ್ಯವಿಲ್ಲ. ಹಾಗಿದ್ದರೂ ಕಾಂಗ್ರೆಸ್‌, ಮುಸ್ಲಿಂ ಲೀಗ್‌ ಇದನ್ನು ವಿರೋಧಿಸುತ್ತಿವೆ ಎಂದು ಕಿಡಿ ಕಾರಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಒಟ್ಟು 330 ಸಂಸದರ ವಿಶ್ವಾಸ ಸಾಬೀತುಪಡಿಸುವ ಮೂಲಕ 2019ರ ಚುನಾವಣೆಯಲ್ಲೂ ಬಿಜೆಪಿಯದ್ದೇ ಸರ್ಕಾರ ಎಂಬ ಸಂದೇಶ ಸಾರಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡಿದ ಬಳಿಕ ತಾವಾಡಿದ್ದು ನಾಟಕ ಎಂಬುದನ್ನು ಕಣ್ಣು ಮಿಟುಕಿಸುವ ಮೂಲಕ ಸಾಬೀತುಪಡಿಸಿದ್ದಾರೆ. ಇದನ್ನು ಎಲ್ಲ ಜನರಿಗೂ ತಿಳಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾತ್ರವಲ್ಲ, ದೇಶದ 125 ಕೋಟಿ ಜನ ರಾಹುಲ್‌ಗಾಂಧಿಯವರಿಗೆ ಕಣ್ಣು ಮಿಟುಕಿಸಲಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯನ್ನು ನೇರವಾಗಿ ಎದುರಿಸಲು ಕಾಂಗ್ರೆಸ್‌ಗೆ ಶಕ್ತಿಯೂ ಇಲ್ಲ, ನಾಯಕತ್ವವೂ ಇಲ್ಲ. ಹಾಗಾಗಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಎನ್‌ಆರ್‌ಸಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ತಾವು ಮೂಲ ನಿವಾಸಿಗಳಾದ ಭಾರತೀಯರಿಗೆ ವಿರುದ್ಧವಾಗಿ ಹಾಗೂ ವಲಸಿಗರ ಪರವಾಗಿ ಇರುವುದಾಗಿ ಕಾಂಗ್ರೆಸ್‌ ಪ್ರಕಟಿಸಲಿ. ಕಾಂಗ್ರೆಸ್‌ ಮತದಾರರ ಪಟ್ಟಿಗೆ ಸತ್ತವರು, ಭೂತ- ಪ್ರೇತಗಳ ಹೆಸರನ್ನು ಸೇರ್ಪಡೆ ಮಾಡುವ ಸಾಧ್ಯತೆಯಿದೆ. ಅದಕ್ಕೆ ಅವಕಾಶ ನೀಡದಂತೆ ಮತಗಟ್ಟೆ ಸಮಿತಿ, ಶಕ್ತಿ ಕೇಂದ್ರ ಪ್ರಮುಖರು ಎಚ್ಚರ ವಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಮೊಳಕಾಲ್ಮೂರಿನ ವಿ.ತಿಮ್ಮಪ್ಪ ಪಕ್ಷ ಸೇರ್ಪಡೆಯಾದರು. ಸಂಸದರಾದ ಪಿ.ಸಿ.ಮೋಹನ್‌, ರಾಜೀವ್‌ ಚಂದ್ರಶೇಖರ್‌, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್‌, ತೇಜಸ್ವಿನಿಗೌಡ, ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ ಇತರರು ಉಪಸ್ಥಿತರಿದ್ದರು.

ನಾಟಿ ಮಾಡಿದರೆ ರೈತರು ಉದ್ಧಾರವಾಗುವುದಿಲ್ಲ
ಯಾವುದೋ ಜಮೀನಿನಲ್ಲಿ ನಿಂತು ನಾಟಿ ಮಾಡುವುದರಿಂದ ರೈತರು ಉದ್ಧಾರವಾಗುವುದಿಲ್ಲ. ಮುಖ್ಯಮಂತ್ರಿಯಾಗಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಬೀದರ್‌, ಕಲಬುರಗಿ ಸೇರಿದಂತೆ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಬರದ ಛಾಯೆ ಆವರಿಸಿದ್ದು, ಈಗಲೇ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಇಷ್ಟಾದರೂ ಒಬ್ಬ ಸಚಿವ ಸ್ಥಳಕ್ಕೆ ತೆರಳಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿಲ್ಲ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಅನಿಷ್ಟ ಸರ್ಕಾರ ಯಾವಾಗ ಹೋಗುತ್ತದೆಯೋ ಎಂದು ಜನ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರು, ಸಚಿವರು ಸಹ ಮಾತನಾಡುತ್ತಿಲ್ಲ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿ ವಾರ್‌ರೂಮ್‌ಗೆ ಬಿ.ಎಲ್‌.ಸಂತೋಷ್‌
ಬೆಂಗಳೂರು
:ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಲು “ವಾರ್‌ರೂಮ್‌’ ತಂಡ ರಚನೆಗೆ ಬಿಜೆಪಿ  ಮುಂದಾಗಿದ್ದು, ರಾಜ್ಯದಿಂದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ಪ್ರಮುಖ ಹೊಣೆಗಾರಿಕೆ ನೀಡುವ ಸಾಧ್ಯತೆಯಿದೆ.

ರಾಮ್‌ ಮಾಧವ್‌,  ಒ.ಪಿ.ಮಾಥೂರ್‌  ಸೇರಿದಂತೆ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ನಿಪುಣರಾಗಿರುವವರನ್ನು ಸೇರಿಸಿ ವಾರ್‌ರೂಮ ತಂಡ ರಚನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ಧರಿಸಿದ್ದು, ಕರ್ನಾಟಕದಿಂದ ಸಂತೋಷ್‌ ಅವರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಸಂತೋಷ್‌ ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಕಾರ್ಯತಂತ್ರ ರೂಪಿಸುವ ಪ್ರಮುಖ ನಾಯಕರ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next