Advertisement

ಬಿಜೆಪಿ ಕಾರ್ಯಕಾರಣಿಗೆ ಹೊಸಪೇಟೆ ಸಜ್ಜು

02:34 PM Apr 16, 2022 | Team Udayavani |

ಹೊಸಪೇಟೆ: ಐತಿಹಾಸಿಕ ಹೊಸಪೇಟೆಯಲ್ಲಿ ಏ.16 ಮತ್ತು ಏ.17ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯುವ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

Advertisement

ಖುದ್ದು ಸಚಿವ ಆನಂದ್‌ ಸಿಂಗ್‌ ಅವರು ಇಡೀ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈಗಾಗಲೇ ನಗರದಾದ್ಯಂತ ಬಿಜೆಪಿ ಹಾಗೂ ಪಕ್ಷದ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆ. ನಗರ ಪ್ರವೇಶಿಸುವ ಎಲ್ಲ ದಿಕ್ಕುಗಳ ರಸ್ತೆಗಳಲ್ಲೂ ಕೇಸರಿ ಕಂಬದ ಮೇಲೆ ಬಿಜೆಪಿ ಬಾವುಟ ಹಾರಾಡುತ್ತಿದೆ. ಚಿತ್ರದುರ್ಗದ ಮೂಲಕ ಹೊಸಪೇಟೆ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ 50ರ ಸುರಂಗ ಮಾರ್ಗದಿಂದ ಹಿಡಿದು ಕಮಲಾಪುರದ ಭುವನೇಶ್ವರಿ ಹೋಟೆಲ್‌ ಮಾರ್ಗದವರೆಗೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಇನ್ನೊಂದೆಡೆ ಟಿಬಿಡ್ಯಾಂ, ಸಂಡೂರು ರಸ್ತೆ, ಬಳ್ಳಾರಿ ರಸ್ತೆ ಇಡೀ ನಗರವೇ ಕೇಸರಿಮಯವಾಗಿದೆ.

ನೂತನ ಜಿಲ್ಲೆ ವಿಜಯನಗರದಲ್ಲಿ ಮೊದಲ ಬಾರಿಗೆ ಕಾರ್ಯಕಾರಿಣಿ ನಡೆಯುತ್ತಿದ್ದು, ನಗರದ ಹೊರವಲಯ ಸಂಪೂರ್ಣ ಕೇಸರಿಮಯ ವಾಗಿ ಕಂಗೊಳಿಸುತ್ತಿದೆ. ಹೊಸಪೇಟೆ ನಗರ ಪ್ರವೇಶಿಸುತ್ತಿದ್ದಂತೆ ಹೆದ್ದಾರಿ ಸುರಂಗ ಹಾಗೂ ಇತರೆ ರಸ್ತೆಗಳು ಸೇರಿ ಸುಮಾರು 28 ಕಿಮೀಗೂ ಹೆಚ್ಚು ಕಡೆಗಳಲ್ಲಿ ಬಿಜೆಪಿ ಬಾವುಟಗಳು ಹಾರಾ ಡುತ್ತಿವೆ. ಕಂಬಗಳಿಗೆ ಕೇಸರಿ ಬಟ್ಟೆ ಸುತ್ತಿ ಅದರ ತುದಿಗೆ ಬಾವುಟ ಕಟ್ಟಲಾಗಿದೆ. ಪ್ರತಿ ಹತ್ತು ಅಡಿಗೊಂದು ಕಂಬ ಹಾಕಲಾಗಿದೆ. ಹರಿಹರ ರಸ್ತೆಯಲ್ಲಿ ಗುಂಡಾ ಸಸ್ಯೋದ್ಯಾನದ ಸಮೀಪದಿಂದ ನಗರದ ಮಧ್ಯಭಾಗದವರೆಗೂ ಹೆದ್ದಾರಿ ಮೂಲಕ ನೇರ ಕಾರ್ಯಕಾರಿಣಿ ವೇದಿಕೆ ಸ್ಥಳದವರೆಗೆ, ಕಮಲಾಪುರ, ಬಳ್ಳಾರಿ ರಸ್ತೆಯಲ್ಲಿ ಸಂಕ್ಲಾಪುರದವರೆಗೆ, ಹೊಸೂರು-ಮಾಗಾಣಿ ರಸ್ತೆ, ಕೊಪ್ಪಳ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಕಂಬಗಳ ಮೇಲೆ ಬಿಜೆಪಿ ಧ್ವಜ ಹಾರಾಡುತ್ತಿದೆ.

ವೇದಿಕೆ ನಿರ್ಮಾಣ

ವಿಶಾಲ ಜಾಗದಲ್ಲಿ ನಿರ್ಮಾಣಗೊಂಡಿರುವ ಹವಾ ನಿಯಂತ್ರಿತ ಜರ್ಮನ್‌ ಮಾದರಿಯ ಟೆಂಟ್‌ನಲ್ಲಿ ಸುಮಾರು 750 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗಣಾತಿಗಣ್ಯರ ಕೊಠಡಿ, ಗ್ರೀನ್‌ ರೂಮ್‌, ಭೋಜನಾಲಯ ಕೂಡ ನಿರ್ಮಿಸಲಾಗಿದೆ. ಇಲ್ಲೂ ವಿಜಯನಗರದ ಕಲಾವೈಭವದ ಮೆರಗು ನೀಡಲಾಗಿದೆ. ವಿಜಯನಗರದ ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಜಾಗದಲ್ಲಿ ಹವಾ ನಿಯಂತ್ರಿತ ಜರ್ಮನ್‌ ಟೆಂಟ್‌ ನಿರ್ಮಿಸಲಾಗುತ್ತಿದೆ. ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣಗೊಂಡಿದೆ. ಈ ವೇದಿಕೆಯ ಹಿಂಭಾಗದಲ್ಲಿ ಅಳವಡಿಸಿರುವ 30 ಅಡಿ ಎತ್ತರದ ಬ್ಯಾಕ್‌ ಡ್ರಾಪ್‌ನಲ್ಲಿ ಹಂಪಿಯ ವಾಸ್ತು ಶಿಲ್ಪದ ಪ್ರಪಂಚ ಅನಾವರಣಗೊಂಡಿದೆ. ಈ ಶಿಲ್ಪಗಳ ಮಧ್ಯೆ ಕಮಲದ ಚಿಹ್ನೆ ಕಂಗೊಳಿಸುತ್ತಿದೆ.

Advertisement

ಹಂಪಿ ಶ್ರೀವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ಕಂಗೊಳಿಸುತ್ತಿದೆ. ಈ ಭವ್ಯ ಸಭಾಂಗಣದಲ್ಲಿ ಎರಡು ದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರವೇಶದ್ವಾರದಲ್ಲೂ ಹಂಪಿ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಕಲಾ ಪ್ರಪಂಚ ಅನಾವರಣಗೊಂಡಿದೆ. ಕೇಂದ್ರ-ರಾಜ್ಯ ಸರಕಾರಗಳ ಸಾಧನೆಗಳನ್ನು ತಿಳಿಸುವ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳನ್ನೂ ತೆರೆಯಲಾಗಿದೆ.

ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಹಿರಿಯ ನಾಯಕ ಅಶ್ವಥ್‌ ನಾರಾಯಣ, ಸಚಿವರಾದ ಆನಂದಸಿಂಗ್‌ ಹಾಗೂ ಶಶಿಕಲಾ ಜೊಲ್ಲೆ, ವಿಭಾಗೀಯ ಸಹ ಪ್ರಭಾರಿ ಸಿದ್ದೇಶ್‌ ಯಾದವ್‌ ಸಿದ್ಧತೆಗಳನ್ನು ಪರಿಶೀಲಿಸಿದರು. ವಿಜಯನಗರದಲ್ಲಿ ಮೊದಲ ಬಾರಿಗೆ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಹಾಗೂ ರಾಜ್ಯ ಸಚಿವರು, ಪಕ್ಷದ ವರಿಷ್ಠರು ಭಾಗವಹಿಸಲಿದ್ದಾರೆ. ಆನಂದ್‌ ಸಿಂಗ್‌, ಪ್ರವಾಸೋದ್ಯಮ ಸಚಿವರು

ವಿಜಯನಗರದಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವರು, ವಿಜಯನಗರ

Advertisement

Udayavani is now on Telegram. Click here to join our channel and stay updated with the latest news.

Next