Advertisement

BJP: ತೆಲಂಗಾಣಕ್ಕೆ OBC ಸಿಎಂ- ಅಧಿಕಾರಕ್ಕೇರಿದರೆ ಹಿಂದುಳಿದ ವರ್ಗಕ್ಕೆ ಆದ್ಯತೆ: ಶಾ ಘೋಷಣೆ

07:17 PM Oct 27, 2023 | Team Udayavani |

ನವದೆಹಲಿ: “ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಹಿಂದುಳಿದ ವರ್ಗದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ.

Advertisement

ಪಂಚರಾಜ್ಯ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದುಳಿದ ವರ್ಗಗಳನ್ನು ಓಲೈಸುತ್ತಿರುವ ಬಿಜೆಪಿ, ಈಗ ತೆಲಂಗಾಣದಲ್ಲಿ ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ ವಿರುದ್ಧ “ಒಬಿಸಿ ಸಿಎಂ” ಅಸ್ತ್ರ ಪ್ರಯೋಗಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಚುನಾವಣಾ ಭಾಷಣವೊಂದರಲ್ಲಿ “ನಾನು ಹಿಂದುಳಿದ ವರ್ಗದವನೆಂಬ ಕಾರಣಕ್ಕಾಗಿ ಕಾಂಗ್ರೆಸ್‌ ಹಾಗೂ ಇತರೆ ಪ್ರತಿಪಕ್ಷಗಳು ನನ್ನನ್ನು ದೂಷಿಸುತ್ತಿವೆ” ಎಂದು ಹೇಳಿಕೊಂಡಿದ್ದರು.

ಸೂರ್ಯಪೇಟ್‌ನಲ್ಲಿ ಶುಕ್ರವಾರ ಚುನಾವಣಾ ರ್ಯಾಲಿ ನಡೆಸಿದ ಸಚಿವ ಅಮಿತ್‌ ಶಾ, “ಹಾಲಿ ಸಿಎಂ ಕೆಸಿಆರ್‌ ತಮ್ಮ ಪುತ್ರ ಕೆ.ಟಿ. ರಾಮರಾವ್‌ರನ್ನು ಸಿಎಂ ಆಗಿಸಲು ಉತ್ಸುಕರಾಗಿದ್ದರೆ, ಕಾಂಗ್ರೆಸ್‌ ನಾಯಕಿ ಸೋನಿಯಾ ತಮ್ಮ ಪುತ್ರ ರಾಹುಲ್‌ರನ್ನು ಪಿಎಂ ಆಗಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ನಾವು ಇತರೆ ಪಕ್ಷಗಳಂತೆ ಅಲ್ಲ. ನೀವು ಬಿಜೆಪಿಯನ್ನು ಗೆಲ್ಲಿಸಿ. ರಾಜ್ಯದ ಮುಂದಿನ ಸಿಎಂ ಹಿಂದುಳಿದ ವರ್ಗದವರೇ ಆಗಿರುತ್ತಾರೆ. ಇದನ್ನು ನಾವು ನಿರ್ಧರಿಸಿಯಾಗಿದೆ” ಎಂದಿದ್ದಾರೆ.

ಇದೇ ವೇಳೆ, ಪಲೈರ್‌ನಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಸಿಎಂ ಕೆ.ಚಂದ್ರಶೇಖರ್‌ ರಾವ್‌, “ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತ ಬಂಧು, ರೈತರಿಗೆ ಉಚಿತ ವಿದ್ಯುತ್‌ ಸೇರಿದಂತೆ ಬಡವರ ಕಲ್ಯಾಣ ಯೋಜನೆಗಳೆಲ್ಲ ರದ್ದಾಗುತ್ತವೆ” ಎಂದಿದ್ದಾರೆ.

ಭದ್ರತೆಗೆ ಸಿದ್ಧತೆ:
ಪಂಚರಾಜ್ಯ ಚುನಾವಣೆ ವೇಳೆ ಭದ್ರತೆಗಾಗಿ ಸುಮಾರು 1,700 ಸಿಎಪಿಎಫ್ ಮತ್ತು ರಾಜ್ಯ ಪೊಲೀಸ್‌ ತುಕಡಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 1,700 ತುಕಡಿಗಳಲ್ಲಿ ಒಟ್ಟು 1.5 ಲಕ್ಷ ಸಿಬ್ಬಂದಿ ಇರಲಿದ್ದಾರೆ. ನವೆಂಬರ್‌ ಆರಂಭದಲ್ಲೇ ಬಹುತೇಕ ಮಂದಿಯನ್ನು ಆಯಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದೂ ಹೇಳಲಾಗಿದೆ.

Advertisement

5 ಗ್ಯಾರಂಟಿ ಘೋಷಿಸಿದ ಗೆಹ್ಲೋಟ್‌
ಕಾಂಗ್ರೆಸ್‌ ನಾಯಕ, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಶುಕ್ರವಾರ ರಾಜ್ಯದ ಜನತೆಗೆ 5 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆ ಜಾರಿ, ಕೆಜಿಗೆ 2 ರೂ.ಗಳಂತೆ ಹಸುವಿನ ಸಗಣಿ ಖರೀದಿ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌, ನೈಸರ್ಗಿಕ ವಿಕೋಪದಿಂದ ಆಗುವ ನಷ್ಟಕ್ಕೆ 15 ಲಕ್ಷ ರೂ.ಗಳ ವಿಮೆ, 1 ಕೋಟಿ ಮಹಿಳೆಯರಿಗೆ 3 ವರ್ಷಗಳ ಕಾಲ ಇಂಟರ್ನೆಟ್‌ಸಹಿತ ಸ್ಮಾರ್ಟ್‌ಫೋನ್‌ ಒದಗಿಸುವ ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ನಾಯಕರ ಮನೆಗಳ ಮೇಲೆ ಇ.ಡಿ. ದಾಳಿ ಬಗ್ಗೆ ಪ್ರಸ್ತಾಪಿಸುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿರುವ ಗೆಹ್ಲೋಟ್‌, “ನಮ್ಮ ದೇಶದಲ್ಲಿ ಈಗ ಬೀದಿನಾಯಿಗಳಿಗಿಂತಲೂ ಹೆಚ್ಚು ಇ.ಡಿ. ಅಧಿಕಾರಿಗಳೇ ತಿರುಗಾಡುತ್ತಿದ್ದಾರೆ”ಎಂದಿದ್ದಾರೆ.

ಶ್ರೀರಾಮನನ್ನು ಪೂಜಿಸುವುದಾಗಿ ಛತ್ತೀಸ್‌ಗಡ ಸಿಎಂ ಭೂಪೇಶ್‌ ಬಘೇಲ್‌ ಹೇಳುತ್ತಾರೆ. ಹಾಗಿದ್ದರೆ, ಡಿಎಂಕೆ ನಾಯಕರು ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದಾಗ ನೀವು ಮೌನ ವಹಿಸಿದ್ದೇಕೆ?
– ರವಿಶಂಕರ್‌ ಪ್ರಸಾದ್‌, ಬಿಜೆಪಿ ನಾಯಕ

ಮಿಜೋಯೇತರ ಮತದಾರರತ್ತ ಬಿಜೆಪಿ ಕಣ್ಣು
ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಪಕ್ಷದ ಬಲವರ್ಧನೆಗೆ ಬಿಜೆಪಿ ಪಣತೊಟ್ಟಿದೆ. ಹಾಲಿ ವಿಧಾನಸಭೆಯಲ್ಲಿ ಬಿಜೆಪಿ ಕೇವಲ ಒಬ್ಬ ಶಾಸಕನನ್ನು ಹೊಂದಿದೆ. 2018ರಲ್ಲಿ ಆಯ್ಕೆಯಾಗಿರುವ ಬಿ.ಡಿ.ಚಕಾ¾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿದ್ದ 39 ಬಿಜೆಪಿ ಅಭ್ಯರ್ಥಿಗಳ ಪೈಕಿ ಕೆಲವರು ದ್ವಿತೀಯ, ತೃತೀಯ, 4ನೇ ಸ್ಥಾನಕ್ಕೆ ಇಳಿದಿದ್ದರು. ಹೀಗಾಗಿ, ಈ ಬಾರಿ 23 ಮಂದಿಯನ್ನು ಮಾತ್ರ ಕಣಕ್ಕಿಳಿಸಿದೆ.

ಪ್ರಸಕ್ತ ಚುನಾವಣೆಯಲ್ಲಿ ಶಕ್ತಿ ವರ್ಧಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ನಡೆದಿದ್ದು, ನಾಗಾಲ್ಯಾಂಡ್‌ನ‌ ಡಿಸಿಎಂ ವೈ.ಪಟ್ಟೋನ್‌ ಅವರು ಮಾಮಿತ್‌, ದಂಪಾ ಮತ್ತು ಹಚ್ಚೆಕ್‌ ಎಂಬ 3 ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು 30ರಂದು ಮಾಮಿತ್‌ನಲ್ಲಿ ಬೃಹತ್‌ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜಧಾನಿ ಐಜ್ವಾಲ್‌, ಲುಂಗ್ಲೆಲಿ ಎಂಬ ದೊಡ್ಡ ನಗರಗಳನ್ನು ಬಿಟ್ಟು ಸಣ್ಣ ನಗರಗಳಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.

ಅಂದ ಹಾಗೆ ಈಶಾನ್ಯದ ಪುಟ್ಟ ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಶೇ.87ರಷ್ಟು ಮಂದಿ ಕ್ರಿಶ್ಚಿಯನ್ನರೇ ಇದ್ದಾರೆ. ಮಣಿಪುರ ಗಲಭೆಯ ಬಳಿಕ ಮಿಜೋ ಕ್ರಿಶ್ಚಿಯನ್ನರು ಬಿಜೆಪಿಯಿಂದ ದೂರ ಸರಿದಿದ್ದಾರೆ. ಇತ್ತೀಚೆಗಷ್ಟೇ ಮಿಜೋರಾಂ ಸಿಎಂ ಝೊರಾಮ್‌ತಂಗಾ ಅವರು, “ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ’ ಎಂದು ಹೇಳಿರುವುದರ ಹಿಂದೆ ಮಿಜೋ ಕ್ರಿಶ್ಚಿಯನ್ನರ ಕೆಂಗಣ್ಣಿಗೆ ತುತ್ತಾಗುವುದರಿಂದ ತಪ್ಪಿಸಿಕೊಳ್ಳುವ ಪ್ಲ್ರಾನ್‌ ಅಡಗಿತ್ತು ಎನ್ನುವುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಬ್ರೂ, ಚಕ್ಮಾ ಮುಂತಾದ ಮಿಜೋಯೇತರ ಸಮುದಾಯಗಳ ಮತಗಳನ್ನು ನೆಚ್ಚಿಕೊಂಡಿದೆ. ಈಗಾಗಲೇ ಈ ಸಮುದಾಯಗಳಿಗೆ ಕೇಂದ್ರ ಸರ್ಕಾರವು ಹಲವು ಸೌಲಭ್ಯಗಳನ್ನು ಒದಗಿಸಿದ್ದು, ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಲು ಸತತ ಪ್ರಯತ್ನ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next